Tuesday, May 4, 2021

ಗಾಳಿ ಮಳೆಗೆ ನೆಲಕ್ಕುರುಳಿದ ನೂರಾರು ಅಡಕೆ ಮರಗಳು : ಪರಿಹಾರಕ್ಕೆ ಆಗ್ರಹ

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಅರಬಿಳಚಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಪ್ರಮಾಣದ ಗಾಳಿ ಮಳೆಗೆ ನೂರಾರು ಅಡಕೆ ಮರಗಳು ನೆಲಕ್ಕುರುಳಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ ಕಿರಣ್ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿರುವುದು.
    ಭದ್ರಾವತಿ, ಮೇ. ೪: ತಾಲೂಕಿನ ಹೊಳೆಹೊನ್ನೂರು ಹೋಬಳಿ ಅರಬಿಳಚಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಪ್ರಮಾಣದ ಗಾಳಿ ಮಳೆಗೆ ನೂರಾರು ಅಡಕೆ ಮರಗಳು ನೆಲಕ್ಕುರುಳಿವೆ.
     ಫಸಲು ಕೊಡುವ ಅಡಕೆ ಮರಗಳು ನೆಲಕ್ಕುರುಳಿರುವ ಕಾರಣ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ. ಗ್ರಾಮಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ ಕಿರಣ್, ಸದಸ್ಯರಾದ ಎಚ್.ಎಂ ಸದಾಶಿವಪ್ಪ, ಎಚ್.ಎಸ್ ಮಂಜುನಾಥ್, ಶಬರೀಶ್, ಗುಣಶೇಖರ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ನಡುವೆ ಗ್ರಾಮದ ಯುವ ರೈತ ಮುಖಂಡ ಎಚ್.ಎಸ್ ಮಂಜುನಾಥೇಶ್ವರ ನಷ್ಟಕ್ಕೊಳಗಾಗಿರುವ ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂಗೆ ಮಾತೃ ವಿಯೋಗ

   ಭದ್ರಾವತಿ, ಮೇ. ೪: ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಮಾತೃಶ್ರೀ ಸಾರಾ ಬೀಬೀ ಮಂಗಳವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನ ಹೊಂದಿದರು.
    ಸಿ.ಎಂ ಇಬ್ರಾಹಿಂ, ಸಿ.ಎಂ ಖಾದರ್, ಸಿ.ಎಂ ಸಾಧಿಕ್ ಸೇರಿದಂತೆ ೩ ಗಂಡು, ೩ ಹೆಣ್ಣು ಒಟ್ಟು ೬ ಮಕ್ಕಳನ್ನು ಹೊಂದಿದ್ದರು. ಸಾರಾ ಬೀಬೀ ರವರು ಸಿ.ಎಂ ಇಬ್ರಾಹಿಂ ಅವರ ಬೆಂಗಳೂರಿನ ನಿವಾಸದಲ್ಲಿ ವಾಸವಿದ್ದರು. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

ಮಾರ್ಗಸೂಚಿ ಉಲ್ಲಂಘಿಸಿ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ : ರು. ೫ ಸಾವಿರ ದಂಡ,

ನಗರಸಭೆ ಕಛೇರಿಯಲ್ಲಿ ಕುಂದು ಕೊರತೆಗಳ ನಿವಾರಣ ಘಟಕ

ಭದ್ರಾವತಿ, ಮೇ. ೪: ಒಂದೆಡೆ ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ಅಲ್ಲಲ್ಲಿ ವ್ಯಾಪಾರಸ್ಥರು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಸೋಮವಾರ ನಗರದ ಜಿ.ಕೆ ಸಿಲ್ಕ್ಸ್-ಟೆಕ್ಸ್‌ಟೈಲ್ಸ್ ಎಂಬ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಗಾಗಿ ಸುಮಾರು ೫೦ಕ್ಕೂ ಹೆಚ್ಚು ಮಂದಿಗೆ ಅವಕಾಶ ಮಾಡಿಕೊಟ್ಟಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಖರೀದಿಯಲ್ಲಿ ತೊಡಗಿರುವವರು ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿದೆ.
ಪೌರಾಯುಕ್ತರು ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಒಟ್ಟಿಗೆ ೫೦ಕ್ಕೂ ಹೆಚ್ಚು ಮಂದಿಗೆ ಖರೀದಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸರಿಯಲ್ಲ. ಇದರಿಂದ ಸೋಂಕು ಮತ್ತಷ್ಟು ಹೆಚ್ಚುವ ಆತಂಕ ವ್ಯಕ್ತಪಡಿಸುವ ಜೊತೆಗೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿರುವ  ಹಿನ್ನಲೆಯಲ್ಲಿ ರು. ೫ ದಂಡ ವಿಧಿಸಿದರು.
         ಕುಂದು ಕೊರತೆಗಳ ನಿವಾರಣ ಘಟಕ :
     ಕೊರೋನಾ ಸೋಂಕು ೨ನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಸೋಂಕಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳು ಹಾಗು ಸಲಹೆ, ಸೂಚನೆಗಳನ್ನು ನೀಡಲು ಕುಂದು ಕೊರತೆಗಳ ನಿವಾರಣ ಘಟಕ ಸ್ಥಾಪಿಸಲಾಗಿದೆ.
    ಘಟಕ ನಗರಸಭೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ನೇರವಾಗಿ ಸಂಪರ್ಕಿಸಬಹುದಾಗಿದೆ. ಅಥವಾ ದೂರವಾಣಿ ಸಂಖ್ಯೆ ೦೮೨೮೨-೨೬೬೩೫೬, ಎಸ್‌ಎಂಎಸ್/ವಾಟ್ಸಪ್: ೯೪೪೮೮೦೭೬೦೯ ಕರೆ ಮಾಡಬಹುದಾಗಿದೆ ಅಥವಾ ಈ-ಮೇಲ್: pgt.cmcbdvt@gmail.com  ಸಂಪರ್ಕಿಸುವಂತೆ ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.

ನಗರಸಭೆ ಚುನಾವಣೆಯಲ್ಲಿ ಕಳಪೆ ಸಾಧನೆ : ಮಹಿಳಾ ಮೋರ್ಚಾ ಅಧ್ಯಕ್ಷೆ ಬದಲು

ನೂತನ ಅಧ್ಯಕ್ಷೆಯಾಗಿ ಶೋಭಾ ಪಾಟೀಲ್ ನೇಮಕ

ಶೋಭಾ ಪಾಟೀಲ್
       ಭದ್ರಾವತಿ, ಮೇ. ೪: ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿದ್ದು, ಈ ನಡುವೆ ಪಕ್ಷದ ಸ್ಥಳೀಯ ಮುಖಂಡರು ಹಾಗು ಕಾರ್ಯಕರ್ತರ ನಡುವೆ ಅಸಮಾಧಾನ ವ್ಯಕ್ತವಾಗುತ್ತಿದೆ. ಪಕ್ಷದ ವಿವಿಧ ಮೋರ್ಚಾಗಳ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷರನ್ನೂ ಸಹ ಚುನಾವಣಾ ಫಲಿತಾಂಶದ ನೇರ ಹೊಣೆಯನ್ನಾಗಿ ಮಾಡಲಾಗುತ್ತಿದೆ. ಇದೀಗ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದ ಕಲ್ಪನಾ ಸುದರ್ಶನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ.
      ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಇಲ್ಲದ ಮೊದಲ ನಗರಸಭೆ ಚುನಾವಣೆ ಇದಾಗಿದ್ದು,  ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದವು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಕೆ.ಬಿ ಅಶೋಕ್‌ನಾಯ್ಕ್, ಆಯನೂರು ಮಂಜುನಾಥ್, ಎಸ್. ದತ್ತಾತ್ರಿ, ಗಿರೀಶ್ ಪಟೇಲ್ ಸೇರಿದಂತೆ ಇನ್ನಿತರ ಮುಖಂಡರು ಹೆಚ್ಚಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಪಕ್ಷದ ಸ್ಥಳೀಯ ಮುಖಂಡರು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದು, ಕೆಲವು ಅಭ್ಯರ್ಥಿಗಳು ಪಕ್ಷದ ನೆರವನ್ನು ದುರ್ಬಳಕೆ ಮಾಡಿಕೊಂಡಿರುವ ಕಾರಣ ಚುನಾವಣೆಯಲ್ಲಿ ಕಳಪೆ ಸಾಧನೆ ಕಾಣಲು ಸಾಧ್ಯವಾಗಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣ ವಾಟ್ಸಫ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ.  
     ಈ ಆರೋಪಗಳ ನಡುವೆ ಮಹಿಳಾ ಮೋರ್ಚಾ ಅಧ್ಯಕ್ಷೆ ಕಲ್ಪನಾ ಸುದರ್ಶನ್ ಬದಲಿಗೆ ಶೋಭಾ ಪಾಟೀಲ್‌ರವರನ್ನು ನೂತನ ಅಧ್ಯಕ್ಷೆಯನ್ನಾಗಿ ನೇಮಕಗೊಳಿಸಲಾಗಿದೆ. ಶೋಭಾ ಪಾಟೀಲ್ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪಕ್ಷದ ವಿವಿಧ ಹುದ್ದೆಗಳಲ್ಲಿ  ಸೇವೆ ಸಲ್ಲಿಸಿದ್ದಾರೆ.