ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಂಗಮೇಶ್ವರ್ಗೆ ಮಾತಿನ ಚಾಟಿ, ಕೇವಲ ಸ್ವಾಗತ ಭಾಷಣಕ್ಕೆ ಸೀಮಿತ
![](https://blogger.googleusercontent.com/img/a/AVvXsEjl2zed_-Oh0zTmFw6jXClNXZxejCm5rl4mgaO7MEFQ1d0H8OMMPPG__pk9DDtW6avrTFXlfFPl_AznVsEfhQng5IA02BVoouZRVQ0utTPWBuzEI23ysQVWGp1WPxs6HFu6q3x6cQvgiiW9LRUBBKH99pCyVRS1CPzUlCrXYcuezxwl74T_RCMKKn_6PA=w400-h133-rw)
ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದರು.
ಭದ್ರಾವತಿ, ಫೆ. ೯ : ಯಾವುದೇ ಪಕ್ಷವಿರಲಿ, ಸಂಘಟನೆ ಇರಲಿ, ಕುಟುಂಬವಿರಲಿ ಶಿಸ್ತು ಬಹಳ ಮುಖ್ಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳುವ ಮೂಲಕ ಶಾಸಕ ಬಿ.ಕೆ ಸಂಗಮೇಶ್ವರ್ಗೆ ಮಾತಿನ ಚಾಟಿ ಬೀಸಿದರು.
ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತು ಆರಂಭಿಸಿದ ಡಿ.ಕೆ ಶಿವಕುಮಾರ್, ಇಲ್ಲಿನ ಶಾಸಕ ಸಂಗಮೇಶ್ವರ್ ಒಂದು ರೀತಿ ಹಸು ಇದ್ದ ಹಾಗೆ ಒದೆಯುವುದಿಲ್ಲ, ಆಯುವುದಿಲ್ಲ. ವೇದಿಕೆಯಲ್ಲಿ ಯಾರೋ ಗಲಾಟೆ ಮಾಡುತ್ತಿದ್ದಾರೆ ಅಲ್ಲಿ ಸ್ವಲ್ಪ ನೋಡಪ್ಪ ಎಂದರೆ ಇಲ್ಲಾ ಅಣ್ಣ ಅವರು ಕೋಪ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ಈ ರೀತಿ ಉತ್ತರ ಸರಿಯಲ್ಲ ಎಂದರು.
ಯಾವುದೇ ಪಕ್ಷವಿರಲಿ, ಸಂಘಟನೆ ಇರಲಿ, ಕುಟುಂಬವಿರಲಿ ಶಿಸ್ತು ಬಹಳ ಮುಖ್ಯ. ನಮ್ಮ ಮನೆಗಳಲ್ಲಿ ಮಕ್ಕಳಿಗೆ ಹಿರಿಯರು ಶಿಸ್ತಿನ ಪಾಠ ಕಲಿಸುತ್ತಾರೆ. ಶಾಲೆಗಳಲ್ಲಿ ಶಿಕ್ಷಕರು ನಮಗೆ ಶಿಸ್ತಿನ ಪಾಠ ಕಲಿಸುತ್ತಾರೆ. ಇದೆ ರೀತಿ ಪಕ್ಷದ ಕಾರ್ಯಕರ್ತರಿಗೂ ಶಿಸ್ತಿನ ಪಾಠ ಕಲಿಸಬೇಕು. ಆಗ ಮಾತ್ರ ಪಕ್ಷಕ್ಕೆ ಒಂದು ಗೌರವವಿರುತ್ತದೆ ಎಂದು ಸಂಗಮೇಶ್ವರ್ಗೆ ಮಾತಿನ ಚಾಟಿ ಬೀಸಿದರು.
ಸಂಗಮೇಶ್ವರ್ ಕೇವಲ ಸ್ವಾಗತ ಭಾಷಣಕ್ಕೆ ಸೀಮಿತ :
ಡಿ.ಕೆ ಶಿವಕುಮಾರ್ರವರು ಬಿ.ಕೆ ಸಂಗಮೇಶ್ವರ್ಗೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಲು ಸಹ ಅವಕಾಶ ನೀಡಲಿಲ್ಲ. ಅವರು ಆಯ್ಕೆ ಮಾಡಿದ ವ್ಯಕ್ತಿಗಳು ಮಾತ್ರ ಜ್ಯೋತಿ ಬೆಳಗಿಸಿದರು. ಉಳಿದಂತೆ ಸಂಗಮೇಶ್ವರ್ಗೆ ಸ್ವಾಗತ ಕೋರಲು ಮಾತ್ರ ಅವಕಾಶ ನೀಡಲಾಗಿತ್ತು. ವಿಐಎಸ್ಎಲ್ ಕಾರ್ಖಾನೆ ಮುಂಭಾಗ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲೂ ಸಹ ಸಂಗಮೇಶ್ವರ್ಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದರಿಂದಾಗಿ ಶಾಸಕರ ಬೆಂಬಲಿಗರು, ಅಭಿಮಾನಿಗಳಲ್ಲಿ ಸ್ವಲ್ಪಮಟ್ಟಿಗೆ ನಿರಾಸೆಯನ್ನುಂಟು ಮಾಡಿತು.
ಯುವ ಕಾಂಗ್ರೆಸ್ಗೂ ಭದ್ರಾವತಿಗೂ ಒಂದು ರೀತಿಯ ನಂಟು : ನಲಪಾಡ್
ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್, ಯುವ ಕಾಂಗ್ರೆಸ್ಗೂ ಭದ್ರಾವತಿಗೂ ಒಂದು ರೀತಿಯ ನಂಟು ಬೆಳೆದಿದೆ. ರಾಷ್ಟ್ರೀಯ ಅಧ್ಯಕ್ಷರು ಇದೆ ಊರಿನವರು, ನಾನು ಸಹ ಇದೆ ಊರಿನವನು. ೧೯೬೮ ರಿಂದ ೭೮ರವರೆಗೆ ನಮ್ಮ ತಾತ ಎಂ.ಎ ಮಹಮದ್ರವರು ಅಂದಿನ ಪುರಸಭೆ ಅಧ್ಯಕ್ಷರಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದರು. ನಮ್ಮ ತಂದೆ ಹ್ಯಾರಿಸ್ರವರು ಪ್ರಸ್ತುತ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ೨೦೦೪ರಲ್ಲಿ ಎಂಪಿಎಂ ಕಾರ್ಖಾನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಅವರು ಕಾರ್ಖಾನೆ ಉಳಿವಿಗಾಗಿ ಹೆಚ್ಚಿನ ಕಾಳಜಿ ವಹಿಸಿದ್ದರು. ಇವರ ನಂತರ ಬಂದ ಅರಗಜ್ಞಾನೇಂದ್ರರವರು ಕಾರ್ಖಾನೆಯನ್ನು ಅರ್ಧ ಮುಳುಗಿಸಿದರು. ಪ್ರಸ್ತುತ ಕೇಂದ್ರ ಹಾಗು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಎಂಪಿಎಂ ಮತ್ತು ವಿಐಎಸ್ಎಲ್ ಕಾರ್ಖಾನೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿವೆ. ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಂಡು ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶನೀಡಬಾರದು. ಕಾರ್ಖಾನೆಗಳ ಉಳಿವಿಗಾಗಿ ಎಲ್ಲರೂ ಹೋರಾಟಕ್ಕೆ ಸಿದ್ದರಾಗಬೇಕೆಂದು ಮನವಿ ಮಾಡಿದರು.
ಬಿಜೆಪಿ ನಾಯಕರ ಪ್ಯಾಂಟ್ ಕೆಳಗೆ ಬೀಳದಂತೆ ಎಚ್ಚರ ವಹಿಸಲು ಉಚಿತವಾಗಿ ಬೆಲ್ಟ್ ನೀಡುತ್ತೇವೆ: ಬಿ.ವಿ ಶ್ರೀನಿವಾಸ್
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮಾತನಾಡಿ, ಬಿಜೆಪಿ ನಾಯಕರು ನಮ್ಮ ಪಕ್ಷದ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಬಿಜೆಪಿ ನಾಯಕರ ಪ್ಯಾಂಟ್ ಆಗಾಗ ಕೆಳಗೆ ಬೀಳುತ್ತಿರುತ್ತದೆ. ನಲಪಾಡ್ರವರು ಅವರಿಗೆ ಉಚಿತವಾಗಿ ಬೆಲ್ಟ್ಗಳನ್ನು ತಲುಪಿಸಲಿದ್ದಾರೆ. ನಾವುಗಳು ಕೈಗಳಿಗೆ ಬಳೆ ತೊಟ್ಟುಕೊಂಡು ಕುಳಿತ್ತಿಲ್ಲ. ನಮ್ಮ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆಯಲ್ಲಿ ಪ್ರಮುಖರಾದ ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಸಂಸದರಾದ ಕೆ.ಎಚ್ ಮುನಿಯಪ್ಪ, ಉಗ್ರಪ್ಪ, ಮಾಜಿ ಸಚಿವರಾದ ರೇವಣ್ಣ, ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿ.ಎಚ್ ಶ್ರೀನಿವಾಸ್, ಕೆ.ಬಿ ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಟಿ. ಚಂದ್ರೇಗೌಡ, ಎಚ್.ಎಲ್ ಷಡಾಕ್ಷರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.