ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಹೊಸ ಸಿಡಿ ಮರ ಪ್ರತಿಷ್ಠಾಪನೆ
ಭದ್ರಾವತಿ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮದೇವಿ ದೇವಸ್ಥಾನದ ಆವರಣದಲ್ಲಿ ಹೊಸ ಸಿಡಿ ಮರ ಸೋಮವಾರ ಪ್ರತಿಷ್ಠಾಪಿಸಲಾಯಿತು. ಭದ್ರಾವತಿ : ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮದೇವಿ ಜಾತ್ರಾ ಮಹೋತ್ಸವ `ಊರ ಹಬ್ಬ'ಕ್ಕೆ ಸೋಮವಾರ ಬೆಳಿಗ್ಗೆ ದ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು. ದೇವಸ್ಥಾನ ಮುಂಭಾಗ ಹೊಸ ಸಿಡಿಮರ ಪ್ರತಿಷ್ಠಾಪಿಸಲಾಗಿದ್ದು, ೨೩ರ ಗುರುವಾರ ಬೆಳಿಗ್ಗೆ ೬ ಗಂಟೆಗೆ `ದೇವರ ಸಿಡಿ ಉತ್ಸವ ಹಾಗು ಮಕ್ಕಳ ತೊಟ್ಟಿಲು ಸಿಡಿ ಉತ್ಸವ' ನಡೆಯಲಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಇದು ಪ್ರಮುಖ ಆಕರ್ಷಣೆಯಾಗಿದ್ದು, `ದೇವರ ಸಿಡಿ ಉತ್ಸವ ಹಾಗು ಮಕ್ಕಳ ತೊಟ್ಟಿಲು ಸಿಡಿ ಉತ್ಸವ' ವೀಕ್ಷಿಸಲು ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ. ಈ ಹಿಂದಿನ ಸಿಡಿ ಮರ ಬದಲಿಸಿ ಇದೀಗ ಹೊಸ ಸಿಡಿ ಮರ ಪ್ರತಿಷ್ಠಾಪಿಸಲಾಗಿದ್ದು, ಈ ಹಿನ್ನಲೆಯಲ್ಲಿ ಧಾರ್ಮಿಕ ಆಚರಣೆಗಳು ನೆರವೇರಿದವು. ಯುವ ಮುಖಂಡ ಬಿ.ಎಸ್ ಗಣೇಶ್ ಹಾಗು ಜಮೀನ್ದಾರ್ ತಾರಾಬಾಯಿ ದಿವಂಗತ ಶಿವಾಜಿರಾವ್ ಪವಾರ್ ಕುಟುಂಬಸ್ಥರು ಹೊಸ ಸಿಡಿ ಮರದ ದಾನಿಗಳಾಗಿದ್ದು, ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ನಿರ್ದೇಶಕರು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.