ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ, ವಿಮುಖರಾಗದಿರಿ
![](https://blogger.googleusercontent.com/img/a/AVvXsEgxfNDazohxYxt0gM8Ypiw2I1Dh-v2PAP16O8KKDljX89gSoS-xkTtduZ0Qha5O3NcdVqKA56GO0F2UbngOTunaH80XxWLpz_eS8eKWvgryfw9UVVox6pBGZ5YxggSZboQN7MZvDAM5Foz6btNrJ9aD5kL1R5BxJi9Zukw9qQFS_K2_wDTEE68PYW8_TJKE=w400-h210-rw)
ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಸರ್. ವಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡ ಮೊದಲ ಬಹುಮಾನ ಪಡೆದುಕೊಂಡಿತು. ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್ಎಸ್ ಸೇರಿದಂತೆ ಇನ್ನಿತರರು ಬಹುಮಾನಗಳನ್ನು ವಿತರಿಸಿದರು.
ಭದ್ರಾವತಿ: ಕ್ಷೇತ್ರದಲ್ಲಿರುವ ಕ್ರೀಡಾಪಟುಗಳಿಗೆ ಶಾಸಕರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೆ ನಾನು ಸಹ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಆರ್ಥಿಕವಾಗಿ ನೆರವು ನೀಡುತ್ತೇನೆ ಎಂದು ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್ಎಸ್ ಭರವಸೆ ನೀಡಿದರು.
ಅವರು ಶನಿವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಎಲ್ಲರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ಪ್ರಸ್ತುತ ನಾವುಗಳು ಕ್ರೀಡೆಗಳಿಂದ ವಂಚಿತರಾದ್ದಲ್ಲಿ ಭವಿಷ್ಯದಲ್ಲಿ ಮತ್ತೊಮ್ಮೆ ಅವಕಾಶಗಳು ಸಿಗುವುದಿಲ್ಲ. ಕ್ರೀಡೆಗಳಿಂದ ಉತ್ತಮ ಆರೋಗ್ಯದ ಜೊತೆಗೆ ದೈಹಿಕ ಹಾಗು ಮಾನಸಿಕವಾಗಿ ಬೆಳವಣಿಗೆ ಹೊಂದಬಹುದು. ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ತಗಲುವ ಸಂಪೂರ್ಣ ವೆಚ್ಚ ನಾನು ಭರಿಸಲು ಸಿದ್ದವಾಗಿದ್ದೇನೆ. ಈ ಹಿನ್ನಲೆಯಲ್ಲಿ ಯಾರು ಸಹ ಕ್ರೀಡೆಗಳಿಂದ ವಿಮುಖರಾಗಬಾರದು ಎಂದರು.
ಸರ್. ಮಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡಕ್ಕೆ ಮೊದಲ ಬಹುಮಾನ:
ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಸರ್. ವಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡ ಮೊದಲ ಬಹುಮಾನ ಪಡೆದುಕೊಂಡಿದೆ. ಕೊನೆಯ ಅಂತಿಮ ಪಂದ್ಯದಲ್ಲಿ ಶಿವಮೊಗ್ಗ ಮಾಚೇನಹಳ್ಳಿ ಮಲ್ನಾಡ್ ಕ್ರಿಕೆಟರ್ಸ್ ತಂಡದ ವಿರುದ್ಧ ಜಯ ಸಾಧಿಸಿ ೨೦ ಸಾವಿರ ರು. ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ತನ್ನದಾಗಿಸಿಕೊಂಡಿತು. ಉಳಿದಂತೆ ದ್ವಿತೀಯ ಸ್ಥಾನ ಪಡೆದ ಮಲ್ನಾಡ್ ಕ್ರಿಕೆಟರ್ಸ್ ತಂಡ ೧೦ ಸಾವಿರ ರು. ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ಪಡೆದುಕೊಂಡಿತು.
ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್ಎಸ್ ಬಹುಮಾನಗಳನ್ನು ವಿತರಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಾಡಹಬ್ಬ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್, ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಯುವ ಮುಖಂಡ ವೈ. ನಟರಾಜ್, ಶ್ರೀನಿವಾಸ್(ಪೋಟೋ ಗ್ರಾಫರ್) ಸೇರಿದಂತೆ ನಗರಸಭೆ ಹಾಲಿ ಮತ್ತು ಮಾಜಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.