ಸೋಮವಾರ, ಸೆಪ್ಟೆಂಬರ್ 1, 2025

ಸೆ.೩ರಂದು ಸರ್ವಸದಸ್ಯರ ವಾರ್ಷಿಕ ಮಹಾಸಭೆ

    ಭದ್ರಾವತಿ : ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ೩೬ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸೆ.೩ರ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಕಾಗದನಗರದ ಸೀತಾರಾಮ ಸಮುದಾಯ ಭವನದಲ್ಲಿ ನಡೆಯಲಿದೆ. 
    ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಸದಸ್ಯ ಬಿ.ಕೆ ಮೋಹನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಘದ ಲೆಕ್ಕಪತ್ರ ಮಂಡನೆ, ಲೆಕ್ಕ ಪರಿಶೋಧಕರ ನೇಮಕ ಮಾಡಿಕೊಳ್ಳುವುದು, ಹಿಂದಿನ ಅಭಿವೃದ್ಧಿ ಶುಲ್ಕವನ್ನು ಪಾವತಿಸದಿರುವವರಿಗೆ ದಂಡ ಶುಲ್ಕ ವಿಧಿಸುವುದು ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿವೆ. ಸಭೆಗೆ ಸದಸ್ಯರು ತಪ್ಪದೇ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಸ್ಕೋಪ್ ಶ್ರೇಷ್ಠತಾ ಪ್ರಶಸ್ತಿ : ವಿಐಎಸ್‌ಎಲ್ ಸಂತಸ

ಭಾರತೀಯ ಉಕ್ಕು ಪ್ರಾಧಿಕಾರ(ಸೈಲ್)ಕ್ಕೆ ೨೦೨೨-೨೩ನೇ ಸಾಲಿನ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ಪ್ರತಿಷ್ಠಿತ ಸ್ಕೋಪ್(ಎಸ್‌ಸಿಓಪಿಈ) ಶ್ರೇಷ್ಠತಾ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಪ್ರದಾನ ಮಾಡಿದರು. 
    ಭದ್ರಾವತಿ : ಭಾರತೀಯ ಉಕ್ಕು ಪ್ರಾಧಿಕಾರ(ಸೈಲ್)ಕ್ಕೆ ೨೦೨೨-೨೩ನೇ ಸಾಲಿನ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ಪ್ರತಿಷ್ಠಿತ ಸ್ಕೋಪ್(ಎಸ್‌ಸಿಓಪಿಈ) ಶ್ರೇಷ್ಠತಾ ಪ್ರಶಸ್ತಿಯನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಉಕ್ಕು ಪ್ರಾಧಿಕಾರದ ಘಟಕವಾಗಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ(ವಿಐಎಸ್‌ಎಲ್)ಸಂತಸ ವ್ಯಕ್ತಪಡಿಸಿದೆ.
    ನವದೆಹಲಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಪ್ರಧಾನ ಮಾಡಿದ್ದು, ಉಕ್ಕು ಪ್ರಾಧಿಕಾರದ ನಿರ್ದೇಶಕ (ತಾಂತ್ರಿಕ, ಯೋಜನೆಗಳು ಮತ್ತು ಕಚ್ಚಾವಸ್ತುಗಳು) ಮನೀಶ್‌ರಾಜ್ ಗುಪ್ತಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿ ಸ್ಥಳೀಯ ಸಂಶೋಧನೆ, ಪ್ರಕ್ರಿಯೆ ನಾವೀನ್ಯತೆ ಮತ್ತು ಸುಸ್ಥಿರ ತಾಂತ್ರಿಕ ಪ್ರಗತಿಗೆ ಉಕ್ಕು ಪ್ರಾಧಿಕಾರದ ಅಚಲ ಬದ್ಧತೆಯನ್ನು ಒತ್ತಿಹೇಳುತ್ತದೆ.
    `ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾ'ದ ದೃಷ್ಟಿಕೋನಕ್ಕೆ ಅನುಗುಣವಾಗಿ, ಸೈಲ್ ಮೌಲ್ಯಾಧಾರಿತ ಉಕ್ಕಿನ ಉತ್ಪಾದನೆಯ ಸರಪಳಿಯಲ್ಲಿ ನಾವೀನ್ಯತೆಯನ್ನು ಮುಂದುವರೆಸಿದೆ ಮತ್ತು ನಿರ್ಣಾಯಕ ಅನ್ವಯಿಕೆಗಳಿಗಾಗಿ ಸುಧಾರಿತ ಉಕ್ಕಿನ ಶ್ರೇಣಿಗಳು ಮತ್ತು ತಂತ್ರಜ್ಞಾನಗಳ ಸ್ಥಳೀಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ, ಇದರಿಂದಾಗಿ ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ರೈಲ್ವೆ, ರಕ್ಷಣೆ ಮತ್ತು ಮೂಲಸೌಕರ್ಯದಂತಹ ಕಾರ್ಯತಂತ್ರದ ವಲಯಗಳಿಗೆ ಉತ್ತಮ ಗುಣಮಟ್ಟದ ಉಕ್ಕನ್ನು ಪೂರೈಸುವ ಮೂಲಕ, ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳು ಮತ್ತು ಕೈಗಾರಿಕಾ ಬೆಳವಣೆಗೆಗೆ ಅನುವುಮಾಡಿಕೊಡುವ ಮೂಲಕ ಉಕ್ಕು ಪ್ರಾಧಿಕಾರ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. 
    ಸುಧಾರಿತ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆಗಳು ಮತ್ತು ಕಾಯಿಲ್ ಯಾರ್ಡ್ ನಿರ್ವಹಣಾ ವ್ಯವಸ್ಥೆಗಳು ಸೇರಿದಂತೆ ಮುಂದಿನ ಪೀಳಿಗೆಯ ಪರಿಹಾರಗಳನ್ನು ಅಳವಡಿಸಿಕೊಂಡಿದೆ. ಅಲ್ಲದೆ ತ್ಯಾಜ್ಯ ಮರುಬಳಕೆ, ವೃತ್ತಾಕಾರದ ಆರ್ಥಿಕ ಉಪಕ್ರಮಗಳನ್ನು ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಏಕೀಕರಣದ ಮೂಲಕ ಸುಸ್ಥಿರತೆಯ ಮೇಲೆ ಬಲವಾದ ಗಮನವನ್ನು ಹೊಂದಿದೆ ಎಂದು ಪ್ರಾಧಿಕಾರದ ಕಾರ್ಯ ವೈಖರಿ ವಿವರಿಸುವ ಮೂಲಕ ವಿಐಎಸ್‌ಎಲ್ ಕಾರ್ಖಾನೆ ಮೆಚ್ಚುಗೆ ವ್ಯಕ್ತಪಡಿಸಿದೆ. 
    `ಈ ಪ್ರಶಸ್ತಿಯು ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ತಂಡಗಳ ನಿರಂತರ ಶ್ರೇಷ್ಠತೆಯ ಅನ್ವೇಷಣೆ ಮತ್ತು ಪ್ರಾಧಿಕಾರದ ಎಲ್ಲಾ ಘಟಕಗಳಲ್ಲಿನ ನಾವೀನ್ಯತೆ ಮತ್ತು ಕಾರ್ಯಾಚರಣೆಗಳ ನಡುವಿನ ಆಳವಾದ ಸಹಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇದು ದೇಶಕ್ಕೆ ಸೇವೆ ಸಲ್ಲಿಸುವ ಮತ್ತು ಜಾಗತಿಕವಾಗಿ ಸ್ಪರ್ಧಿಸುವ ಭವಿಷ್ಯಕ್ಕೆ ಸಿದ್ಧವಾಗಿರುವ ಉಕ್ಕಿನ ಉದ್ಯಮವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಛರಿಸುತ್ತದೆ' ಎಂದು ಪ್ರಾಧಿಕಾರದ ಅಧ್ಯಕ್ಷರಾದ ಅಮರೇಂದು ಪ್ರಕಾಶ್‌ರವರು ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವುದು ಪ್ರಾಧಿಕಾರದ ಎಲ್ಲಾ ಘಟಕಗಳಿಗೆ ಮತ್ತಷ್ಟು ಚೈತನ್ಯ ತಂದಿದೆ ಎಂದು ವಿಐಎಸ್‌ಎಲ್ ಕಾರ್ಖಾನೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. 

ಧರ್ಮಸ್ಥಳ ಸತ್ಯಯಾತ್ರೆಯಲ್ಲಿ ಉಕ್ಕಿನ ನಗರದ ಜೆಡಿಎಸ್ ಮುಖಂಡರು ಭಾಗಿ

ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಹಾಗು ಅತ್ಯಾಚಾರಕ್ಕೆ ಒಳಗಾದ ನೂರಾರು ಶವ ಹೂಳಲಾಗಿದೆ ಎಂಬ ದೂರಿನ ನೆಪದಲ್ಲಿ ಕ್ಷೇತ್ರದ ಅಪಪ್ರಚಾರ ನಡೆದಿದೆ ಎಂದು ಆರೋಪಿಸಿ ಜಾತ್ಯಾತೀತ ಜನತಾ ದಳ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸತ್ಯಯಾತ್ರೆಯಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. 
    ಭದ್ರಾವತಿ : ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಹಾಗು ಅತ್ಯಾಚಾರಕ್ಕೆ ಒಳಗಾದ ನೂರಾರು ಶವ ಹೂಳಲಾಗಿದೆ ಎಂಬ ದೂರಿನ ನೆಪದಲ್ಲಿ ಕ್ಷೇತ್ರದ ಅಪಪ್ರಚಾರ ನಡೆದಿದೆ ಎಂದು ಆರೋಪಿಸಿ ಜಾತ್ಯಾತೀತ ಜನತಾ ದಳ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸತ್ಯಯಾತ್ರೆಯಲ್ಲಿ ವಿಧಾನಸಭಾ ಕ್ಷೇತ್ರದ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. 
    ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾಲ್ಗೊಂಡಿದ್ದ ಪಕ್ಷದ ಸ್ಥಳೀಯ ಮುಖಂಡರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕುರುಣಾಮೂರ್ತಿ, ನ್ಯಾಯವಾದಿ ಟಿ. ಚಂದ್ರೇಗೌಡ, ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಶಿಮುಲ್ ಮಾಜಿ ಅಧ್ಯಕ್ಷ ಡಿ. ಆನಂದ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಧರ್ಮೇಗೌಡ, ಭಾಗ್ಯಮ್ಮ, ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪಕ್ಷದ ಜನಪ್ರತಿನಿಧಿಗಳು, ಇನ್ನಿತರರು ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ನಂತರ ಶ್ರೀ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಸತ್ಯಯಾತ್ರೆ ಕುರಿತು ವಿವರಿಸಿದರು. 
 

ರೋಟರಿ ಕ್ಲಬ್ ೨೦೨೪-೨೫ನೇ ಸಾಲಿನ ಸಾಧನೆಗೆ ಪ್ರಶಸ್ತಿ

ಭದ್ರಾವತಿ ನಗರದ ರೋಟರಿ ಕ್ಲಬ್ ಕಳೆದ ೨೦೨೪-೨೫ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇದನ್ನು ಗುರುತಿಸಿ ಉಡುಪಿ ಗುಂಡ್ಮಿ(ಸಾಸ್ತಾನ್)ಯಲ್ಲಿ ಜರುಗಿದ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. 
    ಭದ್ರಾವತಿ : ನಗರದ ರೋಟರಿ ಕ್ಲಬ್ ಕಳೆದ ೨೦೨೪-೨೫ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇದನ್ನು ಗುರುತಿಸಿ ಉಡುಪಿ ಗುಂಡ್ಮಿ(ಸಾಸ್ತಾನ್)ಯಲ್ಲಿ ಜರುಗಿದ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. 
    ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದ ತಂಡ ಅವರ ಅವಧಿಯಲ್ಲಿ ಉತ್ತಮ ಹಣಕಾಸಿನ ನಿರ್ವಹಣೆ ಜೊತೆಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ, ಹಸಿರು ಜಾಗೃತಿ, ರಸ್ತೆ ಸಪ್ತಾಹ ಸುರಕ್ಷತೆ, ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಒಳಗೊಂಡಿವೆ. ಅಲ್ಲದೆ ವಿಭಿನ್ನತೆಯಿಂದ ಕೂಡಿರುವ ಕಾರ್ಯ ಯೋಜನೆಗಳನ್ನು ರೂಪಿಸುವ ಮೂಲಕ ಗಮನ ಸೆಳೆದಿತ್ತು. 
    ಪ್ರಶಸ್ತಿಯನ್ನು ರಾಘವೇಂದ್ರ ಉಪಾಧ್ಯಾಯರವರ ತಂಡ ಸ್ವೀಕರಿಸಿತು. ಪ್ರಮುಖರಾದ ಮಾಜಿ ಜಿಲ್ಲಾ ಗೌರ್‍ನರ್ ದೇವಾನಂದ್, ಜಿಲ್ಲಾ ಗೌರ್‍ನರ್ ಪಾಲಾಕ್ಷ, ನಾಗರಾಜ್, ವಸಂತ ಹೋಬಳಿದಾರ್ ಮತ್ತು ಅಭಿನಂದನ್ ಶೆಟ್ಟಿ ಉಪಸ್ಥಿತರಿದ್ದರು. 
    ನಗರದ ರೋಟರಿ ಕ್ಲಬ್ ಪ್ರಮುಖರಾದ ಪ್ರಸಕ್ತ ಸಾಲಿನ ಅಧ್ಯಕ್ಷ ಶಿವಕುಮಾರ್, ಕೆ.ಎಚ್ ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ದುಷ್ಯಂತ್ ರಾಜ್ ಮತ್ತು ನಿರಂಜನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.