Tuesday, February 25, 2025

ನಡೆಯಿತು ವಿಸ್ಮಯ : ಸತ್ತು ಬದುಕಿದ ಮೀನಾಕ್ಷಿ....!

ಭದ್ರಾವತಿ ಗಾಂಧಿ ನಗರದ ನಿವಾಸಿ ಮೀನಾಕ್ಷಿ 
    ಭದ್ರಾವತಿ:  ಶಿವಮೊಗ್ಗ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗೃಹಿಣಿಯೋರ್ವರು ಸೋಮವಾರ ರಾತ್ರಿ ನಿಧನರಾಗಿದ್ದಾರೆಂದು ವೈದ್ಯರು ದೃಢೀಕರಿಸಿದ್ದಾರೆ. ಮಂಗಳವಾರ ಬೆಳಗ್ಗೆ ಅವರ ನಿವಾಸಕ್ಕೆ ಮೃತ ದೇಹವನ್ನು ತಂದು ಇಳಿಸುವಾಗ ಕಣ್ತೆರೆದು ಉಸಿರಾಡಿದ ವಿಸ್ಮಯ ಘಟನೆ ಹಳೇನಗರ ವ್ಯಾಪ್ತಿಯ ಗಾಂಧಿನಗರದಲ್ಲಿ ನಡೆದಿದೆ.
    ಗಾಂಧಿನಗರ ನಿವಾಸಿ ಗುತ್ತಿಗೆದಾರ ಸುಬ್ರಮಣಿ ಅವರ ಪತ್ನಿ ಮೀನಾಕ್ಷಿ(೫೨) ಅವರನ್ನು ಅನಾರೋಗ್ಯ ನಿಮಿತ್ತ ಶಿವಮೊಗ್ಗ ಖಾಸಗಿ   ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ೧೧.೩೦ಕ್ಕೆ ಮೀನಾಕ್ಷಿ ಅವರು ನಿಧನರಾದರೆಂದು ವೈದ್ಯರು ದೃಢಪಡಿಸಿದ್ದರು. ವಿಷಯ ತಿಳಿದ ಅವರ ಬಂಧು ಬಳಗ ಸೇರಿದಂತೆ ನೂರಾರು ಮಂದಿ ಅವರ ನಿವಾಸದ ಬಳಿ ನೆರೆದಿದ್ದರು. ಮಂಗಳವಾರ ಬೆಳಗ್ಗೆ ಮೃತ ದೇಹ ಅವರ ನಿವಾಸಕ್ಕೆ ತಂದು ಇಳಿಸುವಾಗ ಮೃತರಾಗಿದ್ದವರು ಕಣ್ತೆರೆದು ನೋಡಿ ಉಸಿರಾಡಿದ್ದಾರೆ. 
    ಕುಟುಂಬಸ್ಥರು ಅಚ್ಚರಿಗೊಂಡು ನೀರು ಕುಡಿಸಿದ್ದಾರೆ. ತಕ್ಷಣವೇ ಸಮೀಪದ ನರ್ಸಿಂಗ್ ಹೋಂಗೆ ಹೋಗಿ ಪರೀಕ್ಷಿಸಿಕೊಂಡು ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಯಾರಾದರೂ ಮಾತನಾಡಿದರೆ ಉತ್ತರಿಸುತ್ತಾರೆಂದು ಕುಟುಂಬ ಮೂಲಗಳು ತಿಳಿಸಿವೆ. ಮುಖಂಡರಾದ ವಿ.ಕದಿರೇಶ್, ಆರ್.ಕರಣಾಮೂರ್ತಿ, ಮಂಜುನಾಥ್, ಸ್ವಾಮಿನಾಥನ್, ವಿದ್ಯಾಧರನ್, ಸೋಮಸುಂದರ್ ಸೇರಿದಂತೆ ಕುಟುಂಬ ಬಳಗದವರು, ಹಿತೈಷಿಗಳು ಮೀನಾಕ್ಷಿಯವರು ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. 
    ವೀರಶೈವ ಸಮಾಜ ಸಂತಸ : 
    ಭದ್ರಾ ನದಿ ದಡದಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ಶಿವರಾತ್ರಿ ಹಬ್ಬದ ಮುನ್ನಾ ದಿನದಂದು ಲೋಕ ಕಲ್ಯಾಣಾರ್ಥ ಹಮ್ಮಿಕೊಳ್ಳುವ ಹೋಮ-ಹವನ ಮತ್ತಿತರೆ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಸುಬ್ರಮಣಿ ದಂಪತಿ ಹಾಗು ಕುಟುಂಬ ಸದಸ್ಯರು ಭಾಗವಹಿಸುತ್ತಿದ್ದರು.  ಮಹಾಶಿವರಾತ್ರಿ ಮುನ್ನಾ ದಿನ ಮಂಗಳವಾರ ಸಹ ಅವರೇ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ವಿಧಿಯಾಟ ಸೋಮವಾರ ರಾತ್ರಿ ಮರಣ ಹೊಂದಿದರೆಂದು ತಿಳಿದು ವೀರಶೈವ ಸೇವಾ ಸಮಾಜ ಬಾಂಧವರಲ್ಲಿ ದುಃಖ ಆವರಿಸಿಕೊಂಡಿತ್ತು. ವೀರಶೈವ ಸಮಾಜದ ಅಧ್ಯಕ್ಷ ಆರ್.ಮಹೇಶ್‌ಕುಮಾರ್ ಮುಖಂಡರಾದ ವಾಗೀಶ್‌ಕೋಠಿ, ಟಿ.ಎಸ್.ಆನಂದಕುಮಾರ್ ಮುಂತಾದವರು ಬೃಹತ್ ಹಾರದೊಂದಿಗೆ ಮೃತರ ನಿವಾಸಕ್ಕೆ ತೆರಳಿದ್ದರು. ಆಗತಾನೆ ವಾಹನದಲ್ಲಿ ಮೃತದೇಹ ತಂದು ಇಳಿಸಿದಾಗ ಕಣ್ತೆರದು ಉಸಿರಾಡಿದನ್ನು ಕಣ್ಣಾರೆ ಕಂಡು ಆಶ್ಚರ್ಯ ಚಕಿತರಾಗಿದ್ದಾರೆ. ಭಗವಂತ ಅವರಿಗೆ ಇನ್ನೂ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. 
 

ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಉಲ್ಬಣ : ಕಛೇರಿಗೆ ಬೀಗ ಜಡಿದು ಪ್ರತಿಭಟನೆ

ಭದ್ರಾವತಿ ತಾಲೂಕಿನ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮದಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ ಮುಂಭಾಗ ಖಾಲಿ ಕೊಡದ ಹಿಡಿದು ಪ್ರತಿಭಟನೆ ನಡೆಸಿದರು. 
    ಭದ್ರಾವತಿ: ತಾಲೂಕಿನ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮದಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. 
    ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೆರೆ, ಮಾವಿನಕೆರೆ ಕಾಲೋನಿ, ಕೆಂಚೇನಹಳ್ಳಿ ಕಾಲೋನಿ, ಕೆಂಚೇನಹಳ್ಳಿ ಹಾಗು ಕೆಂಚೇನಹಳ್ಳಿ ನೀರುಗುಂಡಿ ಗ್ರಾಮಕ್ಕೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಸರಬರಾಜು ಮಾಡಬೇಕಾಗಿದ್ದು, ಆದರೆ ಕೇವಲ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮಕ್ಕೆ ಮಾತ್ರ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಜ.೧೨ರಿಂದ ಈ ಎರಡು ಗ್ರಾಮಗಳಿಗೂ ನೀರು ಸರಬರಾಜು ಆಗದೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದೆ. ಕುಡಿಯುವ ನೀರು ಸರಬರಾಜು ಮಾಡುವಂತೆ ಗುತ್ತಿಗೆದಾರರಿಗೆ ಹಲವಾರು ಬಾರಿ ಕರೆ ಮಾಡಿದರೂ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲಾಖೆ ಅಭಿಯಂತರರಿಗೂ ಹಲವಾರು ಬಾರಿ ಪತ್ರ ಬರೆದು ಮನವಿ ಮಾಡಿದರೂ ಸಹ ಯಾವುದೇ ಪ್ರಕ್ತಿಯೆ ವ್ಯಕ್ತವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬೀಗ ಜಡಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಹೇಳಿದರು. 
    ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಕುಸಿತಗೊಂಡಿದ್ದು, ಇದರಿಂದಾಗಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಕುಡಿಯಲು ನೀರು ಸರಬರಾಜು ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ ಎಂದು ಖಾಲಿ ಕೊಡದ ಹಿಡಿದು ಮಹಿಳೆಯರು ತಮ್ಮ ಆಕ್ರೋಶ ಹೊರ ಹಾಕಿದರು. 
    ಯೋಜನೆ ಆರಂಭಗೊಂಡು ಸುಮಾರು ೧೫ ವರ್ಷಗಳು ಕಳೆದಿವೆ. ಮಾವಿನಕೆರೆ ಮತ್ತು ಬಾರಂದೂರು ಗ್ರಾಮ ಪಂಚಾಯಿತಿಗಳ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಈ ಕುರಿತು ಹಲವಾರು ಬಾರಿ  ಸಂಬಂಧ ಇಲಾಖೆಗಳ ಅಧಿಕಾರಿಗಳಿಗೆ, ಶಾಸಕರಿಗೆ, ಸಂಸದರಿಗೆ ಮನವಿ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾದಾನ ಹೊರ ಹಾಕಿದರು. 
    ಪ್ರತಿಭಟನೆಯಲ್ಲಿ ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಶ್ರೀಧರ್ ಶೆಟ್ಟಿ,  ಗ್ರಾಪಂ ಸದಸ್ಯರಾದ ಅಭಿನಂದನ್, ರಮೇಶ್, ಉಮೇಶ್, ನಗರಸಭೆ ಸದಸ್ಯ ಹನುಮಂತು, ಚೌಡೇಗೌಡ, ಗಾಂಧಿ ನಗರ ರಮೇಶ್, ಬಾರಂದೂರು ಗ್ರಾಪಂ ಅಧ್ಯಕ್ಷ ಚೇತನ್, ಸದಸ್ಯರಾದ ಜಯಮ್ಮ, ಕಿರಣ್, ಕೆಂಚಮ್ಮ, ಕೃಷ್ಣನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
 
----------------------------------------------------------------
ಗ್ರಾಮ ಪಂಚಾಯಿತಿಯ ಎಲ್ಲಾ ೮ ಗ್ರಾಮಗಳಲ್ಲಿ ೪೦ ದಿನಗಳಿಂದ ಒಂದು ತೊಟ್ಟು ನೀರು ಸರಬರಾಜು ಮಾಡಿಲ್ಲ. ಜನರು ತತ್ತರಿಸಿದ್ದು, ಇರುವ ಕೊಳವೆ ಬಾವಿ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿ ನೀಡಲಾಗಿದೆ.  ಈ ನೀರು ಕುಡಿದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶುದ್ದ ಕುಡಿಯುವ ನೀರು ಟ್ಯಾಂಕರ್‌ಗಳ ಮೂಲಕ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ವರ್ಷಕ್ಕೆ ಕನಿಷ್ಠ ೧.೫ ಲಕ್ಷ ರು. ವೆಚ್ಚ ಭರಿಸಲಾಗುತ್ತಿದೆ. ಇದರಿಂದಾಗಿ ಗ್ರಾ.ಪಂ. ಅಭಿವೃದ್ದಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. 
 -ಸುರೇಶ್, ಅಧ್ಯಕ್ಷರು, ಮಾವಿನಕೆರೆ ಗ್ರಾಮಪಂಚಾಯಿತಿ, ಭದ್ರಾವತಿ. 
 -------------------------------------------------------

ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಕಳೆದ ೧೫ ವರ್ಷಗಳ ಹಿಂದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೋಟ್ಯಾಂತರ ರು. ವೆಚ್ಚದಲ್ಲಿ ಕೈಗೆತ್ತಿಕೊಂಡು ಮಾವಿನಕೆರೆ ಗ್ರಾಮದಲ್ಲಿ ಫಿಲ್ಟರ್ ಮತ್ತು ಬಾರಂದೂರಿನಲ್ಲಿ ಘಟಕ ಆರಂಭಿಸಲಾಗಿದೆ. ಆದರೆ ಮಾವಿನಕೆರೆ, ಬಾರಂದೂರು ಹಾಗೂ ಕಾರೇಹಳ್ಳಿ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳಿಗೆ ಶುದ್ದ ಕುಡಿಯುವ ನೀರಿನ ಯೋಜನೆ ಯಶಸ್ವಿಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
 - ಶ್ರೀಧರ್ ಶೆಟ್ಟಿ, ಮಾಜಿ ಅಧ್ಯಕ್ಷರು, ಮಾವಿನಕೆರೆ ಗ್ರಾಮಪಂಚಾಯಿತಿ, ಭದ್ರಾವತಿ. 


ಭದ್ರಾವತಿ ತಾಲೂಕಿನ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮದಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. 
 

ಕಾಯ್ದೆ ಜಾರಿಗೆ ಬಂದರೂ ನಿಲ್ಲದ ಫೈನಾನ್ಸ್ ಕಂಪನಿಗಳ ಕಿರುಕುಳ

ಕುಟುಂಬಸ್ಥರನ್ನು ೧ ತಿಂಗಳ ಕಾಲ ಬೀದಿಗೆ ತಳ್ಳಿದ ಇಕ್ವಿಟಾಸ್ ಫೈನಾನ್ಸ್ 

ಭದ್ರಾವತಿ ತಾಲೂಕಿನ ಆಗರದಹಳ್ಳಿ ಗ್ರಾಮದ ನಿವಾಸಿ, ಭೋವಿ ಜನಾಂಗದ ಕೃಷಿ ಕೂಲಿ ಕಾರ್ಮಿಕ ಚೌಡಪ್ಪ ಹಾಗು ಸಹೋದರರ ಎರಡು ಮನೆಗಳಿಗೆ ಇಕ್ವಿಟಾಸ್ ಫೈನಾನ್ಸ್ ರವರು ನೋಟಿಸ್ ಅಂಟಿಸಿ ಬೀಗ ಜಡಿದಿರುವುದು. 
    ಭದ್ರಾವತಿ : ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ, ದೌರ್ಜನ್ಯ ತಪ್ಪಿಸಲು ಸರ್ಕಾರ ಕಾಯ್ದೆ ಜಾರಿಗೆ ತಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ನಗರದ ಮೈಕ್ರೋ ಫೈನಾನ್ಸ್ ಕಂಪನಿಯೊಂದು ರೈತ ಕುಟುಂಬವನ್ನು ಸುಮಾರು ೧ ತಿಂಗಳ ಕಾಲ ಬೀದಿಗೆ ತಳ್ಳಿರುವ ಘಟನೆ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಇದರ ವಿರುದ್ಧ ರೈತ ಸಂಘ ಧ್ವನಿ ಎತ್ತುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಮುಂದಾಗಿದೆ. 
    ತಾಲೂಕಿನ ಆಗರದಹಳ್ಳಿ ಗ್ರಾಮದ ನಿವಾಸಿ, ಭೋವಿ ಜನಾಂಗದ ಕೃಷಿ ಕೂಲಿ ಕಾರ್ಮಿಕ ಚೌಡಪ್ಪ ನಗರದ ಇಕ್ವಿಟಾಸ್ ಫೈನಾನ್ಸ್‌ನಿಂದ ಸುಮಾರು ೨ ಲಕ್ಷ ರು. ಸಾಲ ೨೦೨೧ರಲ್ಲಿ ಪಡೆದಿದ್ದು, ಈಗಾಗಲೇ ಸಾಲದ ೯ ಕಂತುಗಳನ್ನು ಫೈನಾನ್ಸ್‌ಗೆ ಪಾವತಿಸಿರುತ್ತಾರೆ. ಈ ನಡುವೆ ಉಳಿದ ಬಾಕಿ ಹಣ ವಸೂಲಿಗಾಗಿ ಫೈನಾನ್ಸ್‌ರವರು ಒಂದು ತಿಂಗಳ ಹಿಂದೆ ಚೌಡಪ್ಪ ಹಾಗು ಸಹೋದರರಿಗೆ ಸೇರಿದ ೩೦*೫೦ ಅಡಿ ವಿಸ್ತೀರ್ಣದ ಎರಡು ಮನೆಗಳಿಗೆ ಬೀಗ ಜಡಿದು ಕುಟುಂಬದ ಸುಮಾರು ೧೫ ಮಂದಿ ಬೀದಿಯಲ್ಲಿ ಕಾಲ ಕಳೆಯುವಂತೆ ಮಾಡಿದ್ದು, ಶಾಲಾ ಕಟ್ಟಡ, ದೇವಸ್ಥಾನಗಳಲ್ಲಿ ಕುಟುಂಬಸ್ಥರು ಉಳಿದುಕೊಂಡು ಜೀವನ ಸಾಗಿಸಿರುವುದು ತಿಳಿದು ಬಂದಿದೆ. 
    ಫೈನಾನ್ಸ್ ಕಂಪನಿಯ ಈ ಕ್ರೂರ ವರ್ತನೆಯನ್ನು ಖಂಡಿಸಿ ರೈತ ಸಂಘದಿಂದ ಇದರ ವಿರುದ್ಧ ಹೋರಾಟ ಆರಂಭಿಸಿದ್ದು, ಮೊದಲ ಹಂತದಲ್ಲಿ ಕಳೆದ ೨ ದಿನಗಳ ಹಿಂದೆ ಫೈನಾನ್ಸ್‌ರವರು ಎರಡು ಮನೆಗಳಿಗೆ ಜಡಿದಿರುವ ಬೀಗ ತೆರವುಗೊಳಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.  


ಭದ್ರಾವತಿ ನಗರದ ಇಕ್ವಿಟಾಸ್ ಫೈನಾನ್ಸ್ ಕಛೇರಿಯಲ್ಲಿ ಪ್ರತಿಭಟನೆ ನಡೆಸಿದ ರೈತರು, ಫೈನಾನ್ಸ್ ವಿರುದ್ಧ ಘೋಷಣೆಗಳನ್ನು ಕೂಗುವ ಜೊತೆಗೆ ಎಚ್ಚರಿಕೆ ನೋಟಿಸ್ ಅಂಟಿಸಿದರು. 
    ಫೈನಾನ್ಸ್ ಕಛೇರಿಯಲ್ಲಿ ಪ್ರತಿಭಟನೆ : 
    ಮಂಗಳವಾರ ನಗರದ ಇಕ್ವಿಟಾಸ್ ಫೈನಾನ್ಸ್ ಕಛೇರಿಯಲ್ಲಿ ಪ್ರತಿಭಟನೆ ನಡೆಸಿದ ರೈತರು, ಫೈನಾನ್ಸ್ ವಿರುದ್ಧ ಘೋಷಣೆಗಳನ್ನು ಕೂಗುವ ಜೊತೆಗೆ ಸರ್ಕಾರ ಕಾಯ್ದೆ ಜಾರಿಗೆ ತಂದರೂ ಸಹ ಬಡ ರೈತರ ಮೇಲೆ ಕಿರುಕುಳ ಮುಂದುವರೆಯುತ್ತಿರುವುದು ಖಂಡನೀಯ. ತಕ್ಷಣ ಜಿಲ್ಲಾಧಿಕಾರಿಗಳು ಗಮನ ಹರಿಸುವ ಮೂಲಕ ಇಂತಹ ಫೈನಾನ್ಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೆ ` ಮೈಕ್ರೋ ಫೈನಾನ್ಸ್ ಕಂಪನಿಗಳೇ ಊರೊಳಗೆ ಕಾಲಿಟ್ಟರೆ ನಿಮಗೆ ಉಳಿಗಾಲವಿಲ್ಲ' ಎಂಬ ಘೋಷ ವಾಕ್ಯದೊಂದಿಗೆ ಎಚ್ಚರಿಕೆ ದಿನವಾಗಿ ಆಚರಿಸಿ ಕಛೇರಿಗೆ ನೋಟಿಸ್ ಅಂಟಿಸಲಾಯಿತು. 


ಭದ್ರಾವತಿ ನಗರದ ಇಕ್ವಿಟಾಸ್ ಫೈನಾನ್ಸ್ ಕಛೇರಿಯ ಕ್ರೂರ ವರ್ತನೆ ಖಂಡಿಸಿ ಮಂಗಳವಾರ ರೈತರು ಲೋಕಾಯುಕ್ತ ಜಿಲ್ಲಾ ನಿರೀಕ್ಷಕ ವೀರಬಸಪ್ಪ ಕುಶಾಲಪುರ ಅವರಿಗೆ ದೂರು ಸಲ್ಲಿಸಿದರು. 
      ಲೋಕಾಯುಕ್ತರಿಗೆ ದೂರು : 
    ಪ್ರತಿಭಟನೆಗೂ ಮೊದಲು ರೈತರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಜಿಲ್ಲಾ ನಿರೀಕ್ಷಕ ವೀರಬಸಪ್ಪ ಕುಶಾಲಪುರ ಅವರಿಗೆ ದೂರು ಸಲ್ಲಿಸಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದ್ದು, ಸರ್ಕಾರ ಕಾಯ್ದೆ ಜಾರಿಗೆ ತಂದರೂ ಸಹ ಕಿರುಕುಳ ನಿಲ್ಲುತ್ತಿಲ್ಲ. ಇಕ್ವಿಟಾಸ್ ಫೈನಾನ್ಸ್ ಕ್ರೂರ ವರ್ತನೆ ಕುರಿತು ಫೆ.೪ರಂದು ತಹಸೀಲ್ದಾರ್ ಗಮನಕ್ಕೆ ತರಲಾಗಿದೆ. ಆದರೆ ತಾಲೂಕು ಆಡಳಿತ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. 
    ಇದಕ್ಕೆ ಸ್ಪಂದಿಸಿದ ವೀರಬಸಪ್ಪ ಕುಶಾಲಪುರ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದರು. ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. 
    ರೈತ ಪ್ರಮುಖರಾದ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಹಿರಿಯಣ್ಣಯ್ಯ, ಮಂಜುನಾಥ್, ಡಿ.ವಿ ವೀರೇಶ್, ಚಂದ್ರಪ್ಪ, ರಂಗಪ್ಪ, ವೀರೇಶ ಸೇರಿದಂತೆ ಗ್ರಾಮದ ಮುಖಂಡರು, ರೈತರು ಉಪಸ್ಥಿತರಿದ್ದರು.