Friday, April 25, 2025

ಮಲೇರಿಯಾ ಕುರಿತು ಹೆಚ್ಚಿನ ತಿಳುವಳಿಕೆ ಹೊಂದಿ ಮುನ್ನಚ್ಚರಿಕೆವಹಿಸಿ : ಕಮಲೇಶ್ ಕುಮಾರ್



ಭದ್ರಾವತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಹಾಗು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್) ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ವಿಶ್ವ ಮಲೇರಿಯಾ ದಿನ ಕಾರ್ಯಕ್ರಮಕ್ಕೆ ಕಮಾಂಡೆಂಟ್ ಕಮಲೇಶ್ ಕುಮಾರ್ ಚಾಲನೆ ನೀಡಿದರು. 
    ಭದ್ರಾವತಿ: ಕರ್ತವ್ಯದ ನಡುವೆಯೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಮಲೇರಿಯಾ ಕುರಿತು ಹೆಚ್ಚಿನ ತಿಳುವಳಿಕೆ ಹೊಂದುವ ಮೂಲಕ ಮುನ್ನಚ್ಚರಿಕೆವಹಿಸುವಂತೆ ನಗರದ ಮಿಲ್ಟ್ರಿಕ್ಯಾಂಪ್ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್) ಕಮಾಂಡೆಂಟ್ ಕಮಲೇಶ್ ಕುಮಾರ್ ಹೇಳಿದರು. 
    ಅವರು ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಹಾಗು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್) ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ವಿಶ್ವ ಮಲೇರಿಯಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 
    ಪ್ರತಿ ದಿನ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗಿರುವ ಅಧಿಕಾರಿಗಳು, ಸಿಬ್ಬಂದಿಗಳು ಮಲೇರಿಯಾ ಸೇರಿದಂತೆ ಇನ್ನಿತರ ರೋಗಗಳು ಬಾರದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮ ಹೆಚ್ಚಿನ ಸಹಕಾರಿಯಾಗಿದೆ ಎಂದರು. 


    ಪ್ರಾಸ್ತಾವಿಕವಾವಗಿ ಮಾತನಾಡಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ಮಲೇರಿಯಾ ದೇಶದ ಬಹುದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ.  ಅಧಿಕ ಜನರು ಮಲೇರಿಯಾ ಅಪಾಯದಲ್ಲಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ೨೬ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸ್ತುತ ೫ ಪ್ರಕರಣಗಳು ದಾಖಲಾಗಿವೆ ಎಂದರು. 
    ವಿಶ್ವದಾದ್ಯಂತ ಮಲೇರಿಯಾ ನಿರ್ಮೂಲನೆ ಮಾಡಬೇಕೆಂಬ ಉದ್ದೇಶದೊಂದಿಗೆ ಪ್ರತಿವರ್ಷ ವಿಶ್ವ ಮಲೇರಿಯಾ ದಿನ ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿ `ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ ಮರು ಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ನೀಡೋಣ' ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮಲೇರಿಯಾ ಕುರಿತು ಪ್ರತಿಯೊಬ್ಬರು ತಿಳುವಳಿಕೆ ಹೊಂದುವ ಮೂಲಕ ಬಾರದಂತೆ ಎಚ್ಚರವಹಿಸಬೇಕೆಂದರು. 
    ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್) ಕಮಾಂಡೆಂಟ್-೨ ಸಚಿನ್ ಗಾಯಕ್‌ವಾಡ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಪ್ರಭಾರ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


    ಹಿರಿಯ ಆರೋಗ್ಯ ನಿರೀಕ್ಷಕರಾದ ಆನಂದ ಮೂರ್ತಿ, ನೀಲೇಶ್ ರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಹಾಗು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‌ಎಎಫ್) ಅಧಿಕಾರಿಗಳು ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು. 
    ಆರ್‌ಎಎಫ್ ಸಬ್ ಇನ್ಸ್‌ಪೆಕ್ಟರ್ ರಾಜೀವ್ ಕುಮಾರ್ ನಿರೂಪಿಸಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಬಾಯಿ ವಂದಿಸಿದರು. ಇದಕ್ಕೂ ಮೊದಲು ಎಂಪಿಎಂ ಕಾರ್ಖಾನೆ ಮುಖ್ಯದ್ವಾರದಿಂದ ಬೈಕ್ ರ್‍ಯಾಲಿ ಆರಂಭಿಸಿ ಎಂಪಿಎಂ-ವಿಐಎಸ್‌ಎಲ್ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಹೊಸಸೇತುವೆ ರಸ್ತೆ, ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ಹಾಲಪ್ಪ ವೃತ್ತ ಮೂಲಕ ಪುನಃ ಎಂಪಿಎಂ ಮುಖ್ಯದ್ವಾರಕ್ಕೆ ಬಂದು ತಲುಪಿತು. 

ಕಾಂಗ್ರೆಸ್ ಎಂದಿಗೂ ದಲಿತರ ಏಳಿಗೆ ಬಯಸಿಲ್ಲ : ಎನ್. ಮಹೇಶ್

ಭದ್ರಾವತಿ ತಾಲೂಕು ಬಿಜೆಪಿ ಮಂಡಲ ಕಛೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ `ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ! ಬಾಬಾ ಸಾಹೇಬರು ಹೇಗೇಕೆ ಹೇಳಿದರು?' ಎಂದು ವಿಚಾರ ಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್. ಮಹೇಶ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ : ದೇಶದಲ್ಲಿ ಇಂದಿಗೂ ಪರಿಶಿಷ್ಟ ಜಾತಿ/ಪಂಗಡದವರ ಬದುಕು ಸುಧಾರಣೆಯಾಗಿಲ್ಲ. ದೀರ್ಘಾವಧಿ ಈ ದೇಶದ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ನಿಜಕ್ಕೂ ಈ ಸಮುದಾಯಗಳ ಪಾಲಿಗೆ ಸುಡುವ ಮನೆಯಾಗಿದೆ ಎಂದು ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್. ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು. 
    ಅವರು ಶುಕ್ರವಾರ ತಾಲೂಕು ಬಿಜೆಪಿ ಮಂಡಲ ಕಛೇರಿಯಲ್ಲಿ ಆಯೋಜಿಸಲಾಗಿದ್ದ `ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ! ಬಾಬಾ ಸಾಹೇಬರು ಹೇಗೇಕೆ ಹೇಳಿದರು?' ಎಂದು ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. 
    ಕಾಂಗ್ರೆಸ್ ಪಕ್ಷ ಎಂದಿಗೂ ದಲಿತರ ವಿರೋಧಿಯಾಗಿದ್ದು, ದಲಿತರ ಏಳಿಗೆಯನ್ನು ಬಯಸಿಲ್ಲ. ಅಂದು ಅಂಬೇಡ್ಕರ್‌ರವರ ರಾಜಕೀಯ ಏಳಿಗೆಯನ್ನು ಸಹಿಸದೆ ಅವರನ್ನು ಕುತಂತ್ರದಿಂದ ಸೋಲಿಸಲಾಯಿತು. ದೇಶದಲ್ಲಿ ಸಂವಿಧಾನ ಬದ್ಧ ಹಕ್ಕು ಹಾಗು ಕಾನೂನು ಜಾರಿಗೆ ತರಲಾಗಿದ್ದರೂ ಸಹ ಇಂದಿಗೂ ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗು ರಾಜಕೀಯವಾಗಿ ಬೆಳವಣಿಗೆ ಕಂಡಿಲ್ಲ. ಲೋಕಸಭೆ ಹಾಗು ರಾಜ್ಯಸಭೆಯಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದಾಗ ದಲಿತರನ್ನು ಅವಮಾನಗೊಳಿಸಲಾಯಿತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ದಲಿತರು ಕಾಂಗ್ರೆಸ್ ಪಕ್ಷದ ಮೇಲೆ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮತಗಳನ್ನು ಹಾಕುವ ಮೂಲಕ ಅಧಿಕಾರಕ್ಕೆ ತರುತ್ತಿದ್ದಾರೆ. ಇದೊಂದು ವಿಪರ್ಯಾಸದ ಸಂಗತಿಯಾಗಿದೆ ಎಂದರು. 
    ಕಾಂಗ್ರೆಸ್ ಪಕ್ಷ ದಲಿತರಿಗೆ ನೀಡಿರುವ ಕೊಡುಗೆಯಾದರೂ ಏನು ಎಂಬುದು ಯಾರಿಗೂ ತಿಳಿದಿಲ್ಲ. ಆದರೂ ಆ ಪಕ್ಷದ ಮೇಲಿನ ಒಲವೂ ಕಡಿಮೆಯಾಗಿಲ್ಲ. ಕಾಂಗ್ರೆಸ್ ಪಕ್ಷದ ಕುತಂತ್ರ ಅರಿತುಕೊಂಡ ಅದೆಷ್ಟೋ ನಾಯಕರು ಆ ಪಕ್ಷದಿಂದ ಹೊರಬಂದು ಅದರ ವಿರುದ್ಧ ಹೋರಾಟ ನಡೆಸಿದರು. ಅಂದು ಬಾಬಾ ಸಾಹೇಬ್ ಅಂಬೇಡ್ಕರ್‌ರವರು `ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ! ಎಂದು ತಿಳಿಸಿದ್ದರು. ಇದು ದಲಿತರ ಪಾಲಿಗೆ ನಿಜವಾಗಿದೆ ಎಂದರು.  
    ಈ ದೇಶದಲ್ಲಿ ಅಂಬೇಡ್ಕರ್‌ರವರ ಚಿಂತನೆಗಳಿಗೆ, ಸಂವಿಧಾನದ ಆಶಯಗಳಿಗೆ ಗೌರವ ನೀಡಿದವರು, ಅಂಬೇಡ್ಕರ್‌ರವರನ್ನು ವಿಶ್ವಜ್ಞಾನಿಯನ್ನಾಗಿಸಿ ದಲಿತರ ಏಳಿಗೆಗೆ ಶ್ರಮಿಸುತ್ತಿರುವವರು ಯಾರು ಎಂಬುದನ್ನು ಇಂದು ದಲಿತರು ಯೋಚಿಸಿ, ತುಲನೆ ಮಾಡಿ ನೋಡಬೇಕಾಗಿದೆ. ದಲಿತರು ರಾಜಕೀಯವಾಗಿ ಯಾರೊಂದಿಗೆ ಇರಬೇಕೆಂಬುದನ್ನು ಅರಿತುಕೊಳ್ಳಬೇಕಾಗಿದೆ ಎಂದರು. 
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಪ್ರಮುಖರಾದ ಡಾ. ನವೀನ್ ಮೌರ್ಯ, ಕೂಡ್ಲಿಗೆರೆ ಹಾಲೇಶ್, ಕೆ.ಎಚ್ ತೀರ್ಥಯ್ಯ, ಮಂಗೋಟೆ ರುದ್ರೇಶ್, ರಾಜಶೇಖರ್ ಉಪ್ಪಾರ, ಚನ್ನೇಶ್, ಅಣ್ಣಪ್ಪ, ಧನುಷ್ ಬೋಸ್ಲೆ, ಸಂತೋಷ್, ನಾಗಮಣಿ, ಮಂಜುಳ, ಗೌರಮ್ಮ, ಶಕುಂತಲ, ಆಶಾ, ಸರಸ್ವತಿ, ಲಕ್ಷ್ಮೀ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಅನ್ನಪೂರ್ಣ ಸ್ವಾಗತಿಸಿ, ಹನುಮಂತನಾಯ್ಕ ಕಾರ್ಯಕ್ರಮ ನಿರೂಪಿಸಿ, ರವಿಕುಮಾರ್ ವಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.