Saturday, July 5, 2025

ಪರಿಸರ ನಾಶದಿಂದ ದುಷ್ಪರಿಣಾಮ : ಗೀತಾ ರಾಜಕುಮಾರ್

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆ ಅಂಗವಾಗಿ ಅಂಧರ ಕೇಂದ್ರದ ಸುತ್ತಲೂ ಸುಮಾರು ೬೦ ಸಸಿಗಳನ್ನು ನೆಡಲಾಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್, ಶಿವಬಸಪ್ಪ, ಗುರುಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.     
    ಭದ್ರಾವತಿ: ಮನುಷ್ಯರಿಂದಲೇ ಪರಿಸರ ನಾಶವಾಗುತ್ತಿದ್ದು, ಪರಿಸರ ವೈಪರೀತ್ಯದಿಂದಾಗಿ ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ. ಇದರಿಂದಾಗಿ ಅತಿವೃಷ್ಟಿ-ಅನಾವೃಷ್ಟಿಗಳಿಂದ ಅನಾಹುತಗಳು, ಸಾವು-ನೋವುಗಳು ಹೆಚ್ಚಾಗುತ್ತಿವೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಕಳವಳ ವ್ಯಕ್ತ ಪಡಿಸಿದರು. 
    ಅವರು ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದುರಾಸೆಗೆ ಬಲಿಯಾಗಿ ಗಿಡಮರಗಳನ್ನು, ಕಾಡನ್ನು ಕಡಿದು ನಾಶ ಮಾಡುವುದರಲ್ಲಿ ನಿರತನಾಗಿದ್ದಾನೆ. ಆದರೆ ತನ್ನ ಮುಂದಿನ ಭವಿಷ್ಯದಲ್ಲಿ, ಮುಂದಿನ ಪೀಳಿಗೆಯನ್ನು ಉಳಿಸಿ ಬೆಳೆಸಿ ರಕ್ಷಣೆ ಮಾಡುವಲ್ಲಿ ವಿಫಲನಾಗಿದ್ದಾನೆ.  ಮುಂದಾದರೂ ಎಚ್ಚೆತ್ತುಕೊಂಡು ಪರಿಸರ ಉಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದರು.
    ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಮಾತನಾಡಿ, ನಗರಗಳು ವಿಸ್ತಾರಗೊಂಡದಂತೆ ಅಭಿವೃದ್ದಿ ಹೆಸರಲ್ಲಿ ಗಿಡಮರಗಳನ್ನು ಕಡಿದು ಪರಿಸರ ನಾಶ ಮಾಡಲಾಗುತ್ತಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಗಿಡ ಮರಗಳನ್ನು ಬೆಳೆಸಬೇಕೆಂಬ ಪ್ರಜ್ಞೆ ನಮ್ಮಲ್ಲಿ ಇಲ್ಲದಿರುವುದು ದುರಂತವಾಗಿದೆ. ಅಂಧರ ಕೇಂದ್ರದ ಸುತ್ತಲೂ ಸುಮಾರು ೬೦ ಸಸಿಗಳನ್ನು ನೆಟ್ಟು ಪೋಷಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.  
    ಭೂತನಗುಡಿ ಎಸ್‌ಎಲ್‌ಎನ್ ಡೇ ಕೇರ್ ವೈದ್ಯ ಡಾ. ಸುಶಿತ್ ಶೆಟ್ಟಿ ಮಾತನಾಡಿ, ಕರೋನಾ ಕಾಲದಲ್ಲಿ ಲಕ್ಷಾಂತರ ಮಂದಿ ಆಮ್ಲಜನಕವಿಲ್ಲದೆ ಅದರ ಕೊರತೆ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಆ ಸಮಯದಲ್ಲಿ ಕಂಡ ಅನೇಕ ಘೋರ ಘಟನೆಗಳನ್ನು ಜೀವನದಲ್ಲಿ ಯಾರೂ ಮರೆಯುವಂತಿಲ್ಲ. ಆದ್ದರಿಂದ ಮನುಷ್ಯನಿಗೆ ಅತ್ಯಾವಶ್ಯಕವಾಗಿ ಬೇಕಿರುವ ಆಮ್ಲಜನಕಕ್ಕಾಗಿ ನಮ್ಮ ಸುತ್ತಲೂ ಮರಗಿಡಗಳನ್ನು ಬೆಳೆಸಿ ಪರಿಸರ ರಕ್ಷಿಸಬೇಕಾಗಿದೆ ಎಂದರು.
    ಸಿದ್ದಾರ್ಥ ಅಂಧ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ನಗರಸಭೆ ಸದಸ್ಯ ಚನ್ನಪ್ಪ, ಕಾಂಚನ ಹೋಟೆಲ್ ಮಾಲೀಕ ವಾಗೀಶ್, ಬಿ.ಎ.ಕಾಟ್ಕೆ, ನಿವೃತ್ತ ಶಿಕ್ಷಕ ಶ್ರೀನಿವಾಸ್, ರಾಜಶೇಖರ್ ಮತ್ತು ಅಡವೀಶಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅಂಧರ ಕೇಂದ್ರದ ವಿಕಲಚೇತನರಾದ ಆಶಾ ಮತ್ತು ಸಲ್ಮಾ ಪ್ರಾರ್ಥಿಸಿ, ಉಪನ್ಯಾಸಕಿ ಸೃಷ್ಟಿ ಸ್ವಾಗತಿಸಿ, ಪ್ರಾಂಶುಪಾಲ ಹನುಮಂತಪ್ಪ ನಿರೂಪಿಸಿದರು. 

ಜು.೬ರಿಂದ ಚೆಸ್ ಬೇಸಿಕ್, ಚೆಸ್ ಆಟ


    ಭದ್ರಾವತಿ : ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಜು.೬ರಿಂದ ಪ್ರತಿ ಭಾನುವಾರ ಚೆಸ್ ಬೇಸಿಕ್ ಮತ್ತು ಚೆಸ್ ಆಟ ಏರ್ಪಡಿಸಲಾಗಿದೆ. 
    ಬೆಳಿಗ್ಗೆ ೮ ಗಂಟೆಯಿಂದ ೯ ಗಂಟೆವರೆಗೆ ಪೇಪರ್‌ಟೌನ್ ಇಂಗ್ಲೀಷ್ ಸ್ಕೂಲ್ ಕೊಠಡಿಯಲ್ಲಿ ಹಾಗು ೯.೩೦ ರಿಂದ ೧೦.೩೦ರವರೆಗೆ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಚೆಸ್ ಬೇಸಿಕ್ ಮತ್ತು ಚೆಸ್ ಆಟ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೪೮೨೧೮೭೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಜು.೭ರಂದು ರೋಟರಿ ಪದಗ್ರಹಣ ಸಮಾರಂಭ

    ಭದ್ರಾವತಿ ; ನಗರದ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಜು.೭ ರಂದು ಸಂಜೆ ೭ ಗಂಟೆಗೆ ಉಬ್ಳೆಬೈಲು ರಸ್ತೆ, ನ್ಯೂಟೌನ್, ರೋಟರಿ ಕ್ಲಬ್ ಸಭಾಂಗಣದಲ್ಲಿ ನಡಯಲಿಧೆ. 
     ಸಮಾರಂಭದಲ್ಲಿ ಜಿಲ್ಲಾ ಕ್ಲಬ್ ೩೧೬೦ರ ಪಿಡಿಜಿ ಮತ್ತು ಆರ್.ಸಿ ಚಿತ್ರದುರ್ಗ ಕೆ. ಮಧುಪ್ರಸಾದ್ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಬೋಧಿಸಲಿದ್ದು, ಜಿಲ್ಲಾ ಕ್ಲಬ್ ೩೧೮೨ರ ಎ.ಜಿ ಕೆ.ಪಿ ಶೆಟ್ಟಿ ಹಾಗೂ ಜಿಲ್ಲಾ ಕ್ಲಬ್ ೩೧೮೨ರ ಝಡ್.ಎಲ್ ಜಗದೀಶ್ ಸರ್ಜಾ ಉಪಸ್ಥಿತರಿರುವರು. 
    ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಕೆ.ಎಚ್ ಶಿವಕುಮಾರ್ ಮತ್ತು ಕಾರ್ಯದರ್ಶಿ ಎಚ್. ಆರ್ ಕೇಶವಮೂರ್ತಿ ಹಾಗು ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಸವಿತ ಕಾಜೇಂದ್ರಕುಮಾರ್ ಲೋಧ ಮತ್ತು ಕಾರ್ಯದರ್ಶಿ ಸವಿತ ಶಾಂತಕುಮಾರ್ ತಂಡದವರು ಅಧಿಕಾರ ಸ್ವೀಕರಿಸಲಿದ್ದಾರೆ. ಸಮಾರಂಭ ಯಶಸ್ವಿಗೊಳಿಸುವಂತೆ ಕ್ಲಬ್ ಕೋರಿದೆ. 

ಕರವೇ ಯುವ ಘಟಕದ ಅಧ್ಯಕ್ಷರಾಗಿ ಛಾಯಾಗ್ರಾಹಕ ಎಚ್. ರಾಮಕೃಷ್ಣ ಆಯ್ಕೆ



ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಭದ್ರಾವತಿ ಯುವ ಘಟಕದ ಅಧ್ಯಕ್ಷರಾಗಿ ತಾಲೂಕು ಛಾಯಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಎಚ್. ರಾಮಕೃಷ್ಣ ಆಯ್ಕೆಯಾಗಿದ್ದಾರೆ.  
    ಭದ್ರಾವತಿ: ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಯುವ ಘಟಕದ ಅಧ್ಯಕ್ಷರಾಗಿ ತಾಲೂಕು ಛಾಯಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಎಚ್. ರಾಮಕೃಷ್ಣ ಆಯ್ಕೆಯಾಗಿದ್ದಾರೆ.  
    ಹಳೇನಗರದ ಸವಿತಾ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಹಾಗೂ ಯುವ ಘಟಕದ ವತಿಯಿಂದ ಆಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಉಪಾಧ್ಯಕ್ಷರಾಗಿ ಕುಶಾಲ್ ಗೌಡ, ಸಂಘಟನಾ ಕಾರ್ಯದರ್ಶಿಯಾಗಿ ಕುಮಾರ್ ಹಾಗೂ ಸಂಚಲಕರಾಗಿ ಮಹಮದ್ ವಜೀರ್ ಆಯ್ಕೆಯಾಗಿದ್ದಾರೆ.  
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಎಂ. ಪರಮೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  
    ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುರುಳಿ, ತಾಲೂಕು ಘಟಕದ ಅಧ್ಯಕ್ಷ ಆನಂದ್ ಮತ್ತು ಜಿಲ್ಲಾ ಛಾಯಗಾಹಕ ಸಂಘದ ಅಧ್ಯಕ್ಷ ಕೆ.ಟಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಛಾಯಾಗ್ರಾಹಕ ಸಂಜೀವ್ ರಾವ್ ಸಿಂಧಿಯಾ ನಿರೂಪಿಸಿದರು.