ತಿಥಿ ಊಟದ ನಂತರ ಶಾಲಾ ಮಕ್ಕಳು ಅಸ್ವಸ್ಥ : ಚೇತರಿಕೆ
ಭದ್ರಾವತಿ: ನಗರದ ನ್ಯೂಟೌನ್ ತರಂಗ ಕಿವುಡು ಮಕ್ಕಳ ಶಾಲೆಯ ಸುಮಾರು ೧೫ ವಿದ್ಯಾರ್ಥಿಗಳು ಹಾಗು ೭-೮ ಮಂದಿ ಸಾರ್ವಜನಿಕರು ತಿಥಿ ಊಟದ ನಂತರ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ತರಂಗ ಕಿವುಡು ಮಕ್ಕಳ ಶಾಲೆಯ ವಸತಿ ವಿದ್ಯಾರ್ಥಿಗಳಿಗೆ ನಗರಸಭೆ ವ್ಯಾಪ್ತಿಯ ವೇಲೂರು ಶೆಡ್ ಮನೆಯೊಂದರಲ್ಲಿ ನಡೆಸಲಾಗಿದ್ದ ತಿಥಿ ಕಾರ್ಯಕ್ರಮದ ಊಟ ತಂದು ನೀಡಲಾಗಿದೆ. ಗುರುವಾರ ಬೆಳಿಗ್ಗೆ ಊಟದ ನಂತರ ಮಕ್ಕಳು ಅಸ್ವಸ್ಥಗೊಂಡಿದ್ದು, ತಕ್ಷಣ ಮಕ್ಕಳನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ತಿಥಿ ಊಟದಿಂದ ಸ್ಥಳೀಯರು, ಸಂಬಂಧಿಕರು ಸಹ ಅಸ್ವಸ್ಥಗೊಂಡಿದ್ದು, ಇವರು ಸಹ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆಸ್ಪತ್ರೆ ಮಾಹಿತಿ ಪ್ರಕಾರ ಮಕ್ಕಳು ಶಾಂತಿ, ಭೇದಿಯಿಂದ ಬಳಲುತ್ತಿದ್ದು, ಬಹುತೇಕ ಗುಣಮುಖರಾಗಿದ್ದಾರೆ. ರಾತ್ರಿ ವೇಳೆಗೆ ಕೆಲವರನ್ನು ಹಾಗು ಉಳಿದವರನ್ನು ಶನಿವಾರ ಬೆಳಿಗ್ಗೆ ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಕ್ಕಳು ಸೇವಿಸಿದ ಆಹಾರ ತಪಾಸಣೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸ್ಪಷ್ಟ ಕಾರಣ ತಿಳಿದು ಬರಲಿದೆ. ಈ ಘಟನೆ ಶಾಲಾ ಮಕ್ಕಳನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.