ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿ : ಶ್ರೀ ಯಾದವಾನಂದ ಮಹಾಸ್ವಾಮಿ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ತಾಲೂಕು ಗೊಲ್ಲ-ಯಾದವ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ದೇವಸ್ಥಾನದ ೨ನೇ ವರ್ಷದ ವಾರ್ಷಿಕೋತ್ಸವ, ರಥೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಶಿಕ್ಷಣವಂತರನ್ನಾಗಿಸಿ ಎಂದು ಚಿತ್ರದುರ್ಗ, ಗೊಲ್ಲಗಿರಿ, ಅಖಿಲ ಭಾರತ ಯಾದವ ಮಹಾಸಂಸ್ಥಾನದ ಶ್ರೀ ಯಾದವಾನಂದ ಮಹಾಸ್ವಾಮಿಗಳು ಕರೆ ನೀಡಿದರು. 
    ಶ್ರೀಗಳು ಭಾನುವಾರ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ತಾಲೂಕು ಗೊಲ್ಲ-ಯಾದವ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ದೇವಸ್ಥಾನದ ೨ನೇ ವರ್ಷದ ವಾರ್ಷಿಕೋತ್ಸವ, ರಥೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. 
    ಪ್ರಸ್ತುತ ಸಮಾಜದಲ್ಲಿ ಮಾನವೀಯ ಗುಣಗಳು ಕಣ್ಮರೆಯಾಗುತ್ತಿವೆ. ಮಕ್ಕಳು ಮೊದಲು ಮಾನವ ಧರ್ಮ ಪ್ರೀತಿಸುವಂತವರಾಗಬೇಕು. ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬದುಕಲು ಸಾಧ್ಯ. ಸಮಾಜವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಜಗತ್ತಿಗೆ ಶ್ರೀ ಕೃಷ್ಣನ ಸಂದೇಶಗಳನ್ನು ನಾವೆಲ್ಲರೂ ಅರಿತು ಮುನ್ನಡೆಯಬೇಕೆಂದರು. 
    ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ನಗರದಲ್ಲಿ ಯಾದವ ಸಮಾಜದವರು ಉತ್ತಮ ಸೌಹಾರ್ದತೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಯಾದವ ಸಮಾಜದ ಜೊತೆಗೆ ಸದಾ ಕಾಲ ಇರುತ್ತೇನೆ. ಅಲ್ಲದೆ ಸಮಾಜದ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತೇನೆ ಎಂದರು. 
ನ್ಯಾಯವಾದಿ ಎಚ್.ಎಲ್ ವಿಶ್ವನಾಥ್, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಮಾತನಾಡಿದರು. ಗೊಲ್ಲ-ಯಾದವ ಸಂಘದ ಅಧ್ಯಕ್ಷ ವೆಂಕಟೇಶಪ್ಪ ಮೊಳಕಾಲ್ಮೂರು ಅಧ್ಯಕ್ಷತೆ ವಹಿಸಿದ್ದರು. 
    ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಸಂಘದ ಗೌರವಾಧ್ಯಕ್ಷ ವಿ. ಲೋಕೇಶಪ್ಪ, ಉಪಾಧ್ಯಕ್ಷ ಎಂ.ಎಚ್ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಕೆ ಚನ್ನಕೇಶವ, ಖಜಾಂಚಿ ಜಿ.ಎನ್ ಜಯರಾಮ್, ಸಹಕಾರ್ಯದರ್ಶಿ ಎಲ್. ಸುನೀಲ್ ಯಾದವ್, ಗ್ರಾಮಾಂತರ ಉಪಾಧ್ಯಕ್ಷ ಟಿ.ಎಸ್ ಮೌನೇಶ್, ಗ್ರಾಮಾಂತರ ಕಾರ್ಯದರ್ಶಿ ಟಿ.ಜಿ ಮಂಜುನಾಥ್, ಕಾಗದನಗರ ಪಿಟಿಇಎಸ್ ಪ್ರಾಂಶುಪಾಲ ನಾಗರಾಜ್ ಹಾಗು ಸಮಾಜದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಲೆಕ್ಕ ಪರಿಶೋಧಕ ಡಿ. ರಾಮಮೂರ್ತಿ ಸ್ವಾಗತಿಸಿದರು. ರಿನಿನಂದ ನಿರೂಪಿಸಿದರು.  
    ಸಮಾರಂಭಕ್ಕೂ ಮೊದಲು ದೇವರ ರಾಜಬೀದಿ ಉತ್ಸವ ನಡೆಯಿತು. ಶ್ರೀ ಕೃಷ್ಣ ದೇವಸ್ಥಾನದಲ್ಲಿ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಸುತ್ತಮುತ್ತಲ ಭಕ್ತರು ಪಾಲ್ಗೊಂಡಿದ್ದರು.