Monday, August 10, 2020

ಎಸ್‌ಎಸ್‌ಎಲ್‌ಸಿ : ಬಹುತೇಕ ಶಾಲೆಗಳಲ್ಲಿ ಉತ್ತಮ ಫಲಿತಾಂಶ


ಭದ್ರಾವತಿ, ಆ. ೧೦: ನಗರದ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಎಜ್ಯುಕೇಷನ್ ಟ್ರಸ್ಟ್‌ನ ಅನನ್ಯ ಪ್ರೌಢಶಾಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ. 
ಈ ಶಾಲೆ ಕಳೆದ ೫ ವರ್ಷಗಳಿಂದ ನಿರಂತರವಾಗಿ ಉತ್ತಮ ಫಲಿತಾಂಶ ಹೊಂದಿದ್ದು, ಈ ಬಾರಿ ೨ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೧೯ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ೭ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 
    ಕೃಷ್ಣಮೂರ್ತಿ .ಜೆ-೫೮೭, ಶ್ವೇತ .ಎಸ್-೫೩೩, ಪವನ್ .ಟಿ.ಎಂ-೫೨೩, ಭೂಮಿಕ .ಎಂ-೫೨೨, ಆರ್. ಧನುಶ್ರೀ-೫೧೮ ಮತ್ತು ಸೈಯದ್ ಹುಸೇನ್-೫೦೭ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಎಜ್ಯುಕೇಷನ್ ಟ್ರಸ್ಟ್‌ನ ಅಧ್ಯಕ್ಷರು, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
       ಎಸ್‌ಎವಿ ಆಂಗ್ಲ ಪ್ರೌಢಶಾಲೆ ಶೇ.೧೦೦ರಷ್ಟು ಫಲಿತಾಂಶ:
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಆಂಗ್ಲ ಪ್ರೌಢಶಾಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ.
     ವಿದ್ಯಾಸಂಸ್ಥೆಯ ೧೦೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೮ ವಿದ್ಯಾರ್ಥಿಗಳು ೬೦೦ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಎ+ ಶ್ರೇಣಿಯಲ್ಲಿ ೩೯ ವಿದ್ಯಾರ್ಥಿಗಳು, ಎ ಶ್ರೇಣಿಯಲ್ಲಿ ೪೧ ವಿದ್ಯಾರ್ಥಿಗಳು, ಬಿ+ ಶ್ರೇಣಿಯಲ್ಲಿ ೧೭ ವಿದ್ಯಾರ್ಥಿಗಳು, ಬಿ ಶ್ರೇಣಿಯಲ್ಲಿ ೮ ವಿದ್ಯಾರ್ಥಿಗಳು ಮತ್ತು ಸಿ+ ಶ್ರೇಣಿಯಲ್ಲಿ ೨ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
     ತೇಜಸ್ವಿನಿ ಎಸ್ ಚಿಕ್ಕಮಠ್-೬೨೦, ಬೆಳ್ಳಿ ಬಿ.ಯು-೬೧೮, ಚೇತನ .ಟಿ-೬೧೪, ನಿಸರ್ಗ .ಆರ್-೬೦೬, ನಕ್ಷತ್ರ .ಆರ್-೬೦೫, ಗಗನ್. ಎಂ-೬೦೪, ಚಂದನ ಬಿ.ಎನ್-೬೦೩, ಸೋಹನ್ ಕುಮಾರ್ .ಆರ್-೬೦೦, ಭಾವನ .ಎನ್-೫೯೮ ಮತ್ತು ಗೋಕುಲ್ ಆದಿತ್ಯ ಬಿ.ಜೆ-೫೯೬ ಅಂಕಗಳನ್ನು ಪಡೆದುಕೊಂಡಿದ್ದಾರೆ.
      ವಿಇಎಸ್ ವಿದ್ಯಾಸಂಸ್ಥೆ ಆಂಗ್ಲ ಮಾಧ್ಯಮ ಶೇ.೮೧, ಕನ್ನಡ ಮಾಧ್ಯಮ ಶೇ.೭೨ ಫಲಿತಾಂಶ:
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗ ಶೇ.೮೧ ಹಾಗೂ ಕನ್ನಡ ಮಾಧ್ಯಮ ವಿಭಾಗ ಶೇ.೭೨ರಷ್ಟು ಫಲಿತಾಂಶ ಪಡೆದುಕೊಂಡಿವೆ.
     ಆಂಗ್ಲ ಮಾಧ್ಯಮ ವಿಭಾಗದಲ್ಲಿ ೭ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೨೨ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ೮ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ವಿಕಾಸ ಬಿ.ಎಂ-೫೯೭, ಪೂಜಾ .ಸಿ-೫೮೭, ಹಾಜ್ ಉರ್ ರಹಮಾನ್-೫೭೧, ಕೋಮಲ್‌ಸಿಂಗ್-೫೬೫, ಮೋನಿಶಾ-೫೬೨, ರಮ್ಲಾ ಮೊಹಿಬ್-೫೫೯ ಮತ್ತು ವಿಜೀಯಾ ತಸ್ಲೀಮ್-೫೪೯ ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
     ಕನ್ನಡವಿಭಾಗದಲ್ಲಿ ಎಂ. ಮುಸ್ಕಾನ್-೫೦೦, ಸೈಯದ್ ಜೈಬಾ ಜೋಹರ್-೪೭೪, ಮೌನಲಿಸ್-೪೫೮, ವರ್ಷಣಿ .ಎನ್-೪೫೭ ಮತ್ತು ಪ್ರಿಯದರ್ಶಿನಿ-೪೫೭ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ಪದನಿಮಿತ್ತ ಛೇರ‍್ಮನ್ ಎನ್. ಕೃಷ್ಣಪ್ಪ ಮತ್ತು ಪದಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
    ಈಶ್ವರಮ್ಮ ಪ್ರೌಢಶಾಲೆಗೆ ಶೇ. ೯೩.೯೬ ಫಲಿಶಾಂಶ:
ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಈಶ್ವರಮ್ಮ ಪ್ರೌಢಶಾಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೩.೯೬ ಫಲಿತಾಂಶ ಪಡೆದುಕೊಂಡಿದೆ.
      ಒಟ್ಟು ೧೧೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,  ಅತ್ಯುನ್ನತ ಶ್ರೇಣಿಯಲ್ಲಿ ೨೬ ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ  ೭೬ ವಿದ್ಯಾರ್ಥಿಗಳು ಹಾಗು ದ್ವಿತೀಯ ದರ್ಜೆಯಲ್ಲಿ ೭ ವಿದ್ಯಾರ್ಥಿಗಳು ಒಟ್ಟು  ೧೦೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
   ಧನುಷ್-೫೯೮, ಸುಧೀಂದ್ರ .ಪಿ-೫೯೫, ಚರಿತ ಎಂ.-೫೯೧, ಶಿವಾನಿ ಟಿ.ಆರ್-೫೯೩, ಲಿಖಿತರಾಜ್-೫೯೦, ಅಮಿತ್‌ಗೌಡ-೫೮೭, ಅಂಕಿತಾ ಎಂ.-೫೭೮, ಸೂರಜ್ .ವಿ-೫೬೪, ಕವನ .ಎಸ್-೫೭೬, ತಮನ್ನ-೫೭೫, ಶ್ರೇಯಸ್ .ವಿ-೫೭೨ ಮತ್ತು ಭೂಮಿಕ ಎಂ.ಡಿ-೫೬೫ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
    ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾಕರ ಬೀರಯ್ಯ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.



ವಿಐಎಸ್‌ಎಲ್ ಅಧಿಕಾರಿಗಳೊಂದಿಗೆ ಸಂಸದ ಬಿ.ವೈ ರಾಘವೇಂದ್ರ ಚರ್ಚೆ

ನಿವೃತ್ತ ಕಾರ್ಮಿಕರ ಬೇಡಿಕೆ ಈಡೇರಿಸಲು ಮನವಿ


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಅಧಿಕಾರಿಗಳೊಂದಿಗೆ ಸೋಮವಾರ ಸಂಸದ ಬಿ.ವೈ ರಾಘವೇಂದ್ರ ಚರ್ಚೆ ನಡೆಸಿದರು.
ಭದ್ರಾವತಿ, ಆ. ೧೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸೋಮವಾರ ಸಂಸದ ಬಿ.ವೈ ರಾಘವೇಂದ್ರ ಚರ್ಚಿಸಿದರು. ಖಾಯಂ ಹಾಗು ನಿವೃತ್ತ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದರು.
  ನಿವೃತ್ತ ಕಾರ್ಮಿಕರು ವಾಸಿಸುತ್ತಿರುವ ಮನೆಗಳಿಗೆ ಬಾಡಿಗೆ ಹೆಚ್ಚಳ ಮಾಡಿರುವುದನ್ನು ಕಡಿತಗೊಳಿಸುವುದು. ಅಲ್ಲದೆ ೨೦೧೮ರ ನಂತರ ನಿವೃತ್ತಿ ಹೊಂದಿರುವ ಕಾರ್ಮಿಕರಿಂದ ಪಡೆಯಲಾಗಿರುವ ಹೆಚ್ಚಿನ ಮೊತ್ತದ ಭದ್ರತಾ ಠೇವಣಿಯನ್ನು ಶೇ.೫೦ರಷ್ಟು ಕಡಿತಗೊಳಿಸುವುದು ಸೇರಿದಂತೆ ಇತ್ಯಾದಿ ಬೇಡಿಕೆ ಈಡೇರಿಸಲು ಕೋರಿದರು.
ಪ್ರಸ್ತುತ ಕಾರ್ಖಾನೆಯ ಉತ್ಪಾದನೆಯಲ್ಲಿ ಯಾವುದೇ ರೀತಿ ವ್ಯತ್ಯಯವಾಗದಂತೆ ಮುನ್ನಡೆಸಿಕೊಂಡು ಹೋಗಲು ಅಗತ್ಯವಿರುವ ಸುಮಾರು ೧೯.೫ ಕೋ. ರು. ಹಣ ಬಿಡುಗಡೆಗೆ ಸಂಬಂಧಿಸಿದಂತೆ ಈಗಾಗಲೇ ಉಕ್ಕು ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಹಿನ್ನಲೆಯಲ್ಲಿ ಖಾಯಂ ಕಾರ್ಮಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕಾರ್ಖಾನೆಯ ಕಾರ್ಮಿಕ ಮುಖಂಡರಿಗೆ ಸಂಸದರು ಭರವಸೆ ನೀಡಿದರು.
         ಎಂಪಿಎಂ ಕಾರ್ಖಾನೆ ಪುನಾರಂಭ :
     ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯನ್ನು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಪುನಃ ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.  ಅಲ್ಲದೆ ಈ ಹಿಂದೆ ೨೦೧೦-೧೧ನೇ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ್ದ ಸುಮಾರು ೩೫೦೦ ಕಬ್ಬು ಬೆಳೆಗಾರರಿಗೆ ಬರಬೇಕಾದ ಪ್ರತಿ ಟನ್‌ಗೆ ಹೆಚ್ಚುವರಿ ೧೦೦ ರು. ಕೊಡುವ ಪ್ರಸ್ತಾವನೆ ಸಹ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಬೆಳೆಗಾರರ ಬಾಕಿ ಹಣ ಬಿಡುಗಡೆಯಾಗಲಿದೆ ಎಂದು ಸಂಸದರು ಕಾರ್ಮಿಕ ಮುಖಂಡರಿಗೆ ತಿಳಿಸಿದರು.
ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್, ನಗರಾಡಳಿತಾಧಿಕಾರಿ ವಿಶ್ವನಾಥ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಕಾರ್ಯದರ್ಶಿ ಅಮೃತ್, ನಿವೃತ್ತ ಕಾರ್ಮಿಕ ಮುಖಂಡರುಗಳಾದ ಹನುಮಂತರಾವ್ ರಾಮಲಿಂಗಯ್ಯ, ನರಸಿಂಹಮೂರ್ತಿ, ಎಸ್.ಎನ್ ಬಾಲಕೃಷ್ಣ, ಜೆ.ಎನ್ ಚಂದ್ರಹಾಸ, ಬಿಜೆಪಿ ಮುಖಂಡರಾದ ಜಿ. ಧರ್ಮಪ್ರಸಾದ್, ತಾಲೂಕು ಮಂಡಲ ಅಧ್ಯಕ್ಷ  ಎಂ. ಪ್ರಭಾಕರ್, ವಿ. ಕದಿರೇಶ್, ಮಂಗೋಟೆ ರುದ್ರೇಶ್, ಕೆ. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಳೆಗೆ ಮನೆ ಗೋಡೆ ಕುಸಿತ : ದುರಸ್ತಿಗೆ ಮನವಿ


ಭದ್ರಾವತಿ ತಾಲೂಕಿನ ತಾವರೆಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳೇನಹಳ್ಳಿ ಗ್ರಾಮದ ಕೃಷ್ಣನಾಯ್ಕ ಎಂಬುವರ ಮನೆಯ ಗೋಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದು ಬಿದ್ದಿರುವುದು.
ಭದ್ರಾವತಿ, ಆ. ೧೦: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ೪ ದಿನಗಳ ಹಿಂದೆ ತಾಲೂಕಿನ ತಾವರೆಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳೇನಹಳ್ಳಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿರುವ  ಘಟನೆ ನಡೆದಿದೆ.
ಕೃಷ್ಣನಾಯ್ಕ ಎಂಬುವರಿಗೆ ಸೇರಿದ ಮನೆ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಮನೆಯ ಇತರೆ ಗೋಡೆಗಳು ಸಹ ಬೀಳುವ ಹಂತದಲ್ಲಿವೆ. ಮನೆ ಗೋಡೆ ಕುಸಿದಿರುವ ಬಗ್ಗೆ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಗಮನಕ್ಕೆ ತರಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಡ ಕುಟುಂಬದವರು ಅಳಲು ವ್ಯಕ್ತಪಡಿಸಿದ್ದಾರೆ.
ತಕ್ಷಣ ಬಡ ಕುಟುಂಬದವರ ನೆರವಿಗೆ ಧಾವಿಸಿ ಮನೆ ಗೋಡೆ ದುರಸ್ತಿಪಡಿಸುವ ಜೊತೆಗೆ ವಾಸಿಸಲು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.

ರ‍್ಯಾಮ್ಕೋಸ್ ಅರಹತೊಳಲು ಶಾಖೆ ವತಿಯಿಂದ ಕೊರೋನಾ ವಾರಿರ್ಯಸ್‌ಗೆ ಸನ್ಮಾನ

ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ(ರ‍್ಯಾಮ್ಕೋಸ್)ದ ಭದ್ರಾವತಿ ತಾಲೂಕಿನ ಅರಹತೊಳಲು ಕೈಮರ ಶಾಖೆ ವತಿಯಿಂದ ಕೊರೋನಾ ವಾರಿರ್ಯಸ್‌ಗಳಾದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಪ್ರಶಂಸಿ ಪ್ರೋತ್ಸಾಹ ಧನ ಸಹಾಯದೊಂದಿಗೆ ಅಭಿನಂದಿಸಲಾಯಿತು.
ಭದ್ರಾವತಿ, ಆ. ೧೦: ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ(ರ‍್ಯಾಮ್ಕೋಸ್)ದ ತಾಲೂಕಿನ ಅರಹತೊಳಲು ಕೈಮರ ಶಾಖೆ ವತಿಯಿಂದ ಕೊರೋನಾ ವೈರಸ್ ನಿರ್ಮೂಲನೆಗೆ ಶ್ರಮಿಸುತ್ತಿರುವ ಕೊರೋನಾ ವಾರಿರ್ಯಸ್‌ಗಳಾದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಪ್ರಶಂಸಿ ಪ್ರೋತ್ಸಾಹ ಧನ ಸಹಾಯದೊಂದಿಗೆ ಅಭಿನಂದಿಸಲಾಯಿತು.
ಆಶಾ ಕಾರ್ಯಕರ್ತೆಯರಾದ ಎಂ. ಭಾರತಮ್ಮ. ಸುಕನ್ಯ ಮತ್ತು ವಿಜಯಕುಮಾರಿ ಅವರಿಗೆ ತಲಾ ೩ ಸಾವಿರ ರು. ಪ್ರೋತ್ಸಾಹ ಧನ ನೀಡುವ ಮೂಲಕ ಸನ್ಮಾನಿಸಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಎಂ.ಪರಮೇಶ್ವರಪ್ಪ, ಆಡಳಿತಾಧಿಕಾರಿ ಎಂ. ವಿರುಪಾಕ್ಷಪ್ಪ,  ಶಾಖಾ ವ್ಯವಸ್ಥಾಪಕ ಡಿ. ಶಂಕರಮೂರ್ತಿ, ಸಿಬ್ಬಂದಿ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ವಮಂಗಳಮ್ಮ ನಿಧನ

ಸರ್ವಮಂಗಳಮ್ಮ
ಭದ್ರಾವತಿ, ಆ. ೧೦: ಹಳೇನಗರದ ಹನುಮಂತನಗರದ ನಿವಾಸಿ ಸರ್ವಮಂಗಳಮ್ಮ ಭಾನುವಾರ ನಿಧನ ಹೊಂದಿದರು.
ಹಳೇನಗರದ ವೀರಶೈವ ಸಭಾಭವವನದ ವ್ಯವಸ್ಥಾಪಕ ಅಶೋಕ್ ಹಾಗು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ವಾಹನ ಚಾಲಕ ಗಿರೀಶ್ ಇಬ್ಬರು ಪುತ್ರರು ಸೇರಿದಂತೆ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಬಾಳೆಹೊನ್ನೂರು ಜಗದ್ಗುರುಗಳು ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.