ಹಲವು ವರ್ಷಗಳ ನಂತರ ಪ್ರತಿಷ್ಠಿತ ಎಂಪಿಎಂ ಬಡಾವಣೆಗೆ ಕೆಎಸ್ ಆರ್ ಟಿಸಿ ಬಸ್ ವ್ಯವಸ್ಥೆ
ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ನಗರದ ಮೈಸೂರು ಕಾಗದ ಕಾರ್ಖಾನೆ ನೌಕರರು ತಮ್ಮ ಭವಿಷ್ಯದ ನೆಲೆಗಾಗಿ ರೂಪಿಸಿಕೊಂಡಿರುವ ಪ್ರತಿಷ್ಠಿತ ಎಂಪಿಎಂ ಬಡಾವಣೆಗೆ ಹಲವು ವರ್ಷಗಳ ನಂತರ ಶುಕ್ರವಾರದಿಂದ ಕೆಎಸ್ ಆರ್ ಟಿಸಿ ಬಸ್ ಸಾರಿಗೆ ವ್ಯವಸ್ಥಗೆ ಚಾಲನೆ ನೀಡಲಾಗಿದೆ.
ಭದ್ರಾವತಿ : ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನೌಕರರು ತಮ್ಮ ಭವಿಷ್ಯದ ನೆಲೆಗಾಗಿ ರೂಪಿಸಿಕೊಂಡಿರುವ ಪ್ರತಿಷ್ಠಿತ ಎಂಪಿಎಂ ಬಡಾವಣೆಗೆ ಹಲವು ವರ್ಷಗಳ ನಂತರ ಶುಕ್ರವಾರದಿಂದ ಕೆಎಸ್ ಆರ್ ಟಿಸಿ ಬಸ್ ಸಾರಿಗೆ ವ್ಯವಸ್ಥಗೆ ಚಾಲನೆ ನೀಡಲಾಗಿದೆ.
ಎಂಪಿಎಂ ಬಡಾವಣೆ ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-206ರ ಪಕ್ಕದಲ್ಲಿದ್ದರೂ ಸಹ ಹಲವು ವರ್ಷಗಳಿಂದ ಕೆಎಸ್ಆರ್ ಟಿಸಿ ಬಸ್ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇದರಿಂದ ಇಲ್ಲಿನ ನಿವಾಸಿ ತೊಂದರೆ ಅನುಭವಿಸುವಂತಾಗಿತ್ತು.
ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನೇತೃತ್ವದಲ್ಲಿ ನಿವಾಸಿಗಳು ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗೂ ವಾರ್ಡ್ ನಂ. 22ರ ಸದಸ್ಯ ಬಿ.ಕೆ ಮೋಹನ್ ಹಾಗು ಕೆಎಸ್ಆರ್ ಟಿಸಿ ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಈ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ತರೀಕೆರೆ-ಭದ್ರಾವತಿ ನಡುವೆ ಸಂಚರಿಸುವ ಸಾಮಾನ್ಯ ಸಾರಿಗೆ ಬಸ್ (ಲೋಕಲ್) ಕೆಎಸ್ಆರ್ ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಜಯಶ್ರೀ ವೃತ್ತ(ಶ್ರೀ ಜಯಚಾಮರಾಜೇಂದ್ರ ಒಡೆಯರ್ ವೃತ್ತ), ಪ್ರೊ. ಬಿ. ಕೃಷ್ಣಪ್ಪ ವೃತ್ತ(ಮಿಲ್ಟ್ರಿಕ್ಯಾಂಪ್) ಬಳ್ಳಾಪುರ, ಉಜ್ಜನಿಪುರ ಮಾರ್ಗವಾಗಿ ಎಂಪಿಎಂ ಬಡಾವಣೆ ತಲುಪಲಿದೆ. ನಂತರ ಬಾರಂದೂರು, ಎಂಸಿ ಹಳ್ಳಿ ಮೂಲಕ ತರೀಕೆರೆ ತಲುಪಲಿದೆ. ಬೆಳಿಗ್ಗೆ 10 ಗಂಟೆಗೆ ಹಾಗು ಸಂಜೆ 5.30ಕ್ಕೆ ಎರಡು ಬಾರಿ ಬಸ್ ಸಂಚರಿಸಲಿದೆ.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಹಾಗೂ ನಿರ್ದೇಶಕರು, ಕೆಎಸ್ಆರ್ ಟಿಸಿ ಸಿಬ್ಬಂದಿಗಳು ಮತ್ತು ಎಂಪಿಎಂ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು.
