Saturday, December 12, 2020

ತಕ್ಷಣ ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಿ : ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ನೌಕರರು ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
     ಭದ್ರಾವತಿ, ಡಿ. ೧೨: ಸರ್ಕಾರ ತಕ್ಷಣ ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಶಾಸಕ ಬಿ ಕೆ ಸಂಗಮೇಶ್ವರ್ ಆಗ್ರಹಿಸಿದರು.
     ಅವರು ಶನಿವಾರ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಮುಷ್ಕರ ನಡೆಸುತ್ತಿರುವ ನೌಕರರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಹೋರಾಟ ನಡೆಸುವುದು ಪ್ರತಿಯೊಬ್ಬರ ಹಕ್ಕು. ನೌಕರರನ್ನು ಎಸ್ಮಾ ಕಾಯ್ದೆ ಮೂಲಕ ಬೆದರಿಸುವುದು ಸರಿಯಲ್ಲ. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೂ ನೌಕರರು ಮನವಿ ಸಲ್ಲಿಸಿದ್ದರು. ಆದರೆ ಕೆಲವು ಕಾರಣಾಂತರಗಳಿಂದ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗಿನ ಪರಿಸ್ಥಿತಿಯಲ್ಲಿ ನೌಕರರು ತಮಗೆ ಬರುವ ವೇತನದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ನೌಕರರ ಸೌಲಭ್ಯಗಳು ಇವರಿಗೂ ಸಿಗುವಂತಾಗಬೇಕೆಂದರು.
     ಪ್ರಸ್ತುತ ರಾಜ್ಯದಲ್ಲಿರುವ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ಮುಚ್ಚಿ ಹೋಗುತ್ತಿವೆ. ನಿರುದ್ಯೋಗ ಸಮಸ್ಯೆ ಹಾಗು ಬಡತನ ಹೆಚ್ಚಾಗುತ್ತಿದೆ. ಇವುಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
     ಮುಷ್ಕರ ನಿರತ ಮುಖಂಡರು ಮಾತಮಾಡಿ, ಸರ್ಕಾರದ ವಿರುದ್ಧ ಹೋರಾಟ ನಡೆಸುವ ಅಗತ್ಯವಿರಲಿಲ್ಲ. ಆರಂಭದಲ್ಲಿ ನಾವುಗಳು ಮುಖ್ಯಮಂತ್ರಿಗಳಿಗೆ ಕೇವಲ ಮನವಿ ಸಲ್ಲಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಮುಖ್ಯಮಂತ್ರಿಗಳು ನಮ್ಮ ಮನವಿ ಸ್ವೀಕರಿಸುವ ಬದಲು ನೌಕರರ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ೧,೩೬,೦೦೦ ನೌಕರರಿಗೆ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆಂದು ದೂರಿದರು. ಈ ಹಿನ್ನಲೆಯಲ್ಲಿ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದರು.
      ಪ್ರಮುಖರಾದ ನಾರಾಯಣ, ದೇವರಾಜ್, ಚಲುವರಾಜ್, ಸುರೇಂದ್ರ, ಶಕುಂತಲ, ಸಂಗೀತ, ರೇಣುಕಾ ಸೇರಿದಂತೆ ಭದ್ರಾವತಿ ಘಟಕದಲ್ಲಿ ನಿರ್ವಹಿಸುತ್ತಿರುವ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರಿಡಿ : ಒಕ್ಕಲಿಗ ಸಮಾಜ ಮನವಿ

ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಆಗ್ರಹಹಿಸಿ ಒಕ್ಕಲಿಗರ ಸಂಘದವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೧೨: ಕಳೆದ ೪ ತಿಂಗಳ ಹಿಂದೆ ಮೃತಪಟ್ಟ ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಆಗ್ರಹಹಿಸಿ ಒಕ್ಕಲಿಗರ ಸಂಘದವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
     ಅಪ್ಪಾಜಿಯವರು ಒಕ್ಕಲಿಗ ಸಮುದಾಯದ ನಾಯಕರಾಗಿದ್ದು, ಎಲ್ಲಾ ಸಮುದಾಯಗಳ ಏಳಿಗೆಗಾಗಿ ಹಾಗು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಲ್ಲದೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಹೆಸರನ್ನು ನಾಮಕರಣಗೊಳಿಸಬೇಕೆಂದು ಮನವಿ ಮಾಡಲಾಗಿದೆ.
    ಸಮಾಜದ ಪ್ರಮುಖರಾದ ವಿ. ವೆಂಕಟೇಶ್, ವೈ. ಜಯರಾಮ್, ಎನ್. ರಾಮಕೃಷ್ಣ, ಸಾವಿತ್ರಿ ಪುಟ್ಟೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಡಿ.೧೪ರಂದು ದತ್ತಿ ಕಾರ್ಯಕ್ರಮ

ಭದ್ರಾವತಿ, ಡಿ. ೧೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿವೃತ್ತ ಪಶು ವೈದ್ಯ ಡಾ. ಜಿ.ಎಂ. ನಟರಾಜ್‌ರವರ ಸಹಕಾರದೊಂದಿಗೆ ಶಿವಲಿಂಗಮ್ಮ ಡಾ. ಜಿ.ಎಂ ಮುರುಗೇಂದ್ರಯ್ಯ ದತ್ತಿ ಕಾರ್ಯಕ್ರಮ ಡಿ.೧೪ರ ಬೆಳಿಗ್ಗೆ ೧೦.೩೦ಕ್ಕೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.
     ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಫ್ ಕುಟ್ರಿ ಉದ್ಘಾಟಿಸಲಿದ್ದು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಎಂ. ದಿವಾಕರ್ ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ ನೀಡಲಿದ್ದಾರೆ.
     ಡಾ. ಜಿ.ಎಂ ನಟರಾಜ್, ಉಪ ಪ್ರಾಂಶುಪಾಲರಾದ ಟಿ.ಎಸ್ ಸುಮನ, ಅಧ್ಯಾಪಕ ಎಂ.ಬಿ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಸಾಪ ಕಾರ್ಯದರ್ಶಿ ಚನ್ನಪ್ಪ ಆಶಯ ನುಡಿಗಳನ್ನಾಡಲಿದ್ದು, ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿ ವೈ.ಕೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಶಿಕ್ಷಕ ಎಂ.ಆರ್ ರೇವಣಪ್ಪ ರವರ ’ನನ್ನೊಳಗೆ’ ಕವನ ಸಂಕಲನ, ಆಲ್ಬಮ್ ಬಿಡುಗಡೆ

ಭದ್ರಾವತಿ ಶಿಕ್ಷಕ ಎಂ.ಆರ್ ರೇವಣಪ್ಪ ರವರ 'ನನ್ನೊಳಗೆ' ಕವನ ಸಂಕಲನ, ಆಲ್ಬಮ್ ಬಿಡುಗಡೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಬಿಡುಗಡೆಗೊಳಿಸಿದರು.
    ಭದ್ರಾವತಿ, ಡಿ. ೧೨: ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ  ತಾಲೂಕಿನ ಸುಲ್ತಾನಮಟ್ಟಿ ಸ.ಕಿ.ಪ್ರಾ ಶಾಲೆ ಮುಖ್ಯ ಶಿಕ್ಷಕ ಎಂ.ಆರ್ ರೇವಣಪ್ಪ ರವರ 'ನನ್ನೊಳಗೆ'  ಕವನ ಸಂಕಲನ ಹಾಗು ೩೦ ವರ್ಷಗಳ ಸಾಧನೆಯ ೩ನೇ ಆಲ್ಬಮ್  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಬಿಡುಗಡೆಗೊಳಿಸಿದರು.
    ಸಿದ್ದಬಸಪ್ಪ, ಕೂಬಾನಾಯ್ಕ, ಲೋಹಿತೇಶ್, ಧನಂಜಯ ಮಹದೇವಪ್ಪ, ಸಲೀಂ ಸೈಯದ್ ನೂರ್, ಮುಕ್ತಿಯಾರ್ ಅಹಮದ್, ಜಬ್ಬರ್ ಖಾನ್, ಮಲ್ಲಿಕಾರ್ಜುನ್,  ಜಯಕುಮಾರ್,  ಜಗದೀಶ್  ತಿಪ್ಪೇಶಪ್ಪ,  ರಾಜನಾಯ್ಕ,  ದೇವರಾಜ್ ನಾಯ್ಕ,  ನಾಗರಾಜ್ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ : ಈ ಬಾರಿ ಕಲಾಪ ರಾಜ್ಯದ ಜನರಿಗೆ ಮಾಡಿರುವ ದ್ರೋಹದ ಕಲಾಪ

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಸಂದರ್ಭದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ

ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಡಿ. ೧೨: ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಈ ಬಾರಿ ವಿಧಾನಸಭೆ ಕಲಾಪ ರಾಜ್ಯದ ಜನರಿಗೆ ಮಾಡಿರುವ ದ್ರೋಹದ ಕಲಾಪವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪಿಸಿದರು.
     ಅವರು ಶನಿವಾರ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಈ ರೀತಿಯ ಕಲಾಪವನ್ನು ಎಂದಿಗೂ ನೋಡಿಲ್ಲ. ಸರ್ಕಾರ ವಿರೋಧ ಪಕ್ಷವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು ರಾಜ್ಯದ ಜನರ ಹಲವಾರು ಸಮಸ್ಯೆಗಳನ್ನು ಚರ್ಚಿಸಲು ಮುಂದಾಗಿದ್ದರು. ಆದರೆ ಯಾವುದೇ ಚರ್ಚೆಯನ್ನು ಸಹ ನಡೆಸಲು ಅವಕಾಶ ನೀಡದೆ ತಮಗೆ ಬೇಕಾದ ಮಸೂದೆಗಳನ್ನು ಅನುಮೋದಿಸಿಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈ ಬಾರಿ ಕಲಾಪ ರಾಜ್ಯದ ಸಮಸ್ತ ಜನರಿಗೆ ಮಾಡಿರುವ ದ್ರೋಹದ ಕಲಾಪವಾಗಿದೆ. ರಾಜ್ಯದಲ್ಲಿ ನಿರುದ್ಯೋಗ, ಬಡತನ ಹೆಚ್ಚಾಗುತ್ತಿದೆ. ಜನಸಾಮಾನ್ಯರು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಸರ್ಕಾರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಸುತ್ತಿದೆ ಎಂದು ದೂರಿದರು.