Wednesday, December 20, 2023

ಕೋವಿಡ್-೧೯ ಮುಂಜಾಗ್ರತೆ ವಹಿಸಿ, ಆರೋಗ್ಯ ರಕ್ಷಿಸಿಕೊಳ್ಳಿ : ಶಾಸಕ ಬಿ.ಕೆ.ಸಂಗಮೇಶ್ವರ್ ಮನವಿ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕೋವಿಡ್-೧೯ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
    ಭದ್ರಾವತಿ: ರಾಜ್ಯದಲ್ಲೂ ಕೋವಿಡ್-೧೯ ಉಪತಳಿ ಜೆ.ಎನ್.೧ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಮನವಿ ಮಾಡಿದರು.
     ಅವರು ಬುಧವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್-೧೯ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
    ಕ್ಷೇತ್ರದಲ್ಲಿ ಜನರ ಸುರಕ್ಷತೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಜನರು ಜವಾಬ್ದಾರಿಯಿಂದ ತಮ್ಮ ಸುರಕ್ಷತೆಗೆ ಗಮನವಹಿಸಬೇಕು. ೬೦ವರ್ಷ ಮೇಲ್ಪಟ್ಟವರು ಮತ್ತು ಗರ್ಭೀಣಿ ಸ್ತ್ರೀಯರು ಗಾಳಿ ಬೆಳಕು ಉತ್ತಮವಾಗಿರುವಂತಹ ಸುರಕ್ಷತೆಯ ಸ್ಥಳದಲ್ಲಿರಬೇಕು. ಅನಗತ್ಯ ಓಡಾಟ ಸರಿಯಲ್ಲ ಎಂದರು.
    ಬೆಂಕಿ ಬಿದ್ದಾಗ ಬಾವಿ ತೋಡುವುದು ಬೇಡ. ಮೊದಲೇ ಸುರಕ್ಷತೆ ಬಗ್ಗೆ ವೈದ್ಯಾಧಿಕಾರಿಗಳು ಗಮನಹರಿಸಿ. ಇಡೀ ರಾಜ್ಯದಲ್ಲಿ ವೈದ್ಯರ ಕೊರತೆಯಿದೆ. ಆದ್ದರಿಂದ ಸಮಸ್ಯೆ ಹೇಳದೆ ವ್ಯವಸ್ಥೆಗೆ ಮುಂದಾಗಿ. ನಾನು ಸಹ ಜಿಲ್ಲಾ ಆರೋಗ್ಯಾಧಿಕಾರಿ ಹಾಗು ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತೇನೆ ಎಂದರು.
    ತಾಲೂಕು ವೈದ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಎಲ್ಲರಿಗೂ ಪರೀಕ್ಷೆ ಕಡ್ಡಾಯವಲ್ಲ. ಆದರೆ ಶೀತ, ನೆಗಡಿ ಇರುವವರು ಮತ್ತು ಹೊರದೇಶಗಳಿಂದ ಬಂದವರಿಗೆ ಪರೀಕ್ಷೆ ಕಡ್ಡಾಯಗೊಳಿಸಲಾವುದು. ಸಾರ್ವಜನಿಕರು ಸಭೆ ಸಮಾರಂಭಗಳಲ್ಲಿ ಮಾಸ್ಕ್ ಧರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್ ಮಾತನಾಡಿ, ಕ್ಷೇತ್ರ ಹೆಚ್ಚಿನ ಜನಸಂಖ್ಯೆ ಹೊಂದಿದೆ.  ಆರೋಗ್ಯ ಸೇವೆ ಸಮರ್ಪಕವಾಗಿ ಒದಗಿಸಲು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ ಇದ್ದು, ಪ್ರಸ್ತುತ ಸ್ಟಾಪ್ ನರ್ಸ್‌ಗಳು, ಅನಸ್ತೇಷಿಯ ತಜ್ಞರು, ಮೂವರು ಫಿಜಿಷನ್ ವೈದ್ಯರ ಅಗತ್ಯವಿರುವುದಾಗಿ ಸಭೆಗೆ ಮಾಹಿತಿ ನೀಡಿದರು. ಉಳಿದಂತೆ ಆಕ್ಸಿಜನ್ ಕೊರತೆಯಿಲ್ಲ. ೧೦೦ಹಾಸಿಗೆಯ ಆಸ್ಪತ್ರೆಯಲ್ಲಿ ೯೮ ಹಾಸಿಗೆಗಳಿಗೆ ಆಮ್ಲಜನಕದ ವ್ಯವಸ್ಥೆ ಅಳವಡಿಸಲಾಗಿದೆ ಎಂದರು.
    ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ತಹಸೀಲ್ದಾರ್ ಕೆ.ಆರ್ ನಾಗರಾಜು, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಉಪಸ್ಥಿತರಿದ್ದರು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಉಪತಹಸೀಲ್ದಾರ್   ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್, ನಗರಸಭೆ ಸದಸ್ಯರಾದ ಚನ್ನಪ್ಪ, ಲತಾಚಂದ್ರಶೇಖರ್, ಟಿಪ್ಪು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನಗರಸಭೆ ನೂತನ ಪೌರಾಯುಕ್ತರಾಗಿ ಪ್ರಕಾಶ್ ಎಂ. ಚನ್ನಪ್ಪನವರ್

ಪ್ರಕಾಶ್ ಎಂ. ಚನ್ನಪ್ಪನವರ್
    ಭದ್ರಾವತಿ: ನಗರಸಭೆ ಪೌರಾಯುಕ್ತರಾಗಿ ಕರ್ನಾಟಕ ಪೌರಾಡಳಿತ ಇಲಾಖೆ ಗ್ರೇಡ್-೧ ಅಧಿಕಾರಿ ಪ್ರಕಾಶ್ ಎಂ. ಚನ್ನಪ್ಪನವರ್ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
    ಬೆಳಗಾವಿ ಜಿಲ್ಲೆ ಸವದತ್ತಿ ಪುರಸಭೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚನ್ನಪ್ಪನವರ್ ಅವರನ್ನು ಸರ್ಕಾರ ಪೌರಾಯುಕ್ತ ಹುದ್ದೆಗೆ ವರ್ಗಾವಣೆಗೊಳಿಸಿದ್ದು, ನಗರಸಭೆ ವ್ಯವಸ್ಥಾಪಕಿ ಸುನೀತಾ ಕುಮಾರಿ ಅವರಿಂದ ಅಧಿಕಾರ ಹಸ್ತಾಂತರಿಸಿಕೊಂಡರು.
ಈ ಹಿಂದೆ ಪೌರಾಯುಕ್ತರಾಗಿದ್ದ ಎಚ್.ಎಂ ಮನುಕುಮಾರ್ ಅವರನ್ನು ಸರ್ಕಾರ ನೆಲಮಂಗಲ ನಗರಸಭೆಗೆ ವರ್ಗಾವಣೆಗೊಳಿಸಿದ ಹಿನ್ನಲೆಯಲ್ಲಿ ಕಳೆದ  ಕೆಲವು ದಿನಗಳಿಂದ ಹುದ್ದೆ ಖಾಲಿಯಾಗಿ ಉಳಿದಿತ್ತು.
    ನೂತನ ಪೌರಾಯುಕ್ತ ಚನ್ನಪ್ಪನವರನ್ನು ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಸೇರಿದಂತೆ ಸದಸ್ಯರು ಸ್ವಾಗತಿಸಿ ಅಭಿನಂದಿಸಿದ್ದಾರೆ.

ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಒಂದೇ ಕುಟುಂಬದ ಮೂವರ ಸಾಧನೆ

೩ ತಿಂಗಳ ಅಭ್ಯಾಸ, ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ

ಭದ್ರಾವತಿ ಸಿ.ಎನ್ ರಸ್ತೆ ನಿವಾಸಿ ವೈ. ನಟರಾಜ್ ಕುಟುಂಬ ಸದಸ್ಯರು ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಬಹುಮಾನ ಪಡೆದುಕೊಂಡಿದ್ದಾರೆ.
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಂದೇ ಕುಟುಂಬದ ಮೂವರು ಭಾಗವಹಿಸಿ ಬಹುಮಾನ ಪಡೆಯುವ ಮೂಲಕ ಗಮನಸೆಳೆದಿದ್ದಾರೆ.
ಈ ಕುಟುಂಬದ ಸದಸ್ಯರು ಕಳೆದ ೩ ತಿಂಗಳಿನಿಂದ ಪವರ್ ಲಿಪ್ಟಿಂಗ್ ಅಭ್ಯಾಸದಲ್ಲಿ ತೊಡಗಿದ್ದು, ಕಡಿಮೆ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪವರ್ ಲಿಪ್ಟಿಂಗ್ ಕ್ಷೇತ್ರದಲ್ಲಿ ಸಾಧನೆಯ ಪಯಣಕ್ಕೆ ಮುನ್ನುಡಿ ಬರೆದಿದ್ದಾರೆ.  
    ನಗರದ ಸಿ.ಎನ್ ರಸ್ತೆ ನಿವಾಸಿ ವೈ. ನಟರಾಜ್ ಕುಟುಂಬ ಸದಸ್ಯರು ಇಂತಹದೊಂದು ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಕಾರಂತ್ ಜಿಮ್ ವ್ಯಾಯಾಮ ಶಾಲೆಯಲ್ಲಿ ಕಳೆದ ೩ ತಿಂಗಳ ಹಿಂದೆ ತರಬೇತಿ ಆರಂಭಿಸಿದ ನಟರಾಜ್ ಕುಟುಂಬ ಸದಸ್ಯರು ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಡೆದಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.
    ೧೨೦ ಕೆ.ಜಿ ತೂಕದ ವಿಭಾಗದಲ್ಲಿ ವೈ. ನಟರಾಜ್ ತೃತೀಯ ಸ್ಥಾನ, ಇವರ ಪತ್ನಿ ಡಿ. ಸೌಮ್ಯ ೮೪ ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ ಹಾಗು ಈ ದಂಪತಿಗಳ ಕಿರಿಯ ಪುತ್ರ ಎನ್. ಮನ್ವಿತ್ ೫೩ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರ ಹಿರಿಯ ಪುತ್ರ ಎನ್. ಪೂಜಿತ   ಸಹ ಕಳೆದ ಮೂರು ತಿಂಗಳ ಹಿಂದೆ ಅಭ್ಯಾಸ ಆರಂಭಿಸಿದ್ದು, ಒಂದು ಜಿಲ್ಲಾ ಮಟ್ಟದ ಸ್ಪರ್ಧೆ ಹಾಗು ಒಂದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾನೆ.
    ಒಟ್ಟಾರೆಯಾಗಿ ಕಳೆದ ೩ ತಿಂಗಳ ಹಿಂದೆ ಪವರ್ ಲಿಪ್ಟಿಂಗ್ ತರಬೇತಿ ಪಡೆದ ನಟರಾಜ್ ಕುಟುಂಬ ಸದಸ್ಯರು ಕೆಲವೇ ತಿಂಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ.  

ಹಾಡುಹಗಲೇ ಮದ್ಯದಂಗಡಿಯಲ್ಲಿ ಆಟೋಚಾಲಕನ ಹತ್ಯೆ : ಪೊಲೀಸರ ಮುಂಚಿನ ಕಾರ್ಯಾಚರಣೆ ಮೂವರ ಸೆರೆ

ಭದ್ರಾವತಿ: ನಗರದ ಬಿ.ಹೆಚ್.ರಸ್ತೆಯ ಭದ್ರಾವೈನ್ಸ್ ಮದ್ಯದಂಗಡಿಯಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆಗೈದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದ್ದು, ಅಂಗಡಿ ಮುಂಭಾಗ ಜನಸಂದಣಿ ಕಂಡು ಬಂದಿತು.
    ಭದ್ರಾವತಿ: ನಗರದ ಬಿ.ಹೆಚ್.ರಸ್ತೆಯ ಭದ್ರಾವೈನ್ಸ್ ಮದ್ಯದಂಗಡಿಯಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆಗೈದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
    ಹತ್ಯೆಯಾದ ವ್ಯಕ್ತಿ ಹಿರಿಯೂರು ಗ್ರಾಮದ ನಿವಾಸಿ, ಆಟೋಚಾಲಕ ಹೇಮಂತ್(೪೦) ಅಲಿಯಾಸ್ ಕರಿಚುಕ್ಕಿ ಎಂಬುದಾಗಿ ಗುರುತಿಸಲಾಗಿದೆ. ಈತ ಮಧ್ಯಾಹ್ನ ೧೧.೩೦ರ ಸುಮಾರಿಗೆ ಮದ್ಯದಂಗಡಿಯಲ್ಲಿ ಕುಳಿತಿರುವ ವೇಳೆ ಈ ಕೃತ್ಯ ನಡೆದಿದೆ.
    ಹಳೆದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ.  ಬೊಮ್ಮನಕಟ್ಟೆ ಗ್ರಾಮದ ಮುಬಾರಕ್, ಸತ್ಯಾನಂದ, ಕಲೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಘಟನೆ ಕುರಿತಂತೆ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.