Monday, December 21, 2020

ನಗರ ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯರಿಗೆ ಪೌರಾಯುಕ್ತ ಮನೋಹರ್ ಅಭಿನಂದನೆ

ಭದ್ರಾವತಿ ನಗರ ಆಶ್ರಯ ಸಮಿತಿಗೆ ಸರ್ಕಾರದಿಂದ ನಾರ್ಮನಿರ್ದೇಶನಗೊಂಡಿರುವ ನೂತನ ಸದಸ್ಯರನ್ನು ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಅಭಿನಂದಿಸಿದರು.
  ಭದ್ರಾವತಿ, ಡಿ. ೨೧: ನಗರ ಆಶ್ರಯ ಸಮಿತಿಗೆ ಸರ್ಕಾರದಿಂದ ನಾರ್ಮನಿರ್ದೇಶನಗೊಂಡಿರುವ ನೂತನ ಸದಸ್ಯರನ್ನು ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಅಭಿನಂದಿಸಿದರು.
   ಸಾಮಾನ್ಯ ವರ್ಗದಿಂದ ಭಂಡಾರಹಳ್ಳಿ ನಿವಾಸಿ ದೇವರಾಜ್, ಹಿಂದುಳಿದ ವರ್ಗದಿಂದ ಹುತ್ತಾ ಕಾಲೋನಿ ನಿವಾಸಿ ಸತೀಶ್‌ಕುಮಾರ್, ಅಲ್ಪ ಸಂಖ್ಯಾತರ ವರ್ಗದಿಂದ ಜೈನ ಸಮಾಜದ ಭೂತನಗುಡಿ ನಿವಾಸಿ ಸಂಪತ್‌ರಾಜ್ ಬಾಂಟಿಯಾ ಮತ್ತು ಪರಿಶಿಷ್ಟ ಜಾತಿ ವರ್ಗದಿಂದ ಅರಳಿಹಳ್ಳಿ ಬಸಲೀಕಟ್ಟೆ ಗ್ರಾಮದ ನಿವಾಸಿ ಗೌರಮ್ಮರವರು ನಾಮನಿರ್ದೇಶನಗೊಂಡಿದ್ದಾರೆ. ಈ ೪ ಸದಸ್ಯರನ್ನು ಪೌರಾಯುಕ್ತರು ಅಭಿನಂದಿಸುವ ಮೂಲಕ ಸಮಿತಿಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವ ಜೊತೆಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
   ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ನಗರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ನಾಮನಿರ್ದೇಶಿತ ಸದಸ್ಯ ಮಂಗೋಟೆ ರುದ್ರೇಶ್, ಸೂಡಾ ಸದಸ್ಯ ವಿ. ಕದಿರೇಶ್, ಕೆ. ಮಂಜಪ್ಪ, ರಾಜು, ಸುನಿತಾ, ಸರಸ್ವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದುರಸ್ತಿಯಲ್ಲಿ ತೊಡಗಿದ್ದ ವ್ಯಕ್ತಿ ವಿದ್ಯುತ್ ಕಂಬದಲ್ಲೇ ಸಾವು

ವಿದ್ಯುತ್ ದುರಸ್ತಿಯಲ್ಲಿ ತೊಡಗಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಕಂಬದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಭದ್ರಾವತಿ ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಭದ್ರಾವತಿ, ಡಿ. ೨೧: ವಿದ್ಯುತ್ ದುರಸ್ತಿಯಲ್ಲಿ ತೊಡಗಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಕಂಬದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿ ನಡೆದಿದೆ.
    ಸುರೇಶ್(೨೧) ಎಂಬಾತ ಮೃತಪಟ್ಟಿದ್ದು, ಗ್ರಾಮದ ಸರ್ವೆ ನಂ.೬ರ ಅಣ್ಣಯ್ಯ ಎಂಬುವರ ಜಮೀನಿನ ಬೋರ್ವೆಲ್‌ಗೆ ಸಂಪರ್ಕಗೊಂಡಿದ್ದ ವಿದ್ಯುತ್ ಕಡಿತಗೊಂಡಿದ್ದು, ಈ ಹಿನ್ನಲೆಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ಕಂಬದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳು ಮತದಾನದ ಬಗ್ಗೆ ಅರಿವು ಹೊಂದಲಿ : ಟಿ.ಎನ್ ಸೋಮಶೇಖರಯ್ಯ

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಭದ್ರಾವತಿಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಚಾಲನೆ ನೀಡಿದರು.
ಭದ್ರಾವತಿ, ಡಿ. ೨೧: ವಿದ್ಯಾರ್ಥಿಗಳು ದೇಶದ ಭವಿಷ್ಯದ ಪ್ರಜೆಗಳಾಗಿದ್ದು, ಮತದಾನದ ಬಗ್ಗೆ ಅರಿವು ಹೊಂದಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಕರೆ  ನೀಡಿದರು.
ಅವರು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
     ೧೮ ವರ್ಷ ಪೂರೈಸಿದ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಹೊಂದಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಬೇಕೆಂದು ಕರೆ ನೀಡಿದರು.
   ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಜಾಥಾ ನಡೆಸಲಾಯಿತು. ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ ಮೂಲಕ, ಸಿ.ಎನ್ ರಸ್ತೆ, ನಂತರ ಕನಕಮಂಟಪ ಮೈದಾನದವರೆಗೂ ಜಾಥಾ ಸಾಗಿತು.  
    'ಮತದಾರರು ತಮ್ಮ ಪವಿತ್ರ ಮತಗಳನ್ನು ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗಿ ಮಾರಿಕೊಳ್ಳಬೇಡಿ', 'ಕಡ್ಡಾಯವಾಗಿ ಮತದಾನ ಮಾಡಿ' ಇತ್ಯಾದಿ ಘೋಷ ವಾಕ್ಯಗಳೊಂದಿಗೆ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.  


ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭದ್ರಾವತಿಯಲ್ಲಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಜಾಥಾ ನಡೆಸಲಾಯಿತು.
    ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ಕ್ಷೇತ್ರ ಸಮನ್ವಯಾಧಿಕಾರಿ ವೈ. ಗಣೇಶ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪಂಚಾಲ್, ಕನಕ ವಿದ್ಯಾಸಂಸ್ಥೆ ಮಂಜುನಾಥ್, ಸಹ್ಯಾದ್ರಿ ಪ್ರೌಢಶಾಲೆ ಸಂಪನ್ಮೂಲ ಶಿಕ್ಷಕ ಬಿ. ಮಂಜಪ್ಪ, ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರುಗಳು, ಶಾಲಾ ಹಂತದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು ೩೦೦ ವಿದ್ಯಾರ್ಥಿಗಳು, ಶಿಕ್ಷಣ ಸಂಯೋಜಕರು, ಬಿಆರ್‌ಪಿಗಳು ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
    ಮತದಾರರ ಸಾಕ್ಷರತಾ ಸಂಘ(ಇಎಲ್‌ಸಿ) ತಾಲೂಕು ನೋಡಲ್ ಅಧಿಕಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಆಹ್ಮದ್ ಪರ್ವೀಜ್ ಸ್ವಾಗತಿಸಿದರು. ಇಸಿಓ ಶ್ಯಾಮಲಾ ನಿರೂಪಿಸಿದರು. ಸಂಪನ್ಮೂಲ ಶಿಕ್ಷಕ ಎಂ.ಜಿ ನವೀನ್ ವಂದಿಸಿದರು.
     ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತದಾನ ವ್ಯವಸ್ಥೆ ಮತ್ತು ಮತದಾರರು ಪರಿಕಲ್ಪನೆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಸ್ಫರ್ಧೆ, ಭಿತ್ತಿಚಿತ್ರ ಮತ್ತು  ಕೊಲೇಜ್ ಮೇಕಿಂಗ್ ಹಾಗೂ ರಸಪ್ರಶ್ನೆ ಒಟ್ಟು ೪ ರೀತಿಯ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.
    ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು:
    ಪ್ರಬಂಧ ಸ್ಪರ್ಧೆ(ಕನ್ನಡ ಭಾಷೆ)ಯಲ್ಲಿ ಅನುಷ ಎಸ್. (ನ್ಯಾಷನಲ್ ಪ್ರೌಢಶಾಲೆ, ಬಿ.ಆರ್.ಪ್ರಾಜೆಕ್ಟ್), ಅಕ್ಷತ ಎಂ ಶೇಟ್ (ಸೇಂಟ್ ಮೇರಿಸ್ ಶಾಲೆ, ಹೊಳೆಹೊನ್ನೂರು) ಪ್ರಿಯಾಂಕ ವಿ. ಕರ್ನಾಟಕ ಪಬ್ಲಿಕ್ ಶಾಲೆ, ಅಂತರಗಂಗೆ ಮತ್ತು  ಭಿತ್ತಿ ಪತ್ರ ಹಾಗು ಕೊಲೇಜ್ ಮೇಕಿಂಗ್ ಸ್ಪರ್ಧೆಯಲ್ಲಿ ವಿನಾಯಕ ಎಂ.ಎಸ್. (ಸೇಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲೆ, ನ್ಯೂಟೌನ್), ಹರ್ಷಿತ ಎಸ್ (ಶ್ರೀ ಕನಕ ವಿದ್ಯಾ ಸಂಸ್ಥೆ, ಹಳೇ ನಗರ), ಇಂಪನ ಜಿ.ಎಂ. (ಸರ್ಕಾರಿ ಬಾಲಿಕಾ ಪ್ರೌಢಶಾಲೆ, ನ್ಯೂಟೌನ್) ಹಾಗು ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪೂರ್ಣಚಂದ್ರ & ತನುಶ್ರೀ ಎ (ಸಹ್ಯಾದ್ರಿ ಇಂಗ್ಲಿಷ್ ಪ್ರೌಢಶಾಲೆ, ಹುತ್ತಾ ಕಾಲೋನಿ), ಮೇಘನ ಆರ್. & ಭೂಮಿಕ ಐ. (ಸರ್ಕಾರಿ ಪ್ರೌಢಶಾಲೆ, ಬಾಳೆಮಾರನಹಳ್ಳಿ), ತುಳಸಿ ಬಿ ಕೆ. & ನಚಿಕೇತನ್ ಎಂ (ಶ್ರೀ ಆದಿಚುಂಚನಗಿರಿ ಆಂಗ್ಲಪ್ರೌಢಶಾಲೆ, ಕಾರೆಹಳ್ಳಿ) ಮತ್ತು ಪ್ರಬಂಧ ಸ್ಪರ್ಧೆ(ಆಂಗ್ಲ ಭಾಷೆ)ಯಲ್ಲಿ ನಿಫಾ (ಶ್ರೀ ಕನಕ ವಿದ್ಯಾ ಸಂಸ್ಥೆ, ಹಳೇ ನಗರ), ಭೂಮಿಕ ಜಿ (ಪೇಪರ್ ಟೌನ್ ಆಂಗ್ಲ ಪ್ರೌಢಶಾಲೆ) ಹಾಗು ಹಿತೇಶ ಎಲ್. (ಸರ್ಕಾರಿ ಪ್ರೌಢಶಾಲೆ, ಹೊಸ ಸಿದ್ಧಾಪುರ).