
ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಿತ್ರ ಲೈಟ್ ಫೌಂಡೇಷನ್ ಜೊತೆ ಐಕ್ಯತೆಯಲ್ಲಿ `ಬೃಹತ್ ಸಸ್ಯಹಾರ ಜನಜಾಗೃತಿ ಜಾಥಾ' ಕಾರ್ಯಕ್ರಮ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ : ಪೊಲೀಸ್ ತರಬೇತಿಯಲ್ಲಿ ಧ್ಯಾನ ಸಹ ಒಂದು ಕಲಿಕೆಯ ವಿಭಾಗವಾಗಿರುತ್ತದೆ ಎಂದು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಹೇಳಿದರು.
ಅವರು ಭಾನುವಾರ ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಿತ್ರ ಲೈಟ್ ಫೌಂಡೇಷನ್ ಜೊತೆ ಐಕ್ಯತೆಯಲ್ಲಿ `ಬೃಹತ್ ಸಸ್ಯಹಾರ ಜನಜಾಗೃತಿ ಜಾಥಾ' ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಧ್ಯಾನದ ಮಹತ್ವ ಪೊಲೀಸ್ ಇಲಾಖೆಗೆ ಸದಾ ಅತ್ಯವಶ್ಯಕವಾಗಿದ್ದು, ಸದಾ ಉದ್ವಿಗ್ನತೆಯಲ್ಲಿರುವ ಪೊಲೀಸರಿಗೆ ಧ್ಯಾನ ಸಹಕಾರಿಯಾಗಿದೆ. ದೇಹವನ್ನು ಮನಸ್ಸು ಒಂದುಗೂಡಿಸುವುದು ಧ್ಯಾನ. ಹಣವೆಂಬುದು ಸಂಬಂಧಕ್ಕೆ ಬೆಲೆ ಕಡಿಮೆ ಮಾಡುತ್ತದೆ. ಇದನ್ನು ಕಡಿವಾಣ ಹಾಕಲು ಧ್ಯಾನ ಅವಶ್ಯಕ ಎಂದರು.
ಪ್ರಸ್ತುತ ಮೊಬೈಲ್ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚಳವಾಗುತ್ತಿವೆ. ಇದರಿಂದಾಗಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಮೊಬೈಲ್ಗಳಲ್ಲಿ ಕಾಲಹರಣ ಮಾಡುವವರು ಧ್ಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಯ ಮೀಸಲಿಡಬೇಕು. ಮಾಂಸಹಾರ ಸೇವನೆಯಿಂದ ದೂರವಿದ್ದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಉತ್ತಮ ಆರೋಗ್ಯದೊಂದಿಗೆ ಬದಕಲು ಸಾಧ್ಯ ಎಂದರು.
ವಿಶ್ವ ಮಿತ್ರ ಲೈಟ್ ಫೌಂಡೇಷನ್ ದಾವಣಗೆರೆ ಹಿರಿಯ ಮಾರ್ಗದರ್ಶಕ ಮಾರುತಿ ರಾವ್ ಮಾತನಾಡಿ, ಧ್ಯಾನವು ಋಷಿಗಳಿಂದ ಪ್ರಾರಂಭವಾಗಿದೆ. ಪ್ರಸ್ತುತ ಜಟಿಲತೆಯಿಂದ ಬಳಲುವ ಮನಸ್ಸಿಗೆ ಭೇದಭಾವವಿಲ್ಲದ ಧ್ಯಾನವೊಂದೇ ಮಾರ್ಗವಾಗಿದ್ದು, ಋಷಿ ಮುನಿಗಳು ಧ್ಯಾನದ ಮೂಲಕ ತಪಸ್ಸನ್ನು ಮಾಡಿ ಪ್ರಪಂಚಕ್ಕೆ ಒಳಿತನ್ನು ತಂದು ಕೊಟ್ಟವರು ಅದನ್ನು ಉಳಿಸಿಕೊಳ್ಳಲು ನಾವಿಂದು ಧ್ಯಾನ ಮಾಡುವುದು ಆತ್ಯವಶ್ಯಕ ಎಂದರು.
ಧ್ಯಾನಕ್ಕೆ ವಯಸ್ಸಿನ ಅಂತರವಿಲ್ಲ, ಯಾವುದೇ ಸ್ಥಳದಲ್ಲಾದರೂ ಧ್ಯಾನ ಮಾಡಬಹುದು. ಧ್ಯಾನ ಯಾವುದೇ ಧರ್ಮ ಅಥವಾ ಆಚರಣೆ ಅಲ್ಲ. ಶ್ವಾಸದ ಮೇಲೆ ಸಂಪೂರ್ಣ ಗಮನ ನೀಡುವ ಮೂಲಕ ನಾವು ಆತ್ಮಜ್ಞಾನ ಹೊಂದಬಹುದು. ಇದು ಈ ಜನ್ಮದ ಪರಮ ಉದ್ದೇಶ ಎಂದರು.
ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮಾತನಾಡಿ, ಧ್ಯಾನ ಮರೆತರೆ ನಮ್ಮನ್ನು ನಾವು ಕಳೆದುಕೊಂಡಂತೆ. ಇದರಿಂದಾಗಿ ಪರಿಸರ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಮೈ ಮನಸ್ಸುಗಳಿಗೆ ಧ್ಯಾನವೇ ಉತ್ತಮವಾದ ಆರೋಗ್ಯಕರವಾದ ಔಷಧಿ. ಧ್ಯಾನಕ್ಕೆ ಬರುವಾಗ ತಮ್ಮ ಅಕ್ಕಪಕ್ಕದವರನ್ನು, ಸ್ನೇಹಿತರನ್ನು, ಬಂಧುಗಳನ್ನು ಕರೆತಂದು ಧ್ಯಾನದಲ್ಲಿ ಪಾಲ್ಗೊಳ್ಳಿ ಎಂದರು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ನಾಗೇಶ್ ಉಪಸ್ಥಿತರಿದ್ದರು. ವಿಸ್ಮಯ ಪ್ರಾರ್ಥಿಸಿ, ಸೌಮ್ಯ ಸ್ವಾಗತಿಸಿದರು. ಶುಭ ಗಿರಿರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಮೇಘ ಗೌಡ ಮಾತನಾಡಿ, ಧ್ಯಾನ ಕುರಿತು ಅಂತರ್ಜಾಲದ ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಸೇರಲು ಇಚ್ಚಿಸುವರು ಮೊಬೈಲ್ ೮೯೭೧೩೩೫೯೫೫ ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದರು.
ಜಾಥಾ ಶಿವಾಜಿ ಸರ್ಕಲ್ ಮಾರ್ಗವಾಗಿ, ಮಾರಿಯಮ್ಮ ದೇವಸ್ಥಾನ ಮತ್ತು ಸಂತೆ ಮೈದಾನ ಮೂಲಕ ರಂಗಪ್ಪ ವೃತ್ತದವರೆಗೂ ನಡೆಯಿತು.