Wednesday, May 21, 2025

ಮನೆಯ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ

ಭದ್ರಾವತಿ ಹಳೇನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಸಮೀಪದ ದೇವರಾಜ್ ಅರಸ್ ಬಡಾವಣೆಯ ಬಿಸಿಎಂ ಬಾಲಕಿಯರ ವಿದ್ಯಾರ್ಥಿನಿಲಯದ ಪಕ್ಕದಲ್ಲಿರುವ ಎಂ.ಜಿ ರಮೇಶ್ ಎಂಬುವರ ಮನೆ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.
    ಭದ್ರಾವತಿ : ಹಳೇನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಸಮೀಪದ ದೇವರಾಜ್ ಅರಸ್ ಬಡಾವಣೆಯ ಬಿಸಿಎಂ ಬಾಲಕಿಯರ ವಿದ್ಯಾರ್ಥಿನಿಲಯದ ಪಕ್ಕದಲ್ಲಿರುವ ಮನೆಯೊಂದರ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.
    ಎಂ.ಜಿ ರಮೇಶ್ ಎಂಬುವರ ಮನೆಯ ಕಾಂಪೌಂಡ್ ಗೇಟ್ ಹಾರಿ ಮನೆಯ ಬಾಗಿಲ ಬೀಗ ಮುರಿದು ಕಳ್ಳತನ ಮಾಡಲಾಗಿದ್ದು, ಮನೆಯವರು ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. 
    ಬುಧವಾರ ಬೆಳಗ್ಗೆ ೧೧ ಗಂಟೆ ಸಮಯದಲ್ಲಿ ಮನೆಯವರು ಊರಿಂದ ಬಂದು ನೋಡಿದಾಗ ಮನೆಯ ಬೀಗ ಮುರಿದಿರುವುದು ಕಂಡು ಬಂದಿದ್ದು, ಒಳಹೋಗಿ ನೋಡಿದಾಗ ಸುಮಾರು ೨೫ ಸಾವಿರ ರೂ ನಗದು, ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದು ಕಂಡು ಬಂದಿದೆ. 
    ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಹಾಗು ಹಳೇನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಚಂದ್ರಶೇಖರ ನಾಯ್ಕ ಮತ್ತು ಸಿಬ್ಬಂದಿಗಳಾದ ಹಾಲಪ್ಪ ಸೇರಿದಂತೆ ಇನ್ನಿತರರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. 

ಎಎಸ್‌ಐ ಶಿವಸ್ವಾಮಿಗೆ ಕಮಾಂಡೇಷನ್ ಡಿಸ್ಕ್ ಪದಕ

ಎಂ.ಎನ್ ಶಿವಸ್ವಾಮಿ

    ಭದ್ರಾವತಿ : ನಗರದ ನ್ಯೂಟೌನ್ ಠಾಣೆ ಸಹಾಯಕ ಉಪ ನಿರೀಕ್ಷಕ(ಎಎಸ್‌ಐ) ಎಂ.ಎನ್ ಶಿವಸ್ವಾಮಿ ಅವರಿಗೆ ಈ ಬಾರಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾನಿರೀಕ್ಷಕರು ಕರ್ನಾಟಕ ರಾಜ್ಯರವರ ೨೦೨೪-೨೫ನೇ ಸಾಲಿನ ಪ್ರಸಂಶನಾ ಪ್ರಶಸ್ತಿ(ಕಮಾಂಡೇಷನ್ ಡಿಸ್ಕ್) ಪದಕ ಲಭಿಸಿದೆ.
    ಸುಮಾರು ೨೯ ವರ್ಷಗಳಿಂದ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಸ್ವಾಮಿಯವರು ಈ ಹಿಂದೆ ೨೦೧೭ರಲ್ಲಿ ಇಲಾಖೆಯ ಅತ್ಯುನ್ನತ ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದರು. ಇದೀಗ ಇವರ ವೃತ್ತಿ ಸೇವಾವಧಿಯಲ್ಲಿನ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
    ಕಾನ್‌ಸ್ಟೇಬಲ್ ಹುದ್ದೆಗೆ ಸೇರ್ಪಡೆಗೊಂಡ ಶಿವಸ್ವಾಮಿಯವರು ದಬೇದಾರ್ ಹುದ್ದೆ ಮುಂಬಡ್ತಿ ಹೊಂದಿ ಶಿವಮೊಗ್ಗ ಜಯನಗರ, ತುಂಗಾನಗರ, ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿ ಹಾಗು ರಾಜ್ಯ ಗುಪ್ತದಳದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಮೂರುವರೆ ವರ್ಷಗಳ ಹಿಂದೆ ಸಹಾಯಕ ಉಪ ನಿರೀಕ್ಷಕರಾಗಿ ಮುಂಬಡ್ತಿ ಪಡೆದು ನ್ಯೂಟೌನ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 
    ಕ್ರಿಕೆಟ್ ಆಟಗಾರ, ತೀರ್ಪುಗಾರ: 
    ಶಿವಸ್ವಾಮಿಯವರು ಕ್ರಿಕೆಟ್ ಆಟಗಾರರು ಹಾಗು ತೀರ್ಪುಗಾರರಾಗಿದ್ದಾರೆ. ಕಳೆದ  ಸುಮಾರು ೨೩ ವರ್ಷಗಳಿಂದ ೨೦೦೨ರಿಂದ ಕ್ರಿಕೆಟ್ ಆಟದ ಜೊತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ತೀರ್ಪುಗಾರರಾಗಿದ್ದಾರೆ. 
    ಶಿವಸ್ವಾಮಿಯವರಿಗೆ ಪೊಲೀಸ್ ಉಪ ಅಧೀಕ್ಷಕರು, ವೃತ್ತ ನಿರೀಕ್ಷಕರು, ಠಾಣಾ ಉಪ ನಿರೀಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.