ಸರ್ಕಾರಕ್ಕೆ ಮನವಿ ಮಾಡಿದ ನಾಗರಾಜ್ ಕೊಣನೂರ್
ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಿದ್ದತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭದ್ರಾವತಿ, ಆ. ೧೦: ಕೆಲಸಕ್ಕಾಗಿ ಅಲೆದಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಹಾಗೂ ಪರೀಕ್ಷೆಗಳು ನಡೆಸುವ ಪರೀಕ್ಷಾ ಪ್ರಾಧಿಕಾರಗಳು ಉಚಿತವಾಗಿ ಅರ್ಜಿಶುಲ್ಕವಿಲ್ಲದೇ ಪರೀಕ್ಷೆಗಳನ್ನು ನಡೆಸಿದರೆ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷಾ ಮನೋಭಾವ ಹೆಚ್ಚುತ್ತದೆ ಎಂದು ನಾಗರಾಜ್ಕೋಣನೂರ್ ಹೇಳಿದರು.
ಅವರು ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಿದ್ದತಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಅರ್ಜಿ ಶುಲ್ಕ ರಹಿತ ಪರೀಕ್ಷೆ ನಡೆಸಿದರೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸುತ್ತಾರೆ. ಅಲ್ಲದೆ ಪ್ರತಿಭಾನ್ವಿತರು ಆಯ್ಕೆಯಾಗುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು. ಉನ್ನತ ಶ್ರೇಣಿಯಲ್ಲಿ ಅಂಕ ಪಡೆದು ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವುದು ಎಲ್ಲಾ ವಿದ್ಯಾರ್ಥಿಗಳ ಆಸೆಯಾಗಿರುತ್ತದೆ. ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಮ ಬಹಳ ಮುಖ್ಯವಾಗಿರುತ್ತದೆ ಎಂದರು.
ಒಂದಿಷ್ಟು ವಿದ್ಯಾರ್ಥಿಗಳಿಗೆ ಎಷ್ಟೇ ಓದಿದರೂ ತಲೆಗೇ ಹತ್ತುವುದಿಲ್ಲ ಎನ್ನುವ ಕೊರಗು ಕಾಡುತ್ತಿರುತ್ತದೆ. ಇದಕ್ಕೆ ಮುಖ್ಯ ಕಾರಣ ಏಕಾಗ್ರತೆ ಎನ್ನಬಹುದು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡ ಸಹಜವಾಗಿಯೇ ಇರುತ್ತದೆ. ಹೀಗಾಗಿ ಆ ಸಮಯದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಸರಳ ವಿಧಾನ ಅನುಸರಿಸಬೇಕು.
ದೀರ್ಘಕಾಲ ಕೊಂಚವೂ ವಿಶ್ರಾಂತಿ ಇಲ್ಲದೇ ಗಂಟೆಗಳ ಕಾಲ ಅಧ್ಯಯನ ಮಾಡುವುದು ಅಷ್ಟು ಒಳ್ಳೆಯದಲ್ಲ. ಇದು ಏಕಾಗ್ರತೆಗೆ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ನೆನಪಿನ ಶಕ್ತಿ ಕುಂದುತ್ತದೆ. ಹೀಗಾಗಿ ಗಂಟೆಗೊಮ್ಮೆ ವಿರಾಮ ತೆಗೆದುಕೊಳ್ಳಿ. ಅಲ್ಲದೇ ಸರಿಯಾದ ಸಮಯದಲ್ಲಿ ಆಹಾರ ಸೇವಿಸಿ, ಹಾಗೆಯೇ ದಿನಕ್ಕೆ ಕನಿಷ್ಠ ೧೫-೨೦ ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಕನಿಷ್ಠ ೬-೮ ಗಂಟೆ ನಿದ್ರೆ ಮಾಡಿ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತಯಾರಿ ನಡೆಸುವಾಗ ಆತ್ಮವಿಶ್ವಾಸದಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ ಎಂದರು.
ಎಲ್ಲಾ ಓದುವ ಬದಲು ವಿಷಯಕ್ಕೆ ತಕ್ಕ ಹಾಗೆ ಸಮಾಯಾವಕಾಶ ಕೊಡಿ. ಹೆಚ್ಚು ಹೆಚ್ಚು ಪುನಾರಾವರ್ತನೆ ಮಾಡಿಕೊಳ್ಳಿ. ಬಹಳ ಮುಖ್ಯವಾಗಿ ಪದೇ ಪದೇ ಬರುವ ಮೊಬೈಲ್ ಮೆಸೇಜ್ಗಳ ಸದ್ದು, ಆಗಾಗ ಬರುವ ಫೋನ್ ಕಾಲ್ ಗಳನ್ನು ನಿಮ್ಮ ಏಕಾಗ್ರತೆಯನ್ನು ಹಾಳುಮಾಡಬಹುದು. ಹೀಗಾಗಿ ಓದುವ ಸಮಯದಲ್ಲಿ ಮೊಬೈಲ್ ಬಳಕೆಯಿಂದ ದೂರವಿದ್ದರೆ ಒಳಿತು. ಇಂಟರ್ ನೆಟ್ ಸಹಾಯಬೇಕಾದಾಗ ಮಾತ್ರ ಮೊಬೈಲ್ ಬಳಸಿ. ಹಿಂದಿನ ವರ್ಷಗಳ ಹಳೆಯ ಪ್ರಶ್ನೆಗಳನ್ನು ತಪ್ಪದೇ ಓದುವುದನ್ನು ರೂಡಿಮಾಡಿಕೊಳ್ಳಿ. ಇದರಿಂದ ಪರೀಕ್ಷೆಗಳಲ್ಲಿ ಎಂತಹ ಪ್ರಶ್ನೆಗಳು ಬರಬಹುದು ಎನ್ನುವ ಸಂಪೂರ್ಣ ಕಲ್ಪನೆ ನಿಮ್ಮ ಅರಿವಿಗೆ ಬರುತ್ತದೆ. ಯಾವಾಗಲೂ ಸಕಾರಾತ್ಮಕ ಮನಸ್ಥಿತಿಯಲ್ಲಿರಿ. ನಿಮ್ಮ ಮೇಲೆ ನಿಮಗೆ ಮೊದಲು ನಂಬಿಕೆ ಇರಲಿ. ಪ್ರಶ್ನೆಗಳಿಗೆ ಉತ್ತರಿಸಲು ಅತಿಯಾಗಿ ಯೋಚಿಸದಿರಲು ಪ್ರಯತ್ನಿಸಿ. ನೀವು ಓದಿರುವ ಪಾಠದಲ್ಲಿ ಕೆಲವೊಂದು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಿ. ಒಂದು ಅಧ್ಯಾಯ ಮುಗಿದೆ ಮೇಲೆ ಒಂದು ಅಣುಕು ಪರೀಕ್ಷೆಯನ್ನು ಬರೆಯಿರಿ. ಹೀಗೆ ಅಣುಕು ಪರೀಕ್ಷೆಯನ್ನು ಬರೆಯುವುದರಿಂದ ನಿಮಗೆ ಪರೀಕ್ಷೆ ಮೇಲಿನ ಭಯ ಹೋಗುತ್ತದೆ. ಈ ರೀತಿಯಾಗಿ ನೀವು ಮಾಡಿದರೆ ಖಂಡಿತವಾಗಿ ಯು.ಪಿ.ಎಸ್.ಸಿ. ಅಂತಹ ಪರೀಕ್ಷೆಗಳನ್ನು ಅತ್ಯಂತ ಸುಲಭವಾಗಿ ಎದುರಿಸಿ ಉತ್ತೀರ್ಣರಾಗಬಹುದಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಹೊಸಳ್ಳೆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಪಕಾರಾದ ಐಕ್ಯೂಎಸಿ ಕೋ-ಆರ್ಡಿನೇಟರ್ ಮಹಮದ್ ನಜ಼ಿಬ್, ಅಕ್ರಮ್ ಪಾಷ, ಪ್ಲೇಸ್ ಮೆಂಟ್ ಕೋಅರ್ಡಿನೇಟರ್ ವಿ.ಬಿ ಚಿರಂಜೀವಿ, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಟಿ.ಜಿ ಉಮಾ, ಬಿ. ಗುರುಪ್ರಸಾದ್ ಹಾಗು ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿವರ್ಗದವರು ಹಾಗು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.