Sunday, December 26, 2021

ವಿಕಲಚೇತನ ಪ್ರತಿಭೆಗಳು ಹೊರಹೊಮ್ಮಲು ಕ್ರೀಡಾಕೂಟಗಳು ಸಹಕಾರಿ : ಶೇಖರ್‌ನಾಯ್ಕ್

ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೆಂಗಳೂರಿನ ಶೇಖರ್ ನಾಯ್ಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ತ್ರಿಕೋನಾ ಕ್ರಿಕೆಟ್ ಪಂದ್ಯಾವಳಿಯನ್ನು ಭಾರತ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯ್ಕ್ ಉದ್ಘಾಟಿಸಿದರು.  
    ಭದ್ರಾವತಿ, ಡಿ. ೨೬: ಕ್ರಿಕೆಟ್ ತರಬೇತಿ ಹಾಗೂ ಕ್ರೀಡಾಕೂಟ ಆಯೋಜನೆಯಿಂದ ವಿಕಲಚೇತನರಿಗೆ ಸಾಕಷ್ಟು ಅನುಕೂಲವಾಗಿದ್ದು, ಭವಿಷ್ಯದಲ್ಲಿ ಸಾವಿರಾರರು ವಿಕಲಚೇತನ ಪ್ರತಿಭೆಗಳು ಹೊರಹೊಮ್ಮುವಂತಾಗಬೇಕೆಂದು ಭಾರತ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯ್ಕ್ ಹೇಳಿದರು.
    ಅವರು ಭಾನುವಾರ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೆಂಗಳೂರಿನ ಶೇಖರ್ ನಾಯ್ಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ತ್ರಿಕೋನಾ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
    ಸಿದ್ದಾರ್ಥ ಅಂಧರ ಕೇಂದ್ರದ ಸಹಕಾರದೊಂದಿಗೆ ತರಬೇತಿ ಹಾಗು ಕ್ರೀಡಾಕೂಟ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಅಂಧ ವಿಕಲಚೇತನರಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಬೇಕೆಂಬುದು ನನ್ನ ಆಶಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಡಿಆರ್‌ಟಿ ಬೆಂಗಳೂರು ತಂಡದ ಉಪಾಧ್ಯಕ್ಷೆ ಕವಿತಾ, ಸ್ನೇಹ ದೀಪಾ ತಂಡ ವ್ಯವಸ್ಥಾಪಕ ಮಹೇಶ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಲ್. ದೇವರಾಜ್, ಅತಿಥಿ ಉಪನ್ಯಾಸಕಿ ಸೃಷ್ಟಿ ಮತ್ತು ಬಿಆರ್‌ಸಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶಿವಮೊಗ್ಗ ಶಾರದದೇವಿ ಅಂಧರ ವಿಕಾಸ ಕೇಂದ್ರದ ದೈಹಿಕ ಶಿಕ್ಷಕ ಸುರೇಶ್ ಮತ್ತು ಚಿಕ್ಕಮಗಳೂರು ಆಶಾಕಿರಣದ ದೈಹಿಕ ಶಿಕ್ಷಕ ಮಂಜುನಾಥ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಕ್ರೀಡಾಕೂಟದ ನೇತೃತ್ವ ವಹಿಸಿದ್ದರು.

ಅಧಿವೇಶನದಲ್ಲಿ ವಿನಾಕಾರಣ ಕಾಲಹರಣ : ರಾಜ್ಯದ ಜನತೆಗೆ ದ್ರೋಹ

ಸಾರ್ವಜನಿಕರ ಕುಂದುಕೊರತೆ ಹೋರಾಟ ಸಮಿತಿಯ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ


ಭದ್ರಾವತಿ ಜಯಶ್ರೀ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಹೋರಾಟ ಸಮಿತಿಯ ನೂತನ ದಿನದರ್ಶಿಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಬಿಡುಗಡೆಗೊಳಿಸಿದರು.

    ಭದ್ರಾವತಿ, ಡಿ. ೨೬: ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಜನರ ಸಮಸ್ಯೆಗಳಿಗೆ ಚರ್ಚಿಸದೆ ವಿನಾಕಾರಣ ಕಾಲಹರಣ ಮಾಡುವ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪಿಸಿದರು.
    ಅವರು ನಗರದ ಜಯಶ್ರೀ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಹೋರಾಟ ಸಮಿತಿಯ ನೂತನ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
    ರಾಜ್ಯದಲ್ಲಿ ಕೊರೋನಾ ಸೇರಿದಂತೆ ಪ್ರಾಕೃತಿಕ ವಿಕೋಪಗಳಿಂದ ರೈತರು, ಕಾರ್ಮಿಕರು, ವ್ಯಾಪರಸ್ಥರು ಸೇರಿದಂತೆ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇವುಗಳ ಕುರಿತು ಸದನದಲ್ಲಿ ಚರ್ಚಿಸದೆ ಕಾಲಹರಣ ಮಾಡಲಾಗಿದೆ. ಸರ್ಕಾರ ಮೊದಲು ಜನರ ಸಂಕಷ್ಟದಲ್ಲಿ ಪೂರಕವಾಗಿ ಸ್ಪಂದಿಸಬೇಕೆಂದರು.
ಕ್ಷೇತ್ರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅವನತಿಹೊಂದಿರುವುದರ ಪರಿಣಾಮ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ನಡುವೆಯೂ ೩ ಬಾರಿ ಶಾಸಕರಾಗಿ ಆಯ್ಕೆಮಾಡಿರುವ ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲೂ ಇದೆ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸಮಿತಿ ಪೂರಕವಾಗಿ ಸ್ಪಂದಿಸುವ ಮೂಲಕ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ. ಶಾಸಕರು ನಮ್ಮ ಬಹಳಷ್ಟು ಹೋರಾಟಗಳಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲೂ ಹೋರಾಟ ಮುಂದುವರೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.
    ನಗರಸಭಾ ಸದಸ್ಯ ಕಾಂತರಾಜ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರಮುಖರಾದ ಎಸ್.ಎಸ್ ಭೈರಪ್ಪ, ಶ್ರೀನಿವಾಸ್, ಕಟ್ಟಡ ಕಾರ್ಮಿಕರ ಸಂಘದ ತಾಂತ್ರಿಕ ಸಲಹೆಗಾರ ಮನೋಹರ್, ಹಿರಿಯ ನಾಗರೀಕರಾದ ದೊಡ್ಡಯ್ಯ, ವೆಂಕಟೇಶ್, ಲಾರ್ಜರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಟ್ಟಡ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಅಭಿಲಾಷ್ ನಿರೂಪಿಸಿದರು.

ಮರಳಿ ಮಾತೃ ಧರ್ಮಕ್ಕೆ ಸೇರ್ಪಡೆಗೊಂಡ ೯ ಜನರ ಕುಟುಂಬ

ಭದ್ರಾವತಿ ತಾಲೂಕಿನ ೯ ಜನರ ಕುಟುಂಬವೊಂದು ಕ್ರಿಶ್ಚಿಯನ್ ಧರ್ಮ ತೊರೆದು ಮಾತೃ ಧರ್ಮಕ್ಕೆ ಮರಳಿ ಬಂದಿರುವ ಘಟನೆ ಭಾನುವಾರ ನಡೆದಿದೆ.
    ಭದ್ರಾವತಿ, ಡಿ. ೨೬:  ತಾಲೂಕಿನ ೯ ಜನರ ಕುಟುಂಬವೊಂದು ಕ್ರಿಶ್ಚಿಯನ್ ಧರ್ಮ ತೊರೆದು ಮಾತೃ ಧರ್ಮಕ್ಕೆ ಮರಳಿ ಬಂದಿರುವ ಘಟನೆ ಭಾನುವಾರ ನಡೆದಿದೆ.
    ತಾಲೂಕಿನ ಅಂತರಗಂಗೆಯ ಗ್ರಾಮದ ನಿವಾಸಿ ಜಯಶೀಲನ್ ಕುಟುಂಬದ ಪತ್ನಿ ಜಯಮ್ಮ, ಕುಟುಂಬ ಸದಸ್ಯರಾದ ಪ್ರಭಾಕರನ್, ಲಲಿತಾ ಪ್ರಭಾಕರನ್ ಮತ್ತು ಇವರ ಮಕ್ಕಳಾದ ಭರತ್ ಕುಮಾರ್, ಭಾವನಾ ಹಾಗೂ ದ್ವಿತೀಯ ಪುತ್ರ ಪ್ರಕಾಶ ಮತ್ತು ಈತನ ಪತ್ನಿ ಶ್ವೇತಾ ಪ್ರಕಾಶ್ ಹಾಗೂ ಇವರ ಪುತ್ರಿ ಪೃಥ್ವಿ ಸೇರಿ ೯ ಜನರು ವಿಶ್ವ ಹಿಂದೂ ಪರಿಷದ್, ಬಜರಂಗದಳ ನೇತೃತ್ವದಲ್ಲಿ ಜನ್ನಾಪುರದಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡಿರುವ ಸಾರ್ವಜನಿಕ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಪ್ರಧಾನ ಅರ್ಚಕ ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ಹಾಗು ಅರಕೆರೆ ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿಯವರ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ಮರಳಿ ಸೇರ್ಪಪಡೆಗೊಂಡರು.
    ಮೂಲತಃ ಹಿಂದೂ ಧರ್ಮದವರಾದ ಜಯಶೀಲನ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ ಸ್ವಯಂ ಪ್ರೇರಣೆಯಿಂದ ಇಡೀ ಕುಟುಂಬ ಮಾತೃಧರ್ಮಕ್ಕೆ ಮರಳಿದೆ. ಈ ಸಂದರ್ಭದಲ್ಲಿ ಹಿಂದೂ ಧರ್ಮದ ಪ್ರಮುಖರು ಕುಟುಂಬ ಸದಸ್ಯರನ್ನು ಅಭಿನಂದಿಸುವ ಮೂಲಕ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು.  
    ವಿಶ್ವಹಿಂದೂ ಪರಿಷದ್ ಪ್ರಮುಖರಾದ ಹಾ. ರಾಮಪ್ಪ, ಡಿ.ಆರ್. ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಎಸ್. ನಾರಾಯಣ್, ಪಿ ಮಂಜುನಾಥ್ ರಾವ್. ಶೈಲೇಶ್ ಕೋಟಿ, ಸಿ. ಮಹೇಶ್ವರಪ್ಪ,  ಶಿವಮೂರ್ತಿ. ಮುತ್ತುರಾಮಲಿಂಗಂ, ಯಶೋದ ವೀರಭದ್ರಪ್ಪ. ಪಂಚ ರತ್ನಮ್ಮ, ಕೆ.ಆರ್. ವೇದಾವತಿ, ಗಾಯತ್ರಿ, ಆರ್.ಎಸ್ ಶೋಭಾ, ಮಂಜುಳಾ, ಅನ್ನಪೂರ್ಣ ಸತೀಶ್, ಹೇಮಾವತಿ, ಪರಿವಾರದ ಪ್ರಮುಖರಾದ ಬಾ.ನಿ ಮಹದೇವ, ಕುಲಕರ್ಣಿ, ಕೃಷ್ಣಮೂರ್ತಿ, ಚಂದ್ರಪ್ಪ, ಸುಬ್ರಮಣಿ, ಸುರೇಶ್ ಬಾಬು,  ಬಜರಂಗದಳದ ರಾಘವನ್ ವಡಿವೇಲು, ದಿನೇಶ್, ರವಿಕುಮಾರ್, ವಸಂತಕುಮಾರ್, ಬೆಟ್ಟೇಗೌಡ ಮತ್ತು ಶ್ರೀರಾಮ ಸೇನೆಯ ಉಮೇಶ್ ಗೌಡ ಸೇರಿದಂತೆ ಹಿಂದೂ ಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.