Saturday, July 4, 2020

ಕೊರೋನಾ ಸೋಂಕು ಪತ್ತೆ : ಶ್ರೀಸಾಮಾನ್ಯರಿಗೆ ಸಂಕಷ್ಟ

ಭದ್ರಾವತಿ ಹೊಸಮನೆ  ೧೨ನೇ ವಾರ್ಡ್ ಮುತ್ತು ಮಾರಿಯಮ್ಮ ದೇವಸ್ಥಾನ ಸಮೀಪ ಸೀಲ್‌ಡೌನ್ ಮಾಡಲಾಗಿರುವ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಸುಮಾರು ೧೦ ದಿನಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಭದ್ರಾವತಿ, ಜು. ೪: ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಡುವೆ ಸೋಂಕು ಪತ್ತೆಯಾದ ಸ್ಥಳದ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತಿದೆ. 
ಈಗಾಗಲೇ ಕಾಗದನಗರ, ಸುರಗಿತೋಪು, ಹಳೇನಗರ, ಹೊಸಮನೆ, ಗಾಂಧಿನಗರ ಸೇರಿದಂತೆ ಹಲವೆಡೆ ಸೀಲ್‌ಡೌನ್ ಮಾಡಲಾಗಿದ್ದು, ಸ್ಥಳೀಯರಿಗೆ ನಗರಸಭೆ ಸಿಬ್ಬಂದಿಗಳು ದಿನನಿತ್ಯದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. 
ಈ ನಡುವೆ ಹೊಸಮನೆ ೧೨ನೇ ವಾರ್ಡ್ ಮುತ್ತು ಮಾರಿಯಮ್ಮ ದೇವಸ್ಥಾನ ಸಮೀಪ ಸೀಲ್‌ಡೌನ್ ಮಾಡಲಾಗಿರುವ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಸುಮಾರು ೧೦ ದಿನಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಸಂಸ್ಥೆಯ ಅಧ್ಯಕ್ಷ, ವಾರ್ಡ್ ಸದಸ್ಯ ಜಿ. ಆನಂದಕುಮಾರ್, ಬಿಜೆಪಿ ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಮೋಹನ್ ಮತ್ತು ಬಿ.ಎಸ್ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಹೊಸಮನೆ ಹಿಂದೂ ಮಹಾಸಭಾ ವಿನಾಯಕ ಸೇವಾ ಸಮಿತಿ ಸಮೀಪ ಸೀಲ್‌ಡೌನ್ ಮಾಡಲಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳನ್ನು ವಿಚಾರಿಸಿದರು. 
ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಹೊಸಮನೆ ಹಿಂದೂ ಮಹಾಸಭಾ ವಿನಾಯಕ ಸೇವಾ ಸಮಿತಿ ಸಮೀಪ ಸೀಲ್‌ಡೌನ್ ಮಾಡಲಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳನ್ನು ವಿಚಾರಿಸಿದರು. 

ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಳೆದ ಬಾರಿಗಿಂತ ೧೬ ಅಡಿ ಏರಿಕೆ

೨೭ ಟಿಎಂಸಿ ನೀರು ಸಂಗ್ರಹ : ಈ ಬಾರಿ ರೈತರ ಕನಸು ನನಸಾಗುವುದೇ..?


ಭದ್ರಾವತಿ, ಜು. ೪: ಕಳೆದ ಬಾರಿ ಜುಲೈ ತಿಂಗಳು ಅರಂಭಗೊಂಡರೂ ಸಹ ಮಳೆ ಬರುವ ಲಕ್ಷಣಗಳು ಕಂಡು ಬಾರದೆ ರೈತರು ಆತಂಕಗೊಂಡಿದ್ದರು. ಆದರೆ ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭಗೊಂಡಿದ್ದು, ಶನಿವಾರ ಭದ್ರಾ ಜಲಾಶಯದ ನೀರಿನ ಮಟ್ಟ ೧೪೦ ಅಡಿ ತಲುಪಿದೆ. 
ಹವಾಮಾನ ವೈಫರಿತ್ಯದಿಂದಾಗಿ ಈ ಬಾರಿ ಮಳೆಯಾಗಿದ್ದು, ಕಳೆದ ಬಾರಿ ಜುಲೈ ಅಂತ್ಯದ ನಂತರ ರಾಜ್ಯದೆಲ್ಲೆಡೆ ಧಾರಕಾರ ಮಳೆಯಾಗುವ ಜೊತೆಗೆ ನೆರೆ ಹಾವಳಿ ಸಂಭವಿಸಿ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಗರಿಷ್ಠ ೧೮೬ ಅಡಿ ಎತ್ತರದ ಜಲಾಶಯದಲ್ಲಿ ಕಳೆದ ಬಾರಿಗೆ ಹೋಲಿಕೆ ಮಾಡಿದರೆ  ಈ ಬಾರಿ ೧೬ ಅಡಿ ಹೆಚ್ಚಾಗಿದ್ದು, ೨೭ ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ ೧೭.೫ ಅಡಿ ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ ಸಹ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ರೈತರ ಆತಂಕ ಸ್ವಲ್ಪಮಟ್ಟಿಗೆ ದೂರವಾಗಿದೆ. 
ಪ್ರತಿ ಬಾರಿ ಒಂದಲ್ಲ ಒಂದು ಕಾರಣಕ್ಕೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಉತ್ತಮವಾಗಿ ಮಳೆಯಾಗಿ ಜಲಾಶಯ ಭರ್ತಿಯಾದರೂ ಸಹ ಹಲವು ಸಮಸ್ಯೆಗಳು ರೈತರನ್ನು ಕಾಡುತ್ತಿವೆ. ಈ ಬಾರಿ ಮಹಾಮಾರಿ ಕೊರೋನಾ ವೈರಸ್ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದ ನಂತರ ಶ್ರೀಸಾಮಾನ್ಯರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಇದೀಗ ಯುವ ಸಮೂಹ ಸಹ ಕೃಷಿ ಕಡೆ ಮುಖ ಮಾಡುತ್ತಿದೆ. ಲಾಭ-ನಷ್ಟ ಏನೇ ಇರಲಿ ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ರೈತರ ಭವಿಷ್ಯ ಎಲ್ಲರ ಕಡೆ ಗಮನ ಸೆಳೆದಿದೆ. 
ಜಲಾಶಯ ೧೮೬ ಅಡಿ ಗರಿಷ್ಠ ಮಟ್ಟ ತಲುಪಿದರೂ ಸಹ ಎಡ ಮತ್ತು ಬಲ ದಂಡೆ ನಾಲೆಗಳ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಜಲಾಶಯದ ನೀರು ಪೋಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹೆಚ್ಚಿನ ಗಮನ ಹರಿಸಿ ನೀರು ಪೋಲಾಗದಂತೆ ಎಚ್ಚರ ವಹಿಸಬೇಕಾಗಿದೆ. 
ಕಡಿಮೆ ಅವಧಿಯ ಬೆಳೆ ಬೆಳೆಯಲು ಸೂಕ್ತ ಸಮಯ: 
ಪ್ರಸ್ತುತ ತಾಲೂಕಿನಲ್ಲಿ ಮೆಕ್ಕೆ ಜೋಳ ಭಿತ್ತನೆ ಕಾರ್ಯ ಜೂನ್ ಅಂತ್ಯಕ್ಕೆ ಪೂರ್ಣಗೊಂಡಿದ್ದು, ಗರಿಷ್ಠ ೩-೪ ದಿನಗಳ ವರೆಗೆ ಮಾತ್ರ ಭಿತ್ತನೆ ಮಾಡಬಹುದಾಗಿದೆ. ಮೆಕ್ಕೆ ಜೋಳ ಬೆಳೆಗೆ ಇದೀಗ ಸೂಕ್ತ ವಾತಾವರಣವಿದ್ದು, ಮಳೆ ಬಿಟ್ಟು ಬಿಟ್ಟು ಬರುತ್ತಿರುವ ಕಾರಣ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ತಿಳಿಸಿದ್ದಾರೆ. 
ಭತ್ತದ ಬೆಳೆ ನಾಟಿ ಕಾರ್ಯಕ್ಕೆ ಇನ್ನೂ ಸಮಯವಿದ್ದು, ಜಲಾಶಯದಲ್ಲಿ ನೀರು ಕಳೆದ ಬಾರಿಗಿಂತ ಹೆಚ್ಚು ಸಂಗ್ರಹವಿದ್ದರೂ ಕಾಡಾ ಸಮಿತಿ ಕೈಗೊಳ್ಳುವ ನಿರ್ಧಾರದ ಮೇಲೆ ರೈತರು ಬೆಳೆ ಬೆಳೆಯಬೇಕಾಗಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆ ಕೊರತೆ ಕಂಡು ಬಂದಲ್ಲಿ ಇದಕ್ಕೆ ಅನುಗುಣವಾಗಿ ರೈತರು ಭತ್ತದ ಬೆಳೆ ಬೆಳೆಯಲು ಸೂಚಿಸಲಾಗುವುದು. ಕಡಿಮೆ ಅವಧಿ ೧೧೦ದಿನಗಳ ಬೆಳೆಗೆ ಸಂಬಂಧಿಸಿದ ಭತ್ತದ ಬೀಜ ೧೦೦೧ ಮತ್ತು ೧೦೧೦ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಇಲಾಖೆಯಲ್ಲಿ ಭತ್ತ, ರಾಗಿ ಮತ್ತು ತೊಗರಿ ಬೀಜ ದಾಸ್ತಾನು ಇದ್ದು, ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಉಳಿದಂತೆ ಗೊಬ್ಬರ ಸಹ ಸಾಕಷ್ಟು ಪ್ರಮಾಣದಲ್ಲಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದರು.