ಬುಧವಾರ, ಜುಲೈ 16, 2025

ಭದ್ರಾ ನದಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ೫೦ ಕೋ. ರು. ಅನುದಾನ

ಜಲಸಂಪನ್ಮೂಲ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ 

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿ
    ಭದ್ರಾವತಿ: ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಯ ಎಡ ಮತ್ತು ಬಲ ದಂಡೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ರಕ್ಷಿಸಲು ತಡೆಗೋಡೆ ನಿರ್ಮಿಸಲು ೫೦ ಕೋ. ರು. ಅನುದಾನ ಬಿಡುಗಡೆಗೊಳಿಸಲಾಗಿದ್ದು, ಈ ಸಂಬಂಧ ಜಲಸಂಪನ್ಮೂಲ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಕೆ. ಶುಭಾ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದಾರೆ. 
ಜು.೨ರ ಸಚಿವ ಸಂಪುಟ ಸಭೆಯ ನಿರ್ಣಯದಂತೆ ೫೦ ಕೋ.ರು. ಅಂದಾಜು ಮೊತ್ತದಲ್ಲಿ (೨೦೨೩-೨೪ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ತಡೆಗೋಡೆ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
    ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ೩ ಕಿ.ಮೀ ಹರಿಯುತ್ತಿದ್ದು, ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಾಗ ಹಲವಾರು ವರ್ಷಗಳಿಂದ ನದಿಯ ಎಡ ಮತ್ತು ಬಲ ಭಾಗದಲ್ಲಿರುವ ಅಂಬೇಡ್ಕರ್ ಕಾಲೋನಿ, ಗೌಳಿಗರ ಬೀದಿ, ಚಾಮೇಗೌಡ ಏರಿಯಾ, ಗುಂಡೂರಾವ್ ಶೆಡ್ ಮತ್ತು ಯಕಿನ್ಸಾ ಕಾಲೋನಿಗಳಲ್ಲಿ ವಾಸಿಸುತ್ತಿರುವ ಮನೆಗಳಿಗೆ ನೀರು ನುಗ್ಗಿ ಮನೆಗಳಿಗೆ ಹಾನಿ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ನದಿಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸುವಂತೆ ಬಹಳ ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ನಿರಂತರ ಪ್ರಯತ್ನದ ಫಲವಾಗಿ ಇದೀಗ ಬೇಡಿಕೆ ಈಡೇರಿದ್ದು, ಮಳೆಗಾಲ ಮುಕ್ತಾಯಗೊಂಡ ನಂತರ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ. 
    ಗೌಳಿಗರ ಬೀದಿಯಲ್ಲಿ ೪೦೦ ಮೀ., ಚಾಮೇಗೌಡ ಏರಿಯಾದಲ್ಲಿ ೪೦೦ ಮೀ., ಯಕಿನ್ಸಾ ಕಾಲೋನಿಯಲ್ಲಿ ೧೨೫ ಮೀ. ಮತ್ತು ಗುಂಡೂರಾವ್ ಶೆಡ್‌ನಲ್ಲಿ ೧೯೦ ಮೀ. ಸೇರಿದಂತೆ ಒಟ್ಟು ೧೧೧೫ ಮೀ. ತಡೆಗೋಡೆ ನಿರ್ಮಿಸಲಾಗುತ್ತಿದೆ.  

ಹಳೇನಗರ ಪೊಲೀಸರಿಂದ ೧ ಕೆ.ಜಿ ೧೪೦ ಗ್ರಾಂ ಗಾಂಜಾ ವಶ

ಭದ್ರಾವತಿ ಹೊಳೆಹೊನ್ನೂರು ರಸ್ತೆ ಸೀಗೇಬಾಗಿ ಕ್ರಾಸ್ ಬಸ್ ನಿಲ್ದಾಣದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ೧ ಕೆ.ಜಿ ೧೪೦ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಭದ್ರಾವತಿ : ಬಸ್ ನಿಲ್ದಾಣದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ೧ ಕೆ.ಜಿ ೧೪೦ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಹೊಳೆಹೊನ್ನೂರು ರಸ್ತೆ ಸೀಗೇಬಾಗಿ ಕ್ರಾಸ್ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಠಾಣಾ ಉಪ ನಿರೀಕ್ಷಕ ಸುನೀಲ್ ಬಿ ತೇಲಿಯವರ ನೇತೃತ್ವದಲ್ಲಿ ಜು.೧೨ರಂದು ಮಧ್ಯಾಹ್ನ ದಾಳಿ ನಡೆಸಲಾಗಿದ್ದು, ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಗರಾಜ್ ಮತ್ತು ಕಾರ್ತಿಕ್‌ರನ್ನು ಬಂಧಿಸಿ ಇವರಿಂದ ಸುಮಾರು ೨೦ ಸಾವಿರ ರು. ಮೌಲ್ಯದ ೧ ಕೆ.ಜಿ ೧೪೦ ಗ್ರಾಂ. ತೂಕದ ಗಾಂಜಾ ಮತ್ತು ಗಾಂಜಾ ಮಾರಾಟದಿಂದ ಬಂದ ರು.೧,೫೦೦ ನಗದು ಹಾಗು ಸುಮಾರು ೬೦ ಸಾವಿರ ರು. ಮೌಲ್ಯದ ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಕಾರ್ಯಾಚರಣೆಯಲ್ಲಿ ನಗರಸಭೆ ಸಿಬ್ಬಂದಿಗಳಾದ ಆಶಾಲತಾ, ರವಿ, ಜಿಲ್ಲಾ ಸಹಾಯಕ ಡ್ರಗ್ ಕಂಟ್ರೋಲರ್ ಡಾ. ವೀರೇಶ್ ಬಾಬು,  ಪೊಲೀಸ್ ಸಿಬ್ಬಂದಿಗಳಾದ ಹಾಲಪ್ಪ, ಚಿನ್ನನಾಯ್ಕ, ಚಿಕ್ಕಪ್ಪ, ಮೌನೇಶ, ಪ್ರಪ್ಪೂಲ್, ರಾಘವೇಂದ್ರ, ಚಂದ್ರು, ವೀರನಗೌಡ, ಮಂಜುನಾಥ ಮತ್ತು ಶಬ್ಬಿರ್ ಪಾಲ್ಗೊಂಡ್ಡಿದ್ದರು. 

ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ೨೦-೨೫ ವರ್ಷಗಳಿಂದ ಕಾಣೆಯಾದ ಮಹಿಳೆಯರ ಮಾಹಿತಿ ನೀಡಿ : ಎಸ್. ಮಂಜುನಾಥ್

ಎಸ್. ಮಂಜುನಾಥ್   
    ಭದ್ರಾವತಿ : ನಗರದ ಜನ್ನಾಪುರ ನಿವಾಸಿ, ಕೆಪಿಸಿಸಿ ರಾಜ್ಯ ಸಂಚಾಲಕ ಎಸ್. ಮಂಜುನಾಥ್‌ರವರು ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ೨೦-೨೫ ವರ್ಷಗಳಿಂದ ಕಾಣೆಯಾಗಿರುವ ಒಟ್ಟು ಮಹಿಳೆಯರು ಹಾಗು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರ ಅಂಕಿ-ಅಂಶ ಮಾಹಿತಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 
    ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿರುತ್ತಾರೆ. ಅಲ್ಲದೆ ಜು.೧೨ರಂದು ಮನುಷ್ಯರೊಬ್ಬರ ತಲೆ ಬುರುಡೆ ಕೊರಕಿದ ಬಗ್ಗೆ ಹಾಗು ನಾಪತ್ತೆಯಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಗಮನಕ್ಕೆ ಬಂದಿರುತ್ತದೆ.
    ಈ ಹಿನ್ನಲೆಯಲ್ಲಿ ಕಳೆದ ೨೦-೨೫ ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ಒಟ್ಟು ಮಹಿಳೆಯರ ಹಾಗು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಅಂಕಿ-ಅಂಶಗಳು  ಹಾಗು ಕೈಗೊಂಡ ಕ್ರಮಗಳು, ಪತ್ತೆ ಮಾಡಲಾದ ಮತ್ತು ಪತ್ತೆ ಮಾಡಲಾಗದ ಹಾಗು ಅತ್ಯಾಚಾರ ಪ್ರಕರಣಗಳ ಮಾಹಿತಿ ನೀಡುವಂತೆ ಎಸ್. ಮಂಜುನಾಥ್ ಕೋರಿದ್ದಾರೆ.