ಸೋಮವಾರ, ಮೇ 5, 2025

ಮೇ.೭ರಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ

    ಭದ್ರಾವತಿ : ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕಗಳೊಂದಿಗೆ ರ್‍ಯಾಂಕ್ ಪಡೆದ ಜಿಲ್ಲೆಯ ೩ ಸಾಧಕರಿಗೆ ನಗರದ ರೋಟರಿ ಕ್ಲಬ್ ವತಿಯಿಂದ ಮೇ. ೭ರಂದು ಸಂಜೆ ೬.೩೦ಕ್ಕೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ರ್‍ಯಾಂಕ್ ವಿಜೇತರಾದ ಸಾಗರದ ವಿ. ವಿಕಾಸ್, ಶಿವಮೊಗ್ಗದ ಬಿ.ಎಂ ಮೇಘನಾ ಮತ್ತು ಮಾದೇನಹಳ್ಳಿಯ ಡಾ. ದಯಾನಂದ ಸಾಗರ್ ಅವರನ್ನು ರೋಟರಿ ಕ್ಲಬ್ ವತಿಯಿಂದ ಅಭಿನಂದಿಸಲಾಗುತ್ತಿದ್ದು, ಕ್ಲಬ್ ಅಧ್ಯಕ್ಷ ಜಿ. ರಾಘವೇಂದ್ರ ಉಪಾಧ್ಯಾಯ ಅಧ್ಯಕ್ಷತೆ ವಹಿಸಲಿದ್ದಾರೆ. 
    ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರೋಟರಿ ಪ್ರಮುಖರಾದ ಎಸ್.ಆರ್ ನಾಗರಾಜ್, ಆದರ್ಶ್, ಕ್ಲಬ್ ಕಾರ್ಯದರ್ಶಿ ಎಂ. ನಿರಂಜನ್, ಆನ್ಸ್ ಕ್ಲಬ್ ಅಧ್ಯಕ್ಷೆ ಲೀಲಾವತಿ ಸುಧಾಕರ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 

ಶಂಕರಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್‌ಗೆ ಸನ್ಮಾನ

ಭದ್ರಾವತಿ ಸಿದ್ದಾರೂಢನಗರದ ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್‌ರವರು ೯೫ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಅವರನ್ನು ರಾಜ್ಯ ಒಬ್ಬೂರು ಕಮ್ಮೆ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಸಿದ್ದಾರೂಢನಗರದ ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್‌ರವರು ೯೫ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಅವರನ್ನು ರಾಜ್ಯ ಒಬ್ಬೂರು ಕಮ್ಮೆ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಸೇವಾ ಸಮಿತಿ ಅಧ್ಯಕ್ಷ ಎ.ವಿ ಪ್ರಸನ್ನ ನೇತೃತ್ವದಲ್ಲಿ ಸುಬ್ಬರಾವ್ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲೆಂದು ಪ್ರಾರ್ಥಿಸಲಾಯಿತು. 
    ರಾಜ್ಯ ಸಮಿತಿ ನಿರ್ದೇಶಕರಾದ ಕೆ.ಎಸ್ ನಾಗರಾಜ, ಜಿಲ್ಲಾ ಬ್ರಾಹ್ಮಣ ಮಹಾಸಭೆ ಪ್ರತಿನಿಧಿ ಎನ್.ಎಂ ರಘುರಾಮ್, ಮಾ.ಸ ನಂಜುಂಡಸ್ವಾಮಿ, ಛಾಯಾಪತಿ, ಪ್ರಕಾಶಭಟ್ಟರು, ತಾಲೂಕು ಬ್ರಾಹ್ಮಣ ಮಹಾಸಭೆ ಮಾಜಿ ಅಧ್ಯಕ್ಷ ಎ.ಎನ್ ಸುರೇಶ್ ಹಾಗು ಶಂಕರ ಮಠದ ಕೆ.ಎಸ್ ನಾಗರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜಾತಿಗಣತಿ ಸಮೀಕ್ಷೆ : ಮನೆ ಮನೆಗೆ ಭೇಟಿ ನೀಡಲು ನಿರ್ದೇಶನ ನೀಡಿ

ಸರ್ಕಾರಕ್ಕೆ ಜಂಗಮ ಸಮಾಜದಿಂದ ಮನವಿ 

ಪ್ರತಿ ಮನೆ ಮನೆಗೆ ತೆರಳಿ ಜಾತಿಗಣತಿ ಸಮೀಕ್ಷೆ ನಡೆಸುವಂತೆ ಸಮೀಕ್ಷೆ ನಡೆಸುವವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜ ಭದ್ರಾವತಿ  ತಾಲೂಕು ನಗರ ಘಟಕ ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ. 
    ಭದ್ರಾವತಿ : ಪ್ರತಿ ಮನೆ ಮನೆಗೆ ತೆರಳಿ ಜಾತಿಗಣತಿ ಸಮೀಕ್ಷೆ ನಡೆಸುವಂತೆ ಸಮೀಕ್ಷೆ ನಡೆಸುವವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜ ತಾಲೂಕು ನಗರ ಘಟಕ ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ. 
    ನಗರ ಘಟಕದ ಜಂಗಮ ಸಮಾಜದ ಅಧ್ಯಕ್ಷ ಎಸ್. ಅಡವೀಶಯ್ಯ ನೇತೃತ್ವದಲ್ಲಿ ಉಪತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಮನವಿ ಸಲ್ಲಿಸಲಾಗಿದ್ದು, ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್‌ರವರ ಸದಸ್ಯ ಆಯೋಗದಿಂದ ನ್ಯಾಯಯುತವಾಗಿ ರಾಜ್ಯದ ೧೦೧ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಿ ಆ ಜಾತಿಗಳಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಮುಂದಾಗಿರುವುದು ಸಂತಸದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಮೇ.೫ರಿಂದ ಜಾತಿಗಣತಿ ಸಮೀಕ್ಷೆ ನಡೆಸುವರೆಂದು ತಿಳಿದು ಬಂದಿದೆ.  
    ಜಂಗಮ ಸಮಾಜ ಪರಿಶಿಷ್ಟ ಜಾತಿಗೆ ಸಂಬಂಧಿಸಿದ್ದು, ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿ ಆ.ನಂ.೧೯(೧)ರಲ್ಲಿ ಬೇಡ ಜಂಗಮ ಎಂದು ನಮೂದಿಸಲಾಗಿದೆ. ಬೇಡ ಜಂಗಮರ ಕುಲಕಸುಬು ಧಾರ್ಮಿಕ ಭಿಕ್ಷಾಟನೆಯಾಗಿದ್ದು, ತಲತಲಾಂತರದಿಂದ ಈ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೆ. ಸಮೀಕ್ಷೆ ಸಮಯದಲ್ಲಿ ವೃತ್ತಿ ಧರ್ಮವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದ್ದು, ಸಮೀಕ್ಷೆ ನಡೆಸುವವರಿಗೆ ಮನೆ, ಮನೆಗೆ ಭೇಟಿ ನೀಡಲು ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. 
ಜಂಗಮ ಸಮಾಜದ ನಗರ ಘಟಕದ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಹಿರಿಯ ಪತ್ರಕರ್ತ ಎಲ್. ಆನಂದರಾಮನ್ ನಿಧನ

ಎಲ್. ಆನಂದರಾಮನ್ 
    ಭದ್ರಾವತಿ : ಹಳೇನಗರದ ಪತ್ರಿಕಾ ಭವನ ಟ್ರಸ್ಟ್ ಅಜೀವ ಸದಸ್ಯರು, ಹಿರಿಯ ಪತ್ರಕರ್ತರಾದ ಎಲ್. ಆನಂದರಾಮನ್(೭೧) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ ಮಂಜುಳಾ, ಪುತ್ರಿಯರಾದ ರಕ್ಷಾ ಮತ್ತು ರಶ್ಮಿ ಹಾಗು ಅಳಿಯಂದಿರು, ಮೊಕ್ಕಳು ಇದ್ದಾರೆ.  ಸುಮಾರು ೩ ದಶಕಗಳಿಗೂ ಹೆಚ್ಚು ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕನ್ನಡಪ್ರಭ ಮತ್ತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ದಿನ ಪತ್ರಿಕೆಗಳ ವಿತರಕರಾಗಿ, ವರದಿಗಾರರಾಗಿ ದೀರ್ಘಾವಧಿ ಸೇವೆಲ್ಲಿಸಿದ್ದರು. 
    ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆಯ ಉಪಾಧ್ಯಕ್ಷರಾಗಿ ಹಾಗು ಪತ್ರಿಕಾ ಭವನ ಟ್ರಸ್ಟ್ ಅಜೀವ ಸದಸ್ಯರಾಗಿದ್ದು, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು.  
    ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪ್ರಸಾದ್ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಬಂಕ್ ಮಾಲೀಕರಾಗಿದ್ದರು. 
    ಅಲ್ಲದೆ ಆನಂದರಾಮನ್‌ರವರು ಕ್ರಿಕೆಟ್ ತರಬೇತಿದಾರರಾಗಿ ಸಹ ಗುರುತಿಸಿಕೊಳ್ಳುವ ಮೂಲಕ ಹಲವಾರು ಪಂದ್ಯಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಕೆಲವು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಚೇತರಿಸಿಕೊಂಡಿದ್ದರು. ನಂತರ ಬೆಂಗಳೂರಿನಲ್ಲಿ ವಾಸವಾಗಿದ್ದರು. 
    ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಹಾಗು ತಾಲೂಕು ಶಾಖೆ ಪದಾಧಿಕಾರಿಗಳು ಹಾಗು ಸದಸ್ಯರು, ಪತ್ರಿಕಾ ಭವನ ಟ್ರಸ್ಟ್ ಪದಾಧಿಕಾರಿಗಳು ಮತ್ತು ಟ್ರಸ್ಟಿಗಳು ಸಂತಾಪ ಸೂಚಿಸಿದ್ದಾರೆ.