ವಿಟಮಿನ್, ಕಬ್ಬಿಣಾಂಶ ಮಾತ್ರೆ ನುಂಗಿದ ಮಕ್ಕಳಲ್ಲಿ ಹೊಟ್ಟೆನೋವು-ವಾಂತಿ
ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ
ಭದ್ರಾವತಿ ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು-ವಾಂತಿ ಕಾಣಿಸಿಕೊಂಡ ಪರಿಣಾಮ ಸುಮಾರು ೬೦ ಮಕ್ಕಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.
ಭದ್ರಾವತಿ: ಸರ್ಕಾರಿ ಶಾಲೆ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು-ವಾಂತಿ ಕಾಣಿಸಿಕೊಂಡ ಪರಿಣಾಮ ಸುಮಾರು ೬೦ ಮಕ್ಕಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.
ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಮಧ್ಯಾಹ್ನ ಊಟದ ಬಳಿಕ ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಊಟದ ಬಳಿಕ ಮಕ್ಕಳಿಗೆ ಶಿಕ್ಷಕರು ವಿಟಮಿನ್ ಮತ್ತು ಕಬ್ಬಿಣಾಂಶ(ಐರನ್) ಹೊಂದಿರುವ ಮಾತ್ರೆ ವಿತರಿಸಿದ್ದರು. ಇದನ್ನು ನುಂಗಿದ ಬಳಿಕ ಮಕ್ಕಳು ಹೊಟ್ಟೆ ನೋವು ಎಂದು ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣ ಮಕ್ಕಳನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗಿದೆ.
ಸರ್ಕಾರದ ಆದೇಶದಂತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಕಬ್ಬಿಣಾಂಶ(ಐರನ್), ಫೋಲಿಕ್ ಆಸಿಡ್ ಮತ್ತು ಅಲ್ಬೆಂಡಜೋಲ್(ಜಂತುಹುಳು ನಿವಾರಕ) ಮಾತ್ರೆಗಳನ್ನು ಮಧ್ಯಾಹ್ನದ ಊಟದ ನಂತರ ವಿತರಿಸಲಾಗುತ್ತದೆ. ರಕ್ತಹೀನತೆ ತಡೆಗಟ್ಟಲು ೧ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಮಾತ್ರೆಗಳನ್ನು ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನೀಡಲಾಗುತ್ತದೆ.
ಘಟನೆ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಅಸ್ವಸ್ಥಗೊಂಡಿರುವ ಮಕ್ಕಳಿಗೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿ ಕೊಡಲಾಗಿದೆ. ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮಧ್ಯಾಹ್ನ ಊಟದ ನಂತರ ಆಯಾ ವಯಸ್ಸಿಗೆ ತಕ್ಕಂತೆ ನಿಗದಿಪಡಿಸಲಾದ ಮಾತ್ರೆ ನೀಡಲಾಗಿದ್ದು, ಮಾತ್ರೆ ನುಂಗಿದ ಮಕ್ಕಳಲ್ಲಿ ಹೊಟ್ಟೆನೋವು ವಾಂತಿ ಕಾಣಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.