Sunday, June 12, 2022

ವಿಜೃಂಭಣೆಯಿಂದ ಜರುಗಿದ ವೈಕಾಶಿ ವಿಶಾಕಂ ಉತ್ಸವ

ಭದ್ರಾವತಿ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಭಾನುವಾರ ವೈಕಾಶಿ ವಿಶಾಕಂ ಉತ್ಸವ ವಿಜೃಂಭಣೆಯಿಂದ ಜರುಗಿತು. ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಜೂ. ೧೨ : ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಭಾನುವಾರ ವೈಕಾಶಿ ವಿಶಾಕಂ ಉತ್ಸವ ವಿಜೃಂಭಣೆಯಿಂದ ಜರುಗಿತು.
    ಉತ್ಸವ ಅಂಗವಾಗಿ ಬೆಳಿಗ್ಗೆ ಮೂಲ ವಿಗ್ರಹಗಳಿಗೆ ಕ್ಷೀರಾಭಿಷೇಕ ನಂತರ ಪಂಚಾಮೃತ ಅಭಿಷೇಕ ಹಾಗು ರುದ್ರಾಭಿಷೇಕ, ಬಿಲ್ವಾರ್ಚನೆ, ಅನ್ನ ಅಭಿಷೇಕ ಮಧ್ಯಾಹ್ನ ೧೨.೩೦ಕ್ಕೆ ನೈವೇದ್ಯ ಸಮರ್ಪಣೆ, ನಂತರ ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಶ್ರೀ ಮಹಂತ್‌ಶ್ರೀ ಅಣ್ಣಾಮಲೈ ಸ್ವಾಮಿ (ಶ್ರೀ ಮೌನಿ ಬಾಬಾಜಿ ಮಹಾರಾಜ್, ಶ್ರೀ ರಾಮಮಂದಿರ್ ಪುಲಿವಾಲ, ಅಕ್ನೂರ್, ಜಮ್ಮು ಮತ್ತು ಕಾಶ್ಮೀರ್) ಹಾಗು ಸಂಗಡಿಗರಿಂದ ಜರುಗಿದವು. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಕೃಪೆಗೆ ಪಾತ್ರರಾದರು. ದೇವಸ್ಥಾನ ಸೇವಾ ಸಮಿತಿ ಪ್ರಮುಖರು, ಸೇವಾಕರ್ತರು ಉಪಸ್ಥಿತರಿದ್ದರು.

ಐಟಿಐ ವಿವಿಧ ವೃತ್ತಿ ತರಬೇತಿಗಳಿಗೆ ಅರ್ಜಿ ಆಹ್ವಾನ

(ಸಂಗ್ರಹ ಅಂತರ್ಜಾಲ ಚಿತ್ರ)
ಭದ್ರಾವತಿ: ನಗರದ ಚನ್ನಗಿರಿ ರಸ್ತೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿರುವ ಟಿಎಂಎಇಎಸ್ ಸರ್ಕಾರಿ ಅನುದಾನಿತ ಕೈಗಾರಿಕಾ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ವಿವಿಧ ವೃತ್ತಿಪರ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎರಡು ವರ್ಷದ ತರಬೇತಿಗಳಾದ ಫಿಟ್ಟರ್, ಎಲೆಕ್ಟ್ರಾನಿಕ್-ಮೆಕಾನಿಕ್, ಡ್ರಾಫ್ಟ್ ಮೆನ್ ಮೆಕಾನಿಕ್(ಡಿಎಂಎಂ), ಒಂದು ವರ್ಷದ ತರಬೇತಿಗಳಾದ ಕೋಪ(ಸಿಓಪಿಎ), ವೆಲ್ಡರ್ ವೃತ್ತಿಗೆ ಎಸ್.ಎಸ್.ಎಲ್.ಸಿ ಉತ್ತಿರ್ಣಗೊಂಡವರು ಅರ್ಜಿ ಸಲ್ಲಿಸಬಹುದಾಗಿದ್ದು, ವೆಲ್ಡರ್ ವೃತ್ತಿಗೆ ಎಸ್.ಎಸ್.ಎಲ್.ಸಿ ಅನುತ್ತೀರ್ಣಗೊಂಡವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 9480897237/9900601615 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಮರು ಮೌಲ್ಯಮಾಪನದಲ್ಲಿ 2 ಅಂಕ ಸೇರ್ಪಡೆ

625ಕ್ಕೆ 624 ಅಂಕ ಪಡೆದ  ಕೆ.ಎಂ ಪೂರ್ವಿಕ

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ 625ಕ್ಕೆ 624 ಅಂಕ ಪಡೆದುಕೊಂಡಿರುವ ಹೊಳೆಹೊನ್ನೂರು ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಕೆ.ಎಂ ಪೂರ್ವಿಕ.
    ಭದ್ರಾವತಿ, ಜೂ. 12 : ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ ವಿದ್ಯಾರ್ಥಿನಿಯೊಬ್ಬರು 625ಕ್ಕೆ 624 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.
    ಹೊಳೆಹೊನ್ನೂರು ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಕೆ.ಎಂ ಪೂರ್ವಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕ ಪಡೆದುಕೊಂಡಿದ್ದರು. ಮರು ಮೌಲ್ಯಮಾಪನದ ನಂತರ ದ್ವಿತೀಯ ಭಾಷೆಯಲ್ಲಿ  100ಕ್ಕೆ 99 ಅಂಕ ಪಡೆದುಕೊಂಡಿದ್ದಾರೆ.
     ತಾಲೂಕಿನಲ್ಲಿ ಈ ಬಾರಿ ಇಬ್ಬರು ವಿದ್ಯಾರ್ಥಿಯರು 625ಕ್ಕೆ 625ಕ್ಕೆ ಅಂಕ ಪಡೆದುಕೊಂಡಿದ್ದು, 36ಕ್ಕೂ ಅಧಿಕ  ವಿದ್ಯಾರ್ಥಿಗಳು 620ಕ್ಕೂ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಪರಮೇಶ್ವರಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಇ.ಓ ರಾಮಪ್ಪ, ಡಯಟ್ ಉಪನ್ಯಾಸಕಿ ರೇಣುಕಾ, ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ, ಇಸಿಓ ರವಿಕುಮಾರ್, ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್ ಪರ್ವೀಜ್ ಸೇರಿದಂತೆ ಇನ್ನಿತರರನ್ನು ಅಭಿನಂದಿಸಿದ್ದಾರೆ.

ಎಲ್ಲರೂ ಶಿಕ್ಷಣವಂತರಾಗುವ ಮೂಲಕ ಅಂಬೇಡ್ಕರ್ ಆಶಯ ಈಡೇರಿಸಲಿ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ವತಿಯಿಂದ ಹೊಳೆಹೊನ್ನೂರು ರಸ್ತೆಯಲ್ಲಿರುವ ಕೆಜಿನ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಜೂ. ೧೨: ವಿಶ್ವ ಜ್ಞಾನಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ನಮಗೆ ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದು, ಸಂವಿಧಾನ ನಮ್ಮೆಲ್ಲರನ್ನೂ ಒಗ್ಗೂಡಿ ಬದುಕುವಂತೆ ಮಾಡಿದೆ. ಅಲ್ಲದೆ ಇದರಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುವಂತಾಗಿದೆ. ಅಂಬೇಡ್ಕರ್‌ರವರ ಆಶಯದಂತೆ ಭವಿಷ್ಯದಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಸಂಘ-ಸಂಸ್ಥೆಗಳ ಅವಶ್ಯಕತೆ ಹೆಚ್ಚಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ನಗರದ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ವತಿಯಿಂದ ಹೊಳೆಹೊನ್ನೂರು ರಸ್ತೆಯಲ್ಲಿರುವ ಕೆಜಿನ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸರ್ವ ಜನಾಂಗದ ಶಾಂತಿಯ ತೋಟ ಎಂಬ ರಾಷ್ಟ್ರಕವಿ ಕುವೆಂಪುರವರ ನುಡಿಗೆ ಸಾರ್ಥಕತೆ ತಂದುಕೊಡುವ ಕೆಲಸವನ್ನು ಕೆಜಿಎನ್ ನೌಜವಾನ್ ಕಮಿಟಿ ಕೈಗೊಳ್ಳುತ್ತಿರುವುದು  ಶ್ಲಾಘನೀಯ.  ಎಲ್ಲಾ ಧರ್ಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
     ಎಲ್ಲಾ ಧರ್ಮದ ಸುಮಾರು ೪೦ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಆಮ್ ಆದ್ಮಿ ಪಾರ್ಟಿ ಮುಖಂಡ, ಸಮಾಜ ಸೇವಕ ಮಡಿಕಲ್ ಆನಂದ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್, ಸಿಆರ್‌ಪಿ ಇಮ್ತಿಯಾಜ್, ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ ಮುತುರ್ಜಾಖಾನ್, ಶಿಕ್ಷಕ ಮುನಿರ್ ಸಾಬ್, ಜಾವಿದ್ ಪಾಷ, ರೇಷ್ಮಾ ಬಾನು, ಉಪನ್ಯಾಸಕ ನಾಸಿರ್ ಖಾನ್, ಪತ್ರಕರ್ತ ಮುಜಾಸಿರ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೆಜಿಎನ್ ನೌಜವಾನ್ ಕಮಿಟಿ ಅಧ್ಯಕ್ಷ ಅಸಾದುಲ್ಲಾ ಅಧ್ಯಕ್ಷತೆ ವಹಿಸಿದ್ದರು.  ಸೋಫಿಯಾ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ನದೀಮ್ ಪಾಷ ಸ್ವಾಗತಿಸಿದರು. ಮುಸ್ವೀರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಶಿಕ್ಷಕಿ ಬೀ ಬೀ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಮುಸ್ತಫಾ, ಇಮ್ರಾನ್, ಶಾಹಿದ್, ರಂಗಣ್ಣ, ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ವತಿಯಿಂದ ಹೊಳೆಹೊನ್ನೂರು ರಸ್ತೆಯಲ್ಲಿರುವ ಕೆಜಿನ್ ವೃತ್ತದಲ್ಲಿ ಭಾನುವಾರ  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.