ಬುಧವಾರ, ಆಗಸ್ಟ್ 6, 2025

ಸಂದೀಪ್‌ಗೆ ಪಿಎಚ್‌ಡಿ ಪದವಿ


ಆರ್. ಸಂದೀಪ್
ಭದ್ರಾವತಿ: `ಪಂಚಮಸಾಲಿ ಸಮುದಾಯ : ಒಂದು ಸಮಾಜಶಾಸ್ತ್ರ ಅಧ್ಯಯನ' ಎಂಬ ವಿಷಯದ ಮೇಲೆ ನಡೆಸಿದ ಸಂಶೋಧನೆಗೆ ಆರ್. ಸಂದೀಪ್‌ರವರಿಗೆ ಕುವೆಂಪು ವಿಶ್ವವಿದ್ಯಾಲಯದ ಪಿಎಚ್‌ಡಿ ಪದವಿ ಲಭಿಸಿದೆ. 
ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಂ. ಪೂರ್ವಾಚಾರ್‌ರವರ ಮಾರ್ಗದರ್ಶನದಲ್ಲಿ ಸಂಶೋಧನಾ ವರದಿ ಮಂಡಿಸಿದ್ದರು.  ಸಂದೀಪ್ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದ ಪ್ರಗತಿಪರ ರೈತ ಕೆ.ಜಿ ರೇವಣಸಿದ್ದಪ್ಪ-ನಾಗರತ್ನಮ್ಮ ದಂಪತಿ ಪುತ್ರರಾಗಿದ್ದಾರೆ.  ಇವರ ಸಾಧನೆಯನ್ನು ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ. 
 

ಅಗ್ನಿವೀರ್ ಯುವಕರಿಗೆ ಉಚಿತ ತರಬೇತಿ

ಅಗ್ನಿವೀರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲೂಕಿನ ನಗರ ಹಾಗು ಗ್ರಾಮೀಣ ಪ್ರದೇಶದ ಯುವಕರಿಗೆ ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಳ್ಳಲು ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ.
    ಭದ್ರಾವತಿ : ಅಗ್ನಿವೀರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲೂಕಿನ ನಗರ ಹಾಗು ಗ್ರಾಮೀಣ ಪ್ರದೇಶದ ಯುವಕರಿಗೆ ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಳ್ಳಲು ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ. 
    ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆ.೪ರಿಂದ ತರಬೇತಿ ನೀಡಲಾಗುತ್ತಿದ್ದು, ಸಂಘದ ಅಧ್ಯಕ್ಷ ಸುಬೇದಾರ್ ಗುಲ್ಗುಲೆ, ಕಾರ್ಯದರ್ಶಿ ವೆಂಕಟಗಿರಿ, ಉಪಾಧ್ಯಕ್ಷ ಮಹೇಶ್, ತರಬೇತಿ ಶಿಬಿರದ ಶಿಕ್ಷಕರಾದ ಕಮಾಂಡೋ ಗಿರಿ, ಸುರೇಶ್, ಪ್ರಸಾದ್ ಮತ್ತು ರಮೇಶ್ ಸೇರಿದಂತೆ ಇನ್ನಿತರರ ಸಮ್ಮುಖದಲ್ಲಿ ಶಿಬಿರಕ್ಕೆ ಚಾಲನೆ ನೀಡಲಾಗಿದೆ. 


    ಪ್ರಸ್ತುತ ಶಿಬಿರದಲ್ಲಿ ೮ ರಿಂದ ೧೦ ಯುವಕರು ಪಾಲ್ಗೊಂಡಿದ್ದು, ಆಸಕ್ತರು ತರಬೇತಿ ಪಡೆಯಲು ಹಾಗು ಹೆಚ್ಚಿನ ಮಾಹಿತಿಗಾಗಿ ಸುಬೇದಾರ್ ಗುಲ್ಗುಲೆ, ಮೊ: ೯೪೪೯೪೨೩೨೬೭, ವೆಂಕಟಗಿರಿ, ಮೊ: ೯೯೦೦೧೮೮೫೩೪, ಪಿ.ಕೆ ಹರೀಶ್, ಮೊ: ೯೬೧೧೭೬೩೬೦೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. 

ನಿವೃತ್ತ ಕಾರ್ಮಿಕರ ವಸತಿಗೃಹ ಬಾಡಿಗೆ ದರ ಕಡಿತಕ್ಕೆ ಪೂರಕ ಸ್ಪಂದನೆ

ದೆಹಲಿಗೆ ತೆರಳಿದ ನಿಯೋಗಕ್ಕೆ ಸಂಸದರ ನೇತೃತ್ವ

ಭದ್ರಾವತಿ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿಯೋಗವನ್ನು ಸಂಸದ ಬಿ.ವೈ ರಾಘವೇಂದ್ರರವರು ದೆಹಲಿಗೆ ಬರಮಾಡಿಕೊಂಡು ಖುದ್ದಾಗಿ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವರ ಆಪ್ತ ಕಾರ್ಯದರ್ಶಿ, ಐಎಎಸ್ ಅಧಿಕಾರಿ ತೆಕಾತ್ ಸಿಂಗ್‌ರವರನ್ನು ಭೇಟಿಮಾಡಿಸಿ ವಸತಿಗೃಹಗಳ ಬಾಡಿಗೆ ಕಡಿತಗೊಳಿಸುವ ಸಂಬಂಧ ಚರ್ಚಿಸಿದ್ದಾರೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕರ ವಸತಿಗೃಹಗಳ ಬಾಡಿಗೆ ದರ ಕಡಿಮೆಗೊಳಿಸುವುದು ಹಾಗು ಕಾರ್ಮಿಕರು ನಿವೃತ್ತಿ ಹೊಂದಿದ ೧ ವರ್ಷದ ನಂತರ ವಸತಿ ಗೃಹಗಳ ಬಾಡಿಗೆ ದರದಲ್ಲಿ ವ್ಯತ್ಯಸ ಮಾಡುವ(ರೆಟೆನ್ಷನ್ ಸ್ಕೀಮ್) ಪ್ರಕ್ರಿಯೆ ಕೈಬಿಟ್ಟು ಬಾಡಿಗೆ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಸಲ್ಲಿಸಲಾಗಿದ್ದ ಮನವಿಗೆ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವಾಲಯದಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ.
    ನಿವೃತ್ತ ಕಾರ್ಮಿಕರ ವಸತಿಗೃಹಗಳಿಗೆ ಪ್ರತಿ ೧೧ ತಿಂಗಳಿಗೆ ಸ್ವಯಂಚಾಲಿತವಾಗಿ ಬಾಡಿಗೆದರ ಏರಿಕೆಯಾಗುತ್ತಿದ್ದು, ಅದರಲ್ಲೂ ಹೆಚ್ಚಿನ ಬಾಡಿಗೆ ದರ ವಿಧಿಸಲಾಗುತ್ತಿದೆ. ಇದನ್ನು ಕಡಿಮೆಗೊಳಿಸುವುದು. ಪ್ರಸ್ತುತ ೧೧ ತಿಂಗಳ ಬಾಡಿಗೆ ಪರಿಷ್ಕರಣೆಯನ್ನು ಪ್ರತಿ ೫ ವರ್ಷಗಳಿಗೆ ನಿಗದಿಪಡಿಸುವಂತೆ ಮತ್ತು  ಕಾರ್ಮಿಕರು ನಿವೃತ್ತಿ ಹೊಂದಿದ ೧ ವರ್ಷದ ನಂತರ ವಸತಿ ಗೃಹಗಳ ಬಾಡಿಗೆ ದರದಲ್ಲಿ ವ್ಯತ್ಯಸ ಮಾಡುವ(ರೆಟೆನ್ಷನ್ ಸ್ಕೀಮ್) ಪ್ರಕ್ರಿಯೆ ಕೈಬಿಡುವಂತೆ ಕೋರಿ ಈ ಹಿಂದೆ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಗಿತ್ತು. 
    ಮನವಿಗೆ ಸ್ಪಂದಿಸಿದ್ದ ಸಂಸದರು ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವರ ಆಪ್ತ ಕಾರ್ಯದರ್ಶಿ, ಐಎಎಸ್ ಅಧಿಕಾರಿ ತೆಕಾತ್ ಸಿಂಗ್‌ರವರಿಗೆ ಪತ್ರ ಬರೆದು ಕೋರಿದ್ದರು. ಈ ನಡುವೆ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿಯೋಗವನ್ನು ಸಂಸದರು ದೆಹಲಿಗೆ ಬರಮಾಡಿಕೊಂಡು ಖುದ್ದಾಗಿ ತೆಕಾತ್ ಸಿಂಗ್ ಅವರನ್ನು ಭೇಟಿಮಾಡಿಸಿ ಚರ್ಚಿಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದನೆ ವ್ಯಕ್ತವಾಗಿದ್ದು, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿದೆ.  
    ಈ ಕುರಿತು ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ಪತ್ರಿಕೆಗೆ ಮಾಹಿತಿ ನೀಡಿ, ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗು ಸಂಸದ ಬಿ.ವೈ ರಾಘವೇಂದ್ರರವರಿಗೆ ನಿವೃತ್ತ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ನಿವೃತ್ತ ಕಾರ್ಮಿಕರ ಮತ್ತಷ್ಟು ಬೇಡಿಕೆಗಳಿದ್ದು, ಮುಂದಿನ ದಿನಗಳಲ್ಲಿ ಬಗೆಹರಿಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
    ನಿಯೋಗದಲ್ಲಿ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ, ಉಪಾಧ್ಯಕ್ಷ ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.