Friday, April 29, 2022

ವಿಐಎಸ್‌ಎಲ್ ಅಧಿಕಾರಿ ನಿತಿನ್ ಜೋಸ್‌ಗೆ ಸೈಲ್ ರೋಲ್ ಮಾಡೆಲ್ ಅವಾರ್ಡ್

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಹಿರಿಯ ವ್ಯವಸ್ಥಾಪಕ ನಿತಿನ್ ಜೋಸ್ ಕುಟುಂಬ ಸದಸ್ಯರೊಂದಿಗೆ ೨೦೨೦-೨೧ನೇ ಸಾಲಿನ ಪ್ರತಿಷ್ಠಿತ ಸೈಲ್ ಕಾರ್ಪೊರೇಟ್ ಅವಾರ್ಡ್ ಫಾರ್ ಎಕ್ಸಲೆನ್ಸ್-ರೋಲ್ ಮಾಡೆಲ್ ಅವಾರ್ಡ್ ಪ್ರಶಸ್ತಿ ಸ್ವೀಕರಿಸಿದರು.    
    ಭದ್ರಾವತಿ, ಏ. ೩೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಹಿರಿಯ ವ್ಯವಸ್ಥಾಪಕ ನಿತಿನ್ ಜೋಸ್ ಅವರಿಗೆ ೨೦೨೦-೨೧ನೇ ಸಾಲಿನ ಪ್ರತಿಷ್ಠಿತ ಸೈಲ್ ಕಾರ್ಪೊರೇಟ್ ಅವಾರ್ಡ್ ಫಾರ್ ಎಕ್ಸಲೆನ್ಸ್-ರೋಲ್ ಮಾಡೆಲ್ ಅವಾರ್ಡ್ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
     ನವದೆಹಲಿಯಲ್ಲಿ ಏ.೨೮ರಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ . ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷೆ ಸೋಮ ಮಂಡಲ್ ಪ್ರಶಸ್ತಿ ವಿತರಿಸಿದರು. ಪ್ರಶಸ್ತಿ ರು. ೫೦,೦೦೦ ನಗದು ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.
    ಕಾರ್ಖಾನೆಯಲ್ಲಿ ನಿತಿನ್ ಜೋಸ್‌ರವರು ೨೦೦೮ರಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದು, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ಬ್ಯಾಡ್ಮಿಂಟನ್ ಆಟಗಾರರು ಸಹ ಆಗಿದ್ದು, ಕಾರ್ಖಾನೆ ಆಡಳಿತ ಮಂಡಳಿ, ಅಧಿಕಾರಿಗಳು, ಕಾರ್ಮಿಕರು ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.




ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವಕ್ಕೆ ಚಾಲನೆ

ವಿವಿಧ ಕ್ಷೇತ್ರಗಳ ಗಣ್ಯರಿಗೆ, ದಾನಿಗಳಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು

ಭದ್ರಾವತಿ ಕಾಗದನಗರದ ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಏ. ೨೯: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಆರಂಭಗೊಂಡ ನಂತರ ಕಾಗದನಗರ ವ್ಯಾಪ್ತಿಯ ನಗರಾಡಳಿತ ಪ್ರದೇಶದಲ್ಲಿ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ನಿರ್ಮಿಸಿಕೊಂಡಿದ್ದ ಕಾರ್ಮಿಕ ಸಂತ ಜೋಸೆಫರ ದೇವಾಲಯ ಇದೀಗ ೫೦ ವರ್ಷಗಳನ್ನು ಪೂರೈಸಿದ್ದು, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.
    ಕಾಗದನಗರ ವ್ಯಾಪ್ತಿಯ ಸುತ್ತಮುತ್ತಲಿನ ಹಾಗು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ಈ ದೇವಾಲಯದಲ್ಲಿ ತಮ್ಮ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರುತ್ತಿದ್ದರು. ಕಳೆದ ಸುಮಾರು ೭ ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ಕಾರ್ಮಿಕ ಕುಟುಂಬಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ಈ ಹಿನ್ನಲೆಯಲ್ಲಿ ಈ ವ್ಯಾಪ್ತಿಯಲ್ಲಿ ಇದೀಗ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ಅಲ್ಪ ಪ್ರಮಾಣದಲ್ಲಿದ್ದು, ಆದರೂ ಸಹ ದೇವಾಲಯದ ಸುವರ್ಣ ಮಹೋತ್ಸವ ಅದ್ದೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
    ಶುಕ್ರವಾರ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರಿಗೆ, ದಾನಿಗಳಿಗೆ ಸನ್ಮಾನ ಹಾಗು ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಹೋತ್ಸವ ೩ ದಿನಗಳ ಕಾಲ ಜರುಗಲಿದೆ. ಮೇ.೧ರಂದು ಕಾರ್ಮಿಕ ಸಂತ ಜೋಸೆಫರ ಉತ್ಸವ ಮೆರವಣಿಗೆಯೊಂದಿಗೆ ಮಹೋತ್ಸವ ಅಂತ್ಯಗೊಳ್ಳಲಿದೆ.
    ದೇವಾಲಯದ ಧರ್ಮ ಗುರು ಫಾದರ್ ಡಾಮಿನಿಕ್ ಕ್ರಿಸ್ತುರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರೇಹಳ್ಳಿ ಸಂತ ಅಂತೋಣಿಯವರ ದೇವಾಲಯದ ಧರ್ಮ ಗುರು ಫಾದರ್ ರಿಚರ್ಡ್ ಅನಿಲ್ ಡಿಸೋಜಾ, ಉಜ್ಜನಿಪುರ ಡಾನ್ ಬೋಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ಆರೋಗ್ಯ ರಾಜ್ ಹಾಗು ಪ್ರಾಂಶುಪಾಲ ಫಾದರ್ ಜೋಮಿ, ಕ್ರೈಸ್ತ ಸಮುದಾಯದ ಮುಖಂಡ ಸೆಲ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಚಿತ್ರ: ಡಿ೨೯-ಬಿಡಿವಿಟಿ೨


ಭದ್ರಾವತಿ ಕಾಗದನಗರದ ಕಾರ್ಮಿಕ ಸಂತ ಜೋಸೆಫರ ದೇವಾಲಯದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಶುಕ್ರವಾರ ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಟಿ.ವಿ ಕೇಬಲ್‌ನಲ್ಲಿ ವಿದ್ಯುತ್ ಹರಿದು ೪ ವರ್ಷದ ಬಾಲಕಿ ಸಾವು


    ಭದ್ರಾವತಿ, ಏ. ೨೯: ಟಿ.ವಿ ಕೇಬಲ್‌ನಲ್ಲಿ ವಿದ್ಯುತ್ ಹರಿದ ಪರಿಣಾಮ ೪ ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
    ಇಂಚರ(೪) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಈಕೆ ಗ್ರಾಮದ ನಿವಾಸಿ ಸಂತೋಷ್ ಮತ್ತು ಪೂಜಾ ದಂಪತಿ ಪುತ್ರಿಯಾಗಿದ್ದು, ವಿದ್ಯುತ್ ತಂತಿಗೆ ಸಂಪರ್ಕಗೊಂಡಿದ್ದ ಟಿವಿ ಕೇಬಲ್ ಕತ್ತರಿಸಿಕೊಂಡು ಕೆಳಗೆ ತಂತಿ ಬೇಲಿ ಮೇಲೆ ಬಿದ್ದಿದೆ. ಈ ಕೇಬಲನ್ನು ಆಟವಾಡುವಾಗ ಬಾಲಕಿ ಮುಟ್ಟಿದ್ದು, ಇದರಿಂದಾಗಿ ವಿದ್ಯುತ್ ತಗುಲಿ ಮೃತಪಟ್ಟಿದೆ ಎನ್ನಲಾಗಿದೆ.
    ಘಟನೆ ಬೆಳಿಗ್ಗೆ ಸುಮಾರು ೯.೩೦ರ ಸಮಯದಲ್ಲಿ ನಡೆದಿದ್ದು, ವಿದ್ಯುತ್ ತಗುಲಿ ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿ ಮೃತಪಟ್ಟಿದ್ದು, ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋವಿಡ್ ೪ನೇ ಅಲೆ : ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಆರೋಗ್ಯದ ಬಗ್ಗೆ ಮುನ್ನಚ್ಚರಿಕೆ ವಹಿಸಿ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾನವಾಡಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಭೇಟಿ ನೀಡಿ ಕೂಲಿ ಕಾರ್ಮಿಕರೊಂದಿಗೆ  ದುಡಿಯೋಣ ಬಾ...! ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
    ಭದ್ರಾವತಿ, ಏ. ೨೯: ಕೋವಿಡ್ ೪ನೇ ಅಲೆ ಹಿನ್ನಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿವಹಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸಲಹೆ ನೀಡಿದರು.
    ಅವರು ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾನವಾಡಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರೊಂದಿಗೆ  ದುಡಿಯೋಣ ಬಾ...! ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೂಲಿ ಕಾರ್ಮಿಕರು ಕೋವಿಡ್ ೪ನೇ ಅಲೆ ಹಿನ್ನಲೆಯಲ್ಲಿ ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಮುನ್ನಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪಿ.ಎಂ ಕಿಸಾನ್ ಯೋಜನಾ ಕ್ರೆಡಿಟ್ ಕಾರ್ಡ್ ಕುರಿತು ಮಾಹಿತಿ ನೀಡಿ ಸ್ಥಳದಲ್ಲಿಯೇ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಉದ್ಯೋಗ ಖಾತ್ರಿ ಚೀಟಿಯನ್ನು ವಿತರಿಸಿದರು.
    ದನದ ಕೊಟ್ಟಿಗೆ,  ಕುರಿ ಶೆಡ್, ಅಡಕೆ ಸಸಿ ನೆಡುವುದು, ಬಚ್ಚಲು ಗುಂಡಿ ನಿರ್ಮಾಣ ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಸಲಹೆ ವ್ಯಕ್ತಪಡಿಸಿದರು.
  ತಾಲೂಕು ಪಂಚಾಯಿತಿ ತಾಂತ್ರಿಕ ಸಹಾಯಕಿ ಆಶಾ, ಗ್ರಾಮ ಪಂಚಾಯಿತಿ ಗಣಕಯಂತ್ರ ನಿರ್ವಾಹಕ  ಆಲಿ, ಎಸ್‌ಡಿಎ ಬಾಸ್ಕರ್, ಡಿಇಓ ಬೈರೇಶ್ ಕುಮಾರ್ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.