ಗೀತಾರಾಜ್ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆ
![](https://blogger.googleusercontent.com/img/a/AVvXsEhAJvXM7M7fkUm1L76389CrH2HUsVQaq15fyItXDZ0DBBoqa7U3gIBYqBlwatXn43T5iAbHTvc_pfUnSWhrpL_SoJAnPV3SzixDjWoOnNhAF5pw-XuCXwtFBZAHlG0LVnd4yOFQkaPuTtbx3S0RAZYeNSUZ0P1uwnV5K0Bw9fOJ9jZ2tGFgMMJBwehw4Q=w400-h226-rw)
ಭದ್ರಾವತಿ ನಗರಸಭೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯಸಭೆಯಲ್ಲಿ ಸದಸ್ಯರು ಆಸ್ತಿ ತೆರಿಗೆ ಶುಲ್ಕ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಭದ್ರಾವತಿ, ಏ. ೭: ನಗರಸಭೆ ವ್ಯಾಪ್ತಿಯಲ್ಲಿ ಈ ಬಾರಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಕಂಡು ಬಂದಿತು.
ಅಧ್ಯಕ್ಷೆ ಗೀತಾ ರಾಜ್ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಸದಸ್ಯರಾದ ವಿ. ಕದಿರೇಶ್, ಬಿ.ಕೆ ಮೋಹನ್, ಬಿ.ಟಿ ನಾಗರಾಜ್ ಸೇರಿದಂತೆ ಇನ್ನಿತರರು ಮಾತನಾಡಿ, ಈ ಹಿಂದೆ ಆಸ್ತಿ ತೆರಿಗೆ ಶುಲ್ಕ ಕೇವಲ ೬೭ ರು. ಗಳಿದ್ದು, ಏಕಾಏಕಿ ೨೦೦೦ ರು.ಗಳಿಗೂ ಅಧಿಕ ಏರಿಕೆಯಾಗಿದ್ದು, ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಇದೀಗ ಪುನಃ ಶೇ.೩ ರಿಂದ ೫ರಷ್ಟು ಏರಿಕೆ ಮಾಡುತ್ತಿರುವುದು ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳುವಂತಾಗಿದೆ. ಈಗಾಗಲೇ ಕಳೆದ ೨ ವರ್ಷಗಳಿಂದ ಕೊರೋನಾ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಆಸ್ತಿ ತೆರಿಗೆ ಶುಲ್ಕ ಹೆಚ್ಚಳ ಮಾಡುವುದು ಸರಿಯಲ್ಲ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯಾಧಿಕಾರಿ ರಾಜ್ಕುಮಾರ್, ಮಾ.೧೮ರಂತೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ ಹಾಗು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ೧೯೭೬ ಗಳಿಗೆ ತಿದ್ದುಪಡಿ ತರಲಾಗಿದ್ದು, ಕರ್ನಾಟಕ ಸ್ಟ್ಯಾಂಪ್ ಅಧಿನಿಯಮ ೧೯೫೭ ರ ೪೫(ಬಿ) ಪ್ರಕರಣದಡಿಯಲ್ಲಿ ಪ್ರಕಟಿಸಲಾಗುವ ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗ ಸೂಚಿ 'ಎ' ಬೆಲೆಗಳ ಆಧಾರದ ಮೇರೆಗೆ ಆಸ್ತಿ ತೆರಿಗೆ ನಿರ್ಧರಣೆ ಮಾಡಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ ಶೇ.೩ ರಿಂದ ೫ರಷ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ನೋಂದಾಣಿ ಇಲಾಖೆ ಶುಲ್ಕ ಹೆಚ್ಚಳ ಮಾಡಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ಈ ಹಿಂದೆ ೬೭ ರು. ಇದ್ದ ಆಸ್ತಿ ತೆರಿಗೆ ಶುಲ್ಕ ೨,೬೬೬ ರು.ಗಳಿಗೆ ಏರಿಕೆಯಾಗಿದೆ. ತೆರಿಗೆ ಶುಲ್ಕ ತಾಂತ್ರಿಕವಾಗಿ ನಿಗದಿಗೊಳ್ಳುತ್ತಿದ್ದು, ನಗರಸಭೆ ಇದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ತೀವ್ರ ವಿರೋಧಪಡಿಸಿದ ಸದಸ್ಯರು ಬಾವಿಗಿಳಿದು ಧರಣಿ ನಡೆಸಲು ಮುಂದಾದರೂ ಕೆಲ ಸಮಯ ಮಾತಿನ ಚಕಮಕಿ ನಡೆದು ಕೊನೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.
ಉಳಿದಂತೆ ೨೦೨೧-೨೨ನೇ ಸಾಲಿನ ಶೇ.೨೪.೧೦ರ ನಿಧಿ ಕ್ರಿಯಾ ಯೋಜನೆಯಡಿ ಪರಿಶಿಷ್ಟ ಜಾತಿಯವರಿಗೆ ಬ್ಯಾಂಕ್ಗಳ ಸಾಲದ ನೆರವಿನಿಂದ ಸಣ್ಣ ಉದ್ದಿಮೆಯನ್ನು ಪ್ರಾರಂಭಿಸಲು ಸಹಾಯಧನ ಕೋರಿ ಬಂದಿರುವ ಅರ್ಜಿಗಳ ಬಗ್ಗೆ, ಶೇ.೭.೨೫ರ ನಿಧಿ ಕ್ರಿಯಾ ಯೋಜನೆಯಡಿಯಲ್ಲಿ ಇತರೆ ಬಡವರ್ಗದವರಿಗೆ ಬ್ಯಾಂಕ್ಗಳ ಸಾಲದ ನೆರವಿನಿಂದ ಸಣ್ಣ ಉದ್ದಿಮೆಯನ್ನು ಪ್ರಾರಂಭಿಸಲು ಸಹಾಯಧನ ಕೋರಿ ಬಂದಿರುವ ಅರ್ಜಿಗಳ ಬಗ್ಗೆ ಹಾಗು ಶೇ.೫ರ ನಿಧಿ ಕ್ರಿಯಾ ಯೋಜನೆಯಡಿಯಲ್ಲಿ ೫ ವಿಕಲಚೇತನರಿಗೆ ಬ್ಯಾಂಕ್ಗಳ ಸಾಲದ ನೆರವಿನಿಂದ ಸಣ್ಣ ಉದ್ದಿಮೆಯನ್ನು ಪ್ರಾರಂಭಿಸಲು ಸಹಾಯಧನ ಕೋರಿ ಬಂದಿರುವ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು.
೧೫ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿಯಲ್ಲಿ ಉಳಿಕೆಯಾಗಿರುವ ಮೊತ್ತದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ಹಾಗು ೨೦೨೧-೨೨ನೇ ಸಾಲಿನ ಎಸ್ಎಫ್ಸಿ ಮುಕ್ತ ನಿಧಿ ಮತ್ತು ೧೫ನೇ ಹಣಕಾಸು ಅನುದಾನ, ಎಸ್ಎಫ್ಸಿ ಕುಡಿಯುವ ನೀರು ಅನುದಾನದಡಿಯಲ್ಲಿ ಮತ್ತು ೨೦೧೭-೧೮ ಹಾಗು ೨೦೧೮-೧೯ನೇ ಸಾಲಿನ ೧೪ನೇ ಹಣಕಾಸು ಸಾಮಾನ್ಯ ಮೂಲ ಅನುದಾನ ಹಾಗು ೨೦೧೬-೧೭ನೇ ಸಾಲಿನ ಹಣಕಾಸು ಪ್ರೋತ್ಸಾಹ ಅನುದಾನದ ಉಳಿತಾಯ ಮೊತ್ತಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಗುತ್ತಿಗೆದಾರರನ್ನು ಅನುಮೋದಿಸುವ ಕುರಿತು ಚರ್ಚೆ ನಡೆಸಲಾಯಿತು.
ಸಭೆ ಆರಂಭದಲ್ಲಿ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಮಾತನಾಡಿ, ೩೫ ವಾರ್ಡ್ಗಳನ್ನು ಹೊಂದಿರುವ ನಗರಸಭೆಯಲ್ಲಿ ಕೇವಲ ಒಂದೇ ಒಂದು ಮುಕ್ತಿ ವಾಹಿನಿ ವಾಹನವಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಮುಕ್ತಿ ವಾಹಿನಿ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಬಸವರಾಜ್ ಬಿ ಆನೇಕೊಪ್ಪ ಮಾತನಾಡಿ, ಸಾಮಾನ್ಯ ಸಭೆಗಳಲ್ಲಿ ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ನೀಡಬೇಕು. ಹೊಸದಾಗಿ ಆಯ್ಕೆಯಾಗಿರುವ ಸದಸ್ಯರ ಸಲಹೆಗಳಿಗೂ ಬೆಲೆ ನೀಡಿ ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಈ ನಡುವೆ ಸದಸ್ಯರು ವಾರ್ಡ್ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಿಸರ ಅಭಿಯಂತರ ಪ್ರಭಾಕರ್, ಬೀದಿಗಳನ್ನು ಹಿಡಿದು ಅವುಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಕಾರ್ಯ ಶುಕ್ರವಾರದಿಂದ ಆರಂಭವಾಗಲಿದೆ. ಈಗಾಗಲೇ ಬೈಪಾಸ್ ರಸ್ತೆಯಲ್ಲಿರುವ ನಗರಸಭೆ ಪಂಪ್ ಹೌಸ್ನಲ್ಲಿ ಶಸ್ತ್ರ ಚಿಕಿತ್ಸೆಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಬೀದಿ ನಾಯಿಗಳಿಗೆ ಮಾತ್ರ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಈ ಹಿನ್ನಲೆಯಲ್ಲಿ ಈ ಅವಧಿಯಲ್ಲಿ ಸಾಕು ನಾಯಿಗಳನ್ನು ಮನೆಯಿಂದ ಹೊರಬಿಡದಿರುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದರು.
ಸದಸ್ಯ ಆರ್. ಶ್ರೇಯಸ್ ಗ್ರಾಮ ದೇವತೆ ಹಳೇನಗರದ ಶ್ರೀ ಹಳದಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ನಗರಸಭೆವತಿಯಿಂದ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್ಕುಮಾರ್, ಪೌರಾಯುಕ್ತ ಕೆ. ಪರಮೇಶ್ ಉಪಸ್ಥಿತರಿದ್ದರು. ನಗರಸಭೆ ಬಹುತೇಕ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.