Thursday, August 6, 2020

ಕವನ ಸ್ಪರ್ಧೆಯಲ್ಲಿ ಎಚ್.ಆರ್ ಶ್ರೀಧರೇಶ್ ಭಾರದ್ವಾಜ್‌ಗೆ ಪ್ರಥಮ ಸ್ಥಾನ

ಭದ್ರಾವತಿ, ಆ. ೬: ಚಿತ್ರದುರ್ಗ ಹಿರಿಯೂರು ತಾಲೂಕಿನ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಕೇಂದ್ರ ಘಟಕ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂತರ್ಜಾಲ ಕವನ ಸ್ಪರ್ಧೆಯಲ್ಲಿ ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಧ್ಯಾಪಕ ಎಚ್.ಆರ್. ಶ್ರೀಧರೇಶ್ ಭಾರದ್ವಾಜ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 
ಶ್ರಾವಣ ಮಾಸದ ತುಂತುರು ಹನಿಗಳ ಸಂಗಮ ಎಂಬ ವಿಷಯದಡಿ ಪುರುಷರ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕವನ ಸ್ಪರ್ಧೆಯಲ್ಲಿ ಭಾರದ್ವಾಜ್‌ರವರು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 
ಉಳಿದಂತೆ ಶ್ರಾವಣ ಸಿರಿ ಎಂಬ ವಿಷಯದಡಿ ಮಹಿಳಾ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕವನ ಸ್ಪರ್ಧೆಯಲ್ಲಿ ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಎಚ್.ಆರ್ ಸುಧಾ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ. 

ಶಿಲಾನ್ಯಾಸದಂದು ರಾಮ ಮಂದಿರ ಭಕ್ತರ ಆರಾಧನೆಗೆ ಮುಕ್ತ

ಕಬಳಿಕೆ ಯತ್ನ ತಪ್ಪಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ 

ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಹುಣಸೇಕಟ್ಟೆ ಗ್ರಾಮದ ಬಿ.ಕೆ ಸಂಗಮೇಶ್ವರ್ ಬಡಾವಣೆಯ ಸರ್ವೆ ನಂ.೮ ಮತ್ತು ೧೪ರಲ್ಲಿ ಪಾಳುಬಿದ್ದಿದ್ದ ಶ್ರೀ ರಾಮ ಮಂದಿರಕ್ಕೆ ಸುಣ್ಣಬಣ್ಣ ಬಳಿದು ಬಾಳೆದಿಂಡು, ಮಾವಿನ ಎಲೆ ಹಸಿರು ತೋರಣಗಳಿಂದ ಶೃಂಗಾರಗೊಳಿಸುತ್ತಿರುವುದು. 
ಭದ್ರಾವತಿ: ಸುಮಾರು ೭ ದಶಕಗಳ ಇತಿಹಾಸವಿದ್ದು, ಪಾಳುಬಿದ್ದಿದ್ದ ಶ್ರೀ ರಾಮಮಂದಿರವೊಂದು ಆಯೋಧ್ಯೆ ರಾಮಮಂದಿರ ಶಿಲಾನ್ಯಾಸದಂದು ಪುನಃ ಭಕ್ತರ ಆರಾಧನೆಗೆ ಮುಕ್ತಗೊಂಡಿರುವ ಘಟನೆ ನಡೆದಿದೆ.  
ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಹುಣಸೇಕಟ್ಟೆ ಗ್ರಾಮದ ಬಿ.ಕೆ ಸಂಗಮೇಶ್ವರ್ ಬಡಾವಣೆಯ ಸರ್ವೆ ನಂ.೮ ಮತ್ತು ೧೪ರಲ್ಲಿ ಶ್ರೀ ರಾಮ ಮಂದಿರವಿದ್ದು, ಹಲವಾರು ವರ್ಷಗಳಿಂದ ಈ ಮಂದಿರ ಪಾಳು ಬಿದ್ದಿತ್ತು. ಈ ನಡುವೆ ಮಂದಿರದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳಲು ಯತ್ನಿಸುತ್ತಿದ್ದರು. ಈ ವಿಚಾರವನ್ನು ಸ್ಥಳೀಯ ಮುಖಂಡರು, ಗ್ರಾಮಸ್ಥರು ಶಾಸಕ ಬಿ.ಕೆ ಸಂಗಮೇಶ್ವರ್ ಗಮನಕ್ಕೆ ತಂದಿದ್ದರು. 
ಶಾಸಕರು ಒತ್ತುವರಿ ಯತ್ನವನ್ನು ತಡೆದು ಜಾಗವನ್ನು ರಾಮಮಂದಿರದ ಅಧೀನದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನಲೆಯಲ್ಲಿ ರಾಮಮಂದಿರಕ್ಕೆ ಸುಣ್ಣಬಣ್ಣ ಬಳಿದು ಆಯೋಧ್ಯೆ ಶ್ರೀ ರಾಮ ಮಂದಿರ ಶಿಲಾನ್ಯಾಸದಂದು ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ಭಕ್ತರ ಆರಾಧನೆಗೆ ಮುಕ್ತಗೊಳಿಸಲಾಯಿತು. 
ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಹುಣಸೇಕಟ್ಟೆ ಗ್ರಾಮದ ಬಿ.ಕೆ ಸಂಗಮೇಶ್ವರ್ ಬಡಾವಣೆಯ ಸರ್ವೆ ನಂ.೮ ಮತ್ತು ೧೪ರಲ್ಲಿ ಪಾಳುಬಿದ್ದಿದ್ದ ಶ್ರೀ ರಾಮ ಮಂದಿರದಲ್ಲಿ ಆಯೋಧ್ಯೆ ರಾಮಮಂದಿರ ಶಿಲಾನ್ಯಾಸದಂದು ವಿಶೇಷ ಪೂಜೆ ಸಲ್ಲಿಸಿ ಭಕ್ತರ ಆರಾಧನೆಗೆ ಮುಕ್ತಗೊಳಿಸಲಾಯಿತು. 
ಅಲ್ಲದೆ ಕೊರೋನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರವಾಗಿ ಗುಣಮುಖರಾಗುವಂತೆ ಪ್ರಾರ್ಥಿಸಲಾಯಿತು. 
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಿತಾ ನಂಬಿಯಾರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷಪ್ಪ ಸೇರಿದಂತೆ ಇನ್ನಿತರ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.  

ದೇಶಭಕ್ತಿ ಗೀತೆ ಸ್ಪರ್ಧೆ : ವಿಜೇತರ ಆಯ್ಕೆ


ಭದ್ರಾವತಿ, ಆ. ೬: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆನ್‌ಲೈನ್ ಮುಖಾಂತರ ಹಮ್ಮಿಕೊಳ್ಳಲಾಗಿದ್ದ ದೇಶಭಕ್ತಿ ಗೀತೆಗಳ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಲಾಗಿದೆ. 
ಜ್ಯೂನಿಯರ್ ವಿಭಾಗದಲ್ಲಿ ನಗರದ ಚಂದನ ಪ್ರಥಮ ಸ್ಥಾನ, ಅಕ್ಷರಿಕೆ ದ್ವಿತೀಯ ಸ್ಥಾನ ಮತ್ತು ಶಿವಮೊಗ್ಗದ ಜಿ. ಸಾನ್ವಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ಸೀನಿಯರ್ ವಿಭಾಗದಲ್ಲಿ ಶರಾವತಿ ಪ್ರಥಮ ಸ್ಥಾನ, ಸಿ.ಎಸ್ ಆನಗ ದ್ವಿತೀಯ ಸ್ಥಾನ ಹಾಗೂ ಶಿವಮೊಗ್ಗದ ಗಾಯತ್ರಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಜೇತರನ್ನು ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ. 

ಫ್ರಾನ್ಸಿಸ್ ಡಯಾಸ್ ನಿಧನ

ಪ್ರಾನ್ಸಿಸ್ ಡಯಾಸ್ 
ಭದ್ರಾವತಿ, ಆ. ೬: ತಾಲೂಕು ಪಂಚಾಯಿತಿ ನಿವೃತ್ತ ಅಧಿಕಾರಿ ರೀಟಾರವರ ಪತಿ, ಎಂಪಿಎಂ ನಿವೃತ್ತ ಕಾರ್ಮಿಕ ಫ್ರಾನ್ಸಿಸ್ ಡಯಾಸ್(೭೦) ನಿಧನ ಹೊಂದಿದರು. 
ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ, ೪ ಮಂದಿ ಸಹೋದರಿಯರು, ೩ ಮಂದಿ ಸಹೋದರರು ಸೇರಿದಂತೆ ಬಂಧು-ಬಳಗ ಬಿಟ್ಟಗಲಿದ್ದಾರೆ. ಫ್ರಾನ್ಸಿಸ್ ಡಯಾಸ್ ಹವ್ಯಾಸಿ ಛಾಯಾಗ್ರಾಹಕರು ಸಹ ಆಗಿದ್ದರು. ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎನ್. ಕೃಷ್ಣಪ್ಪ, ಹಿರಿಯ ಪತ್ರಕರ್ತ ರವೀಂದ್ರನಾಥ(ಬ್ರದರ‍್ಸ್) ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. 
ನಗರದ ಮಿಲ್ಟ್ರಿಕ್ಯಾಂಪ್ ಬಳಿ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಗುರುವಾರ ಅಂತ್ಯ ಸಂಸ್ಕಾರ ನೆರವೇರಿತು. 

ಬೆಂಕಿಪುರ ಭದ್ರಾವತಿ ನಗರವಾಗಲು ಸರ್‌ಎಂವಿ ಕಾರಣ : ಬಿ.ಕೆ ಸಂಗಮೇಶ್ವರ್

ನಗರದ ರೈಲ್ವೆ ನಿಲ್ದಾಣ ಬಳಿ ಸರ್‌ಎಂವಿ ಪ್ರತಿಮೆ ಅನಾವರಣ 

ಭದ್ರಾವತಿ, ಆ. ೬: ವೆಂಕಿಪುರ, ಬೆಂಕಿಪುರ ಎಂಬ ಹೆಸರಿನಿಂದ ಕರೆಲ್ಪಡುತ್ತಿದ್ದ ಭದ್ರಾವತಿ ಇಂದು ನಗರವಾಗಿ ಗುರುತಿಸಿಕೊಳ್ಳಲು ಭಾರತರತ್ನ, ಸರ್.ಎಂ ವಿಶ್ವೇಶ್ವರಯ್ಯ ಕಾರಣಕರ್ತರು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
ಅವರು ಗುರುವಾರ ನಗರದ ರೈಲ್ವೆ ನಿಲ್ದಾಣದ ಬಿ.ಎಚ್ ರಸ್ತೆಗೆ ಹೊಂದಿ ಕೊಂಡಿರುವ ದ್ವಾರಬಾಗಿಲಿನಲ್ಲಿ ನಿರ್ಮಿಸಲಾಗಿರುವ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು. 
ನಗರದಲ್ಲಿ ವಿಶ್ವೇಶ್ವರಯ್ಯನವರು ವಿಐಎಸ್‌ಎಲ್ ಮತ್ತು ಎಂಪಿಎಂ ಈ ಎರಡು ಕಾರ್ಖಾನೆಗಳನ್ನು ಸ್ಥಾಪಿಸದಿದ್ದಲ್ಲಿ ಭದ್ರಾವತಿ ಹೆಸರು ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಿರಲಿಲ್ಲ. ಎರಡು ಕಾರ್ಖಾನೆಗಳ ಸ್ಥಾಪನೆಯಿಂದಾಗಿ ಸಾವಿರಾರು ಕುಟುಂಬಗಳು ನೆಲೆಕಂಡುಕೊಳ್ಳಲು ಸಾಧ್ಯವಾಗಿದೆ. ನಗರದ ಅನ್ನದಾತರಾಗಿರುವ ವಿಶ್ವೇಶ್ವರಯ್ಯನವರ ಪ್ರತಿಮೆ ಉದ್ಘಾಟನೆಗೊಳಿಸಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದರು. 
ಬಿಜೆಪಿ ತಾಲೂಕು ಅಧ್ಯಕ್ಷ ಎಂ. ಪ್ರಭಾಕರ ಮಾತನಾಡಿ, ವಿಶ್ವೇಶ್ವರಯ್ಯನವರು ಕೇವಲ ಭಾರತಕ್ಕೆ ಮಾತ್ರವಲ್ಲ ಜಗತ್ತಿನಲ್ಲಿ ಅತಿಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರಲ್ಲಿನ ಬುದ್ಧಿಶಕ್ತಿ, ಕ್ರಿಯಾಶೀಲತೆ, ಪ್ರಾಮಾಣಿಕಗಳಿಗೆ ಬೆಲೆಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದರು. 
ಯುವ ಮುಖಂಡ ಜಿ.ಆರ್ ಪ್ರವೀಣ್‌ಪಟೇಲ್ ಮಾತನಾಡಿ, ವಿಶ್ವೇಶ್ವರಯ್ಯನವರನ್ನು ನಗರದ ಅನ್ನದಾತ ಎಂದರೆ ತಪ್ಪಾಗಲಾರದು. ಅಂದಿನ ಕಾಲದಲ್ಲಿಯೇ ಹಲವಾರು ಕಾರ್ಖಾನೆಗಳು, ಜಲಾಶಯಗಳನ್ನು ನಿರ್ಮಾಣಮಾಡುವ ಜೊತೆಗೆ ತಮ್ಮ ೧೦೨ ವರ್ಷದ ಬದುಕಿನಲ್ಲಿ ಸಾರ್ಥಕತೆ ಕಂಡು ಕೊಂಡಿದ್ದರು. ಇಂತಹ ಮಹಾನ್ ವ್ಯಕ್ತಿಯನ್ನು ಪ್ರತಿ ಕ್ಷಣ ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. 
ರೈಲ್ವೆ ನಿಲ್ದಾಣದ ಬಿ.ಎಚ್ ರಸ್ತೆಗೆ ಹೊಂದಿ ಕೊಂಡಿರುವ ದ್ವಾರಬಾಗಿಲಿನಲ್ಲಿ ನಿರ್ಮಿಸಲಾಗಿರುವ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಗುರುವಾರ ಅನಾವರಣಗೊಳಿಸಿ ಮಾತನಾಡಿದರು. 
ಪ್ರತಿಮೆ ನಿರ್ಮಾಣದ ರೂವಾರಿ ಎನ್. ವಿಶ್ವನಾಥರಾವ್ ಮಾತನಾಡಿ, ಹಲವಾರು ಕಾರಣಗಳಿಂದಾಗಿ ಸುಮಾರು ೨ ವರ್ಷಗಳಿಂದ ಪ್ರತಿಮೆ ಉದ್ಘಾಟನೆಯಾಗಲಿಲ್ಲ. ಇದೀಗ ಉದ್ಘಾಟನೆಗೊಂಡಿರುವುದು ತುಂಬಾ ಸಂತಸವನ್ನುಂಟುಮಾಡಿದೆ. ಪ್ರತಿಮೆ ನಿರ್ಮಾಣಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
ನಗರಸಭೆ ಪೌರಾಯುಕ್ತ ಮನೋಹರ್, ಶಿಲ್ಪಿ ಎಸ್.ಜಿ ಶಂಕರಮೂರ್ತಿ ಮುಖಂಡರಾದ ವಿ. ಕದಿರೇಶ್, ಬಾಲಕೃಷ್ಣ, ಸುಬ್ರಮಣಿ, ಗಣೇಶ್‌ರಾವ್, ಹೇಮಾವತಿ ವಿಶ್ವನಾಥ್, ಶೋಭಾ, ಅನ್ನಪೂರ್ಣಸಾವಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.