Monday, May 12, 2025

ಯುದ್ಧಕ್ಕೆ ತೆರಳುತ್ತಾರೆಂದು ಮಾಜಿ ಸೈನಿಕರಿಗೆ ಹಣ ನೀಡಲು ಮುಂದಾದ ವ್ಯಕ್ತಿ

ದೇಶ, ಸೈನಿಕರ ಮೇಲಿನ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಮಾಜಿ ಸೈನಿಕ ಫ್ರಾನ್ಸಿಸ್ 

 ವಿಶ್ವನಾಥ್ 
    ಭದ್ರಾವತಿ : ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನಲೆಯಲ್ಲಿ ಅನಿವಾರ್ಯ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಯುದ್ಧಕ್ಕೆ ಆಹ್ವಾನಿಸಬಹುದು ಎಂಬ ಉದ್ದೇಶದೊಂದಿಗೆ ಅವರಿಗೆ ನೆರವಾಗಲು ಮಾಜಿ ಸೈನಿಕರೊಬ್ಬರಿಗೆ ವ್ಯಕ್ತಿಯೋರ್ವ ಸ್ವಯಂ ಪ್ರೇರಣೆಯಿಂದ ತನ್ನ ಬಳಿ ಜೇಬಿನಲ್ಲಿದ್ದ ಹಣ ನೀಡಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ. 
    ತಾಲೂಕಿನ ಮಾವಿನಕೆರೆ ಗ್ರಾಮದ ನಿವಾಸಿ ಎಲೆಕ್ಟ್ರಿಕಲ್ ಮತ್ತು ಫ್ಲಂಬರ್ ಕೆಲಸ ಮಾಡುವ ವಿಶ್ವನಾಥ್ ಎಂಬುವರು ಮಾಜಿ ಸೈನಿಕ, ಪ್ರಸ್ತುತ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫ್ರಾನ್ಸಿಸ್ ಅವರಿಗೆ ಯುದ್ಧಕ್ಕೆ ಆಹ್ವಾನಿಸಿರಬಹುದು ಅವರಿಗೆ ಯುದ್ಧದ ಸಂದರ್ಭದಲ್ಲಿ ನೆರವಾಗಲಿ ಎಂಬ ದೇಶಾಭಿಮಾನದೊಂದಿಗೆ ತಮ್ಮ ಜೇಬಿನಲ್ಲಿದ್ದ ಸುಮಾರು ೫ ಸಾವಿರ ರು. ನಗದು ಹಣ ನೀಡಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಫ್ರಾನ್ಸಿಸ್ ಅವರು ನಮಗೆ ಇನ್ನೂ ಯಾವುದೇ ಆಹ್ವಾನ ಬಂದಿಲ್ಲ. ಹಣ ನಿಮ್ಮ ಬಳಿಯೇ ಇರಲಿ ಎಂದು ಹೇಳಿ ಮರಳಿಸಿದ್ದಾರೆ. 
    ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್ ಅವರು ನಮ್ಮ ದೇಶದ ಸೈನಿಕರು ಪಿಓಕೆ ವಶಪಡಿಸಿಕೊಳ್ಳಬೇಕೆಂಬುದು ನನ್ನ ಆಸೆಯಾಗಿದೆ. ಸೈನಿಕರಿಗೆ ದೇಶದ ಪ್ರತಿಯೊಬ್ಬರು ಎಲ್ಲಾ ರೀತಿಯಿಂದಲೂ ನೆರವಾಗಬೇಕೆಂದರು. 
ಫ್ರಾನ್ಸಿಸ್ ಅವರು ಈ ಸಂಬಂಧ ಪ್ರತಿಕ್ರಿಯಿಸಿ ದೇಶ ಮತ್ತು ಸೈನಿಕರ ಮೇಲೆ ಇಟ್ಟಿರುವ ಅಭಿಮಾನಕ್ಕೆ ಚಿರಋಣಿಯಾಗಿದ್ದು, ವಿಶ್ವನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಒಂದು ವೇಳೆ ನಮ್ಮನ್ನು ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ಸ್ವಯಂ ಪ್ರೇರಣೆಯಿಂದ ತೆರಳುತ್ತೇನೆ ಎಂದರು. 

ಭಾರತಕ್ಕೆ ಪಿಓಕೆ ಸೇರಲಿ, ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ತೆರಳಲು ಸಿದ್ದ : ಮಾಜಿ ಸೈನಿಕ ವೆಂಕಟಗಿರಿ

ಮಾಜಿ ಸೈನಿಕ ವೆಂಕಟಗಿರಿ
    ಭದ್ರಾವತಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಯುದ್ಧ ಕೊನೆಯಾಗಬೇಕು. ನಮ್ಮ ದೇಶಕ್ಕೆ ಪಿಓಕೆ ಸೇರಬೇಕು. ಆಗ ಮಾತ್ರ ದೇಶದ ಗಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಮಾಜಿ ಸೈನಿಕ ವೆಂಕಟಗಿರಿ ತಿಳಿಸಿದ್ದಾರೆ. 
    ಸುಮಾರು ೧೭ ವರ್ಷ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ವೆಂಕಟಗಿರಿಯವರು ದೇಶದ ಗಡಿ ಭಾಗದಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ನಡೆಯುತ್ತಿವೆ. ದೇಶದ ಸಂಸತ್ ಮೇಲಿನ ದಾಳಿ, ಕಾರ್ಗಿಲ್ ಯುದ್ದ, ಪುಲ್ವಾಮ ದಾಳಿ ಮತ್ತು ಅಮಾಯಕ ಪ್ರವಾಸಿಗರ ಮೇಲಿನ ದಾಳಿ ಎಲ್ಲದಕ್ಕೂ ಮುಖ್ಯ ಕಾರಣ ಪಿಓಕೆಯಾಗಿದೆ. ನಮ್ಮ ಭಾರತೀಯ ಸೈನ್ಯ ಪಿಓಕೆ ವಶಪಡಿಸಿಕೊಂಡು ದೇಶದ ಗಡಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಲ್ಲಿ ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳುಹಿಸುವುದಿಲ್ಲ ಎಂದರು. 
    ಸೈನಿಕರಲ್ಲಿ ಯಾವುದೇ ಜಾತಿ, ಧರ್ಮ, ಪಕ್ಷ ಭೇದಭಾವವಿಲ್ಲ. ಸೈನಿಕರ ಗುರಿ ಒಂದೇ ಆಗಿದ್ದು, ಸಂಕಷ್ಟದ ಸಮಯದಲ್ಲಿ ದೇಶವನ್ನು ರಕ್ಷಿಸುವುದಾಗಿದೆ. ನಮ್ಮನ್ನು ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ಸ್ವಯಂ ಪ್ರೇರಣೆಯಿಂದ ತೆರಳುವುದಾಗಿ ತಿಳಿಸಿದ್ದಾರೆ. 
    ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿಯಾಗಿರುವ ವೆಂಕಟಗಿರಿಯವರು ಈಗಾಗಲೇ ಸಂಘದ ವತಿಯಿಂದ ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ತಾಲೂಕಿನ ಎಲ್ಲಾ ಮಾಜಿ ಸೈನಿಕರು ಸ್ವಯಂ ಪ್ರೇರಣೆಯಿಂದ ಬರುವುದಾಗಿ ರಕ್ಷಣಾ ಇಲಾಖೆಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. 

ವಿಜೃಂಭಣೆಯಿಂದ ಜರುಗಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಭದ್ರಾವತಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ  ಸೋಮವಾರ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 
    ಭದ್ರಾವತಿ : ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ  ಸೋಮವಾರ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 
    ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ಸುಮಾರು ೧ ಗಂಟೆಗೆ ಸ್ವಾಮಿಯ ರಥೋತ್ಸವ ಆರಂಭಗೊಂಡಿತು. ಭಕ್ತರು ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಸ್ವಾಮಿಗೆ ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು. 
ಭಕ್ತರು ಉತ್ತುತ್ತೆ, ಬಾಳೆಹಣ್ಣು ಅಲಂಕೃತಗೊಂಡ ರಥದ ಕಳಸಕ್ಕೆ ಎಸೆದು ರಥ ಎಳೆಯುವ ಮೂಲಕ ಭಕ್ತಿ ಮೆರೆದರು. ವಿವಿಧ ಮಹಿಳಾ ಭಜನಾ ತಂಡಗಳಿಂದ ಭಜನೆ, ಮಂಗಳ ವಾದ್ಯ, ವಿಶೇಷವಾಗಿ ಮಹಿಳೆಯರಿಂದ ಚಂಡೇವಾದ್ಯ ನಡೆಯಿತು. ಈ ನಡುವೆ ಪವಾಡ ಎಂಬಂತೆ ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಗರುಡ ಪಕ್ಷಿ ಆಕಾಶದಲ್ಲಿ ಕಾಣಿಸಿಕೊಂಡು ಶುಭ ಘಳಿಗೆಗೆ ಮುನ್ನುಡಿ ಬರೆದಂತೆ ಕಂಡು ಬಂದಿತು. 
    ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥಶರ್ಮ, ಸಹಾಯಕ ಅರ್ಚಕ ಶ್ರೀನಿವಾಸ್,  ಶಾಸಕ ಬಿ.ಕೆ ಸಂಗಮೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಜಿ. ರಾಮಕಾಂತ್ ಹಾಗೂ ಎಸ್ ನರಸಿಂಹಾಚಾರ್, ರವಿ ಮಾಸ್ಟರ್, ಸುದರ್ಶನ್, ಸುಧೀಂದ್ರ,  ಶ್ರೀಧರ್, ಅಡುಗೆ ರಂಗಣ್ಣ, ಮಾರುತಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.