ತರೀಕೆರೆ ವಿಕಸನ ಸಂಸ್ಥೆಯ ಸಂಯೋಜಕಿ ವಿಭಾವರ್ಗೀಸ್ ಮನವಿ

ಭದ್ರಾವತಿ ತಾಲೂಕಿನ ಸಿದ್ದಾಪುರ ಹೊಸೂರು ವ್ಯಾಪ್ತಿಯ ಸುಮಾರು ೧೦ ಗ್ರಾಮಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಹಾಗು ಗ್ರಾಮಸ್ಥರಿಗಾಗಿ ಎಫ್ಜಿಎಚ್ಆರ್ರವರ ಸಹಕಾರದೊಂದಿಗೆ ತರೀಕೆರೆ ವಿಕಸನ ಸಂಸ್ಥೆ ಮತ್ತು ಆರೋಗ್ಯ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ: ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಮಹಿಳೆಯರಿಗೆ ಹೆಚ್ಚು ಶ್ರಮ, ಮಾನಸಿಕ ಒತ್ತಡ, ಚರ್ಮದ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆಗಳು ಹಾಗೂ ಗರ್ಭಕೋಶದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ ಎಂದು ತರೀಕೆರೆ ವಿಕಸನ ಸಂಸ್ಥೆಯ ಸಂಯೋಜಕಿ ವಿಭಾವರ್ಗೀಸ್ ಹೇಳಿದರು.
ಅವರು ತಾಲೂಕಿನ ಸಿದ್ದಾಪುರ ಹೊಸೂರು ವ್ಯಾಪ್ತಿಯ ಸುಮಾರು ೧೦ ಗ್ರಾಮಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಹಾಗು ಗ್ರಾಮಸ್ಥರಿಗಾಗಿ ಎಫ್ಜಿಎಚ್ಆರ್ರವರ ಸಹಕಾರದೊಂದಿಗೆ ತರೀಕೆರೆ ವಿಕಸನ ಸಂಸ್ಥೆ ಮತ್ತು ಆರೋಗ್ಯ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಮತ್ತು ಸಮುದಾಯದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ತಜ್ಞ ವೈದ್ಯರುಗಳಿಂದ ಸೂಕ್ತ ಚಿಕಿತ್ಸೆ ಕೊಡಿಸಿ ಆ ಮೂಲಕ ಆರೋಗ್ಯವಂತ ಜೀವನ ನಡೆಸುವಂತೆ ಪೇರೇಪಿಸುವುದು ಹಾಗು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ವಿಕಸನ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಕೆಲಸದ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ನಿಭಾಹಿಸುತ್ತಿದ್ದಾರೆ. ಅಲ್ಲದೆ ಅವರ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಗಮನಕೊಡುವುದು ಕಷ್ಟವಾಗಿದೆ. ಈಗಾಗಲೇ ಇಂತಹ ೮೦ ಮಹಿಳೆಯರನ್ನು ಗುರುತಿಸಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಮಾತನಾಡಿ, ವಿಕಸನ ಸಂಸ್ಥೆಯಿಂದ ನಮ್ಮ ವಾರ್ಡ್ ವ್ಯಾಪ್ತಿಯ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿರುವುದು ತುಂಬಾ ಸಂತೋಷಕರ ಸಂಗತಿಯಾಗಿದೆ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಹಾಗೂ ಗ್ರಾಮಸ್ಥರು ಇದರ ಸಮಪಯೋಗ ಪಡೆದುಕೊಂಡು ಆರೋಗ್ಯವಂತ ಸದೃಢ ಸಮಾಜ ನಿರ್ಮಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಎಚ್.ಎಲ್ ವರ್ಷ ಮಾತನಾಡಿ, ಮಹಿಳೆಯರು ಮೊದಲು ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಆರೋಗ್ಯವಂತ ಕುಟುಂಬ ನಿರ್ಮಿಸಿಕೊಂಡರೆ ಆಸ್ಪತ್ರೆಗಳಿಗೆ ತಿರುಗುವುದು ತಪ್ಪುತ್ತದೆ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಎಷ್ಟೋ ಜನರು ಕಾಯಿಲೆ ಪ್ರಾಥಮಿಕ ಹಂತದಲ್ಲಿರುವಾಗಲೇ ತೋರಿಸುವುದಿಲ್ಲ. ಬದಲಿಗೆ ಉಲ್ಬಣವಾದ ಮೇಲೆ ತೋರಿಸುತ್ತಾರೆ. ಇದರಿಂದ ಹಣ, ಆರೋಗ್ಯ ಮತ್ತು ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಶಿಬಿರದಲ್ಲಿ ಉಜ್ಜನಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಭಿಯಾ ಅಂಜುಮ್, ಚರ್ಮರೋಗ ತಜ್ಞ ಡಾ. ಭರತ್ ಬಂಗೇರಾ, ಶಿವಮೊಗ್ಗ ಜನರಲ್ ಮೆಡಿಸಿನ್ ಮತ್ತು ಮಧುಮೇಹ ತಜ್ಞೆ ಡಾ. ಎಸ್.ಆರ್ ಸಂಹಿತ ತಪಾಸಣಾ ವೈದ್ಯರಾಗಿ ಭಾಗವಹಿಸಿದ್ದರು. ಸುಮಾರು ೨೦೦ಕ್ಕೂ ಹೆಚ್ಚು ಜನರು ತಪಾಸಣೆ ಸಮಪಯೋಗ ಪಡೆದುಕೊಂಡರು.
ಹಿರಿಯ ಆರೋಗ್ಯ ನಿರೀಕ್ಷಕ ಆನಂದಮೂರ್ತಿ, ಮುಖ್ಯ ಶಿಕ್ಷಕರಾದ ಲಿಂಗರಾಜ್, ಚೇತನ ಮತ್ತು ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತರಾದ ಸೆಲ್ವಿ. ಮಂಗಳ, ಪೂರ್ಣಿಮಾ, ರಶ್ಮಿ, ಶೃತಿ, ಆಶಾಕಾರ್ಯಕರ್ತರಾದ ಪುಷ್ಪ ಅಂಗನವಾಡಿ ಕಾರ್ಯಕರ್ತೆ ರೇಷ್ಮೆ ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಮ್ ವರ್ಗೀಸ್ ಕ್ಲೀಟಸ್, ಜಿ.ಎನ್ ಸಿಂಹಾ, ಕ್ರಿಸ್ತ ದಯಾಕುಮಾರ್, ಲಿಲ್ಲಿ ವರ್ಗೀಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿಕಸನ ಸಂಸ್ಥೆಯ ಪ್ರಭಾವತಿ ಪ್ರಾರ್ಥಿಸಿ, ಎಲ್. ಮುಕುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.