Wednesday, April 19, 2023

ಜೆಡಿಯು ಅಭ್ಯರ್ಥಿಯಾಗಿ ೨ನೇ ಬಾರಿಗೆ ಶಶಿಕುಮಾರ್ ಎಸ್. ಗೌಡ ನಾಮಪತ್ರ ಸಲ್ಲಿಕೆ

ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆಗೆ ಸಂಯುಕ್ತ ಕರ್ನಾಟಕ ಜನತಾದಳ(ಜೆಡಿಯು) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನಾಮಪತ್ರ ಸಲ್ಲಿಸಿದರು. 
    ಭದ್ರಾವತಿ, ಏ. ೧೯ : ವಿಧಾನಸಭಾ ಚುನಾವಣೆಗೆ ಸಂಯುಕ್ತ ಕರ್ನಾಟಕ ಜನತಾದಳ(ಜೆಡಿಯು) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ನಾಮಪತ್ರ ಸಲ್ಲಿಸಿದರು.
    ಶಶಿಕುಮಾರ್ ಎಸ್ ಗೌಡ್‌ರವರು ಬೆಳಿಗ್ಗೆ ಮಿನಿವಿಧಾನಸೌಧ ತಾಲೂಕು ಕಛೇರಿಗೆ ತೆರಳಿ ಚುನಾವಣಾಧಿಕಾರಿ ರವಿಚಂದ್ರನಾಯಕರವರಿಗೆ ನಾಮಪತ್ರ ಸಲ್ಲಿಸಿದರು.
    ಜೆಡಿಯು ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್, ತಾಲೂಕು ಘಟಕದ ಅಧ್ಯಕ್ಷ ರಘು ಸಂಕ್ಲಿಪುರ, ದಿವ್ಯಶ್ರೀ ಶಶಿಕುಮಾರ್ ಎಸ್ ಗೌಡ ಉಪಸ್ಥಿತರಿದ್ದರು.
    ಕೊಳಚೆ ಪ್ರದೇಶದ ನಿವಾಸಿ ಶಶಿಕುಮಾರ್ :  
    ಸುಮಾರು ೪೧ ವರ್ಷ ವಯಸ್ಸಿನ ಜನ್ನಾಪುರ ಹಾಲಪ್ಪ ಶೆಡ್ ಕೊಳಚೆ ಪ್ರದೇಶದ ನಿವಾಸಿ ಶಶಿಕುಮಾರ್ ಎಸ್. ಗೌಡ ೨ನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ಹಲವಾರು ವರ್ಷಗಳಿಂದ ಕೊಳಚೆ ಪ್ರದೇಶದಲ್ಲಿ ವಾಸವಿದ್ದರೂ ಇನ್ನೂ ಹಕ್ಕುಪತ್ರ ನೀಡಿಲ್ಲ. ಈ ಹಿನ್ನಲೆಯಲ್ಲಿ ಇವರ ಹೆಸರಿನಲ್ಲಿ ಸ್ವಂತ ಮನೆ ಇಲ್ಲ. ಇಬ್ಬರು ಮಕ್ಕಳಿದ್ದು, ಇವರು ೫೦ ಸಾವಿರ ರು. ನಗದು ಹೊಂದಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ೧ ಸಾವಿರು ರು. ಹಣವಿದ್ದು, ಉಳಿದಂತೆ ಯಾವುದೇ ನಿವೇಶನ, ಜಮೀನು ಹೊಂದಿಲ್ಲ. ಇವರ ಬಳಿ ಸುಮಾರು ೨೫ ಗ್ರಾಂ ಚಿನ್ನಾಭರಣವಿದೆ. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದಾರೆ.

ವಿಧಾನಸಭಾ ಚುನಾವಣೆ ೫ನೇ ದಿನ : ೩ ಪಕ್ಷೇತರರ ನಾಮಪತ್ರ

ಜಾನ್‌ಬೆನ್ನಿ, ಕೆ. ಮೋಹನ್ ಮತ್ತು ಮಾರ್ವಿನ್ ಅಕ್ಕಿದಾಸರಿ

ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆಗೆ ೨ನೇ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಾನ್ ಬೆನ್ನಿ ಬುಧವಾರ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ಏ. ೧೯: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ೫ನೇ ದಿನವಾದ ಬುಧವಾರ ಒಟ್ಟು ೩ ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.
    ಪಕ್ಷೇತರ ಅಭ್ಯರ್ಥಿಯಾಗಿ ನಗರಸಭೆ ವ್ಯಾಪ್ತಿಯ ಸಿದ್ದಾಪುರ ನಿವಾಸಿ ಜಾನ್‌ಬೆನ್ನಿ ಬೆಳಿಗ್ಗೆ ಮಿನಿವಿಧಾನಸೌಧ ತಾಲೂಕು ಕಛೇರಿಗೆ ಪತ್ನಿ ಹಾಗು ಕುಮಾರ್, ಗೋಪಾಲ್ ಮತ್ತು ಕೃಪಾದಾನಂ ಅವರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
    ಜಾನ್ ಬೆನ್ನಿ ಆಸ್ತಿ ಮೌಲ್ಯ ೧೭ ಲಕ್ಷ ರು. :
    ೨ ಬಾರಿಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿರುವ ೫೪ ವರ್ಷ ವಯಸ್ಸಿನ ಜಾನ್ ಬೆನ್ನಿ ಡ್ರೈವಿಂಗ್ ಸ್ಕೂಲ್ ಮಾಲೀಕರಾಗಿದ್ದು, ವಾಯು ಮಾಲಿನ್ಯ ಹೊಗೆ ತಪಾಸಣೆ ಕೇಂದ್ರ ಸಹ ಹೊಂದಿದ್ದಾರೆ. ಸಿದ್ದಾಪುರದಲ್ಲಿ ಒಂದು ಮನೆ, ಇವರ ಹೆಸರಿನಲ್ಲಿ ೪ ಕಾರುಗಳಿದ್ದು, ಇವರ ಬಳಿ ೫೦ ಸಾವಿರ ರು. ನಗದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ೮೪,೭೯೭ ರು. ಹೊಂದಿದ್ದಾರೆ. ಅಲ್ಲದೆ ೭೦ ಗ್ರಾಂ ಚಿನ್ನಾಭರಣವಿದೆ. ಒಟ್ಟು ೧೭,೨೨,೦೦೦ ರು. ಆಸ್ತಿ ಮೌಲ್ಯ ಹೊಂದಿದ್ದಾರೆ. ಇವರ ದ್ವಿತೀಯ ಪಿಯುಸಿ ವಿಜ್ಞಾನ ವ್ಯಾಸಂಗ ಮಾಡಿದ್ದಾರೆ.
    ನಗರದ ಹೊಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥ ಸಾಮಿಲ್ ನಿವಾಸಿ ಕೆ. ಮೋಹನ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಬಿ. ರಮೇಶ್, ಗಣೇಶ್, ಹೇಮಂತ್ ಕುಮಾರ್ ಉಪಸ್ಥಿತರಿದ್ದರು.
    ಕೆ. ಮೋಹನ್ ಪಿಯುಸಿ ವಿದ್ಯಾಭ್ಯಾಸ :
    ಕೆ. ಮೋಹನ್ ಅವರ ಕುಟುಂಬದ ಆಸ್ತಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಈ ಹಿನ್ನಲೆಯಲ್ಲಿ ಯಾವುದೇ ಆಸ್ತಿ ವಿವರ ನಮೂದಿಸಿಲ್ಲ. ಕೆ. ಮೋಹನ್ ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
ಉಳಿದಂತೆ ಮಾರ್ವಿನ್ ಅಕ್ಕಿದಾಸರಿ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ಸುರೇಶ್ ಆಚಾರ್ ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಕಿ ಕೆ. ಮೋಹನ್ ನಾಮಪತ್ರ  ಸಲ್ಲಿಸಿದರು.

ಓಸಿ, ಮಟ್ಕಾ ಜೂಜಾಟ : ಪ್ರಕರಣ ದಾಖಲು


    ಭದ್ರಾವತಿ, ಏ. ೧೯: ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಮನೆಯೊಂದರ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಓಸಿ, ಮಟ್ಕಾ ಜೂಜಾಟ ಸಂಬಂಧ ಪ್ರಕರಣ ದಾಖಲಾಗಿದೆ.
    ಹಣ ಪಣವಾಗಿ ಕಟ್ಟಿಸಿಕೊಂಡು ಒಂದು ಚೀಟಿಯಲ್ಲಿ ಓ.ಸಿ ಅಂಕೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ವಾಹನ ಹಿಂದಿಕ್ಕಲು ಅಪಘಾತ : ದೂರು ದಾಖಲು

    ಭದ್ರಾವತಿ, ಏ. ೧೯ : ಟಾಟಾ ಯೋಧ ಗೂಡ್ಸ್ ವಾಹನ ಚಾಲಕ ಮುಂದೆ ಚಲಿಸುತಿದ್ದ ವಾಹನ ಹಿಂದಿಕ್ಕಲು(ಓವರ್‌ಟೇಕ್) ಹೋಗಿ ಮುಂದೆ ಬರುತ್ತಿದ್ದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವ ಘಟನೆ ನಡೆದಿದೆ.
    ನಗರದ ಬೈಪಾಸ್ ರಸ್ತೆಯಲ್ಲಿ ಏ.೧೫ರಂದು ಸಂಜೆ ೫ ಗಂಟೆ ಸಮಯದಲ್ಲಿ ಟಾಟಾ ಯೋಧ ಗೂಡ್ಸ್ ವಾಹನ ಚಾಲಕ ಗಿರೀಶ್ ಅಪಘಾತಪಡಿಸಿದ್ದು, ವಾಹನದಲ್ಲಿ ಉಳಿತುಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡಿದ್ದು, ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ವಾಹನಗಳು ಜಖಂಗೊಂಡಿವೆ. ಈ ಸಂಬಂಧ ವರಣ್ ಎಂಬುವರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.