ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ 


ಕೀರ್ತನ 
    ಭದ್ರಾವತಿ: ಅನಿರೀಕ್ಷಿತವಾಗಿ ಸಾವನ್ನಪ್ಪಿದ ಯುವತಿಯೋರ್ವಳು ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕ ಮೆರೆದಿರುವ ಘಟನೆ ನಡೆದಿದೆ. 
    ನಗರದ ಹೊಸಮನೆ ಸುಭಾಷ್ ನಗರ, ೪ನೇ ತಿರುವಿನ ಕುಮಾರ್-ಲೀಲಾ ದಂಪತಿ ಪುತ್ರಿ ಕೀರ್ತನ(೨೩) ಸಾವು ಕಂಡಿದ್ದು, ಇವರು ಅಂಗಾಂಗ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. 
    ಕೀರ್ತನ ಸುಮಾರು ೧ ವರ್ಷದಿಂದ ತುಮಕೂರಿನಲ್ಲಿ ನರ್ಸ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ಮಂಗಳವಾರ ಕೆಲಸ ಮಾಡುವಾಗ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದು, ಇವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. 
    ಕೀರ್ತನ ಅವರಿಗೆ ಓರ್ವ ಸಹೋದರಿ ಇದ್ದು, ಕುಟುಂಬಸ್ಥರಲ್ಲಿ ದುಃಖ ಮನೆ ಮಾಡಿದೆ. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆ ಹಿಂದೂ ರುದ್ರ ಭೂಮಿಯಲ್ಲಿ ಮಂಗಳವಾರ ನೆರವೇರಿತು.