Friday, February 3, 2023

ಯಡಿಯೂರಪ್ಪ ವಿಐಎಸ್‌ಎಲ್ ಉಳಿಸಿ ಜಿಲ್ಲೆಯ ಜನರ ಋಣ ತೀರಿಸಲಿ : ಎಚ್.ಡಿ ಕುಮಾರಸ್ವಾಮಿ

ಭದ್ರಾವತಿಯಲ್ಲಿ ೧೬ ದಿನಗಳಿಂದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬೆಂಬಲ ಸೂಚಿಸಿ ಮಾತನಾಡಿದರು.
    ಭದ್ರಾವತಿ, ಫೆ. ೩ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್.ಎಂ ವಿಶ್ವೇಶ್ವರಾಯ ಹಾಗು ಮೈಸೂರು ಮಹಾರಾಜರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡಿರುವ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ರಾಜ್ಯದ ಜನತೆಗೆ ಉಳಿಸಿಕೊಡುವ ಮೂಲಕ ಶಿವಮೊಗ್ಗ ಜಿಲ್ಲೆಯ ಜನರ ಋಣ ತೀರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.
     ಕಳೆದ ೧೬ ದಿನಗಳಿಂದ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಅವರು ಶುಕ್ರವಾರ ಬೆಂಬಲ ಸೂಚಿಸಿ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬುವ ಮೂಲಕ ಬಹಿರಂಗ ಸಭೆಯಲ್ಲಿ ಮಾತನಾಡಿದರು.
    ಮಾಜಿ ಪ್ರಧಾನಿ ದೇವೇಗೌಡರು ಈ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರಕ್ಕೆ ವಹಿಸಿಕೊಡುವ ಸಂದರ್ಭದಲ್ಲಿ ಸುಮಾರು ೬೫೦ ಕೋ.ರು. ವೆಚ್ಚದಲ್ಲಿ ಅಭಿವೃದ್ಧಿಗೆ ಸಂಬಂಧ ರೂಪುರೇಷೆ ಸಿದ್ದಪಡಿಸಿದ್ದರು. ಆದರೆ ಈ ರೂಪುರೇಷೆಯನ್ನು ಉಕ್ಕು ಪ್ರಾಧಿಕಾರ ಅನುಷ್ಠಾನಕ್ಕೆ ತರಲಿಲ್ಲ. ಅಷ್ಟರಲ್ಲಿ ದೇವೇಗೌಡರು ಅನಿವಾರ್ಯ ಕಾರಣಗಳಿಂದ ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದರು. ಆ ನಂತರದ ಬೆಳವಣಿಗೆಯಲ್ಲಿ ಕಾರ್ಖಾನೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಲಾಗಿದೆ ಎಂದು ಆರೋಪಿಸಿದರು.
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಈ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಇಚ್ಛಾಶಕ್ತಿ ಪ್ರದರ್ಶಿಸಿ ಜಿಲ್ಲೆಯ ಜನರ ಋಣ ತೀರಿಸಬೇಕು. ಕನಿಷ್ಠ ಪಕ್ಷ ಮುಂದಿನ ೩ ತಿಂಗಳವರೆಗೆ ಯಾವುದೇ ಬೆಳವಣಿಗೆಗಳು ನಡೆಯದಂತೆ ನೋಡಿಕೊಂಡರೇ ಸಾಕು. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಈ ಕಾರ್ಖಾನೆಯನ್ನು ನಮ್ಮ ಸರ್ಕಾರ ಶೇ.೪೦ ಕಮಿಷನ್ ದಂಧೆಗೆ ಕಡಿವಾಣ ಹಾಕಿ ಜನರ ತೆರಿಗೆ ಹಣದಲ್ಲಿ ಈ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲಿದೆ. ಉಕ್ಕು ಪ್ರಾಧಿಕಾರ ಯಾವುದೇ ಬಂಡವಾಳ ಹೂಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಬಳಿ ನಾವು ಭಿಕ್ಷೆ ಬೇಡುವುದು ತಪ್ಪುತ್ತದೆ ಎಂದರು.
    ಕಾರ್ಖಾನೆ ಉಳಿಸಿ ಬೊಮ್ಮಾಯಿಯವರಿಗೆ ಗೌರವ ನೀಡಿ:  
    ಇಂದಿನ ಡಬ್ಬಲ್ ಇಂಜಿನ್ ಸರ್ಕಾರ ಶ್ರಮ ಜೀವಿಗಳಾದ ಕಾರ್ಮಿಕರನ್ನು ಬೀದಿಗೆ ತಳ್ಳುವುದು ಸರಿಯಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆತ್ಮ ಸಾಕ್ಷಿ ಇದ್ದಲ್ಲಿ ಈ ಕಾರ್ಖಾನೆಯನ್ನು ಉಳಿಸುವ ಮೂಲಕ ಅಂದು ರಾಜ್ಯದ ಮಂತ್ರಿಯಾಗಿದ್ದ ಅವರ ತಂದೆ ಬೊಮ್ಮಾಯಿಯವರಿಗೆ ಗೌರವ ಸಲ್ಲಿಸುವಂತಹ ಕೆಲಸ ಮಾಡಲಿ ಎಂದರು.
    ಹೋರಾಟದ ಮುಂಚೂಣಿಗೆ ಬರಲು ಸಿದ್ದ :
    ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವುದು ತಿಳಿದು ಬಂದಿದೆ. ಈ  ಸಂದರ್ಭದಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಹೋರಾಟವನ್ನು ತೀವ್ರಗೊಳಿಸಬೇಕು. ಅನಿವಾರ್ಯವಾದಲ್ಲಿ ಈ ಹೋರಾಟದ ಮುಂಚೂಣಿಗೆ ಬಂದು ಪ್ರಧಾನಿಯವರನ್ನು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಲಾಗುವುದು ಎಂದರು.  
    ವಿಐಎಸ್‌ಎಲ್-ಎಂಪಿಎಂ ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ :
    ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆರೋಗ್ಯ ಸರಿ ಇಲ್ಲದ ಕಾರಣ ಅವರು ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಪರವಾಗಿ ನಾನು ಹೋರಾಟಕ್ಕೆ ಸಿದ್ದವಾಗಿದ್ದೇನೆ. ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು, ಕ್ಷೇತ್ರದ ಜನರು ಭಯಪಡುವ ಅಗತ್ಯವಿಲ್ಲ ಎಂದರು.
    ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಾತನಾಡಿ, ರಾಜ್ಯಾಧ್ಯಕ್ಷನಾದ ನಂತರ ನಾನು ಮೊದಲ ಬಾರಿಗೆ ನನ್ನ ತವರು ಮನೆಗೆ ಬಂದಿದ್ದೇನೆ. ಇತ್ತೀಚೆಗೆ ತಾಯಿ ಕಳೆದುಕೊಂಡಿರುವ ನನಗೆ ನನ್ನ ತಾಯಿಯನ್ನು ನೋಡಿದಷ್ಟು ಸಂಭ್ರಮ ಉಂಟಾಗುತ್ತಿದೆ ಎಂದರು.  ಈ ಕಾರ್ಖಾನೆಯಲ್ಲಿ ನಾನು ಸಹ ಒಬ್ಬ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡಿದ್ದು, ಈ ಕಾರ್ಖಾನೆಯ ಋಣ ನನ್ನ ಮೇಲಿದೆ. ಯಾರು ಸಹ ದೆಹಲಿ ಹೋಗಿ ಯಾರ ಕಾಲು ಸಹ ಹಿಡಿಯುವುದು ಬೇಡ. ಇನ್ನೇನು ಚುನಾವಣೆ ಬರಲಿದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಖಚಿತ. ನಮ್ಮ ಸರ್ಕಾರ ಈ ಕಾರ್ಖಾನೆಯನ್ನು ಉಳಿಸಿಕೊಳ್ಳುವುದು ಖಚಿತ ಎಂದು ಭರವಸೆ ನೀಡಿದರು.
    ಅಧ್ಯಕ್ಷತೆವಹಿಸಿದ್ದ ಶಾರದ ಅಪ್ಪಾಜಿ ಮಾತನಾಡಿ, ನಾನು ಓರ್ವ ಕಾರ್ಮಿಕನ ಪತ್ನಿಯಾಗಿ ಅವರ ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ. ಕುಮಾರಸ್ವಾಮಿಯವರು ಈ ಕಾರ್ಖಾನೆಯನ್ನು ಉಳಿಸಿಕೊಡಲಿದ್ದಾರೆಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
    ವಿಧಾನಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಶಾಸಕಿ ಶಾರದ ಪೂರ‍್ಯನಾಯ್ಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಪ್ರಮುಖರಾದ ಜೆ.ಪಿ ಯೋಗೇಶ್, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಆರ್. ಕರುಣಾಮೂರ್ತಿ, ಮಧುಕುಮಾರ್, ಗೀತಾ ಪವಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಕಾರ್ಮಿಕರು ತಮ್ಮ ಅಳಲುಗಳನ್ನು ತೋರ್ಪಡಿಸಿಕೊಂಡರು.

ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (CITU) ಬೆಂಬಲ

ಭದ್ರಾವತಿ,  ಫೆ. 3:  ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ತಾಲೂಕು  ಸಮಿತಿಯಿಂದ ಕರ್ನಾಟಕ ಹೆಮ್ಮೆಯ ಉಕ್ಕು ಉದ್ಯಮ ವಿ.ಐ.ಎಸ್.ಪಿ  ಮುಚ್ಚದಂತೆ  ಶುಕ್ರವಾರ ತಹಸೀಲ್ದಾರ್  ಮುಖಾಂತರ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
    ನಂತರ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಬೆಂಬಲಿಸಿ ಮಾತನಾಡಿದ ಪ್ರಮುಖರು, ಕರ್ನಾಟಕ ಹೆಮ್ಮೆಯ ಉಕ್ಕು ಉದ್ಯಮ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಪ್ಲಾಂಟ್ ಭಾರತದ ಮೊಟ್ಟ ಮೊದಲ ಕೈಗಾರಿಕೆಯು ಕೂಡ ಆಗಿರುತ್ತದೆ. ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ನವರ ಪರಿಶ್ರಮದಿಂದ ನಿರ್ಮಣಗೊಂಡ ಈ ಕೈಗಾರಿಕೆಯು ರಾಜ್ಯದ ಹಾಗೂ ದೇಶದಲ್ಲಿನ ಆಣ್ಣೆಕಟ್ಟು, ಡ್ಯಾಂಗಳು, ರಕ್ಷಣಾ ವಲಯ, ರೈಲ್ವೆ ವಲಯ, ಬ್ರಿಡ್ಜ್‌ಗಳನ್ನು ಕಟ್ಟಲು ಈ ಕೈಗಾರಿಕೆಯ ಉತ್ತಮ ಕಬ್ಬಿಣದಿಂದ ನಿರ್ಮಾಣ ಮಾಡಲಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.
    ಹೀಗೆ ಬೃಹದಾಕಾರವಾಗಿ ಬೆಳೆದ VISP ಕೈಗಾರಿಯು 80ರ ಧಶಕದಿಂದ ಅಲ್ಪ ಪ್ರಮಾಣದ ನಷ್ಟದ ಹಾದಿ
ಹಿಡಿಯಿತು. ಹಳೇಯ ತಂತ್ರಜ್ಞಾನದಿಂದ ಪ್ರತಿವರ್ಷ ಇನ್ನಷ್ಟು ನಷ್ಟದ ಪ್ರಮಾಣ ಹೆಚ್ಚಾಗಿದ್ದರಿಂದ ಅಂದಿನ
ಕರ್ನಾಟಕ ಸರ್ಕಾರವು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ VISP ವಹಿಸಲು ತಿರ್ಮಾನಿಸಿ 1989ರಲ್ಲಿ ಕರ್ನಾಟಕ ಸರ್ಕಾರವು ಈ ಕೈಗಾರಿಕೆಯನ್ನು ಆಧುನಿಕರಿಸಿ ಅಭಿವೃದ್ಧಿ ಪಡಿಸುವಂತೆ ಕೋರಿ ಕೇಂದ್ರ ಸರ್ಕಾರದ ಅಧಿನದಲ್ಲಿರುವ SAIL ಗೆ ಹಸ್ತಾಂತರ ಮಾಡಲಾಯಿತು. ಆದರೆ ದುರಾದೃಷ್ಟವಶತ್ ಭಾರತೀಯ ಉಕ್ಕು ಪ್ರಾಧಿಕಾರ ಯಾವುದೇ ಬಂಡವಾಳವನ್ನು ತೊಡಗಿಸದೆ ಮಲತಾಯಿ ಧೋರಣೆಯನ್ನು ಅನುಸರಿಸಿತು ಎಂದು ದೂರಿದರು.        ಇಂತಹ ಸಂದಿಗ್ಧದ ಪರಿಸ್ಥಿತಿಯಲ್ಲಿ 2015ರಲ್ಲಿ ಕೇಂದ್ರದ ಉಕ್ಕು ಮಂತ್ರಿ ನರೇಂದ್ರಸಿಂಗ್ ತೋಮರ್ ಕಾರ್ಖಾನೆಗೆ ಭೇಟಿ ನೀಡಿ ಈ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲು ಒಂದು ಸಾವಿರ ಕೋಟಿ ನೀಡುವುದಾಗಿ ತಿಳಿಸಿ ಪ್ರಮುಖವಾಗಿ ಈ ಕಾರ್ಖಾನೆಗೆ ಬೇಕಾಗಿರುವ ಕಬ್ಬಿಣದ ಅದಿರಿನ ಗಣಿಯನ್ನು ಕೊಡುವಂತೆ ತಿಳಿಸಿದ್ದರು. ಅದೇ ಪ್ರಕಾರವಾಗಿ ಕರ್ನಾಟಕ ಸರ್ಕಾರವು 2018ರ
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ರಮಣದುರ್ಗದಲ್ಲಿ 150 ಹೆಕ್ಟೇರ್ ಕಬ್ಬಿಣದ ಅದಿರನ ಗಣಿಯನ್ನು  ಮಂಜೂರು ಮಾಡಿದೆ,ಆದರೆ 2018ರಲ್ಲಿ ಕೇಂದ್ರದ ಉಕ್ಕು ಮಂತ್ರಿ ಬಿರೇಂದ್ರಸಿಂಗ್ ಚೌದರಿ, ಈ
ಕಾರ್ಖಾನೆಗೆ ಭೇಟಿ ನೀಡಿ ಈ ಕಾರ್ಖಾನೆಯನ್ನು ಖಾಸಗಿ ಮಾಡದೆ ಉಕ್ಕು ಪ್ರಧಿಕಾರದಲ್ಲೇ ಉಳಿಸಿಕೊಂಡು 6 ಸಾವಿರ ಕೋಟಿ ಬಂಡವಾಳ ಹೂಡುವುದಾಗಿ ನೀಡಿದ ಭರವಸೆ ಹುಸಿಯಾಯಿತು. ಕೈಗಾರಿಕೆಯು ಇನ್ನಷ್ಟು
ನಷ್ಟಕ್ಕೆ ಸಿಲುಕಿತು ಎಂದು  ಆರೋಪಿಸಿದರು.   ಇಂತಹ ಪರಿಸ್ಥಿತಿಯನ್ನು ದೌರ್ಬಲ್ಯ ಮಾಡಿಕೊಂಡ ಭಾರತೀಯ       ಉಕ್ಕು ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿ ಜ. 16ರ ಸಭೆಯಲ್ಲಿ  ವಿ.ಐ.ಎಸ್.ಪಿ. ಕಾರ್ಖಾನೆಯನ್ನು ಮುಚ್ಚಲು ತೀರ್ಮಾನಿಸಿರುತ್ತಾರೆ. 1989ರಲ್ಲಿ ಕರ್ನಾಟಕ ಸರ್ಕಾರ ಈ ಕಾರ್ಖಾನೆಯನ್ನು ಆಧುನಿಕರಿಸಿ ಅಭಿವೃದ್ಧಿ ಪಡಿಸಿ ಮುನ್ನಡೆಸಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ವಹಿಸಿತ್ತೆ ಹೊರತು ಖಾಸಗಿಯವರಿಗೆ ಮಾರಾಟ ಮಾಡಲು  ಅಥವಾ ಈ ಕಾರ್ಖಾನೆಯನ್ನು ಮುಚ್ಚಲು ಕೊಟ್ಟಿಲ್ಲ. ಹಾಗಾಗಿ  ಕರ್ನಾಟಕ ಸರ್ಕಾರ
ಕೊಟ್ಟಿರುವ ಕಬ್ಬಿಣದ ಅದಿರಿನ ಗಣಿಯಿಂದ ಗಣಿಗಾರಿಕೆ ಮಾಡಲು ಈಗಾಗಲೇ ಸಿದ್ಧತೆ ಮಾಡುತ್ತಿರುವಾಗಲೇ
ವಿ.ಐ.ಎಸ್.ಪಿ. ಕಾರ್ಖಾನೆ ಮುಚ್ಚುವ ಸುದ್ದಿ ಇಡಿ ಕಾರ್ಮಿಕ ವಲಯಕ್ಕೆ ಬರ ಸಿಡಿಲು ಬಡಿದಂತಾಗಿದೆ. ಈ
ಕಾರ್ಖಾನೆಯನ್ನು ನಂಬಿ ಸುಮಾರು 22 ವರ್ಷಗಳಿಂದ 1500 ಕ್ಕೂ ಹೆಚ್ಚು ಗತ್ತಿಗೆ ಕಾರ್ಮಿಕರು ಹಾಗೂ
ಇವರನ್ನು ಅವಲಂಬಿಸಿದಂತ ಭದ್ರಾವತಿಯ ವ್ಯಾಪಾರಸ್ಥರೂ ಕಂಗಾಲಾಗಿದ್ದಾರೆ. ಆದ್ದರಿಂದ ಕರ್ನಾಟಕ ಸರ್ಕಾರದ ಪರವಾಗಿ ತಾವುಗಳು ಸರ್.ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿ, ಕಾರ್ಮಿಕರ ಬದುಕು, ಯುವ ಜನರಿಗೆ ಹೊಸ ಉದ್ಯೋಗ ಸೃಷ್ಟಿ ಇವೆಲ್ಲವನ್ನು  ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿ ಕರ್ನಾಟಕದ ಹೆಮ್ಮೆಯ ವಿ.ಐ.ಎಸ್.ಪಿ   ಕೈಗಾರಿಕೆಯನ್ನು ಉಳಿಸಲು ಒತ್ತಾಯಿಸುತ್ತಿದ್ದೇವೆ ಎಂದರು.
   ಸಂಘದ ಅಧ್ಯಕ್ಷೆ ಹನುಮಮ್ಮ, ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ, ಎಸ್. ಲೀಲಾವತಿ, ಮೀನಾ, ಸರಸ್ವತಿ, ಸಾಮೀನಾ, ರೂಪ, ನಾಗರತ್ನ, ಎಂ. ಅನಂತ ರಾಮು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.