Thursday, June 3, 2021

೧೦ ಸಾವಿರ ಬಡವರಿಗೆ ದಿನಸಿ ಸಾಮಗ್ರಿ ವಿತರಿಸುವ ಬೃಹತ್ ಸೇವಾ ಕಾರ್ಯ

ಕೊರೋನಾ ಸಂಕಷ್ಟದಲ್ಲಿ ನೆರವಿಗೆ ಧಾವಿಸಿದ ಮಾರುತಿ ಮೆಡಿಕಲ್ ಆನಂದ್


ಭದ್ರಾವತಿ ರಂಗಪ್ಪ ವೃತ್ತದಲ್ಲಿರುವ ಮಾರುತಿ ಮೆಡಿಕಲ್ ಆನಂದ್‌ರವರು ಬೃಹತ್ ಸೇವಾ ಕಾರ್ಯಕ್ಕೆ ಮುಂದಾಗಿದ್ದು, ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ತೀರ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಸುಮಾರು ೧೦ ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಿದ್ದಾರೆ. ಈ ಸೇವಾ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಜೂ. ೩: ನಗರದ ರಂಗಪ್ಪ ವೃತ್ತದಲ್ಲಿರುವ ಮಾರುತಿ ಮೆಡಿಕಲ್ ಆನಂದ್‌ರವರು ಬೃಹತ್ ಸೇವಾ ಕಾರ್ಯಕ್ಕೆ ಮುಂದಾಗಿದ್ದು, ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ತೀರ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಸುಮಾರು ೧೦ ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಿದ್ದಾರೆ.
ಈ ಸೇವಾ ಕಾರ್ಯಕ್ಕೆ ಸಿದ್ದರೂಢ ನಗರದ ೧ನೇ ತಿರುವಿನಲ್ಲಿರುವ ಅವರ ನಿವಾಸದ ಬಳಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.
    ಈ ಕುರಿತು ಮಾತನಾಡಿದ ಆನಂದ್, ತೀರ ಸಂಕಷ್ಟದಲ್ಲಿರುವವರ ನೆರವಿಗೆ ಮುಂದಾಗಬೇಕೆಂಬ ಮನೋಭಾವನೆಯೊಂದಿಗೆ ಈ ಕಾರ್ಯ ಕೈಗೊಳ್ಳುತ್ತಿದ್ದೇನೆ. ನಗರಸಭೆ ೩೫ ವಾರ್ಡ್‌ಗಳಲ್ಲಿ ತಲಾ ಒಂದೊಂದು ವಾರ್ಡ್‌ನಲ್ಲಿ ೨೦೦ ಜನರನ್ನು ಹಾಗು ೩ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪಂಚಾಯಿತಿಯಲ್ಲೂ ೧೦೦೦ ಜನರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.
   ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕು ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಎನ್. ಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಪತ್ರಿಕಾ ವಿತರಿಕರಿಗೆ ಸಾಂಕೇತಿಕವಾಗಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಶವಗಳ ನಡುವೆ ಅರ್ಧ ಶತಕ ಪೂರೈಸಿದ ಸಾರ್ಥಕ ಸೇವೆ

ಭದ್ರಾವತಿಯಲ್ಲಿ ಕೊರೋನಾ ಸೋಂಕಿತ ಮೃತದೇಹಗಳ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಗುರುವಾರ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಆರ್ಥಿಕ ನೆರವಿನ ಜೊತೆಗೆ ಸನ್ಮಾನಿಸಿ ಅಭಿನಂದಿಸಲಾಯಿತು.
                                              
* ಅನಂತಕುಮಾರ್
     ಭದ್ರಾವತಿ, ಜೂ. ೩: ಪ್ರಸ್ತುತ ಸಮಾಜದಲ್ಲಿ ಕೊರೋನಾ ಎಂಬ ಭಯದ ವಾತಾವರಣದಲ್ಲಿ ಹೆತ್ತವರ ಮೃತ ದೇಹಗಳನ್ನು ನೋಡಲು ಸ್ವಂತ ಮಕ್ಕಳೇ ಬಾರದಿರುವ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕುಟುಂಬಗಳಿಂದ ಅಂತರ ಕಾಯ್ದುಕೊಂಡು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ  ನೆರವೇರಿಸುತ್ತಿರುವ ನಗರದ ಬಜರಂಗದಳ ಕಾರ್ಯಕರ್ತರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ.
   ಕೊರೋನಾ ಸೋಂಕು ೨ನೇ ಅಲೆ ಕಾಣಿಸಿಕೊಂಡು ದಿನ ದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಒಂದೆಡೆ ಭಯದ ವಾತಾವರಣ, ಮತ್ತೊಂದೆಡೆ ಮೃತ ದೇಹಗಳ ಅಂತ್ಯ ಸಂಸ್ಕಾರ ನೆರವೇರಿಸುವ ಸವಾಲು. ಇಂತಹ ಸಂದರ್ಭದಲ್ಲಿ ನಗರದ ನಿವಾಸಿಗಳಾದ ಬಜರಂಗದಳದ ಜಿಲ್ಲಾ ಸಂಚಾಲಕ ಸುನಿಲ್, ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು, ಕೃಷ್ಣ, ರಮೇಶ್, ಶಿವಶಂಕರ್, ದೇವರಾಜ, ಭರತ್ ಸೇರಿದಂತೆ ಇನ್ನಿತರರು ಕುಟುಂಬಗಳಿಂದ ಅಂತರ ಕಾಯ್ದುಕೊಂಡು ಉಚಿತವಾಗಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ಥಕ ಸೇವೆಯ ೫೧ನೇ ಕಾರ್ಯವನ್ನು ಗುರುವಾರ ಯಶಸ್ವಿಯಾಗಿ ನೆರವೇರಿಸಿದ್ದಾರೆ.



ಮಾನವ ಜನ್ಮ ಅತಿ ಅಮೂಲ್ಯವಾದ ಜನ್ಮವಾಗಿದೆ. ಇದರಲ್ಲಿ ಜನ್ಮ ತಾಳಬೇಕಾದರೆ ಕೋಟಿ ಪುಣ್ಯ ಮಾಡಿರಬೇಕು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇಂತಹ ಮಾನವ ಜನ್ಮ ಸಾರ್ಥಕವಾಗುವುದು ಈ ರೀತಿಯ ಕಾರ್ಯಗಳಿಂದ ಮಾತ್ರ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ.
                                                           -ಸಂಪತ್‌ರಾಜ್ ಬಾಂಟಿಯಾ, ಜೈನ್ ಸಮಾಜ, ಭದ್ರಾವತಿ.



    ಈ ಯುವಕರು ತಮ್ಮ ಸೇವಾ ಕಾರ್ಯಕ್ಕೆ  ಬಾಡಿಗೆ ವಾಹನ ಪಡೆದು ಶವಗಾರಗಳಿಂದ ಸ್ಮಶಾನದವರೆಗೂ ಸೋಂಕಿತ ಮೃತದೇಹಗಳನ್ನು ಸಾಗಿಸುವ ಕಾರ್ಯದ ಜೊತೆಗೆ ಜಾತಿ ಭೇದಭಾವವಿಲ್ಲದೆ ಎಲ್ಲಾ ಮೃತದೇಹಗಳನ್ನು ಸಂಸ್ಥಾರ ಬದ್ಧವಾಗಿ ಅಂತ್ಯಕ್ರಿಯೆ ನೆರವೇರಿಸುವ ಕಾರ್ಯವನ್ನು ಬಹಳ ಅಚ್ಚಕಟ್ಟಾಗಿ ಮಾಡುತ್ತಿದ್ದಾರೆ. ಜೊತೆಗೆ ಕಡು ಬಡಕುಟುಂಬಗಳ ಮೃತ ದೇಹಗಳ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಸೌದೆ ಸಹ ದಾನಿಗಳಿಂದ ಸಂಗ್ರಹಿಸಿ ಉಚಿತವಾಗಿ ನೀಡುತ್ತಿದ್ದಾರೆ.
         ಕುಟುಂಬಗಳಿಂದ ಅಂತರ :
     ಈ ಯುವಕರು ಒಂದು ತಿಂಗಳಿಗೂ ಅಧಿಕ ದಿನಗಳಿಂದ ತಮ್ಮ ಮನೆಗಳಿಂದ ದೂರ ಉಳಿದು ಅಂತರ ಕಾಯ್ದುಕೊಂಡಿದ್ದಾರೆ. ದಾನಿಯೊಬ್ಬರು ಇವರಿಗೆ ಖಾಸಗಿ ಹೋಟೆಲ್‌ವೊಂದರಲ್ಲಿ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಭಾವಸಾರ ಕ್ಷತ್ರಿಯ ಸಮಾಜ ದಿನದ ಊಟದ ವ್ಯವಸ್ಥೆ ಕಲ್ಪಿಸಿದೆ. ಇದರ ಜೊತೆಗೆ ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್ ಮುನ್ನಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಕೊರೋನಾ ಲಸಿಕೆಯನ್ನು ಕೊಡಿಸಿದ್ದಾರೆ.




ಭದ್ರಾವತಿಯಲ್ಲಿ ಕೊರೋನಾ ಸೋಂಕಿತ ಮೃತದೇಹಗಳ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಬಾರಂದೂರು ವಂದೇ ಮಾತರಂ ಟ್ರಸ್ಟ್  ವತಿಯಿಂದ ಆರ್ಥಿಕ ನೆರವಿನ ಜೊತೆಗೆ ಸನ್ಮಾನಿಸಿ ಅಭಿನಂದಿಸಲಾಯಿತು.
         
      ವಿವಿಧ ಸಂಘ-ಸಂಸ್ಥೆಗಳಿಂದ ಪ್ರಶಂಸೆ :
     ಬೆಲೆ ಕಟ್ಟಲು ಸಾಧ್ಯವಾಗದ ಯುವಕರ ಸೇವಾ ಕಾರ್ಯಕ್ಕೆ ನಗರದ ಭಾವಸಾರ ಕ್ಷತ್ರಿಯ ಸಮಾಜ, ಜೈನ್ ಸಮಾಜ, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ, ಬಾರಂದೂರು ವಂದೇ ಮಾತರಂ ಟ್ರಸ್ಟ್ ಹಾಗು ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿ ಯುವಕರಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳ ಜೊತೆಗೆ ಕೈಲಾದಷ್ಟು ಆರ್ಥಿಕ ನೆರವು ನೀಡುವ ಮೂಲಕ ಸನ್ಮಾನಿಸಿವೆ.
          ಯುವಕರ ಕಾರ್ಯ ಇತರರಿಗೆ ಸ್ಪೂರ್ತಿ:
  ಯುವಕರು ಕೈಗೊಳ್ಳುತ್ತಿರುವ ಈ ಕಾರ್ಯ ಇತರರಿಗೆ ಸ್ಪೂರ್ತಿದಾಯಕವಾಗಬೇಕು.  ಸಂಕಷ್ಟದಲ್ಲಿರುವವರಿಗೆ ಮಾನವೀಯತೆ ನೆಲೆಗಟ್ಟಿನಲ್ಲಿ ನೆರವಿಗೆ ಮುಂದಾಗುವಂತಹ ವಾತಾವರಣ ಸಮಾಜದಲ್ಲಿ ರೂಪುಗೊಳ್ಳಬೇಕು. ಈ ಯುವಕರ ಕಾರ್ಯಕ್ಕೆ ಮತ್ತಷ್ಟು ಜನ ಕೈಜೋಡಿಸುವಂತಾಗಬೇಕು. ಕೊರೋನಾ ಎಂಬ ಭಯ ದೂರವಾಗಿ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು. ನಿಜಕ್ಕೂ ಈ ಯುವಕರ ಕಾರ್ಯ ಶ್ಲಾಘನೀಯ ಎಂದರೆ ತಪ್ಪಾಗಲಾರದು.


ಕೊರೋನಾ ಪರಿಣಾಮ ಸಂಬಂಧಗಳೇ ಮುರಿದುಹೋಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಣೆಯಿಂದ ಯುವಕರು ಈ ಕಾರ್ಯದಲ್ಲಿ ಪಾಲ್ಗೊಂಡಿರುವುದು ವಿಶ್ವವೇ ಮೆಚ್ಚುವಂತಹ ಕೆಲಸವಾಗಿದೆ. ಈ ಯುವಕರ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
                    - ಸುಂದರ್ ಬಾಬು, ಜಿಲ್ಲಾ ಕಾರ್ಯಾಧ್ಯಕ್ಷರು, 
ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್


ಕೊರೋನಾ ಎಂಬ ಹೆಸರಿನಿಂದ ಉಂಟಾಗಿರುವ ಭಯ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತಿದೆ : ಗುರುರಾಜ್


ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ತಾಲೂಕು ಕುಂಚ ಕಲಾವಿದರ ಸಂಘದ ಕಛೇರಿಯಲ್ಲಿ ದಿನಸಿ ಸಾಮ್ರಗಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಜೂ. ೩: ಕೊರೋನಾ ಸೋಂಕು ಎದುರಿಸುವ ಶಕ್ತಿ ಪ್ರತಿಯೊಬ್ಬರಿಗೂ ಇದೆ. ಆದರೆ ಕೊರೋನಾ ಎಂಬ ಹೆಸರಿನಿಂದ ಉಂಟಾಗಿರುವ ಭಯ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತಿದೆ ಎಂದು ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ಅಧ್ಯಕ್ಷ ಗುರುರಾಜ್ ಹೇಳಿದರು.
     ಅವರು ಗುರುವಾರ ನಗರದ ತರೀಕೆರೆ ರಸ್ತೆಯಲ್ಲಿರುವ ತಾಲೂಕು ಕುಂಚ ಕಲಾವಿದರ ಸಂಘದ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಿನಸಿ ಸಾಮ್ರಗಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮನುಷ್ಯರಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿದೆ. ಆದರೂ ಸಹ ಸೋಂಕು ಕುರಿತು ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಕಲಾವಿದರು ಸೋಂಕಿನ ಕುರಿತು ಎಚ್ಚರ ವಹಿಸಬೇಕು. ವಿನಾಕಾರಣ ಯಾರು ಸಹ ಭಯಪಡುವ ಅಗತ್ಯವಿಲ್ಲ. ಪ್ರಸ್ತುತ ಎದುರಾಗಿರುವ ಸಂಕಷ್ಟದ ಸಮಯದಲ್ಲಿ  ಸಾಧ್ಯವಾದಷ್ಟು ಮಟ್ಟಿಗೆ ಕಲಾವಿದರ ನೆರವಿಗೆ ಮುಂದಾಗುವುದಾಗಿ ಭರವಸೆ ನೀಡಿದರು.
   ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಪದಾಧಿಕಾರಿ ಸುಬ್ರಮಣಿ, ಕುಂಚ ಕಾವಿದರ ಸಂಘದ ಅಧ್ಯಕ್ಷ ಮಹಮದ್ ಸಮೀವುಲ್ಲಾ, ಖಾಜಾಂಚಿ ಹಫೀಜ್ ಉರ್ ರಹಮಾನ್, ಸಹಕಾರ್ಯದರ್ಶಿ ಬಿ. ಗುರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಜ್ಯ ಸಂಘದ ವತಿಯಿಂದ ಸಂಕಷ್ಟದಲ್ಲಿರುವ ಕಲಾವಿದರಿಗೆ ದಿನಸಿ ಸಾಮಗ್ರಿ ವಿತರಿಸಲಾಯಿತು.

ಜೂ.೭ರ ವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿ


ಭದ್ರಾವತಿ, ಜೂ. ೩: ತಾಲೂಕಿನಲ್ಲಿ ಕೊರೋನಾ ಸೋಂಕು ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ನಡುವೆ ಜೂ.೭ರ ವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
     ರಾಜ್ಯ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿದಾಗಿನಿಂದಲೂ ಸೋಂಕಿನ ಪ್ರಮಾಣ ೧೦೦ ರಿಂದ ೨೫೦ ಗಡಿಯಾಚೆಯಲ್ಲಿದ್ದು, ಇದುವರೆಗೂ ತಾಲೂಕಿನಲ್ಲಿ ಸೋಂಕಿಗೆ ೧೩೪ ಮಂದಿ ಬಲಿಯಾಗಿದ್ದಾರೆ. ವಾರದಲ್ಲಿ ೨ ದಿನ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜೂ.೭ರ ವರೆಗೂ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
   ಹಾಲು ಹಾಗು ಔಷಧಿ ಅಂಗಡಿಗಳು ಹೊರತುಪಡಿಸಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯುವಂತಿಲ್ಲ. ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಬರದೆ ಸಂಪೂರ್ಣ ಲಾಕ್‌ಡೌನ್ ಯಶಸ್ವಿಗೊಳಿಸುವ ಜೊತೆಗೆ ಕೊರೋನಾ ನಿರ್ಮೂಲನೆಗೆ ಸಹಕರಿಸುವಂತೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಕೋರಿದ್ದಾರೆ.