Friday, July 11, 2025

ಪೋಡಿಮುಕ್ತ ಗ್ರಾಮ ಯೋಜನೆಗೆ ವೇಗ, ಇ-ಪೌತಿ ಖಾತೆ ವಿತರಣೆ, ದಾಖಲೆಗಳ ಡಿಜಿಟಲೀಕರಣ : ತಹಸೀಲ್ದಾರ್ ಪರುಸಪ್ಪ ಕುರುಬರ

ಭದ್ರಾವತಿ ತಹಸೀಲ್ದಾರ್ ಪರುಸಪ್ಪ ಕುರುಬರ 
    ಭದ್ರಾವತಿ : ತಾಲೂಕಿನಾದ್ಯಂತ ಸುಮಾರು ೮೦೦ ಪೋಡಿ ಖಾತೆ ಪ್ರಕರಣಗಳನ್ನು ಗುರುತಿಸಲಾಗಿದ್ದು, ಕೇವಲ ೬ ತಿಂಗಳಲ್ಲಿ ಈ ಪೈಕಿ ಸುಮಾರು ೩೦೦ಕ್ಕೂ ಹೆಚ್ಚು ಪ್ರಕರಣಗಳನ್ನು ಬಗೆಹರಿಸಿ ಪೋಡಿಮುಕ್ತ ಗ್ರಾಮಗಳಾಗಿ ಘೋಷಿಸಲಾಗಿದೆ. ಈ ಮೂಲಕ ಕಂದಾಯ ಸಚಿವರಾದ ಕೃಷ್ಣಭೈರೇಗೌಡರವರ ಮಹತ್ವಾಕಾಂಕ್ಷೆ ಯೋಜನೆಗಳಿಗೆ ತಾಲೂಕಿನಲ್ಲಿ ವೇಗ ನೀಡಲಾಗಿದೆ ಎಂದು ತಹಸೀಲ್ದಾರ್ ಪರುಸಪ್ಪ ಕುರುಬರ ತಿಳಿಸಿದರು. 
    ಅವರು ಶುಕ್ರವಾರ ಈ ಕುರಿತು ತಮ್ಮ ಕಛೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿ, ಉಳಿದ ಪ್ರಕರಣಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ತಾಲೂಕಿನಲ್ಲಿ ಯೋಜನೆ ಯಶಸ್ವಿಗೊಳಿಸಲಾಗುವುದು ಎಂದರು. 
    ಕಂದಾಯ ಇಲಾಖೆ ಅಗತ್ಯ ಇರುವ ಕಡೆಗಳಲ್ಲಿ ಅರಣ್ಯ ಇಲಾಖೆ ನೆರವು ಪಡೆಯಲಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು.  ಈ ಯೋಜನೆ ಅನುಷ್ಠಾನದಿಂದಾಗಿ ಕಚೇರಿಗಳಿಗೆ ವೃಥಾ ಅಲೆದಾಟ, ಮಧ್ಯವರ್ತಿಗಳ ಹಾವಳಿ ತಪ್ಪಲಿದ್ದು, ಬಹುವರ್ಷಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
    ಇ-ಪೌತಿ ಖಾತೆ ಆಂದೋಲನ:
    ರಾಜ್ಯ ಸರ್ಕಾರ ಇ-ಪೌತಿ ಆಂದೋಲನ ಜಾರಿಗೊಳಿಸಿದ್ದು, ಭದ್ರಾವತಿ ತಾಲೂಕಿನಲ್ಲಿ ಜಮೀನಿಗೆ ಸಂಬಂಧಪಟ್ಟಂತೆ ಸುಮಾರು ೭ ಸಾವಿರ ಪೌತಿ ಖಾತೆಗಳನ್ನು ಗುರುತಿಸಲಾಗಿದ್ದು, ಮನೆ-ಮನೆಗೆ ತೆರಳಿ ದಾಖಲೆ ಸಂಗ್ರಹಿಸಿ ವಾರಸುದಾರರಿಗೆ ಪೌತಿ ಖಾತೆಯನ್ನು ಮಾಡಿ ಕೊಡಲಾಗುವುದು, ರೈತ ಬಾಂಧವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದರು.
    ಭೂ ಸುರಕ್ಷಾ ಯೋಜನೆ
    ಸರ್ಕಾರಿ ಆಸ್ತಿಗಳನ್ನು ಗುರುತಿಸಿ ದಾಖಲಿಸುವ ಭೂ ಸುರಕ್ಷಾ ಯೋಜನೆ ಈಗಾಗಲೇ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಕೆರೆ ಸೇರಿದಂತೆ ಸರ್ಕಾರಿ ಆಸ್ತಿಗಳ ಒತ್ತುವರಿ ತೆರವು ಕಾರ್ಯ ನಡೆಯಲಿದೆ ಎಂದರು.
    ದಾಖಲೆ ಡಿಜಿಟಲೀಕರಣ : 
    ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿರುವ ಎಲ್ಲಾ ರೀತಿಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಕಳೆದ ೬ ತಿಂಗಳ ಅವಧಿಯಲ್ಲಿ ೯ ಲಕ್ಷ ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇನ್ನೂ ಸುಮಾರು ೮೦ ಲಕ್ಷ ಪುಟಗಳ ಡಿಜಿಟಲೀಕರಣ ಬಾಕಿ ಉಳಿದಿದೆ.  ಮುಂದಿನ ೨ ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದರು.
    ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಛೇರಿ, ಲ್ಯಾಪ್‌ಟ್ಯಾಪ್ :  
    ತಾಲೂಕಿನಲ್ಲಿ ಒಟ್ಟು ೨೬ ಜನ ಗ್ರಾಮ ಲೆಕ್ಕಾಧಿಕಾರಿಗಳಿದ್ದು, ಈ ಪೈಕಿ ೨೧ ಜನರಿಗೆ ಈಗಾಗಲೇ ಲ್ಯಾಪ್‌ಟ್ಯಾಪ್ ವಿತರಿಸಲಾಗಿದೆ. ಸುಮಾರು ೧೫ ಜನರಿಗೆ ಆಯಾ ಭಾಗದ ಗ್ರಾಮ ಪಂಚಾಯಿತಿ ಹಾಗು ನಾಡಕಛೇರಿಗಳಲ್ಲಿ  ಕಛೇರಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಜನರು ನೇರವಾಗಿ ತಾಲೂಕು ಕಛೇರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು. 
    ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕ ಉಪಸ್ಥಿತರಿದ್ದರು.

ಭದ್ರೆ ಭರ್ತಿಗೆ ೧೦ ಅಡಿ ಬಾಕಿ ಇರುವಾಗಲೇ ನದಿಗೆ ನೀರು

ವೈಭವ ಕಣ್ತುಬ್ಬಿಕೊಳ್ಳಲು ಜಲಾಶಯದ ಬಳಿ ಜನಸಾಗರ, ನದಿಪಾತ್ರದ ಜನರಿಗೆ ಎಚ್ಚರಿಕೆ 

ಭದ್ರಾವತಿ ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ ಭರ್ತಿಯಾಗಲು ಇನ್ನೂ ೧೦ ಅಡಿ ಬಾಕಿ ಉಳಿದಿದ್ದು, ಈ ನಡುವೆ ಶುಕ್ರವಾರ ಸಂಜೆಯಿಂದ ಸುಮಾರು ೩,೫೦೦ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. 
    ಭದ್ರಾವತಿ: ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ ಭರ್ತಿಯಾಗಲು ಇನ್ನೂ ೧೦ ಅಡಿ ಬಾಕಿ ಉಳಿದಿದ್ದು, ಈ ನಡುವೆ ಶುಕ್ರವಾರ ಸಂಜೆಯಿಂದ ಸುಮಾರು ೩,೫೦೦ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. 
    ೧೮೬ ಅಡಿ ಸಾಮಥ್ಯದ ಜಲಾಶಯದಲ್ಲಿ ಪ್ರಸ್ತುತ ೧೭೪.೭ ಅಡಿ ನೀರು ಸಂಗ್ರಹವಾಗಿದೆ. ಸುಮಾರು ೧೨ ಸಾವಿರ ಕ್ಯೂಸೆಕ್ ನೀರು ಒಳಹರಿವಿದ್ದು, ೩,೫೦೦ ಕ್ಯೂಸೆಕ್ ನೀರಿನಲ್ಲಿ ೧,೩೦೦ ಕ್ಯೂಸೆಕ್ ನೀರನ್ನು ೪ ಕ್ರಸ್ಟ್ ಗೇಟ್‌ಗಳ ಮೂಲಕ ಹಾಗು ಉಳಿದ ೨,೨೦೦ ಕ್ಯೂಸೆಕ್ ನೀರು ರಿವರ್ ಬೆಡ್ ಮೂಲಕ ನದಿಗೆ ಬಿಡಲಾಗುತ್ತಿದೆ. ಕಳೆದ ವರ್ಷ ಇದೆ ದಿನ ೧೩೬ ಅಡಿ ನೀರು ಸಂಗ್ರಹವಾಗಿತ್ತು. 
    ಜಲಾಶಯದ ವೈಭವ ಕಣ್ತುಬ್ಬಿಕೊಳ್ಳಲು ಹರಿದು ಬರುತ್ತಿರುವ ಜನಸಾಗರ :
    ಜಲಾಶಯದಿಂದ ನದಿಗೆ ನೀರು ಹರಿಸಿದಾಗ ಹಾಲ್ನೊರೆಯಂತೆ ಧುಮುಕುವ ನೀರಿನ ವೈಭವ ಕಣ್ತುಬ್ಬಿಕೊಳ್ಳಲು ಪ್ರತಿ ವರ್ಷ ಜಲಾಶಯದ ಬಳಿ ಜನಸಾಗರ ಹರಿದು ಬರುತ್ತಿದ್ದು, ಈ ಬಾರಿ ಸಹ ಜನರು ಜಲಾಶಯದ ಬಳಿ ನೀರಿನ ವೈಭವ ಕಣ್ತುಬ್ಬಿಕೊಂಡು ಸಂಭ್ರಮಿಸಿದರು. ಅಲ್ಲದೆ ಕೆಲವರು ತಮ್ಮ ಮೊಬೈಲ್‌ಗಳಲ್ಲಿ ದೃಶ್ಯ ಸೆರೆ ಹಿಡಿದುಕೊಂಡರೇ, ಮತ್ತೆ ಕೆಲವರು ಸೆಲ್ಪಿ ಕ್ಲಿಕ್ಕಿಸಿಕೊಂಡರು, ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಜಲಾಶಯದ ವೈಭವ ಹಂಚಿಕೊಂಡು ಸಂಭ್ರಮಿಸಿದರು. 
    ನದಿಪಾತ್ರದ ನಿವಾಸಿಗಳಿಗೆ ಎಚ್ಚರಿಕೆ : 
    ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ವ್ಯಾಪಾಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಜಲಾಶಯದ ಸುರಕ್ಷತೆ ಹಿನ್ನಲೆಯಲ್ಲಿ ನದಿಗೆ ನೀರನ್ನು ಹೊರಬಿಡಲಾಗುತ್ತಿದೆ. ನದಿಪಾತ್ರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗು ನದಿಪಾತ್ರದಲ್ಲಿ ಯಾರು ಸಹ ತಿರುಗಾಡುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಪಾತ್ರೆ ತೊಳೆಯುವುದಾಗಲಿ, ಜಾನುವಾರುಗಳನ್ನು ಮೇಯಿಸುವುದಾಗಲಿ ಮಾಡಬಾರದು. ನದಿಪಾತ್ರದಲ್ಲಿ ಸಂಚಾರ ನಿಷೇಧಿಸಲಾಗಿದೆ ಎಂದು ಎಚ್ಚರಿಸಲಾಗಿದೆ. 
    ತಾಲೂಕು ಆಡಳಿತದಿಂದ ಪ್ರವಾಹ ಎದುರಿಸಲು ಸಿದ್ದತೆ: 
    ಪ್ರತಿ ವರ್ಷ ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುವ ಸಂದರ್ಭದಲ್ಲಿ ಪ್ರವಾಹ ಉಂಟಾಗಿ ನಗರದ ಹೃದಯ ಭಾಗದಲ್ಲಿರುವ ತಗ್ಗು ಪ್ರದೇಶಗಳಿಗೆ ಹಾಗು ಹೊಳೆಹೊನ್ನೂರು ಭಾಗದಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ ತಗ್ಗು ಪ್ರದೇಶದ ನಿವಾಸಿಗಳನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. 
ಈ ಬಾರಿ ಸಹ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದಲ್ಲಿ ಸಮಸ್ಯೆ ಎದುರಾಗಲಿದ್ದು, ಈ ಹಿನ್ನಲೆಯಲ್ಲಿ ಈಗಾಗಲೇ ತಾಲೂಕು ಆಡಳಿತ ನಗರಸಭೆ ಹಾಗು ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ಪ್ರವಾಹ ಎದುರಿಸಲು ಸಿದ್ದತೆಗಳನ್ನು ಕೈಗೊಂಡಿದೆ. ಈ ಕುರಿತು ತಹಸೀಲ್ದಾರ್ ಪರುಸಪ್ಪ ಕುರುಬರ ಶುಕ್ರವಾರ ಮಾಹಿತಿ ನೀಡಿ, ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ. 
 

ಜಿ.ಪಂ. ಮಾಜಿ ಅಧ್ಯಕ್ಷ ಅತ್ತಿಗುಂದ ಚಂದ್ರಶೇಖರಯ್ಯ ನಿಧನ

ಅತ್ತಿಗುಂದ ಚಂದ್ರಶೇಖರಯ್ಯ 
    ಭದ್ರಾವತಿ : ತಾಲೂಕಿನ ಅರಳಿಹಳ್ಳಿ ಗ್ರಾಮದ ನಿವಾಸಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅತ್ತಿಗುಂದ ಚಂದ್ರಶೇಖರಯ್ಯ(೭೩) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ಪುತ್ರಿ ಹಾಗು ಇಬ್ಬರು ಪುತ್ರರು ಇದ್ದಾರೆ. ಇವರ ಅಂತ್ಯಕ್ರಿಯೆ ಸಂಜೆ ಅರಳಿಹಳ್ಳಿ ಗ್ರಾಮದಲ್ಲಿರುವ ಅವರ ತೋಟದಲ್ಲಿ ನೆರವೇರಿತು. ಚಂದ್ರಶೇಖರಯ್ಯರವರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಅಭಿಮಾನಿಯಾಗಿದ್ದು, ಅವರ ಮಾರ್ಗದರ್ಶನದಲ್ಲಿ ರಾಜಕೀಯ ಆರಂಭಿಸಿದ್ದರು. ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಒಂದೇ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಬಂಗಾರಪ್ಪನವರು ಸೇರ್ಪಡೆಗೊಂಡ ಪಕ್ಷಗಳಿಗೆ ಇವರು ಸಹ ಸೇರ್ಪಡೆಗೊಳ್ಳುತ್ತಿದ್ದರು. ಬಂಗಾರಪ್ಪನವರ ನಿಧನದ ನಂತರ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. 
    ಇವರ ನಿಧನಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಮೆಸ್ಕಾಂ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.