Saturday, January 15, 2022

ಉಕ್ಕಿನ ನಗರದಲ್ಲಿ ಕೊರೋನಾ ಶತಕ ದಾಟಲು ೨ ಬಾಕಿ

ಕೇವಲ ೬ದಿನದಲ್ಲಿ ೩೦೦ರ ಗಡಿ ದಾಟಿದ ಸೋಂಕು


    ಭದ್ರಾವತಿ, ಜ. ೧೫: ತಾಲೂಕಿನಲ್ಲಿ ಕೋವಿಡ್ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕೇವಲ ೬ ದಿನದಲ್ಲಿ ೩೦೦ರ ಗಡಿ ದಾಟಿದೆ. ಶನಿವಾರ ಒಂದೇ ದಿನ ೯೮ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಿಂದಾಗಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
    ೩ನೇ ಅಲೆಯಲ್ಲಿ ಯಾವುದೇ ರೀತಿಯ ಗಂಭೀರ ಸಮಸ್ಯೆಗಳು ಕಂಡು ಬಾರದಿದ್ದರೂ ಸಹ ಸೋಂಕಿತರ ಪ್ರಮಾಣದಲ್ಲಿ ದಿನ ದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದುವರೆಗೂ ಸಾವಿನ ಪ್ರಕರಣಗಳು ದಾಖಲಾಗಿಲ್ಲ. ಬಹುತೇಕ ಮಂದಿ ಈಗಾಗಲೇ ೨ ಹಂತದ ಕೋವಿಡ್ ಲಸಿಕೆಗಳನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಕಂಡು ಬರುತ್ತಿಲ್ಲ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ನಡುವೆ ಜನರು ಸ್ಯಾನಿಟೈಜರ್, ಮಾಸ್ಕ್ ಬಳಕೆ ಹಾಗು ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ.

ತಾಲೂಕು ಕುರುಬರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ

ಭದ್ರಾವತಿ ತಾಲೂಕು ಕುರುಬರ ಸಂಘ.
    ಭದ್ರಾವತಿ, ಜ. ೧೫: ತಾಲೂಕು ಕುರುಬರ ಸಂಘಕ್ಕೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಯದ ಹಿನ್ನಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
    ಈ ಹಿಂದೆ ತಾಲೂಕು ಕುರುಬರ ಸಂಘಕ್ಕೆ ೨೦೧೭ರಲ್ಲಿ ಅಂದಿನ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ನಡೆದು ಹೊಸದಾಗಿ ಪದಾಧಿಕಾರಿಗಳು ಚುನಾಯಿತರಾಗಿದ್ದರು. ಬೈಲಾ ಪ್ರಕಾರ ಇವರ ಅಧಿಕಾರ ಅವಧಿ ೩ ವರ್ಷಗಳಿಗೆ ಸೀಮಿತವಾಗಿದ್ದು, ನವೆಂಬರ್ ೨೦೨೦ರಲ್ಲಿ ಮುಕ್ತಾಯಗೊಂಡಿದೆ. ಆದರೂ ಸಹ ಇದುವರೆಗೂ ಚುನಾವಣೆ ನಡೆಸಿಲ್ಲ. ಕೋವಿಡ್-೧೯ರ ಹಿನ್ನಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ ಎಂದು ಸಂಘದ ಪದಾಧಿಕಾರಿಗಳು ಸಹಕಾರ ಸಂಘಗಳ ನಿಬಂಧಕರು ಮತ್ತು ಉಪ ನಿಬಂಧಕರಿಗೆ ಸಲ್ಲಿಸಿರುವ ಸಮಜಾಯಿಷಿಯಲ್ಲಿ ಒಪ್ಪಿಕೊಂಡಿದ್ದು, ಈ ಹಿನ್ನಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಜ.೬ರಂದು ಸರ್ಕಾರ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕಗೊಳಿಸಿದೆ.
    ಆಡಳಿತಾಧಿಕಾರಿಗಳು ಸಂಘದ ಬೈಲಾ ಪ್ರಕಾರ ಚುನಾವಣೆ ನಡೆಸಿ ನೂತನ ಪದಾಧಿಕಾರಿಗಳು ಆಯ್ಕೆಯಾಗುವವರೆಗೂ ಮುಂದುವರೆಯಲಿದ್ದು, ಮುಂದಿನ ೬ ತಿಂಗಳ ಒಳಗೆ ಸಂಘಕ್ಕೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಈ ಕುರಿತು ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಸಿ ರಾಧ ರಾಜ್ಯಪಾಲರ ಆದೇಶಾನುಸಾರ ಸುತ್ತೋಲೆ ಹೊರಡಿಸಿದ್ದಾರೆ.

ವಾರಾಂತ್ಯ ಕರ್ಪ್ಯೂ ನಡುವೆ ಶ್ರೀ ಗುರುಸಿದ್ದರಾಮೇಶ್ವರ ಜಯಂತಿ

ವಾರಾಂತ್ಯ ಕರ್ಪ್ಯೂ ನಡುವೆ ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಭೋವಿ ಅಭಿವೃದ್ಧಿ ಸಂಘದ ವತಿಯಿಂದ ಶನಿವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಶಿವಯೋಗಿ ಶ್ರೀ ಗುರುಸಿದ್ದರಾಮೇಶ್ವರರ ೮೪೯ನೇ ಜಯಂತಿ ಸರಳವಾಗಿ ನಡೆಯಿತು
    ಭದ್ರಾವತಿ, ಜ. ೧೫: ವಾರಾಂತ್ಯ ಕರ್ಪ್ಯೂ ನಡುವೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಭೋವಿ ಅಭಿವೃದ್ಧಿ ಸಂಘದ ವತಿಯಿಂದ ಶನಿವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಶಿವಯೋಗಿ ಶ್ರೀ ಗುರುಸಿದ್ದರಾಮೇಶ್ವರರ ೮೪೯ನೇ ಜಯಂತಿ ಸರಳವಾಗಿ ನಡೆಯಿತು.
    ಶ್ರೀ ಗುರುಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸುಧಾರಣೆಯಲ್ಲಿ ಶ್ರೀ ಗುರುಸಿದ್ದರಾಮೇಶ್ವರರ ಪಾತ್ರ ಕುರಿತು ಸ್ಮರಿಸಲಾಯಿತು.
    ಭೋವಿ ಅಭಿವೃದ್ಧಿ ಸಂಘದ ಅಧ್ಯಕ್ಷ, ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್, ಗೌರವಾಧ್ಯಕ್ಷ ಎಂ. ರಾಮು, ಪ್ರಮುಖರಾದ ಚೌಡಪ್ಪ, ಅಣ್ಣಮಲೈ, ಉಪಾಧ್ಯಕ್ಷರಾದ ಆನಂದ್, ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ, ನಿರ್ದೇಶಕ ತಮ್ಮಯ್ಯ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಭೋವಿ ಸಮಾಜದ ಪ್ರಮುಖರು, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.