Wednesday, October 18, 2023

ಶತಮಾನೋತ್ಸವ ಆಚರಣೆ ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟ

ವಿಐಎಸ್‌ಎಲ್ ಶತಮಾನೋತ್ಸವ ಸಂಘ ಸಂಸ್ಥೆಗಳ ಪೂರ್ವಭಾವಿ ಸಭೆಯಲ್ಲಿ ನಟ ದೊಡ್ಡಣ್ಣ

ಭದ್ರಾವತಿ ನ್ಯೂಟೌನ್ ಶಾರದಾ ಮಂದಿರದಲ್ಲಿ ನಡೆದ ವಿಐಎಸ್‌ಎಲ್ ಶತಮಾನೋತ್ಸವ ಆಚರಣಾ ಪೂರ್ವಭಾವಿ ಸಭೆಯಲ್ಲಿ ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿದರು.
    ಭದ್ರಾವತಿ: ಮೈಸೂರು ಮಹಾರಾಜರು ಆರಂಭಿಸಿದ ವಿಐಎಸ್‌ಎಲ್ ಕಾರ್ಖಾನೆ ಇದೀಗ ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ನಮ್ಮನ್ನಾಳುವವರ ಕಣ್ಣು ತೆರೆಸಲು ಕಾರ್ಖಾನೆಯ ಅನ್ನತಿಂದು ಬೆಳೆದ ಸಮಾನ ಮನಸ್ಕರು ಒಗ್ಗೂಡಿ ಚಿಂತಿಸಿದ ಫಲವಾಗಿ ಶತಮಾನೋತ್ಸವ ಆಚರಣೆ ರೂಪುಗೊಂಡಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಶತಮಾನೋತ್ಸವ  ಹಬ್ಬದ ರೀತಿಯಲ್ಲಿ ಆಚರಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.
    ಅವರು ಬುಧವಾರ ನ್ಯೂಟೌನ್ ಶಾರದಾ ಮಂದಿರದಲ್ಲಿ ಆಯೋಜಿಸಿದ್ದ ಸಂಘ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿ,  ನ: ೩ ರಿಂದ ೫ ರವರೆಗೆ ಆಯೋಜಿಸಿರುವ ಅದ್ದೂರಿ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ೧೨ ಸಮಿತಿಗಳನ್ನು ರಚಿಸಲಾಗಿದೆ. ಆಸಕ್ತರು ಸ್ವಇಚ್ಚೆಯಿಂದ ಆ ಸಮಿತಿಗಳಲ್ಲಿ ಸೇರಿಕೊಂಡು ನಮ್ಮ ಮನೆಯ ಹಬ್ಬವೆಂದುಕೊಂಡು ಸೇವೆ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿದರು.
    ಶತಮಾನೋತ್ಸವಕ್ಕೆ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಆಗಮಿಸಲು ಒಪ್ಪಿದ್ದಾರೆ. ರಾಷ್ಟ್ರಪತಿ ಮುರ್ಮು, ಪ್ರಧಾನ ಮಂತ್ರಿಗಳನ್ನು ಆಹ್ವಾನಿಸಲು ಸತತ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಜ್ಯೋತಿರಾದಿತ್ಯ ಸಿಂಧ್ಯಾ, ಪ್ರಹ್ಲಾದ ಜೋಷಿ, ನಾರಾಯಣಸ್ವಾಮಿ, ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ, ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಕೆ.ಸಂಗಮೇಶ್ವರ್ ಸೇರಿದಂತೆ ಸರ್ಕಾರದ ಎಲ್ಲಾ ಸಚಿವರು, ವಿಧಾನಸಭೆ ಹಾಗು ವಿಧಾನಪರಿಷತ್ ಅಧ್ಯಕ್ಷರು, ಸದಸ್ಯರನ್ನು ಈಗಾಗಲೇ ಆಹ್ವಾನಿಸಲಾಗಿದೆ ಎಂದರು.
    ಬೆಂಗಳೂರು ಜಯದೇವ ಆಸ್ಪತ್ರೆಯ ಡಾ. ಸಿ. ಮಂಜುನಾಥ್, ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಉದ್ಯಮಿಗಳಾದ ವಿಜಯಸಂಕೇಶ್ವರ್, ಪ್ರಭಾಕರ ಕೋರೆ ಮುಂತಾದವರನ್ನು ಗೌರವಿಸಲಾಗುವುದು. ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಕೋಡಿಮಠದ ಶ್ರೀಗಳು, ಆದಿಚುಂಚನಗಿರಿ ಮಠದ ನಿರ್ಮಲಾ ನಂದನಾಥ ಸ್ವಾಮೀಜಿ ಸಾನಿಧ್ಯವಹಿಸುವರು ಎಂದರು.
    ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾವಾದಿ, ಶತಮಾನೋತ್ಸವ ಆಚರಣೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ವಿ.ರೇವಣಸಿದ್ದಯ್ಯ ಮಾತನಾಡಿ, ಕಾರ್ಖಾನೆಯಲ್ಲಿ ಅನ್ನ ತಿಂದ ನಾವೆಲ್ಲರೂ ಕೂಡಿ ಕಾರ್ಖಾನೆಗೆ ಕಾಯಕಲ್ಪ ನೀಡಲು ಮುಂದಾಗಿದ್ದೇವೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಮೂಲ್ಯವಾಗಿ ಬೇಕಾಗಿದೆ. ಶತಮಾನೋತ್ಸವದ ಹೆಸರಲ್ಲಿ ನಮ್ಮದು ಹೋರಾಟವಾಗಿದೆ. ಈ ಹಿಂದೆ ವಿಜಯನಗರ ಸಾಮ್ರಾಜ್ಯದಂತೆ ಕಂಗೊಳಿಸುತ್ತಿದ್ದ ಕಾರ್ಖಾನೆಯು ಇಂದು ಸೊರಗಿದೆ. ವಿಐಎಸ್‌ಎಲ್ ಉಳಿಸಿ ಎಂಬ ಹೆಸರಲ್ಲಿ ಹೋರಾಟ ರೂಪಿಸಿದ್ದ ನಾವು ಶತಮಾನೋತ್ಸವ ಆಚರಿಸುವ ಹೆಸರಲ್ಲಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
    ವೇದಿಕೆಯಲ್ಲಿ ಕಾರ್ಖಾನೆಯ ಕಾರ್ಮಿಕ ಸಂಘದ ಬಸಂತಕುಮಾರ್, ನಿವೃತ್ತ ಅಧಿಕಾರಿ ಎಸ್. ಅಡವೀಶಯ್ಯ, ಮಂಜುನಾಥ್, ಉದ್ಯೋಗಿಗಳ ಸಂಘದ ಕುಮಾರಸ್ವಾಮಿ ಇದ್ದರು.
    ಸಭೆಯಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘದ ಮೋಹನ್, ಅಮೃತ್, ತ್ರಿವೇಣಿ, ಗುತ್ತಿಗೆ ಕಾರ್ಮಿಕ ಸಂಘದ ಸುರೇಶ್, ರಾಕೇಶ್, ನಿವೃತ್ತ ಕಾರ್ಮಿಕ ಸಂಘದ ನರಸಿಂಹಾಚಾರ್, ಶಂಕರ್, ನಂಜಪ್ಪ, ಕೇರಳ ಸಮಾಜಂ ಅಧ್ಯಕ್ಷ ಗಂಗಾಧರನ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಅಖಿಲ ಭಾರತ ವೀರಶೈವ ಮಹಾಸಭಾದ ಸಿದ್ದಲಿಂಗಯ್ಯ, ಕಲಾವಿದರ ಸಂಘದ ಮಂಜುನಾಥ್, ಚಿದಾನಂದ್, ಶಂಕರ್ ಬಾಬು, ಸುಂದರಬಾಬು, ಬಿಜೆಪಿ ಮುಖಂಡ ಟಿ.ವೆಂಕಟೇಶ್, ಹೇಮಾವತಿ ವಿಶ್ವನಾಥರಾವ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ. ರವಿ, ಎಂಪಿಎಂ ಚೆನ್ನಿಗಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮೀನಾಕ್ಷಮ್ಮ ನಿಧನ

ಮೀನಾಕ್ಷಮ್ಮ
    ಭದ್ರಾವತಿ: ನಗರದ ಜನ್ನಾಪುರ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಡಾ.ಜಿ. ವಿಜಯ್‌ರವರ ತಾಯಿ ಮೀನಾಕ್ಷಮ್ಮ(೭೬) ದುಬೈನಲ್ಲಿ ನಿಧನ ಹೊಂದಿ
    ಡಾ.ಜಿ. ವಿಜಯ್ ಸೇರಿದಂತೆ ಓರ್ವ ಪುತ್ರಿ ಇದ್ದರು. ಮೀನಾಕ್ಷಮ್ಮ ಮೂಲತಃ ಗಾಂಧಿನಗರದ ನಿವಾಸಿಯಾಗಿದ್ದು, ಕಳೆದ ಸುಮಾರು ೨೦ ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದರು. ಹಲವಾರು ಧಾರ್ಮಿಕ ಹಾಗು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಸಂತಾಪ ಸೂಚಿಸಿದೆ.

ಅ.೧೯ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ


    ಭದ್ರಾವತಿ: ಭಾರತೀಯ ಉಕ್ಕು ಪ್ರಾಧಿಕಾರದ ನಗರದ ಸೈಲ್-ವಿಐಎಸ್‌ಎಲ್ ಆಸ್ಪತ್ರೆ ವತಿಯಿಂದ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಹಾಗು ಮೈದೊಳಲು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಅ.೧೯ರಂದು ತಾಲೂಕಿನ ಮೈದೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ `ಆರೋಗ್ಯವೇ ಭಾಗ್ಯ' ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಹಮ್ಮಿಕೊಳ್ಳಲಾಗಿದೆ.
    ತಜ್ಞ ವೈದ್ಯರಿಂದ ಮೂಳೆ, ನರ, ಹೃದಯ, ೩ಡಿ ಎಕೋ, ಇಸಿಜಿ, ಕಣ್ಣು, ಹಲ್ಲು, ಬಿ.ಪಿ, ಮಧುಮೇಹ(ಸಕ್ಕರೆ ಕಾಯಿಲೆ) ಕಾಯಿಲೆಗಳ ಉಚಿತ ತಪಾಸಣೆ ಹಾಗು ಔಷಧಿ ವಿತರಣೆ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨ ಗಂಟೆವರೆಗೆ ನಡೆಯಲಿದೆ. ಮೈದೊಳಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಶಿಬಿರ ಸದುಪಯೋಗ ಪಡೆದುಕೊಳ್ಳುವಂತೆ ವಿಐಎಸ್‌ಎಲ್ ಆಡಳಿತ ಮಂಡಳಿ ಕೋರಿದೆ.

ನವದುರ್ಗೆಯರು ಭದ್ರಾವತಿ ಕ್ಷೇತ್ರಕ್ಕೆ ಒಳಿತು ಮಾಡಲಿ : ಶ್ರೀ ವಿನಯ್ ಗುರೂಜಿ

ಭದ್ರಾವತಿ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಬುಧವಾರ ಭಕ್ತ ವೃಂದದಿಂದ ಏರ್ಪಡಿಸಲಾಗಿದ್ದ ಕ್ಷೇತ್ರದ ಅಭಿವೃದ್ಧಿಗಾಗಿ ದುರ್ಗ ಸಪ್ತಶತಿ ಪಾರಾಯಣ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ  ದೀಪಬೆಳಗಿಸಿ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ: ಕ್ಷೇತ್ರದ ಜನರಿಗೆ ಯಾವುದೇ ರೀತಿ ಸಮಸ್ಯೆಗಳು ಎದುರಾಗದಿರಲಿ. ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ದುರ್ಗ ಸಪ್ತಶತಿ ಪಾರಾಯಣದ ಮೂಲಕ ಅಮ್ಮನವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ಹೇಳಿದರು.  
     ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಬುಧವಾರ ಭಕ್ತ ವೃಂದದಿಂದ ಏರ್ಪಡಿಸಲಾಗಿದ್ದ ಕ್ಷೇತ್ರದ ಅಭಿವೃದ್ಧಿಗಾಗಿ ದುರ್ಗ ಸಪ್ತಶತಿ ಪಾರಾಯಣದಲ್ಲಿ ಪಾಲ್ಗೊಂಡು ಮಾತನಾಡಿದರು.
    ನವದುರ್ಗೆಯರ ಆರಾಧನೆಯಲ್ಲಿ ವಿಶಿಷ್ಟವಾದ ಶಕ್ತಿ ಇದೆ. ನಮ್ಮಲ್ಲಿರುವ ದುರ್ಗುಣಗಳು ನಾಶವಾಗಿ ಒಳ್ಳೆಯ ಗುಣಗಳು ವೃದ್ಧಿಸಲಿ. ಎಲ್ಲರ ಬದುಕು ಒಳ್ಳೆಯದಾಗಲಿ ಎಂಬುದು ನವರಾತ್ರಿ ಆಚರಣೆಯ ಉದ್ದೇಶವಾಗಿದೆ.  ದುರ್ಗ ಸಪ್ತಶತಿ ಪಾರಾಯಣದ ಮೂಲಕ ಅಮ್ಮನವರಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಪಾರ್ಥಿಸುವ ಕಾರ್ಯಕ್ರಮ ಪ್ರತಿ ವರ್ಷ ಆಯೋಜಿಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಎಲ್ಲರಿಗೂ ಒಳಿತನ್ನು ಬಯಸುತ್ತೇನೆ ಎಂದರು.  
     ಆರಂಭದಲ್ಲಿ ದೀಪ ಬೆಳಗಿಸುವ ಮೂಲಕ ಶ್ರೀ ಚಾಮುಂಡೇಶ್ವರಿಗೆ ದೇವಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ವಿನಯ್ ಗುರೂಜಿಯವರು ಸಭಾಭವನದ ಮಾಲೀಕರಾದ ಶಿವಕುಮಾರ್ ದಂಪತಿ ಸನ್ಮಾನಿಸಿ ಅಭಿನಂದಿಸಿದರು.
     ಭಕ್ತ ವೃಂದದ ಪ್ರಮುಖರಾದ ಬಿ. ಮೂರ್ತಿ, ಎಂ.ಎಸ್ ರವಿ, ವೈ. ನಟರಾಜ್, ಬಿ.ಎಸ್ ಬಸವೇಶ್, ರವಿಕುಮಾರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.  ಅಪೇಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ವೆಂಕಟ್ ಗಿರಿ ವಂದಿಸಿದರು.  


ಭದ್ರಾವತಿ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಬುಧವಾರ ಭಕ್ತ ವೃಂದದಿಂದ ಏರ್ಪಡಿಸಲಾಗಿದ್ದ ಕ್ಷೇತ್ರದ ಅಭಿವೃದ್ಧಿಗಾಗಿ ದುರ್ಗ ಸಪ್ತಶತಿ ಪಾರಾಯಣ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ಸಭಾಭವನದ ಮಾಲೀಕರಾದ ಶಿವಕುಮಾರ್ ದಂಪತಿ ಸನ್ಮಾನಿಸಿ ಅಭಿನಂದಿಸಿದರು.