Tuesday, July 14, 2020

ಪಿಯುಸಿ ಫಲಿತಾಂಶ : ಅರೋಬಿಂದೋ ಶೇ. ೯೬, ಎಂಪಿಎಂ ಇ.ಎಸ್ ಶೇ.೬೩

ಎಸ್‌ಎವಿ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ 


ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲೆ ವಿದ್ಯಾರ್ಥಿ ಸೈಯದ್ ಗುಲಾಮ್ ಹುಸೈನಿ
ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲೆ ವಿದ್ಯಾರ್ಥಿನಿ ಯಶಸ್ವಿನಿ ಐ.ಕೆ 

ಭದ್ರಾವತಿ, ಜು. ೧೪: ಕಾಗದ ನಗರದ ಎಂಪಿಎಂ ಕಾರ್ಖಾನೆ ಶಿಕ್ಷಣ ಮಂಡಳಿ ಅಧೀನದಲ್ಲಿರುವ ಎಂಪಿಎಂ ಸ್ವತಂತ್ರ ಪದವಿಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೬೩.೭೭ ರಷ್ಟು ಫಲಿತಾಂಶ ಪಡೆದುಕೊಂಡಿದೆ. 
ಕಾಲೇಜಿನ ವಾಣಿಜ್ಯ ವಿಭಾಗದ ೧೦೩ ವಿದ್ಯಾರ್ಥಿಗಳಲ್ಲಿ ೧೦೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೫೮ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.  ವಿಜ್ಞಾನ ವಿಭಾಗ ೩೭ ವಿದ್ಯಾರ್ಥಿಗಳಲ್ಲಿ ೩೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೩೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 
ವಿದ್ಯಾರ್ಥಿಗಳಾದ ಮೌರ್ಯಸೆಲ್ಸ್ .ವಿ(೫೪೫), ಸಹನಾ .ಪಿ(೫೪೨), ಸ್ಮಿತಾ. ಬಿ.ಸಿ(೫೩೫), ಶ್ರೀನಿವಾಸ ಬಿ.ಆರ್(೫೨೩), ಕುಸುಮ .ಟಿ(೫೧೦) ಮತ್ತು ಲಿಖಿತ .ಎನ್(೫೧೦) ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳಾಗಿದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀಕಾಂತ್ ತಿಳಿಸಿದ್ದಾರೆ. 
ಎಸ್‌ಎವಿ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್: 
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಈ ಪೈಕಿ ಸೈಯದ್ ಗುಲಾಮ್ ಹುಸೈನಿ(೫೮೬), ಯಶಸ್ವಿನಿ ಐ.ಕೆ(೫೮೩), ದೃವ ಎಸ್. ದಳವಾಯಿ(೫೮೦), ಮೈತ್ರಿ .ಆರ್(೫೬೫), ಭರತ್ .ಎಂ(೫೫೩), ಸಿಂಚನ ಎಸ್.ಎಲ್(೫೫೩) ಮತ್ತು ಸುಮಂತ್ .ಯು(೫೫೩) ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ. ಗಣಿತದಲ್ಲಿ ೩ ವಿದ್ಯಾರ್ಥಿಗಳು, ಜೀವಶಾಸ್ತ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಭೌತಶಾಸ್ತ್ರದಲ್ಲಿ ಓರ್ವ ವಿದ್ಯಾರ್ಥಿನಿ ಶೇ.೧೦೦ಕ್ಕೆ ೧೦೦ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಪ್ರಥಮ ದರ್ಜೆಯಲ್ಲಿ ೬೧ ಹಾಗೂ ದ್ವಿತೀಯ ದರ್ಜೆಯಲ್ಲಿ ೧೨ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ತಿಳಿಸಿದ್ದಾರೆ. 
ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜಿನ ವಿದ್ಯಾರ್ಥಿನಿ ಅಫೀಪಾ ತಸ್ಕೀನ್
ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜಿನ ವಿದ್ಯಾರ್ಥಿ ಕೆ. ರಾಜಶೇಖರ್

ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜಿಗೆ ೧೩೧ ಡಿಸ್ಟಿಂಕ್ಷನ್: 
ಇಲ್ಲಿಗೆ ಸಮೀಪದ ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೬.೦೫ ಫಲಿತಾಂಶ ಪಡೆದುಕೊಂಡಿದೆ. 
ಒಟ್ಟು ಪರೀಕ್ಷೆ ಬರೆದ ೩೨೯ ವಿದ್ಯಾರ್ಥಿಗಳ ಪೈಕಿ ೧೩೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೧೭೨ ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ೧೩ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಸಾಯನ ಶಾಸ್ತ್ರ ೨, ಭೌತಶಾಸ್ತ್ರ ೫, ಗಣಿತ ೨೩, ಜೀವಶಾಸ್ತ್ರ ೪, ಸಂಖ್ಯಾ ಶಾಸ್ತ್ರ ೩, ಕನ್ನಡ ೧ ಮತ್ತು ಸಂಸ್ಕೃತ ೪ ವಿದ್ಯಾರ್ಥಿಗಳು ಶೇ.೧೦೦ಕ್ಕೆ ೧೦೦ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. 
ಅಫೀಪಾ ತಸ್ಕೀನ್(೫೮೭), ರಾಜಶೇಖರ್ ಕೆ(೫೮೬), ಮಾಯ ಎಸ್ ರಾವ್(೫೮೬), ಪ್ರಗತಿ ಎಂ.ಆರ್(೫೮೫), ಶ್ರೇಯ ಉಡುಪ ಕೆ.ಎಸ್(೫೮೨), ಪೂರ್ವಿಕ ಎಸ್.ಎಲ್(೫೮೨), ರಕ್ಷಾ ಎ.ಆರ್(೫೮೧), ಮನು ಎಸ್ ರಾವ್(೫೮೧), ಖಾಜಿ ಮೊಹಮ್ಮದ್ ಸಾವೂದ್(೫೮೦) ಮತ್ತು ಸಚಿನ್ ಎಚ್.ಪಿ(೫೮೦) ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆಂದು ಪ್ರಾಂಶುಪಾಲ ಡಾ. ಕೆ. ನಾಗರಾಜ್ ತಿಳಿಸಿದ್ದಾರೆ. 

ಸಂಚಿಯ ಹೊನ್ನಮ್ಮ ಬಾಲಕಿಯರ ಕಾಲೇಜು ೧೫೧ ವಿದ್ಯಾರ್ಥಿನಿಯರು ಉತ್ತೀರ್ಣ

ಎಸ್. ಸಿಂಚನ 
ಭದ್ರಾವತಿ, ಜು. ೧೪: ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆಗೆ ಹಾಜರಿದ್ದ ೨೭೨ ವಿದ್ಯಾರ್ಥಿಗಳ ಪೈಕಿ ೧೫೧ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 
೪ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ೯೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದುಕೊಂಡಿದ್ದಾರೆ. ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಸ್. ಸಿಂಚನ ೫೭೭ ಅಂಕಗಳನ್ನು ಪಡೆದುಕೊಂಡಿದ್ದು, ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರದಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾಳೆ. 

ತನುಜಾ. ಆರ್
ಕಲಾ ವಿಭಾಗದ ಆರ್. ಚಂದನ(೫೦೭), ಕಾವ್ಯಶ್ರೀ .ಸಿ(೪೫೪), ಕೀರ್ತನಾ(೪೫೩) ಮತ್ತು ವಾಣಿಜ್ಯ ವಿಭಾಗದ ತನುಜಾ .ಆರ್(೫೫೩), ಅಗೇಷಾ ಬಾನು(೫೩೬), ಕುಸುಮ .ಜಿ(೫೦೯), ಅನೂಷ .ಆರ್(೫೦೭), ಕವನ .ಎನ್(೫೦೬), ಸ್ನೇಹ ಎಚ್.ಕೆ(೫೦೨), ದಿವ್ಯ ಎಚ್.ಪಿ(೫೦೦) ಹಾಗೂ ವಿಜ್ಞಾನ ವಿಭಾಗದ ಸಿಂಚನ .ಆರ್(೫೭೭) ಮತ್ತು ಸಹನಾ .ಕೆ.ಆರ್(೫೧೫) ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಮೇಘರಾಜ್ ತಿಳಿಸಿದ್ದಾರೆ. 


ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಗೆ ಕೊರೋನಾ ತಪಸಾಣೆ ಕಡ್ಡಾಯಗೊಳಿಸಿ

ಭದ್ರಾವತಿ ತಾಲೂಕಿನಲ್ಲಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳಿಗೆ ಮಹಾಮಾರಿ ಕೊರೋನಾ ವೈರಸ್ ತಪಾಸಣೆ ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿ ಮಂಗಳವಾರ ಸಯುಕ್ತ ಜನತಾದಳ ರಾಜ್ಯ ಮುಖಂಡ ಶಶಿಕುಮಾರ್ ಎಸ್ ಗೌಡ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಿದರು. 
ಭದ್ರಾವತಿ, ಜು. ೧೪: ತಾಲೂಕಿನಲ್ಲಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳಿಗೆ ಮಹಾಮಾರಿ ಕೊರೋನಾ ವೈರಸ್ ತಪಾಸಣೆ ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿ ಮಂಗಳವಾರ ಸಯುಕ್ತ ಜನತಾದಳ ರಾಜ್ಯ ಮುಖಂಡ ಶಶಿಕುಮಾರ್ ಎಸ್ ಗೌಡ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಿದರು. 
ಜಿಲ್ಲೆಯ ಸಾಗರ ತಾಲೂಕಿನ ರಿಬ್ಬನ್‌ಪೇಟೆ ಬಿಎಸ್‌ಎಸ್ ಮೈಕ್ರೋ ಫೈನಾನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೬ ವರ್ಷದ ವ್ಯಕ್ತಿಗೆ ಕೊರೋನಾ ವೈರಸ್ ಸೋಂಕು ಹರಡಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಮುನ್ನಚ್ಚರಿಕೆ ವಹಿಸುವ ಅಗತ್ಯವಿದೆ. ತಾಲೂಕಿನಲ್ಲಿರುವ ಲೀಡ್ ಬ್ಯಾಂಕ್ ವ್ಯಾಪ್ತಿಗೆ ಒಳಪಡುವ ಸಣ್ಣ ಬ್ಯಾಂಕ್‌ಗಳು ಹಾಗೂ ಚಿನ್ನದ ಮೇಲೆ ಸಾಲ ನೀಡುವ ಮುತ್ತೂಟ್, ಐಐಎಫ್‌ಎಲ್, ಮಣಪುರಂ ಹಾಗೂ ಉಜ್ಜೀವನ್, ಬಿಎಸ್‌ಎಸ್, ಎಸ್‌ಕೆಎಸ್, ನಿರಂತರ, ಗ್ರಾಮೀಣ ಕೂಟ, ಗ್ರಾಮ ಶಕ್ತಿ, ಸ್ಪಂದನ, ಬೆಲ್‌ಸ್ಟಾರ್ ಸೇರಿದಂತೆ ಎಲ್ಲಾ ಮೈಕ್ರೋ ಫೈನಾನ್ಸ್‌ಗಳ ಸಿಬ್ಬಂದಿಗಳಿಗೆ ಕೊರೋನಾ ವೈರಸ್ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದರು. 
ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಆಗಸ್ಟ್ ತಿಂಗಳ ವರೆಗೆ ಯಾವುದೇ ಕಾರಣಕ್ಕೂ ಬಲವಂತವಾಗಿ ಸಾಲ ವಸೂಲಾತಿ ಮಾಡುವುದಿಲ್ಲ ಎಂದು ಮೈಕ್ರೋ ಫೈನಾನ್ಸ್ ಕಂಪನಿಗಳು ಭರವಸೆ ನೀಡಿದ್ದವು. ಆದರೂ ಸಹ ತಾಲೂಕಿನಲ್ಲಿ ಸಾಲ ವಸೂಲಾತಿ ಮಾಡಲಾಗುತ್ತಿದೆ. ತಾಲೂಕಿನ ಹಲವೆಡೆ ಈಗಾಗಲೇ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು, ಸೀಲ್‌ಡೌನ್ ಮಾಡಲಾಗಿದೆ. ಈ ಪರಿಸ್ಥಿತಿಯಲ್ಲಿ ಸಾಲ ವಸೂಲಾತಿ ಮಾಡುವುದು ಸರಿಯಲ್ಲ. ಇದರಿಂದ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುವ ಸಾಧ್ಯತೆ ಇದೆ.  ಈ ಹಿನ್ನಲೆಯಲ್ಲಿ ತಕ್ಷಣ ಆರೋಗ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವ ಜೊತೆಗೆ ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಸೂಚಿಸಬೇಕು. ಇಲ್ಲವಾದಲ್ಲಿ ಜು.೨೦ರಿಂದ ಪಕ್ಷದ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ವಾಟಾಳ್ ರಮೇಶ್, ಮಂಜುನಾಥ್ ಮತ್ತು ಪುಷ್ಪರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, July 13, 2020

ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕಳಪೆ : ಗುಣಮಟ್ಟದ ಕಾಮಗಾರಿಗೆ ಆಗ್ರಹ


ಭದ್ರಾವತಿ ನಗರಸಭೆ ವಾರ್ಡ್ ನಂ.೬ರ ಶ್ರೀ ಬಸವೇಶ್ವರ ಸಭಾ ಭವನದ ಬಳಿ ನಡೆಯುತ್ತಿರುವ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದು. 
ಭದ್ರಾವತಿ, ಜು. ೧೩: ನಗರಸಭೆ ವಾರ್ಡ್ ೬ರ ವ್ಯಾಪ್ತಿಯ ಶ್ರೀ ಬಸವೇಶ್ವರ ಸಭಾ ಭವನದ ಬಳಿ ಕಳೆದ ಸುಮಾರು ೧ ತಿಂಗಳಿನಿಂದ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯತನಿಂದ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 
ಬಾಕ್ಸ್ ಮಾದರಿ ಚರಂಡಿ ಕಾಮಗಾರಿಯಲ್ಲಿ ಕಾಂಕ್ರೀಟ್‌ಗೆ ಅಳವಡಿಸಲಾಗಿರುವ ಕಬ್ಬಿಣದ ಸರಳುಗಳನ್ನು ಹೊರ ತೆಗೆಯಲಾಗಿದೆ. ತಳಮಟ್ಟದಲ್ಲಿ ಯಾವುದೇ ಭದ್ರತೆ ಇಲ್ಲದಂತೆ ಕಾಮಗಾರಿ ನಿರ್ವಹಿಸಲಾಗಿದೆ. ಎರಡು ಬದಿಯ ಕಾಂಕ್ರೀಟ್ ಯಾವುದೇ ಆಧಾರವಿಲ್ಲದೆ ಕೆಳಗೆ ಕುಸಿದು ಬೀಳಲಿದೆ ಎಂದು ಸ್ಥಳೀಯರು ಆರೋಪಿಸಿದರು. 


ಭದ್ರಾವತಿ ನಗರಸಭೆ ವಾರ್ಡ್ ನಂ.೬ರ ಶ್ರೀ ಬಸವೇಶ್ವರ ಸಭಾ ಭವನದ ಬಳಿ ನಡೆಯುತ್ತಿರುವ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಹಿನ್ನಲೆಯಲ್ಲಿ ಸ್ಥಳೀಯರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
     ಇದೀಗ ಕೈಗೊಳ್ಳುತ್ತಿರುವ ಕಾಮಗಾರಿಯನ್ನು ನೋಡಿದರೆ ಈ ಹಿಂದೆ ಕೈಗೊಳ್ಳಲಾಗಿದ್ದ ಕಾಮಗಾರಿಯೇ ಬಹಳಷ್ಟು ಉತ್ತಮವಾಗಿತ್ತು. ಸಂಬಂಧಪಟ್ಟ ಇಲಾಖೆಯವರು ತಕ್ಷಣ ಪ್ರಸ್ತುತ ನಡೆದಿರುವ ಕಾಮಗಾರಿಯನ್ನು ನೆಲಸಮಗೊಳಿಸಿ ಹೊಸದಾಗಿ ಕಾಮಗಾರಿ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
ಕೆಲವು ದಿನಗಳ ಹಿಂದೆ ಈ ಸಂಬಂಧ ಸ್ಥಳೀಯರು ಪ್ರತಿಭಟನೆ ನಡೆಸಿ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಆಗ್ರಹಿಸಿದ್ದರು. ಆದರೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದು, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. 

ತಾಂಡ ಸೀಲ್‌ಡೌನ್ : ಗ್ರಾಮಸ್ಥರ ನೆರವಿಗೆ ಮುಂದಾಗಲು ಆಗ್ರಹ


ಭದ್ರಾವತಿ, ಜು. ೧೩: ಮಹಾಮಾರಿ ಕೊರೋನಾ ವೈರಸ್ ಸೋಂಕು ತಾಲೂಕಿನ ಕಾರೇಹಳ್ಳಿ ತಾಂಡ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಇದರಿಂದಾಗಿ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣ ಗ್ರಾಮಸ್ಥರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ತಾಲೂಕು ಬಂಜಾರ ಯುವಕ ಸಂಘ ಒತ್ತಾಯಿಸಿದೆ. 
ತಾಂಡದಲ್ಲಿ ಪರಿಶಿಷ್ಟ ಜಾತಿಯ ಲಂಬಾಣಿ ಕುಟುಂಬದವರು ಕೂಲಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಸೀಲ್‌ಡೌನ್ ಪರಿಣಾಮ ಕಳೆದ ೪ ದಿನಗಳಿಂದ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಈ ಕುಟುಂಬದವರ ನೆರವಿಗೆ ಸರ್ಕಾರ ಮುಂದಾಗಬೇಕು. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ಗೌರವಾಧ್ಯಕ್ಷ ಶಂಕ್ರಾನಾಯ್ಕ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಮತ್ತು ಖಜಾಂಚಿ ನಾಗಾನಾಯ್ಕ ಆಗ್ರಹಿಸಿದ್ದಾರೆ. 

ಕೊರೊನಾ ಸೋಂಕು ಏರಿಕೆ : ಪುನಃ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

ಬೆಳಿಗ್ಗೆ ೨, ರಾತ್ರಿ ೫ ಒಂದೇ ದಿನ ೭ ಪ್ರಕರಣಗಳು ಪತ್ತೆ 

ಭದ್ರಾವತಿ ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಮೊದಲ ಹಂತವಾಗಿ ಇದೀಗ ಸೋಮವಾರದಿಂದ ಪುನಃ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. 
ಭದ್ರಾವತಿ, ಜು. ೧೩: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಮೊದಲ ಹಂತವಾಗಿ ಇದೀಗ ಸೋಮವಾರದಿಂದ ಪುನಃ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. 
  ತಾಲೂಕಿನ ಬಹುತೇಕ ಪ್ರಕರಣಗಳಲ್ಲಿ ಹೊರಗಿನಿಂದ ಬಂದವರಿಂದ ಸೋಂಕು ಹರಡುತ್ತಿರುವುದು ಕಂಡು ಬರುತ್ತಿದೆ. ಲಾಕ್‌ಡೌನ್ ಸಡಿಲಗೊಂಡ ನಂತರ ಬೆಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು,  ಈ ಹಿನ್ನಲೆಯಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ತಾಲೂಕಿಗೆ ಆಗಮಿಸುವ ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. 

      
        ಪ್ರಸ್ತುತ ಕಾರೇಹಳ್ಳಿ, ಹಂಚಿನ ಸಿದ್ದಾಪುರ ಚೆಕ್ ಪೋಸ್ಟ್‌ಗಳು ಕಾರ್ಯಾರಂಭಗೊಂಡಿವೆ.  ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಚೆಕ್ ಪೋಸ್ಟ್‌ಗಳಲ್ಲಿ ಬೀಡುಬಿಟ್ಟಿದ್ದು, ಮತ್ತಷ್ಟು ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಇ.ಓ ಮಂಜುನಾಥ್ ಚೆಕ್ ಪೋಸ್ಟ್‌ಗಳ ಪರಿಶೀಲನೆ ನಡೆಸಿದರು. 
ಒಂದೇ ದಿನ ೭ ಸೋಂಕು ಪತ್ತೆ: 
ಭಾನುವಾರ ಒಂದೇ ದಿನ ೭ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಬೆಳಿಗ್ಗೆ ೨, ರಾತ್ರಿ ೫ ಪ್ರಕರಣಗಳು ಪತ್ತೆಯಾಗಿವೆ. ಭೋವಿ ಕಾಲೋನಿಯಲ್ಲಿ ೫೮ ವರ್ಷದ ವ್ಯಕ್ತಿಗೆ, ಹುತ್ತಾ ಕಾಲೋನಿ ಚಂದ್ರಾಲಯ ಬಳಿ ೬೦ ವರ್ಷದ ವ್ಯಕ್ತಿಗೆ, ತರೀಕೆರೆ ರಸ್ತೆಯಲ್ಲಿ ೧೯ ವರ್ಷದ ಯುವಕನಿಗೆ, ಆನವೇರಿ ಬಳಿ ಇಟ್ಟಿಗೆಹಳ್ಳಿಯಲ್ಲಿ ೩೦ ವರ್ಷ ಮಹಿಳೆಗೆ ಹಾಗೂ ಹೊಳೆಹೊನ್ನೂರು ಪೇಟೆ ಬೀದಿಯಲ್ಲಿ ೩೨ ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. 
ಸೋಂಕು ಪ್ರಕರಣಗಳು ಪತ್ತೆಯಾದ ಸ್ಥಳದ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಘೋಷಿಸಲಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಪ್ರದೇಶಗಳ ಸಂಖ್ಯೆ ಏರಿಕೆಯಾಗುತ್ತಿವೆ. 

ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಭದ್ರಾವತಿ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಸುಮಾರು ೨೦ ಲಕ್ಷ ರು. ವೆಚ್ಚದ ಕಾಮಗಾರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಭೂಮಿಪೂಜೆ ನೆರವೇರಿಸಿದರು. 
ಭದ್ರಾವತಿ, ಜು. ೧೩: ನಗರದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಚಾಲನೆ ನೀಡಿದರು. 
ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಸುಮಾರು ೨೦ ಲಕ್ಷ ರು. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. 
ಶಿವಮೊಗ್ಗ ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಸವರಾಜ್, ಶ್ರೀ ಅಕ್ಕಮಹಾದೇವಿ ಸಮುದಾಯ ಭವನದ ಪ್ರಮುಖರು ಉಪಸ್ಥಿತರಿದ್ದರು. 
ಭದ್ರಾವತಿ ಜನ್ನಾಪುರ ೩೩ನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ  ಸಾರ್ವಜನಿಕ ಹೈಟೆಕ್ ಶೌಚಾಲಯ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಉದ್ಘಾಟಿಸಿದರು. ಮುಖಂಡ ಕಾಂತರಾಜ್ ಶಾಸಕರು, ಪೌರಾಯುಕ್ತರು ಹಾಗೂ ಗುತ್ತಿಗೆದಾರರನ್ನು ಅಭಿನಂದಿಸಿದರು. 
ಜನ್ನಾಪುರ ವಾರ್ಡ್ ೩೩ರ ಜಯಶ್ರೀ ವೃತ್ತದಲ್ಲಿ ಸುಮಾರು ೪.೩೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಹೈಟೆಕ್ ಶೌಚಾಲಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ನಿರ್ಮಿಸಲಾಗಿರುವ ೧೦ ಲಕ್ಷ ರು. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು. ನಗರಸಭೆ ಪೌರಾಯುಕ್ತ ಮನೋಹರ್, ಮುಖಂಡರಾದ ಕಾಂತರಾಜ್, ಕಬಡ್ಡಿ ಕೃಷ್ಣೇಗೌಡ, ಅನ್ವರ್ ಆಲಿ, ಆಟೋ ಶಂಕರ್ ಸೇರಿದಂತೆ ಸ್ಥಳೀಯರು ಹಾಗೂ ಗುತ್ತಿಗೆದಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.