ಹಾಲಿಗೆ ಹಚ್ಚುವರಿ ಬೆಂಬಲ ಬೆಲೆ, ಪ್ರೋತ್ಸಾಹ ಧನ ಬಿಡುಗಡೆ ಆಗ್ರಹ
ಜು.೭ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ
ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಹಾಲು ಉತ್ಪಾದಕರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಮಾತನಾಡಿದರು.
ಭದ್ರಾವತಿ; ಸರ್ಕಾರ ಹಾಲು ಉತ್ಪಾದಕರ ಒಳಿತಿಗಾಗಿ ಹೆಚ್ಚುವರಿ ಬೆಂಬಲ ಬೆಲೆ ನೀಡುವುದು ಹಾಗೂ ಹಾಲು ಉತ್ಪಾದಕರ ಪ್ರೋತ್ಸಾಹ ಧನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜು.೭ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಹಾಲು ಉತ್ಪಾದಕರ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಜಯರಾಮ್ ಗೊಂದಿ ತಿಳಿಸಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರು ಹೈನುಗಾರಿಕೆ ನಡೆಸಲು ರಾಸುಗಳ ನಿರ್ವಹಣೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಹಾಲು ಒಕ್ಕೂಟವು ರೈತರ ಪರಿಶ್ರಮಕ್ಕೆ ತಕ್ಕಂತೆ ಹಾಲಿನ ದರ ನಿಗದಿ ಮಾಡಿಲ್ಲ. ಹಾಲು ಒಕ್ಕೂಟ ಪ್ರಸ್ತುತ ನೀಡುತ್ತಿರುವ ಹಾಲಿನ ದರಕ್ಕೆ ಪ್ರತಿ ಲೀಟರ್ ಹಾಲಿಗೆ ೨೦ ರು. ಹೆಚ್ಚವರಿ ಬೆಂಬಲ ಬೆಲೆ ಹಾಗು ೫ ರು. ಪ್ರೋತ್ಸಾಹ ಧನ ೧೦ ರು.ಗೆ ಹೆಚ್ಚು ಮಾಡುವ ಮೂಲಕ ಕಳೆದ ೬ ತಿಂಗಳ ಪ್ರೋತ್ಸಾಹ ಧನವನ್ನು ಶೀಘ್ರವೇ ಬಿಡುಗಡೆ ಮಾಡಿ ಹೈನುಗಾರಿಕೆಗೆ ಸಹಕರಿಸಬೇಕು ಎಂದರು.
ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ೧೩೩೫ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯದರ್ಶಿ, ಹಾಲು ಪರೀಕ್ಷಕ ಮತ್ತು ಬಿಎಂಸಿ ಕಾರ್ಯದರ್ಶಿಗಳಿಗೆ ವೇತನ ತುಂಬಾ ಕಡಿಮೆ ಇದೆ. ಹಾಲು ಒಕ್ಕೂಟ ಪ್ರತಿ ಲೀಟರ್ ಹಾಲಿಗೆ ೪೦ ಪೈಸೆ ಕೊಡುತ್ತಿದ್ದು, ಸರ್ಕಾರವಾಗಲಿ ಇಲ್ಲವೆ ಹಾಲು ಒಕ್ಕೂಟದ ಮೂಲಕವಾಗಲಿ ೨೫ ಪೈಸೆ ಹೆಚ್ಚಿಸಬೇಕು. ಬಿಎಂಸಿ ಕಾರ್ಯದರ್ಶಿಯವರಿಗೆ ನೀಡುತ್ತಿರುವ ೧೨ ಸಾವಿರ ರು. ಗಳಿಗೆ ೪ ಸಾವಿರ ಸೇರಿಸಿ ಸಿಬ್ಬಂದಿಗಳಿಗೆ ಭದ್ರತೆ ನೀಡುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದರು.
ಶಿವಮೊಗ್ಗ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ೧.೫೦ ಲಕ್ಷಕ್ಕೂ ಹೆಚ್ಚು ರೈತರು ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಸಹಕಾರ ಸಂಘಗಳ ಜೊತೆಗೆ ೧೩೦ ಬಿಎಂಸಿ ಸಂಘಗಳು ಸಹ ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನ ೯.೪೦ ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ ಎಂದು ವಿವರಿಸಿದರು.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಭದ್ರಾವತಿ, ಶಿವಮೊಗ್ಗ, ಹೊಸನಗರ, ಸಾಗರ, ಶಿಕಾರಿಪುರ, ಸೊರಬ ಮತ್ತು ತೀರ್ಥಹಳ್ಳಿ ಭಾಗದ ಹಾಲು ಉತ್ಪಾದಕ ರೈತರು, ಸಂಘದ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗಜೇಂದ್ರ, ಖಜಾಂಚಿ ನಿರಂಜನ್, ಕೆ.ಎಚ್ ಶಿವಕುಮಾರ್, ಸಂಗಯ್ಯ, ವನಜಾಕ್ಷಿ, ನಳಿನಾ, ಉಷಾ, ಸುಮಿತ್ರ, ಕೆ.ಚಂದ್ರಶೇಖರ್, ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
