Friday, December 18, 2020

ಮತದಾರರ ದಿನಾಚರಣೆ ಅಂಗವಾಗಿ ಡಿ.೧೯ರಂದು ಪ್ರೌಢ ಶಾಲಾ ಮಕ್ಕಳಿಗೆ ಸ್ಪರ್ಧಾತ್ಮಕ ಚಟುವಟಿಕೆ

ಭದ್ರಾವತಿ, ಡಿ. ೧೮: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತಾಲೂಕಿನ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರೌಢ ಶಾಲಾ ಮಕ್ಕಳಿಗೆ ತಾಲೂಕು ಹಂತದ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಡಿ.೧೯ರಂದು ಬೆಳಿಗ್ಗೆ ೯.೧೫ ಹಳೇನಗರದ ಬಿಆರ್‌ಸಿ ಕಚೇರಿಯಲ್ಲಿ ಪ್ರಬಂಧ ಸ್ಪರ್ಧೆ(ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ), ಪೋಸ್ಟರ್ ಮತ್ತು ಕೋಲಾಜ್ ಮೇಕಿಂಗ್ ಹಾಗು ರಸಪ್ರಶ್ನೆ ಒಟ್ಟು ೪ ಸ್ಪರ್ಧೆಗಳು ನಡೆಯಲಿವೆ.
ಶಾಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಮತದಾರರ ಸಾಕ್ಷರತಾ ಸಂಘಗಳ ತಾಲೂಕು ಅಧಿಕಾರಿಯಾದ ನವೀದ್ ಅಹ್ಮದ್ ಪರ್ವೀಜ್, ಮೊ: ೯೮೮೬೨೧೪೧೬೦ ರವರಿಗೆ ಸಂಪರ್ಕಿಸುವಂತೆ ಕೋರಲಾಗಿದೆ.


ಡಿ.೧೯ರಂದು ೪ನೇ ವರ್ಷದ ದೀಪೋತ್ಸವ

ಭದ್ರಾವತಿ, ಡಿ. ೧೮: ನಗರದ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ.೧೯ರಂದು ೪ನೇ ವರ್ಷದ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.
    ಈ ಸಂಬಂಧ ಬೆಳಿಗ್ಗೆ ೫.೩೦ಕ್ಕೆ ಅಭಿಷೇಕ, ೯.೩೦ಕ್ಕೆ ಹೋಮ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ, ಸಂಜೆ ಪಲ್ಲಕ್ಕಿ ಉತ್ಸವ ದೀಪಾರಾಧನೆ,ರಾತ್ರಿ ೮.೩೦ಕ್ಕೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.  

‘ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್’ : ವಿಐಎಸ್‌ಎಲ್ ಕಾರ್ಖಾನೆ ಸಂತಸ


 'ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್' ಪ್ರಶಸ್ತಿ ಪತ್ರ ಮತ್ತು ಆವಾರ್ಡ್
ಭದ್ರಾವತಿ, ಡಿ. ೧೮: ಹಿರಿಯ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಒಂದು ವ್ಯಾಪಾರಿ ಕಂಪನಿಯಾಗಿರುವ ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ 'ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್' ಈ ಬಾರಿ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಲಭಿಸಿದ್ದು, ಈ ಹಿನ್ನಲೆಯಲ್ಲಿ ಉಕ್ಕು ಪ್ರಾಧಿಕಾರದ ಅಧೀನದಲ್ಲಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂತಸ ವ್ಯಕ್ತಪಡಿಸಿದೆ.
    ಈ ನಡುವೆ ಪ್ರಶಸ್ತಿ ಲಭಿಸಿರುವ ಸಂಭ್ರಮ ಪತ್ರಿಕೆಗಳೊಂದಿಗೆ ಹಂಚಿಕೊಂಡಿರುವ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿ, ಪ್ರಾಧಿಕಾರ ನಿರಂತರವಾಗಿ ಪರಿಸರ ರಕ್ಷಣೆಗೆ ಹೆಚ್ಚಿನ ಕಾಳಜಿವಹಿಸಿರುವ ಪರಿಣಾಮ ಈ ಪ್ರಶಸ್ತಿ ಲಭಿಸಿದೆ. ಪ್ರಾಧಿಕಾರದ ಅಧೀನದಲ್ಲಿರುವ ಕಾರ್ಖಾನೆಗಳಲ್ಲಿ ಸಾಧ್ಯವಾದಷ್ಟು ಎಲ್ಲಾ ರೀತಿಯಲ್ಲೂ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಉನ್ನತಮಟ್ಟದ ವ್ಯವಸ್ಥೆಗಳೊಂದಿಗೆ ವ್ಯರ್ಥವಾಗುವ ನೀರಿನ ಸಮರ್ಪಕ ನಿರ್ವಹಣೆ ಹಾಗು ಮರುಬಳಕೆ, ಇನ್ನಿತರ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ. ಕಾರ್ಖಾನೆಯಲ್ಲಿ ಮಾತ್ರವಲ್ಲದೆ ನಗರಾಡಳಿತದಲ್ಲೂ ಈ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಎಲ್ಲಾ ಕ್ರಮಗಳಿಂದಾಗಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಮುನ್ನಡೆಯಲ್ಲಿ ಸಾಗಿದೆ ಎಂದು ತಿಳಿಸಿದ್ದಾರೆ.
   ಪ್ರಶಸ್ತಿಯನ್ನು ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ ಕಂಪನಿ ಅಧ್ಯಕ್ಷರು ಹಾಗು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾ. ಎಂ.ಎನ್ ವೆಂಕಟಚಲಯ್ಯ ನೀಡಿ ಗೌರವಿಸಿದರು.  

ಬಿಡಾಡಿ ದನಗಳ ರಸ್ತೆ ಅಪಘಾತ ತಪ್ಪಿಸಲು ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್

ಭದ್ರಾವತಿಯಲ್ಲಿ ಜೀವಾಮೃತ ಚಾರಿಟೇಬಲ್ ಸೇವಾ ಟ್ರೆಸ್ಟ್ ವತಿಯಿಂದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯ ಕಳೆದ ೨ ದಿನಗಳಿಂದ ರಾತ್ರಿ ವೇಳೆ ನಡೆಯುತ್ತಿದೆ.
ಭದ್ರಾವತಿ, ಡಿ. ೧೮ : ಇತ್ತೀಚೆಗೆ ಬಿಡಾಡಿ ದನಗಳು ರಸ್ತೆ ಅಪಘಾತಕ್ಕೆ ಒಳಗಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಜೀವಾಮೃತ ಚಾರಿಟೇಬಲ್ ಸೇವಾ ಟ್ರೆಸ್ಟ್ ವತಿಯಿಂದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯ ಕಳೆದ ೨ ದಿನಗಳಿಂದ ರಾತ್ರಿ ವೇಳೆ ನಡೆಯುತ್ತಿದೆ.
ರಾತ್ರಿ ವೇಳೆ ವಾಹನಗಳ ಚಾಲಕರಿಗೆ ರಸ್ತೆಯಲ್ಲಿರುವ ಬಿಡಾಡಿ ದನಗಳು ತಕ್ಷಣ ಗೋಚರಿಸುವಂತಾಗಬೇಕು. ಇದರಿಂದ ಅಪಘಾತಗಳ ಪ್ರಮಾಣ ಕಡಿಮೆಯಾಗುವ ಮೂಲಕ ಬಿಡಾಡಿ ದನಗಳ ರಕ್ಷಣೆ ಮಾಡಿದಂತಾಗುತ್ತದೆ ಎಂಬ ಕಾಳಜಿಯೊಂದಿಗೆ ಟ್ರಸ್ಟ್ ವತಿಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ.  ಹಳೇನಗರದ ಶ್ರೀ ಬಸವೆಶ್ವರ ವೃತ್ತ, ಚನ್ನಗಿರಿ ರಸ್ತೆ, ಬಿ.ಎಚ್ ರಸ್ತೆ ಮತ್ತು ಬೈಪಾಸ್ ರಸ್ತೆಯಲ್ಲಿದ್ದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಈ ಕಾರ್ಯದಲ್ಲಿ ಟ್ರಸ್ಟ್ ಪ್ರಮುಖರು ಪಾಲ್ಗೊಂಡಿದ್ದರು.