![](https://blogger.googleusercontent.com/img/a/AVvXsEhRkJzAiOqzi4UVkAEWE31quF8U7qC0vGhAOq3DUHkfjA4mhwv1K7SAbb3X53R2zgoel60Eoti3D6BkeXjnvDWbdNB1ra2-SCxKGb2SCUPDJQAmXoZaIUIrRHE0Ok4rpSIMtIPNPZjDqLf7FRJupl5gD_p0vuulIaMewX6d_rkDX0kG6zehySfBfGI5kgb7=w400-h180-rw)
ಭದ್ರಾವತಿ ನಗರಸಭೆ ವತಿಯಿಂದ ಈ ಬಾರಿ ಹಲವು ಹೊಸ ಯೋಜನೆಗಳೊಂದಿಗೆ ೧೩೧.೦೬ ಲಕ್ಷ ರು. ಉಳಿತಾಯ ಬಜೆಟ್ ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಎಂ. ಮಣಿ ಎ.ಎನ್.ಎಸ್ ಮಂಡಿಸಿದರು.
ಭದ್ರಾವತಿ : ನಗರಸಭೆ ವತಿಯಿಂದ ಈ ಬಾರಿ ಹಲವು ಹೊಸ ಯೋಜನೆಗಳೊಂದಿಗೆ ೧೩೧.೦೬ ಲಕ್ಷ ರು. ಉಳಿತಾಯ ಬಜೆಟ್ ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಎಂ. ಮಣಿ ಎ.ಎನ್.ಎಸ್ ಮಂಡಿಸಿದರು.
ಆಯ-ವ್ಯಯದ ಆರಂಭಿಕ ಶಿಲ್ಕು ೧,೦೦೧.೧೬ ಲಕ್ಷ ರು. ಸೇರಿದಂತೆ ಒಟ್ಟು ಸ್ವಿಕೃತಿ ೧೦,೩೯೧.೬೦ ಲಕ್ಷ ರು. ಗಳಾಗಿವೆ. ಇದರಲ್ಲಿ ರಾಜಸ್ವ ಸ್ವಿಕೃತಿಗಳು ೪,೦೫೦ ಲಕ್ಷ ರು., ಬಂಡವಾಳ ಸ್ವಿಕೃತಿಗಳು ೪,೨೬೨ ಲಕ್ಷ ರು. ಮತ್ತು ಅಸಾಧಾರಣ ಸ್ವಿಕೃತಿಗಳು ೨,೦೭೯.೬೦ ಲಕ್ಷ ರು. ಸೇರಿವೆ ಎಂದರು.
ಒಟ್ಟು ವೆಚ್ಚ ೧೦,೨೬೦.೫೪ ಲಕ್ಷ ರು. ಗಳಾಗಿದ್ದು, ಇದರಲ್ಲಿ ರಾಜಸ್ವ ಪಾವತಿಗಳು ೩,೯೫೧.೬೦ ಲಕ್ಷ ರು., ಬಂಡವಾಳ ಪಾವತಿಗಳು ೪,೨೨೯.೩೪ ಲಕ್ಷ ರು., ಅಸಾಧಾರಣ ಪಾವತಿಗಳು ೨,೦೭೯.೬೦ ಲಕ್ಷ ರು. ಮತ್ತು ಆಯ-ವ್ಯಯದ ಆಖೈರು ಶಿಲ್ಕು ೧,೧೩೨.೨೨ ಲಕ್ಷ ರು. ಸೇರಿವೆ. ಈ ಒಟ್ಟು ೧೩೧.೦೬ ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಲಾಗುತ್ತಿದೆ. ಈ ಮೂಲಕ ನಗರದ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಎಲ್ಲರ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ಮೂಲಕ ನಗರದ ಸಮಗ್ರ ಅಭಿವೃದ್ಧಿಗೆ, ನಾಗರೀಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ೨೦೨೫-೨೬ ನೇ ಸಾಲಿನ ಬಜೆಟ್ ಮಂಡಿಸಲಾಗುತ್ತಿದೆ ಎಂದರು.
ಸ್ವಚ್ಚ-ಸುಂದರ ಭದ್ರಾವತಿಯನ್ನಾಗಿಸುವಲ್ಲಿ ಸರ್ಕಾರದ ಅನುದಾನ/ಯೋಜನೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಅನುಷ್ಠಾನಗೊಳಿಸಲು ಶಾಸಕರ ಬೆಂಬಲ ಮತ್ತು ನಗರಸಭೆಯ ಸರ್ವಸದಸ್ಯರ ಸಹಕಾರ ಕೋರುತ್ತಿದ್ದೇನೆ. ನಗರದ ನಾಗರೀಕರ ಪ್ರೋತ್ಸಾಹ ಸಹಾ ನಮಗೆ ಬಹಳ ಮುಖ್ಯವಾಗಿದೆ ಎಂದರು.
ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ಕಳೆದ ಸಾಲಿನ ವಾಸ್ತವ ಆದಾಯ ಮತ್ತು ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನ ಆದಾಯ ಮತ್ತು ವೆಚ್ಚದ ನಿರೀಕ್ಷೆ ಹೊಂದಿ ಈ ಬಾರಿ ಬಜೆಟ್ ಸಿದ್ದಪಡಿಸಲಾಗಿದೆ. ನಗರದ ಪ್ರಮುಖ ರಸ್ತೆಗಳು ಮತ್ತು ಒಳ ರಸ್ತೆಗಳನ್ನು ಕಸ ಮುಕ್ತ ರಸ್ತೆಗಳನ್ನಾಗಿ ಪರಿವರ್ತಿಸುವಲ್ಲಿ ಪ್ರತಿ ದಿನ ಮುಂಜಾನೆಯಲ್ಲಿ ತಪ್ಪದೇ ಮನೆ-ಮನೆ ಕಸ ಸಂಗ್ರಹಣೆ ಮಾಡು ಮೂಲಕ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಘನ ತ್ಯಾಜ ನಿರ್ವಹಣಾ ಘಟಕಕ್ಕೆ ಸಾಗಿಸಿ ಪರಿಷ್ಕರಿಸುವಂತಹ ಮಹತ್ಕಾರ್ಯ ನಿರ್ವಹಿಸುತ್ತಿರುವ, ನಗರವನ್ನು ಸುಂದರವನ್ನಾಗಿಸುವ ನಿಟ್ಟಿನಲ್ಲಿ ನಮ್ಮೊಂದಿಗೆ ಕೈ ಜೋಡಿಸಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಅಭಿಮಾನದ ಚಪ್ಪಾಳೆ ಮೂಲಕ ಅಭಿನಂದಿಸುತ್ತೇನೆ ಎಂದರು.
ಆಧುನಿಕ ಮನು, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಗರದ ಬಿ.ಎಚ್ ರಸ್ತೆ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ನಿರ್ಮಿಸಲಾಗಿದ್ದು, ಜ.೨೬ರಂದು ಅನಾವರಣಗೊಳಿಸಲಾಗಿದೆ. ಇದೆ ದಿನ ನಗರಸಭೆ ವತಿಯಿಂದ ನಿರ್ಮಿಸಲಾಗಿರುವ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣಗೊಳಿಸಲಾಗಿದೆ. ಅಲ್ಲದೆ ನಗರದ ರಂಗಪ್ಪ ವೃತ್ತ ಸಮೀಪದ ಜೈಭೀಮ್ ನಗರದಲ್ಲಿ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ನಿರ್ಮಿಸಲಾಗಿರುವ ಜಿ+೩ ಮಾದರಿಯ ಗುಂಪು ಮನೆಗಳ ವಸತಿ ಸಮುಚ್ಛಯಗಳನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು.
ಈಗಾಗಲೇ ನಗರಸಭೆ ವತಿಯಿಂದ ನಗರ ಭೂ ಸಾರಿಗೆ ನಿರ್ದೇಶನಾಲಯ ಇಲಾಖೆ ವತಿಯಿಂದ ತರೀಕೆರೆ ರಸ್ತೆಯ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಹಿಂಬದಿಯಲ್ಲಿರುವ ಕನ್ಸರ್ವೆನ್ಸಿ ಜಾಗದಲ್ಲಿ ಸುಮಾರು ೪೪ ಲಕ್ಷ ರು. ಅನುದಾನದಲ್ಲಿ ಸುಸಜ್ಜಿತ ದ್ವಿಚಕ್ರ ವಾಹನ ನಿಲುಗಡೆ ತಾಣ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಉದ್ಘಾಟಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲಾಗುವುದು. ಯುವ ಶಕ್ತಿಯನ್ನು ರಚನಾತ್ಮಕ ಮತ್ತು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಲು ಅವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಹ ಫಲಾನುಭವಿಗಳಿಗೆ ಸಹಾಯಧನ ಬ್ಯಾಂಕ್ ಎಂಡ್ ಸಬ್ಸಿಡಿಯನ್ನಾಗಿ ಬ್ಯಾಂಕ್ಗಳ ಮುಖಾಂತರ ಸಾಲ ಸೌಲಭ್ಯ ನೀಡಲು ಕ್ರಮವಹಿಸಿ ಈ ಮೂಲಕ ಯುವ ಶಕ್ತಿಯನ್ನು ಸಬಲೀಕರಣಗೊಳಿಸಲಾಗುತ್ತಿದೆ. ಸರ್ವರಿಗೂ ಸೂರು ಪರಿಕಲ್ಪನೆಯಡಿ ವಸತಿ ರಹಿತ ನಿರಾಶ್ರಿತರಿಗೆ ಆಶ್ರಯ ತಂಗುದಾಣ ಪ್ರಾರಂಭಿಸಿದ್ದು, ಗುಣಮಟ್ಟದ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ನಗರದ ಸ್ತ್ರೀ ಸಶಕ್ತಿಕರಣಗೊಳಿಸಲನುವಾಗುವಂತೆ ರಚಿಸಲಾದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ, ಮುಂತಾದ ಕಾರ್ಯಕ್ರಮಗಳನ್ನು ಒದಗಿಸುವ ಮೂಲಕ ಸರ್ಕಾರದ ಪ್ರೋತ್ಸಾಹ ಧನ ನೀಡಿ ಸಬಲೀಕರಣಗೊಳಿಸಲಾಗುತ್ತಿದೆ ಎಂದರು.
ನಗರದಲ್ಲಿ ಘನತಾಜ್ಯ ನಿರ್ವಹಣೆ ಮತ್ತಷ್ಟು ಪರಿಣಾಮಕಾರಿಯಾಗಿಸಲು ಹಾಗು ಸರ್ಕಾರದ ನಿರ್ದೇಶನದ ಮೇರೆಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಪರಿಷ್ಕೃತ ದರ ಜಾರಿಗೊಳಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ೧.೧೫ ಕೋ. ರು. ಹೆಚ್ಚುವರಿಯಾಗಿ ನಿರೀಕ್ಷಲಾಗಿದೆ. ಸ್ವಚ್ಛ ಭಾರತ್ ಮಿಷನ್-೨.೦ ಯೋಜನೆಯಡಿ ೫.೨೯ ಕೋ. ರು. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಮೆಟಿರಿಯಲ್ ರಿಕವರಿ ಫೆಸಿಲಿಟಿ ಸ್ಥಾಪಿಸಲು ಪ್ರಾಥಮಿಕ ಹಂತದ ಶೆಡ್ ನಿರ್ಮಾಣ ಹಾಗು ಯಂತ್ರೋಪಕರಣ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ೧೫ನೇ ಹಣಕಾಸು ಅನುದಾನದಲ್ಲಿ ಪೈಪ್ ಲೈನ್, ಮಳೆ ನೀರು ಚರಂಡಿ, ರಸ್ತೆ ಅಭಿವೃದ್ಧಿ, ವಿದ್ಯುತ್ ಸಂಬಂಧಿಸಿದ ಕಾಮಗಾರಿ ಹಾಗು ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಎಸ್ಎಫ್ಸಿ ವಿಶೇಷ ಅನುದಾನ ೧೫ ಕೋ. ರು. ಮಂಜೂರಾಗಿದ್ದು, ಈ ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳಿಂದ ಕ್ರಿಯಾಯೋಜನೆ ಮಂಜೂರಾಗಿದೆ. ಕೆಆರ್ಐಡಿಎಲ್ ಮುಖಾಂತರ ಕಾಮಗಾರಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಎಸ್.ಎಫ್.ಸಿ ಪ್ರೋತ್ಸಾಹ ಅನುದಾನದಡಿಯಲ್ಲಿ ಕನಕ ಮಂಟಪ ಮೈದಾನದ ಹತ್ತಿರ ನಗರಸಭೆ ಅಧಿಕಾರಿಗಳು ಮತ್ತು ನೌಕರರಿಗೆ ಜಿ+೩ ಮಾದರಿಯ ವಸತಿ ಗೃಹಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಉಪಯೋಗಕ್ಕಾಗಿ ನೀಡಲಾಗುವುದು. ಪೌರಾಡಳಿತ ನಿರ್ದೇಶನಾಲಯದ ಅಧಿಸೂಚನೆಯಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನೆರೆಹೊರೆ ಗುಂಪು ಹಾಗು ಪ್ರದೇಶ ಸಭಾ ಮತ್ತು ವಾರ್ಡ್ ಸಮಿತಿಗಳನ್ನು ರಚಿಸಲು ಈಗಾಗಲೇ ಕ್ರಮವಹಿಸಲಾಗಿದ್ದು, ಇದರಿಂದ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲುನುವಾಗುವಂತೆ ಕ್ರಮವಹಿಸಲು ಉದ್ದೇಶಿಸಲಾಗಿದೆ. ಸರ್ಕಾರದ ಆದೇಶದಂತೆ ನಗರ ವ್ಯಾಪ್ತಿಯಲ್ಲಿರುವ ಸುಮಾರು ೫ ಸಾವಿರ ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮವಹಿಸಲಾಗುವುದು. ಅಮೃತ್ ೨.೦ ಯೋಜನೆಯಡಿಯಲ್ಲಿ ಉಜ್ಜನಿಪುರ ಕೆರೆ ಅಭಿವೃದ್ಧಿ ಹಾಗು ಉದ್ಯಾನವನಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಮತ್ತು ನಗರದ ನ್ಯೂಟೌನ್ ಭಾಗದಲ್ಲಿ ಒಂದು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಲು ಕ್ರಮವಹಿಸಲಾಗುವುದು ಎಂದರು.
ಹೊಸಮನೆ ಮುಖ್ಯರಸ್ತೆಯ ಸಂತೆ ಮೈದಾನದಲ್ಲಿ ನಡೆಯುವ ವಾರದ ಸಂತೆಯನ್ನು ಎಲ್ಲರ ಅಭಿಪ್ರಾಯ ಪಡೆದು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಿ ಈ ಜಾಗದಲ್ಲಿ ನಗರಸಭೆ ನೂತನ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ವಿಸ್ತೃತಾ ಯೋಜನಾ ವರದಿ(ಡಿಪಿಆರ್) ತಯಾರಿಸಲಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ಡಿಪಿಆರ್ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು. ವಾರ್ಡ್ ನಂ.೮, ೯, ೧೦ ಮತ್ತು ೧೧ರಲ್ಲಿ ಪ್ರಾಯೋಗಿಕವಾಗಿ ೨೪*೭ ಕುಡಿಯುವ ನೀರಿಗೆ ಮೀಟರ್ ಅಳವಡಿಸಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಲಾಗುವುದು ಎಂದರು.
ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ನ್ಯೂಟೌನ್ ಭಾಗದಲ್ಲಿ ಹಾಗು ಹಳೇನಗರ ಬಸವೇಶ್ವರ ವೃತ್ತದಲ್ಲಿ ಸುಸಜ್ಜಿತವಾದ ಫುಡ್ ಕೋರ್ಟ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನ್ಯೂಟೌನ್ ಭಾಗದ ನಾಗರಿಕರಿಗೆ ಅನುಕೂಲವಾಗುವಂತೆ ಜನ್ನಾಪುರ ಎನ್.ಟಿ.ಬಿ ಶಾಖಾ ಕಛೇರಿ ಕಟ್ಟಡದಲ್ಲಿ ಆಸ್ತಿ ತೆರಿಗೆ ಪಾವತಿ, ನೀರಿನ ಶುಲ್ಕ ಹಾಗು ಇತರೆ ಶುಲ್ಕಗಳ ಪಾವತಿಗೆ ಅನುಕೂಲವಾಗುವಂತೆ ಒಂದು ಬ್ಯಾಂಕ್ ಕೌಂಟರ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ನಗರಸಭೆ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಆಕರ್ಷಣಕಾರಿಯಾಗಿ ಕಾಣಲು ವಿದ್ಯುತ್ ಅಲಂಕೃತಗೊಂಡ ಕಾರಂಜಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಹಳೇನಗರ ನೀರು ಶುದ್ಧೀಕರಣ ಘಟಕದಲ್ಲಿ ಜಾಕ್ವೆಲ್ ಮತ್ತು ಇನ್ ಟೆಕ್ ವೆಲ್ ನಿರ್ಮಾಣ ಮಾಡಲು ಈಗಾಗಲೇ ೩.೨೩ ಕೋ. ರು. ಅನುದಾನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನಗರಸಭೆ ವಂತಿಕೆಯನ್ನು ವರ್ಗಾಯಿಸಿ ಇಲಾಖೆಯಿಂದ ಕಾಮಗಾರಿ ಅನುಷ್ಠಾನಗೊಳಿಸಲು ಕ್ರಮವಹಿಸಲು ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಮುಖ ೫ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ಸಭೆಯಲ್ಲಿ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಸೈಯದ್ ರಿಯಾಜ್ ಉಪಸ್ಥಿತರಿದ್ದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗು ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು ಪಾಲ್ಗೊಂಡಿದ್ದರು. ಬಜೆಟ್ ಮಂಡನೆಯಲ್ಲಿನ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು ೧ ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಯಿತು.