ವಾಮಾಚಾರ ನಂಬಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಹಣ ಕಳೆದುಕೊಂಡಿದ್ದ ಮಹಿಳೆ
ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ವಾಪಸ್ ನೀಡಿದ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಭದ್ರಾವತಿ : ಮಹಿಳೆಯೊಬ್ಬರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗು ಹಣ ಪಡೆದು ವಾಮಾಚಾರ ಪರಿಹರಿಸುವುದಾಗಿ ಹೇಳಿ ನಂಬಿಸಿ ವಂಚನೆ ಮಾಡಿದ್ದ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸುವಲ್ಲಿ ನಗರದ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರಸಭೆ ವ್ಯಾಪ್ತಿಯ ಗಾಂಧಿನಗರ ನಿವಾಸಿ, ಕೆಎಸ್ಆರ್ಟಿಸಿ ಕಿರಿಯ ಸಹಾಯಕಿ ಮಂಗಳ ನಾಯ್ಕ್ರವರು ಸೆ.೭ರಂದು ಠಾಣೆಗೆ ದೂರು ನೀಡಿದ್ದರು. ತಮಗೆ ಪರಿಚಯವಿದ್ದ ಮುರಳಿ ಹಾಗೂ ಆತನ ಸಹೋದರ ರವಿ ಎಂಬುವರು, ನಿಮ್ಮ ಮೇಲೆ ವಾಮಾಚಾರ ಪ್ರಯೋಗವಾಗಿದೆ. ಅದನ್ನು ಪರಿಹರಿಸದಿದ್ದರೆ ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ದೊಡ್ಡ ಮಟ್ಟದ ಸಮಸ್ಯೆಯಾಗಬಹುದು ಎಂದು ಭಯ ಹುಟ್ಟಿಸಿದ್ದರು. ನಂತರ ನಮ್ಮ ಮನೆಗೆ ಆಗಮಿಸಿ ವಾಮಾಚಾರ ಪರಿಹರಿಸುವುದಾಗಿ ಪೂಜೆ ನಡೆಸಿದ್ದರು. ಪೂಜೆ ಮುಗಿದ ನಂತರ ಬಂಗಾರದ ಒಡವೆ ಹಾಗು ನಗದು ಹಣ ತಮ್ಮ ಬಳಿ ನೀಡುವಂತೆ ತಿಳಿಸಿ, ಅವುಗಳನ್ನು ಮನೆಗೆ ಕೊಂಡೊಯ್ದು ವಿಶೇಷ ಪೂಜೆ ಮಾಡಿ ವಾಪಸ್ ನೀಡುವುದಾಗಿ ನಂಬಿಸಿದ್ದರು. ಈ ತಮ್ಮ ಬಳಿ ಇದ್ದ ಸುಮಾರು ೧೯೩ ಗ್ರಾಂ ಚಿನ್ನಾಭರಣ ಹಾಗೂ ೨ ಲಕ್ಷ ರು. ನಗದು ಹಣ ನೀಡಿದ್ದು, ಆದರೆ ಪಡೆದುಕೊಂಡ ಚಿನ್ನಾಭರಣ ಮತ್ತು ನಗದು ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ...