Friday, May 26, 2023

ಶಾಸಕ ಸಂಗಮೇಶ್ವರ್‌ಗೆ ಕೈ ತಪ್ಪಿದ ಸಚಿವ ಸ್ಥಾನ : ಕ್ಷೇತ್ರದ ಜನತೆಯಲ್ಲಿ ನಿರಾಸೆ

    ಭದ್ರಾವತಿ, ಮೇ. ೨೬ : ಕ್ಷೇತ್ರದ ಶಾಸಕರಾಗಿ ೪ನೇ ಬಾರಿಗೆ ಆಯ್ಕೆಯಾದರೂ ಸಹ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಹ ಸಚಿವ ಸ್ಥಾನ ಕೈ ತಪ್ಪಿದ್ದು, ಕ್ಷೇತ್ರದ ಜನತೆಯಲ್ಲಿ ನಿರಾಸೆಯನ್ನುಂಟು ಮಾಡಿದೆ.
    ಸರ್ಕಾರ ರಚನೆ ಸಂದರ್ಭದಲ್ಲಿಯೇ ಸಚಿವ ಸ್ಥಾನ ಸಿಗುವ ವಿಶ್ವಾಸ ಹೊಂದಲಾಗಿತ್ತು. ಇದೀಗ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಸಚಿವ ಸ್ಥಾನದಿಂದ ವಂಚಿತರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡು ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿಗೆ ಮುಂದಾಗಿದ್ದ ಬಿ.ಕೆ ಸಂಗಮೇಶ್ವರ್ ಇದೀಗ ಬರಿ ಕೈಯಲ್ಲಿ ಹಿಂದಿರುಗುವಂತಾಗಿದೆ.
    ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ  ಸಹ ಸಚಿವ ಸ್ಥಾನಕ್ಕಾಗಿ ಸಂಗಮೇಶ್ವರ್ ತೀವ್ರ ಪೈಪೋಟಿ ನಡೆಸಿದ್ದರು. ಕೊನೆ ಹಂತದಲ್ಲಿ  ಇವರನ್ನು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು. ಇದೀಗ ೪ನೇ ಬಾರಿಗೆ ಗೆಲುವು ಸಾಧಿಸಿದ್ದು, ಅಲ್ಲದೆ ಪಕ್ಷದ ವರಿಷ್ಠರು ಈ ಬಾರಿ ಗೆಲುವು ಸಾಧಿಸಿದ್ದಲ್ಲಿ ಸಚಿವರಾಗುವುದು ಖಚಿತ ಎಂದು ಬಹಿರಂಗ ಸಭೆಯಲ್ಲಿ ಘೋಷಿಸಿದ್ದರು. ಆದರೆ ಇದೀಗ ಸಚಿವ ಸ್ಥಾನದಿಂದ ವಂಚಿತರಾಗಿರುವುದು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಕ್ಷೇತ್ರದ ಜನತೆಯಲ್ಲಿ ನಿರಾಸೆಯನ್ನುಂಟು ಮಾಡಿದೆ.
    ಸಂಗಮೇಶ್ವರ್‌ಗೆ ಯಾವುದೇ ರಾಜಕೀಯ ಹಿನ್ನಲೆಯೂ ಇಲ್ಲ, ಗುರುಗಳು ಸಹ ಯಾರು ಇಲ್ಲ. ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದವರು. ಸ್ವಂತ ಬಲದ ಮೇಲೆ ರಾಜಕೀಯ ಅಸ್ತಿತ್ವ ಕಂಡುಕೊಂಡವರು. ತಮ್ಮದೇ ವರ್ಚಸ್ಸನ್ನು ಉಳಿಸಿಕೊಳ್ಳುವ ಜೊತೆಗೆ ಪಕ್ಷ ನಿಷ್ಠೆಯಲ್ಲಿ ಮುಂದುವರೆದವರು. ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಜಿಲ್ಲೆಯಲ್ಲಿಯೇ ಹಿರಿಯರಾಗಿದ್ದು, ೪ ಬಾರಿ ಗೆದ್ದರೂ ಸಹ ಸೂಕ್ತ ಸ್ಥಾನಮಾನ ಸಿಗದಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ.
    ಸಚಿವ ಸ್ಥಾನ ಕೈ ತಪ್ಪಲು ಹಲವು ಕಾರಣ :
    ಶಾಸಕ ಬಿ.ಕೆ ಸಂಗಮೇಶ್ವರ್ ಸಚಿವ ಸ್ಥಾನ ಕೈ ತಪ್ಪಲು ಹಲವು ಕಾರಣಗಳಿದ್ದು, ಪ್ರಮುಖರಾಗಿ ಸಂಗಮೇಶ್ವರ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಗುರುತಿಸಿಕೊಂಡಿದ್ದಾರೆ. ಜಿಲ್ಲಾಮಟ್ಟದ ನಾಯಕರಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಸಂಗಮೇಶ್ವರ್ ಪರ ಲಾಭಿ ನಡೆಸಲು ಯಾರು ಇಲ್ಲದಿರುವುದು. ಕ್ಷೇತ್ರದವರೇ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ ಸಹ ಸಂಗಮೇಶ್ವರ್ ನೇರವಾಗಿ ಹೈಕಮಾಂಡ್ ಸಂಪರ್ಕ ಬೆಳೆಸಿಕೊಳ್ಳದಿರುವುದು. ಹೀಗೆ ಹಲವು ಕಾರಣಗಳಿಂದ ಸಚಿವ ಸ್ಥಾನ ಕೈ ತಪ್ಪಿದೆ ಎನ್ನಲಾಗಿದೆ.

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ

    ಭದ್ರಾವತಿ, ಡಿ. ೨೬ : ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಶಿವಮೊಗ್ಗ ಸ್ಪರ್ಧಾ ಕರ್ನಾಟಕ ಅಕಾಡೆಮಿ ಸಹಯೋಗದೊಂದಿಗೆ ಕಾಲೇಜಿನ ಚಂದನ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಡಿ. ನಂಜನಾಯ್ಕರವರು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ, ಪಿಯುಸಿ ಹಾಗೂ ಪದವಿ ಶಿಕ್ಷಣದ ನಂತರ ಉದ್ಯೋಗವಕಾಶಗಳು ಮತ್ತು ಸಂದರ್ಶನದಲ್ಲಿ ಭಾಗವಹಿಸುವ ಬಗೆಯನ್ನು ಕುರಿತು ಸಮಗ್ರ ಮಾಹಿತಿ ನೀಡಿದರು.
    ಇದೆ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಮತ್ತು ಸ್ಪರ್ಧಾ ಕರ್ನಾಟಕ ಅಕಾಡೆಮಿ ನಡುವೆ ಪರಸ್ಪರ ಐದು ವರ್ಷಗಳ ತಿಳುವಳಿಕೆ ಒಪ್ಪಂದಕ್ಕೆ ಸಹಿ
ಹಾಕಲಾಯಿತು.
    ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಸಕಲೇಶ್ ವಹಿಸಿದ್ದರು.  ಐಕ್ಯೂಎಸಿ ಸಂಚಾಲಕ ಡಾ. ಟಿ. ಪ್ರಸನ್ನ ಮತ್ತು ಪ್ಲೇಸ್‌ಮೆಂಟ್ ಸಂಚಾಲಕ ಪರಶುರಾಮ ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರರು, ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸಿಗೆ ಅರ್ಜಿ ಆಹ್ವಾನ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್.
    ಭದ್ರಾವತಿ, ಮೇ. ೨೬ : ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ೨೦೨೩-೨೪ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಕೋರ್ಸಿಗೆ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಸಿವಿಲ್ ಇಂಜಿನಿಯರಿಂಗ್, ಎಲೆಕ್ಟಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು (೪)ಮೆಟಲರ್ಜಿ ಇಂಜಿನಿಯರಿಂಗ್ ವಿಭಾಗಗಳು ಲಭ್ಯವಿರುತ್ತವೆ.
    ಮೇ. ೯ರಿಂದ ಪ್ರವೇಶ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ಜೆಟಿಎಸ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಪ್ರಥಮ ಸೆಮಿಸ್ಟರ್/ ೧ನೇ ವರ್ಷಕ್ಕೆ, ಡಿಪ್ಲೋಮಾಗೆ ಪ್ರವೇಶವನ್ನು ಪಡೆಯಲು ಅರ್ಹರಾಗಿದ್ದು, ಸೀಟು ಹಂಚಿಕೆಯಾದ ನಂತರ ಭರ್ತಿಯಾಗದ ಉಳಿಕೆ ಸೀಟುಗಳನ್ನು ಮೇ.೨೯ ರಿಂದ ಜೂ. ೩ರವರೆಗೆ ಆಫ್‌ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು, ಇಚ್ಛೆಯುಳ್ಳ ವಿದ್ಯಾರ್ಥಿಗಳು ನೇರವಾಗಿ ಹಾಜರಾಗಿ ಪ್ರವೇಶ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಮೊ. ೮೮೬೯೩೧೫೩೯, ೯೪೮೦೩೯೪೯೦೯ ಮತ್ತು ೯೯೮೬೪೦೬೯೪೧ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ಮೇ.೨೮ರವರೆಗೆ ೪೩ನೇ ವರ್ಷದ ಕರಗ ಮಹೋತ್ಸವ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಿ.
    ಭದ್ರಾವತಿ, ಮೇ. ೨೬: ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೩ನೇ ವರ್ಷದ ಕರಗ ಮಹೋತ್ಸವ ಮೇ.೨೮ರವರೆಗೆ ನಡೆಯಲಿದೆ.
    ಶುಕ್ರವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಶುದ್ಧ ಪುಣ್ಯಾಹ್ನ ಮತ್ತು ಧ್ವಜಾರೋಹಣ ಸಂಜೆ ಕಂಕಣ ಬಂಧನ ನೆರವೇರಿತು. ಮೇ.೨೭ರ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಸಂಜೆ ೬ ಗಂಟೆಗೆ ಉಮಾ ಮಹಿಳಾ ಭಜನ ಮಂಡಳಿ ವತಿಯಿಂದ ಭಕ್ತಿಗೀತೆ ನಡೆಯಲಿದೆ.
    ಮೇ.೨೮ರಂದು ಬೆಳಿಗ್ಗೆ ೯ ಗಂಟೆಗೆ ಎಳನೀರು ಅಭಿಷೇಕ, ಪಂಚಾಮೃತ ಮತ್ತು ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ೧೨ ಗಂಟೆಗೆ ಅಮ್ಮನವರ ಶಕ್ತಿ ಕರಗ ಸ್ಥಾಪನೆ ನಂತರ ಮಹಾಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿನಿಯೊಗ ಹಾಗು ಶ್ರಿ ದೇವಿಗೆ ಅಂಬಲಿ ಮತ್ತು ಅನ್ನದಾನ ಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನಯಲ್ಲಿ ಪಾಲ್ಗೊಂಡು ಕರಗ ಮಹೋತ್ಸವ ಯಶಸ್ವಿಗೊಳಿಸುವಂತೆ ಕೋರಲಾಗಿದೆ.