Friday, January 31, 2025

ಮಹಿಳೆಯರು ಸಬಲೀಕರಣಕ್ಕಾಗಿ ಸ್ವಸಹಾಯ ಸಂಘಗಳ ಸದಸ್ಯತ್ವ ಹೊಂದಿ : ಹೆಲೆನ್ ಮೋರಸ್

ಭದ್ರಾವತಿ ನ್ಯೂಟೌನ್ ಸೆಂಟ್ ಚಾರ್ಲ್ಸ್ ಆವರಣದಲ್ಲಿ  ಕರುಣಾ ಸೇವಾ ಕೇಂದ್ರದ ವತಿಯಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಸಂಘದ ಪರಿಕಲ್ಪನೆಯ ಬಗ್ಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: ಸ್ವಸಹಾಯ ಸಂಘಗಳ ಮಹಿಳೆಯರು ಸಬಲೀಕರಣಗೊಳ್ಳುವ ಮೂಲಕ ಕುಟುಂಬದ ಆಸರೆಯಾಗಬೇಕು ಹೊರತು ದುರಾಸೆಗಳಿಂದ ಸಂಕಷ್ಟಗಳಿಗೆ ಒಳಗಾಗಬಾರದು ಎಂದು ನಗರದ ಕರುಣಾ ಸೇವಾ ಕೇಂದ್ರದ ಮುಖ್ಯಸ್ಥೆ ಸಿಸ್ಟರ್ ಹೆಲೆನ್ ಮೋರಸ್ ಹೇಳಿದರು. 
    ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರುಣಾ ಸೇವಾ ಕೇಂದ್ರದ ವತಿಯಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಸಂಘದ ಪರಿಕಲ್ಪನೆಯ ಬಗ್ಗೆ ಮಾಹಿತಿ ಕಾರ್ಯಗಾರದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. 
    ಮಹಿಳೆಯರು ದುರಾಸೆ ಹಾಗು ಅಮಿಷಗಳಿಂದ ಸ್ವಸಹಾಯ ಸಂಘಗಳ ಸದಸ್ಯರಾಗಬಾರದು. ದುರಾಸೆ ಹಾಗು ಅಮಿಷಗಳು ಮಹಿಳೆಯರ ವಿನಾಶಕ್ಕೆ ಕಾರಣವಾಗಲಿವೆ. ಇತ್ತೀಚಿನ ದಿನಗಳಲ್ಲಿ ಹಲವು ಮಹಿಳೆಯರು ಹಣವನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಜೀವನದ ಮೌಲ್ಯಗಳನ್ನು ತನ್ನದಾಗಿಸಿಕೊಂಡು ಯಶಸ್ವಿನ ದಾರಿಯಲ್ಲಿ ಮುಂದುವರೆದಿದ್ದಾರೆ ಎಂದರು. 
ಸಮುದ್ರದ ಬಂದರುಗಳಲ್ಲಿ ಲೈಟ್ ಹೌಸ್‌ಗಳನ್ನು ನಿರ್ಮಿಸಿರುತ್ತಾರೆ. ಸಮುದ್ರದಲ್ಲಿ ದಾರಿ ತಪ್ಪಿದ ನಾವಿಕರಿಗೆ ಈ ಲೈಟ್ ಹೌಸ್‌ಗಳು ದಾರಿದೀಪಗಳಾಗಿವೆ. ಇದೆ ರೀತಿ ಸ್ವಸಹಾಯ ಸಂಘಗಳು ಜೀವನಕ್ಕೆ ದಾರಿ ದೀಪವಾಗಿರಲಿ. ಅಲ್ಲದೆ ಸ್ವಸಹಾಯ ಸಂಘಗಳಿಂದ ಇಡೀ ಕುಟುಂಬ ಸಂತೋಷ, ತೃಪ್ತಿ ಸಮಾಧಾನವನ್ನು ಅನುಭವಿಸಿ ಉತ್ತಮ ಜೀವನ ಕಂಡುಕೊಳ್ಳುವಂತಾಗಬೇಕೆಂದರು. 
    ಮಹಿಳೆಯರು ಹಲವು ಸ್ವಸಹಾಯ ಸಂಘಗಳಲ್ಲಿ ಸದಸ್ಯತ್ವ ಹೊಂದುವ ಬದಲು ಒಂದೇ ಸ್ವಸಹಾಯ ಸಂಘದಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆಯಲ್ಲಿ ತೊಡಗಬೇಕೆಂದರು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ೧೩ ಸ್ವಸಹಾಯ ಸಂಘಗಳಲ್ಲಿ ಒಟ್ಟು ೧೨೦ ಮಹಿಳೆಯರು ಸದಸ್ಯತ್ವ ಪಡೆದುಕೊಂಡಿದ್ದಾರೆ. 
  ಕರುಣಾ ಸೇವಾ ಕೇಂದ್ರದ ಸಿಸ್ಟರ್ ಪ್ರಭ, ಒಕ್ಕೂಟದ ಸದಸ್ಯರಾದ ರೇಷ್ಮ, ಕಾರ್ಯಕರ್ತರಾದ ಸಾವಿತ್ರಿ. ಧನಲಕ್ಷ್ಮಿ ಹಾಗೂ ಕಾವ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಫೆ.೨ರಂದು ಶ್ರೀ ಭಗೀರಥ ಸಮುದಾಯ ಭವನ ಉದ್ಘಾಟನೆ

    ಭದ್ರಾವತಿ : ಉಪ್ಪಾರ ಸಂಘದ ವತಿಯಿಂದ ಹಳೇನಗರ ಬಸವೇಶ್ವರ ವೃತ್ತದ ಸಮೀಪದ ನರೇಂದ್ರ ಪಾರ್ಕ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಭಗೀರಥ ಸಮುದಾಯ ಭವನ ಉದ್ಘಾಟನೆ ಫೆ.೨ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. 
    ಹೊಸದುರ್ಗ ಶ್ರೀ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದು, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 
ಸಂಸದ ಬಿ.ವೈ ರಾಘವೇಂದ್ರ, ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರಾದ ಶಾಸಕ ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಶಿವಮೊಗ್ಗ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್, ನಿವೃತ್ತ ಕೆ.ಎ.ಎಸ್ ಅಧಿಕಾರಿ ಬಿ. ಭೀಮಪ್ಪ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಜಗನ್ನಾಥ್ ಸಗರ, ಸಮಾಜ ಸೇವಕ ಸಿ. ಮಹೇಶ್ ಕುಮಾರ್, ಗಿರೀಶ್ ಉಪ್ಪಾರ, ಲಕ್ಕಪ್ಪ, ವೆಂಕಟೇಶ್, ಡಾ. ನಾಗರಾಜ್, ಅನುಪಮ ಚನ್ನೇಶ್, ಪರಶುರಾಮ್, ಎಚ್.ಟಿ ಹಾಲಪ್ಪ, ಎನ್. ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 
    ನಿವೃತ್ತ ನ್ಯಾಯಾಧೀಶರಾದ ಬಿಲ್ಲಪ್ಪ ಶ್ರೀ ಭಗೀರಥ ಭಾವಚಿತ್ರ ಅನಾವರಣಗೊಳಿಸಿದ್ದು, ಉಪ್ಪಾರ ಸಮಾಜದ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಬಂಧುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ರಾಜ್ಯಮಟ್ಟದ ಸಿರಿಧಾನ್ಯ ಸಿಹಿ ಖಾದ್ಯ ಸ್ಪರ್ಧೆಯಲ್ಲಿ ಪ್ರೇಮಲತಾಗೆ ೨ನೇ ಸ್ಥಾನ

ಸಾವಯವ ಮತ್ತು ಸಿರಿಧಾನ್ಯ, ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ಸಿರಿಧಾನ್ಯ ಸಿಹಿ ಖಾದ್ಯ ವಿಭಾಗದಲ್ಲಿ ಭದ್ರಾವತಿ ನಗರದ ವಿದ್ಯಾಮಂದಿರ ನಿವಾಸಿ ಬಿ.ಎಂ ಪ್ರೇಮಲತಾ ೨ನೇ ಸ್ಥಾನ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. 
    ಭದ್ರಾವತಿ: ಕೃಷಿ ಇಲಾಖೆ ವತಿಯಿಂದ ಸ್ಲರ್ಪ್ ಕಲಿನರಿ ಅಕಾಡೆಮಿ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅಂತರರಾರಾಷ್ಟ್ರೀಯ ವಾಣಿಜ್ಯ ಮೇಳ-೨೦೨೫, ಸಾವಯವ ಮತ್ತು ಸಿರಿಧಾನ್ಯ, ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ಸಿರಿಧಾನ್ಯ ಸಿಹಿ ಖಾದ್ಯ ವಿಭಾಗದಲ್ಲಿ ನಗರದ ವಿದ್ಯಾಮಂದಿರ ನಿವಾಸಿ ಬಿ.ಎಂ ಪ್ರೇಮಲತಾ ೨ನೇ ಸ್ಥಾನ ಪಡೆದುಕೊಂಡಿದ್ದಾರೆ. 
    ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ, ಸಚಿವರಾದ ಕೃಷ್ಣ ಬೈರೇಗೌಡ, ಬಿ.ಎಸ್ ಸುರೇಶ್, ಶಾಸಕ ಗೋವಿಂದಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರೇಮಲತಾ ಅವರನ್ನು ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.