ಸೋಮವಾರ, ಸೆಪ್ಟೆಂಬರ್ 8, 2025

ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ : ವಿವಿಧ ಸೇವಾ ಕಾರ್ಯಗಳು



ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಚನ್ನಗಿರಿ ರಸ್ತೆಯ ಹೊಳೆಹೊನ್ನೂರು ವೃತ್ತದಲ್ಲಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆಬಿಟಿ ಬಾಬು ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರಕ್ತದಾನ ಶಿಬಿರ ಹಾಗು ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಪರುಸಪ್ಪ ಕುರುಬರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯ ಬಿ.ಎಂ.ಮಂಜುನಾಥ್, ಖದೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಭದ್ರಾವತಿ : ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ ಆಚರಣೆ ಸಂಭ್ರಮದ ಹಿನ್ನಲೆಯಲ್ಲಿ ಸೋಮವಾರ ಒಂದೆಡೆ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮತ್ತೊಂದೆಡೆ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳಿಂದ ಸಾಮಾಜಿಕ ಸೇವಾ ಕಾರ್ಯಗಳು ನೆರವೇರಿದವು. 
    ಮೆರವಣಿಗೆ ಆರಂಭಕ್ಕೂ ಮೊದಲು ನಗರದ ಚನ್ನಗಿರಿ ರಸ್ತೆಯ ಹೊಳೆಹೊನ್ನೂರು ವೃತ್ತದಲ್ಲಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆಬಿಟಿ ಬಾಬು ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರಕ್ತದಾನ ಶಿಬಿರ ಹಾಗು ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್, ತಹಸೀಲ್ದಾರ್ ಪರುಸಪ್ಪ ಕುರುಬರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯ ಬಿ.ಎಂ.ಮಂಜುನಾಥ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಖದೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಇದೆ ಸಂದರ್ಭದಲ್ಲಿ ಬಡಮಹಿಳೆಯರಿಗೆ ಸೀರೆ ಮತ್ತು ರವಿಕೆ ವಿತರಿಸಲಾಯಿತು. ಸತ್ಯ ಚಿತ್ರಮಂದಿರ ಬಳಿ ಆಜಾಮ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅನ್ನದಾನ, ಸಿಹಿ ಜಿಲೇಬಿ, ತಂಪು ಪಾನೀಯ ವಿತರಣೆ, ರಂಗಪ್ಪ ವೃತ್ತದಲ್ಲಿ ನಗರಸಭಾ ಸದಸ್ಯ ಬಿ.ಎಂ ಮಂಜುನಾಥ್ ನೇತೃತ್ವದಲ್ಲಿ ಟೀಕು ಬಾಯ್ಸ್ ವತಿಯಿಂದ ತಂಪು ಪಾನೀಯ ವಿತರಣೆ ನಡೆಯಿತು. 
    ಡಾ. ರಾಜಕುಮಾರ್ ರಸ್ತೆ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸೊಸೈಟಿ (ಟಿಎಪಿಸಿಎಂಎಸ್) ಮುಂಭಾಗದಲ್ಲಿ ದೇಶಭಕ್ತ ಟಿಪ್ಪು ಕಮಿಟಿಯಿಂದ ಅಧ್ಯಕ್ಷ ಮಹಬೂಬ್, ಇಮ್ರಾನ್, ಖಲೀಂ ಮುಂತಾದವರು ಸಿಹಿ ಪಾನೀಯ ಮತ್ತು ಅನ್ನ ಸಂತರ್ಪಣೆ ನೆರವೇರಿಸಿ ಸಂಭ್ರಮಿಸಿದರು.

ಈದ್ ಮಿಲಾದ್ ಸಂಭ್ರಮಾಚರಣೆ : ಬೃಹತ್ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ

ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ ಶುಕ್ರವಾರ ಭದ್ರಾವತಿ ನಗರದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿತ್ತು. ಇದರ ಅಂಗವಾಗಿ ಸೋಮವಾರ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ: ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ ಶುಕ್ರವಾರ ನಗರದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿತ್ತು. ಇದರ ಅಂಗವಾಗಿ ಸೋಮವಾರ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. 
    ನಗರದ ಹೊಳೆಹೊನ್ನೂರು ವೃತ್ತದಿಂದ ಆರಂಭಗೊಂಡ ಬೃಹತ್ ಮೆರವಣಿಗೆಯಲ್ಲಿ ಆಕರ್ಷಕವಾದ ಮೆಕ್ಕಾ-ಮದೀನಾ ಮಾದರಿಗಳು ಕಂಗೊಳಿಸಿದವು. ಈ ನಡುವೆ ಮುಸ್ಲಿಂ ಸಮುದಾಯದ ಯುವಕರು ಹಸಿರು ಧ್ವಜಗಳನ್ನು ಹಿಡಿದು ಸಂಭ್ರಮಿಸಿದರು. ನಗರದ ವಿವಿಧ ಮಸೀದಿಗಳಿಂದ ಆಗಮಿಸಿದ್ದ ಧರ್ಮ ಗುರುಗಳು ಕುರಾನ್ ಧರ್ಮ ಸಂದೇಶಗಳನ್ನು ವಾಚಿಸುವ ಮೂಲಕ ಹಬ್ಬದ ಮಹತ್ವ ಸಾರಿದರು. ಈ ನಡುವೆ ಮೆರವಣಿಗೆಗೆ ಪೂರ್ವಭಾವಿಯಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಹಸಿರು ದ್ವಾರಗಳ ನಿರ್ಮಾಣ, ಪ್ರಮುಖ ರಸ್ತೆಗಳಲ್ಲಿ ಹಸಿರು ಧ್ವಜಾ, ಹಸಿರು ಬಂಟಿಂಗ್ಸ್‌ಗಳು ರಾರಾರಾಜಿಸುತ್ತಿದ್ದವು. 
    ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ನಗರದ ವಿವಿಧ ಮಸೀದಿಗಳ ಮುಖಂಡರ ನೇತೃತ್ವದಲ್ಲಿ ಆಯಾ ಭಾಗದ ಮುಸ್ಲಿಂ ಸಮುದಾಯದವರು ಒಂದೆಡೆ ಗುಂಪು ಗುಂಪಾಗಿ ಸೇರಿದ್ದರು. ಇದರಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಕಂಡು ಬಂದಿತು. ವಾಹನಗಳ ಸುಗಮ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು. ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲು ಹರಸಹಾಸ ಪಡುವಂತಾಯಿತು. 


    ಹೊಳೆಹೊನ್ನೂರು ವೃತ್ತದಿಂದ ಆರಂಭಗೊಂಡ ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿ ಸಾಗಿ ಸಯ್ಯದ್ ಸಾದತ್ ದರ್ಗಾದಲ್ಲಿ ಅಂತ್ಯಗೊಂಡಿತು. ನಂತರ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 
    ಮೆರವಣಿಗೆಯಲ್ಲಿ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಅಯೂಬ್ ಖಾನ್, ಪದಾಧಿಕಾರಿಗಳಾದ ದಿಲ್ದಾರ್, ಆಬಿದ್ ಆಲಿ, ಫಾರೂಖ್, ಸಿ.ಎಂ ಖಾದರ್, ಮುಖಂಡರಾದ ಸಿ.ಎಂ ಸಾಧಿಕ್, ಮಹಮ್ಮದ್ ಸನಾವುಲ್ಲಾ, ಕರಿಯಪ್ಪ, ತ್ಯಾಗರಾಜ್, ತರುಣ್, ಮೈಲಾರಪ್ಪ, ಜೆಬಿಟಿ ಬಾಬು, ಸಯ್ಯದ್ ರಿಯಾಜ್, ಇಮ್ರಾನ್, ಖಲೀಮುಲ್ಲಾ, ಭಾಷಾ, ಶಬ್ಬೀರ್, ಮುಸ್ತಾಫಾ, ಮುಸ್ತಾಖ್, ನಗರಸಭೆ ಉಪಾಧ್ಯಕ್ಷ  ಮಣಿ ಎಎನ್‌ಎಸ್, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಬಿ.ಎಸ್ ಗಣೇಶ್, ಬಿ.ಎಂ ಮಂಜುನಾಥ್ ಸೇರಿದಂತೆ ವಿವಿಧ ಧರ್ಮಗಳ, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯಗಳ ಪಕ್ಷಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡು ಮೆರವಣಿಗೆಯಲ್ಲಿ ಸೌಹಾರ್ದತೆ ಮೆರೆದರು.
  ಉಪವಿಭಾಗಾಧಿಕಾರಿ ಸತ್ಯನಾರಾಯಣ್, ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.  
ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಡಿಯೋ ಚಿತ್ರೀಕರಣ ಛಾಯಾಗ್ರಾಹಕರು, ದ್ರೋಣ್ ನಿರ್ವಾಹಕರನ್ನು ಬಂದೋಬಸ್‌ಗೆ ಬಳಸಿಕೊಳ್ಳಲಾಗಿತ್ತು. 

ಮತ್ತಿಘಟ್ಟ ಗ್ರಾಮಕ್ಕೆ ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಿ

ತಡಸ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹ 

ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಒತ್ತಾಯಿಸಿ ಭದ್ರಾವತಿ ತಾಲೂಕಿನ ಮತ್ತಿಘಟ್ಟ ಗ್ರಾಮಸ್ಥರು ಸೋಮವಾರ ತಡಸ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು. 
    ಭದ್ರಾವತಿ : ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ಮತ್ತಿಘಟ್ಟ ಗ್ರಾಮಸ್ಥರು ಸೋಮವಾರ ತಡಸ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಅಂಬೇಡ್ಕರ್ ವೈಚಾರಿಕಾ ವೇದಿಕೆ ಕರ್ನಾಟಕ (ಎವೈವಿಕೆ) ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮತ್ತಿಘಟ್ಟ ಗ್ರಾಮಸ್ಥರು ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
    ಎವೈವಿಕೆ ತಾಲೂಕು ಸಂಚಾಲಕ ಪಿ. ಮೂರ್ತಿ ಮಾತನಾಡಿ, ಈ ಗ್ರಾಮದಲ್ಲಿ ೭ ರಿಂದ ೮ ವಿವಿಧ ಸಮುದಾಯಗಳಿಗೆ ಸೇರಿದ ಬೀದಿಗಳಿದ್ದು. ದಿನಕ್ಕೆ ಒಂದು ಬೀದಿಗೆ ಸರದಿಯಂತೆ ವಾರದಲ್ಲಿ ಒಂದು ದಿನ ನೀರು ಸರಬರಾಜು ಮಾಡಲಾಗುತ್ತಿದೆ. ಜನರು ಆ ನೀರನ್ನು ೬-೭ ದಿನ ಶೇಖರಿಸಿಟ್ಟುಕೊಂಡು ಕುಡಿಯುತ್ತಿದ್ದಾರೆ. ಈ ರೀತಿ ವಾರಗಟ್ಟಲೆ ಶೇಖರಿಸಿಟ್ಟುಕೊಂಡು ನೀರನ್ನು ಕುಡಿಯುವುದರಿಂದ ಜನರು ಅನೇಕ ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಡೆಂಗ್ಯೂ, ಮಲೇರಿಯಾ. ಚಿಕನ್-ಗುನ್ಯಾದಂತಹ ರೋಗಗಳು ಗ್ರಾಮದಲ್ಲಿ ಜನರಿಗೆ ಹರಡುತ್ತಿವೆ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು. 
  ಗ್ರಾಮದ ಮುಖಂಡ ಮುನಿರಾಜು ಮಾತನಾಡಿ, ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಇದೆ. ಆದರೆ ಸರಬರಾಜು ಮಾಡುವ ವ್ಯವಸ್ಥೆ ಸರಿ ಇಲ್ಲ. ಪಂಚಾಯಿತಿ ಅಧಿಕಾರಿಗಳು ಈ ಕುರಿತು ಗಮನಹರಿಸುತ್ತಿಲ್ಲ. ಗ್ರಾಮದ ನೀರುಗಂಟಿ ನಿರ್ಲಕ್ಷದಿಂದ ವರ್ತಿಸುತ್ತಿದ್ದಾರೆ. ಗ್ರಾಮದ ಎಲ್ಲಾ ಬೀದಿಗಳಿಗೂ ಪ್ರತಿದಿನ ಒಂದು ಬೀದಿಗೆ ಅರ್ಧ ಗಂಟೆಯಂತೆ ನೀರುಗಂಟಿ ನೀರು ಸರಬರಾಜು ಮಾಡಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
    ತಡಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, ಮತ್ತಿಘಟ್ಟ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಇಲ್ಲಿಗೆ ವರ್ಗಾವಣೆಯಾಗಿ ಬಂದು ಎರಡು ತಿಂಗಳಾಯಿತು.  ತಕ್ಷಣ ಮತ್ತಿಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. 
    ಪ್ರತಿಭಟನೆಯಲ್ಲಿ ಮುಖಂಡರಾದ ಚಂದ್ರಪ್ಪ, ರಮೇಶ್, ರವಿಕುಮಾರ್, ರಂಗರಾವ್, ವೆಂಕಟೇಶ್, ದಯಾನಂದ. ಸಂಜಯ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. 
 
 ಮತ್ತಿಘಟ್ಟ ಗ್ರಾಮದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಗ್ರಾಮದಲ್ಲಿರುವ ಎರಡು ಬೋರ್ವೆಲ್‌ಗಳಲ್ಲಿ ಅಂತರ್ಜಲ ತುಂಬಿದೆ. ನೀರಿನ ಸಂಗ್ರಹಕ್ಕೆ ಟ್ಯಾಂಕ್ ವ್ಯವಸ್ಥೆ ಕೂಡ ಇದೆ. ಅಲ್ಲದೆ  ಗ್ರಾಮದ ಸಮೀಪದಲ್ಲಿಯೇ ಉಕ್ಕಿ ಹರಿಯುತ್ತಿರುವ ಭದ್ರಾನದಿಯೂ ಇದೆ. ಆದರೂ ಮತಿಘಟ್ಟ ಗ್ರಾಮದ ಜನರಿಗೆ ಕುಡಿಯುವ ಶುದ್ದ ನೀರಿನ ವ್ಯವಸ್ಥೆ ಇಲ್ಲ. ಪಂಚಾಯಿತಿ ಅಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು.
                                   -ಪಿ. ಮೂರ್ತಿ, ಎವೈವಿಕೆ ತಾಲೂಕು ಸಂಚಾಲಕ.