ರಾಜ್ಯಮಟ್ಟದ ತರಬೇತುದಾರ, ಸ್ವೀಪ್ ಜಿಲ್ಲಾ ಉಪ ನೋಡಲ್ ಅಧಿಕಾರಿ ನವೀದ್ ಅಹಮದ್ ಪರ್ವೇಜ್
ಭದ್ರಾವತಿಯಲ್ಲಿ ತಾಲೂಕು ಪಂಚಾಯತಿ, ನಗರಸಭೆ ಮತ್ತು ತಾಲೂಕು ಆಡಳಿತ ಹಾಗು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಬುಧವಾರ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಯುವ ಮತದಾರರಿಗೆ ಮತ್ತು ಸಾರ್ವಜನಿಕರಿಗೆ ಮತದಾನ ಜಾಗೃತಿ ಹಾಗು ಅರಿವು ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ, ಮೇ. ೩ : ಸಾರ್ವಜನಿಕರು ಸಿ ವಿಜಿಲ್ ಮೊಬೈಲ್ ಆಪ್ ಬಳಸುವ ಮೂಲಕ ಚುನಾವಣಾ ಭ್ರಷ್ಟಾಚಾರ ತಡೆಗೆ ಕೈಜೋಡಿಸಬೇಕು. ಅಲ್ಲದೆ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ರಾಜ್ಯಮಟ್ಟದ ತರಬೇತುದಾರ, ಸ್ವೀಪ್ ಜಿಲ್ಲಾ ಉಪ ನೋಡಲ್ ಅಧಿಕಾರಿ ನವೀದ್ ಅಹಮದ್ ಪರ್ವೇಜ್ ಹೇಳಿದರು.
ಅವರು ಬುಧವಾರ ತಾಲೂಕು ಪಂಚಾಯತಿ, ನಗರಸಭೆ ಮತ್ತು ತಾಲೂಕು ಆಡಳಿತ ಹಾಗು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಯುವ ಮತದಾರರಿಗೆ ಮತ್ತು ಸಾರ್ವಜನಿಕರಿಗೆ ಮತದಾನ ಜಾಗೃತಿ ಹಾಗು ಅರಿವು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ ನಗರಸಭೆ ವತಿಯಿಂದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಮತ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ವಿವಿಧ ನಮೂನೆಗಳ ಪರಿಚಯ ಸ್ಪರ್ಧೆ ಹಾಗೂ ಮೆಹಂದಿ ಸ್ಪರ್ಧೆ ಆಯೋಜಿಸಲಾಗಿತ್ತು.
ಮತದಾನದಲ್ಲಿ ತಾರತಮ್ಯವಿಲ್ಲ. ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗೌರವಿಸಬೇಕು. ತಮ್ಮ ಹಕ್ಕಿನಿಂದ ಯಾರೂ ಸಹ ವಂಚಿತರಾಗಬಾರದು. ನಿರ್ಭೀತಿಯಿಂದ ಮತದಾನದ ಹಕ್ಕು ಚಲಾಯಿಸಬೇಕು. ಅದರಲ್ಲೂ ವಿಶೇಷವಾಗಿ ಮತದಾನದಲ್ಲಿ ೧೮ ವರ್ಷ ಮೇಲ್ಪಟ್ಟ ಅರ್ಹ ಯುವ ಸಮುದಾಯ ಹೆಚ್ಚಿನ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕು. ಯುವ ಮತದಾರರು ನೋಂದಣಿಯಾಗಲು ಪ್ರಸ್ತುತ ವರ್ಷದಲ್ಲಿ ೪ ಬಾರಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಏಪ್ರಿಲ್ ೧೧ರ ವರೆಗೆ ಪರಿಷ್ಕರಣೆ ಆಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ವಿಎಚ್ಎ ಮೊಬೈಲ್ ಆಪ್ ಬಳಸಬಹುದಾಗಿದೆ. ಈ ಬಾರಿ ಚುನಾವಣೆಯಲ್ಲಿ ಆಯೋಗವು ವಿಶೇಷಚೇತನ ಮತ್ತು ೮೦ ವರ್ಷ ಮೇಲ್ಪಟ್ಟ ಅರ್ಹ ಮತದಾರರಿಗೆ ಪೋಸ್ಟಲ್ ಬ್ಯಾಲೆಟ್ ೧೨ಡಿ ಮೂಲಕ ಮತ ಚಲಾಯಿಸಲು ಅವಕಾಶ ಈಗಲೇ ಪ್ರಾರಂಭವಾಗಿದೆ. ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾವುದೇ ಅಭ್ಯರ್ಥಿ ಇಷ್ಟವಿಲ್ಲ ಎಂದರೆ ನೋಟ ಚಲಾಯಿಸಬಹುದಾಗಿದೆ ಎಂದರು.
ಚುನಾವಣಾ ಪ್ರಚಾರ ಸಮಯದಲ್ಲಿ ಯಾವುದೇ ಅಭ್ಯರ್ಥಿ ಮತದಾರರಿಗೆ ಆಸೆ, ಅಮಿಷಗಳನ್ನು ಒಡ್ಡಿದಲ್ಲಿ ತಕ್ಷಣವೇ ತಮ್ಮಲ್ಲಿರುವ ಮೊಬೈಲ್ ಮುಖೇನ ಚಿತ್ರೀಕರಿಸಿದ ವಿಡಿಯೋ, ಫೋಟೋ ಸಿ ವಿಜಿಲ್ ಮೊಬೈಲ್ ಆಪ್ ಬಳಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದಲ್ಲಿ ಆಯೋಗ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತದೆ ಹಾಗೂ ದೂರುದಾರರ ಹೆಸರನ್ನು ಗೌಪ್ಯವಾಗಿರಿಸಲಿದೆ. ಸಾರ್ವಜನಿಕರು ಕೆವೈಸಿ ಮೊಬೈಲ್ ಅಪ್ ಮೂಲಕ ಚುನಾವಣಾ ಅಭ್ಯರ್ಥಿಗಳ ಎಲ್ಲ ಮಾಹಿತಿ ಪಡೆಯಬಹುದಾಗಿದೆ ಎಂದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತರು ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಪ್ರಾಂಶುಪಾಲ ಕಾಳಿದಾಸ, ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳು, ಬಿಎಲ್ಓ ಗಳು ಪಾಲ್ಗೊಂಡಿದ್ದರು.
ಮಾನವ ಸರಪಳಿ ನಿರ್ಮಿಸಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಂಸ್ಥೆಯ ಆವರಣದಿಂದ ಜಾಥಾ ಮೂಲಕ ಕಡ್ಡಾಯ ಮತದಾನ ಜಾಗೃತಿ ಕಾರ್ಯಕ್ಕೆ 'ಮೈ ಭಾರತ್ ಹೂ" ಮತದಾನ ಜಾಗೃತಿ ಗೀತೆಯೊಂದಿಗೆ ಚಾಲನೆ ನೀಡಲಾಯಿತು. ಆನ್ಲೈನ್ ಮೂಲಕ ಹೊಸ ಮತದಾರರ ನೋಂದಣಿ ಮತ್ತು ತಿದ್ದುಪಡಿ ಮಾಡುವ ವಿಧಾನ ಕುರಿತು ಮಾಹಿತಿ ನೀಡಲಾಯಿತು. ನಗರಸಭೆ ವತಿಯಿಂದ ಮತ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ವಿವಿಧ ನಮೂನೆಗಳ ಪರಿಚಯ ಸ್ಪರ್ಧೆ ಹಾಗೂ ಮೆಹಂದಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಭದ್ರಾವತಿ ನಗರಸಭೆ ವತಿಯಿಂದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಮತ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ವಿವಿಧ ನಮೂನೆಗಳ ಪರಿಚಯ ಸ್ಪರ್ಧೆ ಹಾಗೂ ಮೆಹಂದಿ ಸ್ಪರ್ಧೆ ಆಯೋಜಿಸಲಾಗಿತ್ತು.