![](https://blogger.googleusercontent.com/img/b/R29vZ2xl/AVvXsEg8lg5eVEDsNNmby7LkvaSBn7hfNteT-bq7fXlKSyXKGMhfXVxqov2ADRT6Yi8OnU9wLJngM71A4EnHF_hxCpoAGHO2tQ8XVmvUlkEiJvZCdgw3S58QF5rCoKuocZg0Ii3d_aO6NmQeqeRm/w400-h400-rw/D18-BDVT3%2528a%2529-777468.jpg)
![](https://blogger.googleusercontent.com/img/b/R29vZ2xl/AVvXsEhHqEhq1h82Q6x3ES1tOZNcMPKkjT378u1bj_r8WYUvKUgSiw9vp6d-rh9ua1k2R47YLOVyKFDfbH9Saup_dW5MM54SuxI8CRIrG9ldpHYl5H2y9VjsGdHS06VXEPKRszl8Wxuc-S39dwk7/w294-h400-rw/D18-BDVT3-781238.jpg)
'ಗೋಲ್ಡನ್ ಪಿಕಾಕ್ ಎನ್ವಿರೋನ್ಮೆಂಟ್ ಮ್ಯಾನೇಜ್ಮೆಂಟ್ ಆವಾರ್ಡ್' ಪ್ರಶಸ್ತಿ ಪತ್ರ ಮತ್ತು ಆವಾರ್ಡ್
ಭದ್ರಾವತಿ, ಡಿ. ೧೮: ಹಿರಿಯ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಒಂದು ವ್ಯಾಪಾರಿ ಕಂಪನಿಯಾಗಿರುವ ಇನ್ಸ್ಟಿಟ್ಯೂಟ್ ಆಫ್ ಡೈರೆಕ್ಟರ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ 'ಗೋಲ್ಡನ್ ಪಿಕಾಕ್ ಎನ್ವಿರೋನ್ಮೆಂಟ್ ಮ್ಯಾನೇಜ್ಮೆಂಟ್ ಆವಾರ್ಡ್' ಈ ಬಾರಿ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಲಭಿಸಿದ್ದು, ಈ ಹಿನ್ನಲೆಯಲ್ಲಿ ಉಕ್ಕು ಪ್ರಾಧಿಕಾರದ ಅಧೀನದಲ್ಲಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂತಸ ವ್ಯಕ್ತಪಡಿಸಿದೆ.
ಈ ನಡುವೆ ಪ್ರಶಸ್ತಿ ಲಭಿಸಿರುವ ಸಂಭ್ರಮ ಪತ್ರಿಕೆಗಳೊಂದಿಗೆ ಹಂಚಿಕೊಂಡಿರುವ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅನಿಲ್ಕುಮಾರ್ ಚೌಧರಿ, ಪ್ರಾಧಿಕಾರ ನಿರಂತರವಾಗಿ ಪರಿಸರ ರಕ್ಷಣೆಗೆ ಹೆಚ್ಚಿನ ಕಾಳಜಿವಹಿಸಿರುವ ಪರಿಣಾಮ ಈ ಪ್ರಶಸ್ತಿ ಲಭಿಸಿದೆ. ಪ್ರಾಧಿಕಾರದ ಅಧೀನದಲ್ಲಿರುವ ಕಾರ್ಖಾನೆಗಳಲ್ಲಿ ಸಾಧ್ಯವಾದಷ್ಟು ಎಲ್ಲಾ ರೀತಿಯಲ್ಲೂ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಉನ್ನತಮಟ್ಟದ ವ್ಯವಸ್ಥೆಗಳೊಂದಿಗೆ ವ್ಯರ್ಥವಾಗುವ ನೀರಿನ ಸಮರ್ಪಕ ನಿರ್ವಹಣೆ ಹಾಗು ಮರುಬಳಕೆ, ಇನ್ನಿತರ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ. ಕಾರ್ಖಾನೆಯಲ್ಲಿ ಮಾತ್ರವಲ್ಲದೆ ನಗರಾಡಳಿತದಲ್ಲೂ ಈ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಎಲ್ಲಾ ಕ್ರಮಗಳಿಂದಾಗಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಮುನ್ನಡೆಯಲ್ಲಿ ಸಾಗಿದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿಯನ್ನು ಇನ್ಸ್ಟಿಟ್ಯೂಟ್ ಆಫ್ ಡೈರೆಕ್ಟರ್ ಕಂಪನಿ ಅಧ್ಯಕ್ಷರು ಹಾಗು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾ. ಎಂ.ಎನ್ ವೆಂಕಟಚಲಯ್ಯ ನೀಡಿ ಗೌರವಿಸಿದರು.