ಶನಿವಾರ, ಆಗಸ್ಟ್ 23, 2025

ಅಥರ್ವ ಶಾಲೆಯಲ್ಲಿ ವೈಭವಯುತ ಶ್ರೀ ಕೃಷ್ಣ ಜನ್ಮಾಷ್ಟಮಿ : ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಣ್ಮನ ಸೆಳೆದ ಮಕ್ಕಳು

ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು. 
    ಭದ್ರಾವತಿ : ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು. 


    ಶ್ರೀ ಕೃಷ್ಣ-ರಾಧೆ ವೇಷದೊಂದಿಗೆ ವೇದಿಕೆ ಮೇಲೆ ಪ್ರದರ್ಶನ ನೀಡಿದ ಮಕ್ಕಳು ತಮ್ಮದೇ ಆದ ಹಾವ-ಭಾವ ಭಂಗಿಗಳಿಂದ, ಮಾತುಗಳಿಂದ ಎಲ್ಲರನ್ನು ರಂಜಿಸುವ ಮೂಲಕ ಕಣ್ಮನ ಸೆಳೆದರು. ಕಾರ್ಯಕ್ರಮಕ್ಕೆ ಪೂರಕವಾಗಿ ವೈಭವಯುತವಾದ ವೇದಿಕೆಯನ್ನು ಸಹ ಸಿದ್ದಪಡಿಸಲಾಗಿತ್ತು. 

ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಬಣ್ಣದ ಮಡಿಕೆ ಒಡೆದು ಸಂಭ್ರಮಿಸಿದರು.
    ಈ ನಡುವೆ ಶಾಲೆ ಒಳ ಭಾಗದಲ್ಲಿ ಶ್ರೀ ಕೃಷ್ಣ-ರಾಧೆ ಇಬ್ಬರೂ ನಿಧಿವನದಲ್ಲಿ ವಿಹಾರಗೊಂಡಿರುವಂತೆ ಅದ್ಭುತವಾಗಿ ಅಲಂಕರಿಸಲಾಗಿತ್ತು. ಮಕ್ಕಳು, ಪೋಷಕರು ಕಣ್ತುಂಬಿಕೊಂಡರು. ಮತ್ತೊಂದೆಡೆ ಶಾಲಾ ಆವರಣದಲ್ಲಿ ಅಲಂಕೃತಗೊಂಡ ಜೋಕಾಲಿಯಲ್ಲಿ ಮಕ್ಕಳು ಕುಳಿತು ಆಟವಾಡಿ ಇನ್ನೊಂದೆಡೆ ಬಣ್ಣದ ಮಡಿಕೆ ಒಡೆದು ಸಂಭ್ರಮಿಸಿದರು. ಶ್ರೀಕೃಷ್ಣ-ರಾಧೆ ವೇಷ ಧರಿಸಿದ್ದ ತಮ್ಮ ಮಕ್ಕಳ ಹಾವ-ಭಾವ ಭಂಗಿಗಳನ್ನು ಪೋಷಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಆನಂದಿಸಿದರು. 


ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಅಲಂಕೃತಗೊಂಡ ಜೋಕಾಲಿಯಲ್ಲಿ ಮಕ್ಕಳು ಕುಳಿತು ಆಟವಾಡಿ ಸಂಭ್ರಮಿಸಿದರು. 
    ಅಕ್ಕನ ಬಳಗದ ಕಾರ್ಯದರ್ಶಿ ಸುಧಾಮಣಿ ಮತ್ತು  ಶಿವಮೊಗ್ಗ ಪತಾಂಜಲಿ ನಾಗರಾಜ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಮಕ್ಕಳನ್ನು ಅಭಿನಂದಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಎಚ್ ಲಾವಣ್ಯ, ನಿರ್ವಾಹಕ ಶಿವಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಲಾಡು ವಿತರಿಸಲಾಯಿತು. 



ಜಾತಿ ನಿಂದನೆ, ಮಾನಹಾನಿಗೆ ಯತ್ನ ೩ ಆರೋಪಿಗಳಿಗೆ ೪ ವರ್ಷ ಶಿಕ್ಷೆ


    ಭದ್ರಾವತಿ: ಪೊಲೀಸ್ ಠಾಣೆಗೆ ದೂರು ನೀಡಿದ ಲಂಬಾಣಿ (ಪರಿಶಿಷ್ಟ ಜಾತಿ) ಜನಾಂಗಕ್ಕೆ ಸೇರಿದ ಮಹಿಳೆಯೊಬ್ಬರ ಮೇಲೆ ಜಾತಿ ನಿಂದನೆ, ಹಲ್ಲೆ ಮಾಡಿ ಮಾನಹಾನಿಗೆ ಯತ್ನಿಸಿದ್ದ ನಾಲ್ವರು ಆರೋಪಿಗಳಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಶನಿವಾರ ೪ ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. 
    ತಾಲೂಕಿನ ಸಿರಿಯೂರು ವೀರಾಪುರ ಗ್ರಾಮದ ಮನು (ಮೃತಪಟ್ಟಿದ್ದಾರೆ), ಶ್ರೀಧರ, ಮೋಹನ್ ಮತ್ತು ಹರೀಶ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ೧೦ ಆಗಸ್ಟ್, ೨೦೧೮ರಂದು ಇದೆ ಗ್ರಾಮದ ಲಂಬಾಣಿ ಜನಾಂಗದ ಮಹಿಳೆಯೊಬ್ಬರ ಮನೆಗೆ ಈ ನಾಲ್ವರು ಆರೋಪಿಗಳು ನುಗ್ಗಿ ದಾಂಧಲೆ ನಡೆಸುವ ಜೊತೆಗೆ ಆಶ್ಲೀಲ ಪದಗಳಿಂದ ಜಾತಿ ನಿಂದನೆ ಮಾಡಿ ಮನೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಮಾನಹಾನಿಗೆ ಯತ್ನಿಸಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
    ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಂದಿನ ಪೊಲೀಸ್ ಉಪಾಧೀಕ್ಷಕರಾಗಿದ್ದ ಓಂಕಾರ ನಾಯ್ಕರವರು ತನಿಖಾಧಿಕಾರಿಯಾಗಿ ಹಾಗು ಸಹಾಯಕ ಠಾಣಾ ಉಪ ನಿರೀಕ್ಷಕರಾಗಿದ್ದ ಕೆ.ಎಚ್ ಜಯಪ್ಪ ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 
    ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ರತ್ನಮ್ಮ ವಾದ ಮಂಡಿಸಿದ್ದರು. 

ರಾಷ್ಟ್ರೀಯ ಮಾಸ್ಟರ್‍ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜಂಜುಂಡೇಗೌಡರಿಗೆ ಚಿನ್ನದ ಪದಕ

ಇತ್ತೀಚಿಗೆ ಕೇರಳದ ಕೊಯಿಕೋಡ್(ಕ್ಯಾಲಿಕಟ್)ನಲ್ಲಿ ಜರುಗಿದ ರಾಷ್ಟ್ರೀಯ ಮಾಸ್ಟರ್‍ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭದ್ರಾವತಿ ನಗರದ ವಿಐಎಸ್‌ಎಲ್ ವ್ಯಾಯಾಮ ಶಾಲೆಯ ನಂಜುಂಡೇಗೌಡರವರು ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ: ಇತ್ತೀಚಿಗೆ ಕೇರಳದ ಕೊಯಿಕೋಡ್(ಕ್ಯಾಲಿಕಟ್)ನಲ್ಲಿ ಜರುಗಿದ ರಾಷ್ಟ್ರೀಯ ಮಾಸ್ಟರ್‍ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ವಿಐಎಸ್‌ಎಲ್ ವ್ಯಾಯಾಮ ಶಾಲೆಯ ನಂಜುಂಡೇಗೌಡರವರು ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿಯಾಗಿರುವ ನಂಜುಂಡೇಗೌಡರವರು ೬೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 
    ನಂಜುಂಡೇಗೌಡರವರು ಈಗಾಗಲೇ ರಾಷ್ಟ್ರ ಮತ್ತು ರಾಜ್ಯಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಗರದ ಕ್ರೀಡಾಪಟುಗಳು, ಅಭಿಮಾನಿಗಳು ಹಾಗು ಗಣ್ಯರು ಇವರನ್ನು ಅಭಿನಂದಿಸಿದ್ದಾರೆ. 

ಗಂಡನ ಕೊಲೆಗೈದ ಪತ್ನಿ, ಬಾಲ್ಯದ ಸ್ನೇಹಿತನಿಗೆ ಮರಣ ದಂಡನೆ ಶಿಕ್ಷೆ

ಮರಣ ದಂಡನೆ ಶಿಕ್ಷೆಗೆ ಗುರಿಯಾದ ಆರೋಪಿ ಲಕ್ಷ್ಮಿ.
    ಭದ್ರಾವತಿ : ಸುಮಾರು ೯ ವರ್ಷಗಳ ಹಿಂದೆ ನಡೆದಿದ್ದ ವ್ಯಕ್ತಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಮರಣ ದಂಡನೆ ಹಾಗು ಓರ್ವನಿಗೆ ೭ ವರ್ಷ ಶಿಕ್ಷೆ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಶನಿವಾರ ತೀರ್ಪು ನೀಡಿ ಆದೇಶಿಸಿದ್ದಾರೆ. 
    ಜನ್ನಾಪುರ ಎನ್‌ಟಿಬಿ ರಸ್ತೆ ನಿವಾಸಿಗಳಾದ ಲಕ್ಷ್ಮಿ(೩೮) ಮತ್ತು ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ(೩೯) ಮರಣ ದಂಡನೆ ಶಿಕ್ಷೆಗೆ ಒಳಗಾದ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ಶಿವರಾಜ ಅಲಿಯಾಸ್ ಶಿಷು ಅಲಿಯಾಸ್ ಶಿವರಾಜು(೪೧)ಗೆ ೭ ವರ್ಷ ಶಿಕ್ಷೆ ವಿಧಿಸಲಾಗಿದೆ. 
    ಶಿಕ್ಷಕ ಇಮ್ತಿಯಾಜ್ ಅಹಮದ್ ಖಾನ್ ಕೊಲೆಯಾದ ದುರ್ದೈವಿಯಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಇವರ ಸಹೋದರ(ತಮ್ಮ) ಜು.೮, ೨೦೧೬ರ ರಾತ್ರಿ ದೂರು ನೀಡಿ ಉದ್ದೇಶ ಪೂರ್ವಕವಾಗಿ ಲಕ್ಷ್ಮಿ ಮತ್ತು ಕೃಷ್ಣಮೂರ್ತಿ ಇಬ್ಬರು ಸೇರಿ ಕೊಲೆ ಮಾಡಿ ಮೃತದೇಹವನ್ನು ಹೊಳೆಗೆ ಎಸೆದಿದ್ದು, ಹುಡುಕಿ ಕೊಡುವಂತೆ ಕೋರಿದ್ದರು. 


ಮರಣ ದಂಡನೆ ಶಿಕ್ಷೆಗೆ ಗುರಿಯಾದ ಆರೋಪಿ ಕೃಷ್ಣಮೂರ್ತಿ 

    ಇದರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಅಂದಿನ ಠಾಣಾಧಿಕಾರಿಯಾಗಿದ್ದ ತನಿಖಾಧಿಕಾರಿ ಟಿ.ಕೆ ಚಂದ್ರಶೇಖರ್ ಮತ್ತು ಮಹಿಳಾ ಕಾನ್ಸ್‌ಸ್ಟೇಬಲ್ ಸಹಾಯಕ ತನಿಖಾಧಿಕಾರಿಯಾಗಿದ್ದ ಅನ್ನಪೂರ್ಣರವರು ೩ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 
    ಘಟನೆ ವಿವರ : 
    ಇಮ್ತಿಯಾಜ್ ಅಹಮದ್ ಖಾನ್ ಗುಲ್ಬರ್ಗ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮಿಯನ್ನು ಪ್ರೀತಿಸಿ ವಿವಾಹವಾಗಿದ್ದು, ನಂತರ ಇಮ್ತಿಯಾಜ್ ಸೊರಬ ತಾಲೂಕಿನ ತೆಲಗುಂದ ಗ್ರಾಮದ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾನೆ. ಲಕ್ಷ್ಮಿ ತಾಲೂಕಿನ ಅಂತರಗಂಗೆ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾಳೆ. ಇಮ್ತಿಯಾಜ್ ತನ್ನ ತಮ್ಮನ ಮನೆಯಲ್ಲೇ ಇದ್ದು, ಅಲ್ಲಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದನು. ಲಕ್ಷ್ಮಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿ ವಾಸವಿದ್ದಳು. ಈ ನಡುವೆ ಲಕ್ಷ್ಮೀಗೆ ಬಾಲ್ಯದ ಸ್ನೇಹಿತ, ಚಾಲಕ ಕೃಷ್ಣಮೂರ್ತಿಯೊಂದಿಗೆ ಅನೈತಿಕ ಸಂಬಂಧವಿದ್ದು, ಈ ಹಿನ್ನಲೆಯಲ್ಲಿ ಲಕ್ಷ್ಮೀ ಮನೆ ಸಮೀಪದಲ್ಲಿಯೇ ಈತನ ಸಹ ವಾಸವಿದ್ದನು ಎನ್ನಲಾಗಿದೆ. ಈ ವಿಚಾರ ಇಮ್ತಿಯಾಜ್‌ಗೆ ತಿಳಿದು ಆಗಾಗ ಲಕ್ಷ್ಮಿ ಜೊತೆಗೆ ಜಗಳ ಸಹ ನಡೆದಿದೆ. 


೭ ವರ್ಷ ಶಿಕ್ಷೆಗೆ ಗುರಿಯಾದ ಶಿವರಾಜು 
    ಜು.೭, ೨೦೧೬ರ ರಾತ್ರಿ ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಇಮ್ತಿಯಾಜ್ ಕೊಲೆಯೊಂದಿಗೆ ಅಂತ್ಯವಾಗಿದೆ. ಈ ವಿಚಾರ ಲಕ್ಷ್ಮಿ ಇಮ್ಮಿಯಾಜ್ ತಮ್ಮನಿಗೆ ತಿಳಿಸಿದ್ದು, ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರುವ ಅನುಮಾನದ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದರು. 
    ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಲಕ್ಷ್ಮೀ ಮತ್ತು ಕೃಷ್ಣಮೂರ್ತಿ ಇಬ್ಬರು ಸೇರಿ ಕೊಲೆ ಮಾಡಿ ಮೃತದೇಹವನ್ನು ಬೈಪಾಸ್ ರಸ್ತೆಯ ಭದ್ರಾ ಸೇತುವೆ ಬಳಿ ನದಿಗೆ ಎಸೆದಿದ್ದರು. ಈ ಕೃತ್ಯಕ್ಕೆ ಸಹಕರಿಸಿದ್ದ ಶಿವರಾಜುನನ್ನು ಸಹ ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು.