Saturday, August 1, 2020

ಕೊರೋನಾ ಸೋಂಕು : ಒಂದೇ ದಿನ ೩೦ ಪ್ರಕರಣ ಪತ್ತೆ

ಭದ್ರಾವತಿ, ಆ. ೧: ತಾಲೂಕಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಸ್ಪೋಟಗೊಳ್ಳುತ್ತಿದ್ದು, ಶನಿವಾರ ಮತ್ತಷ್ಟು ಸ್ಪೋಟಗೊಂಡಿದೆ. ಒಂದೇ ದಿನ ೩೦ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. 
ಶುಕ್ರವಾರ ೧೮ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ೩೦ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಇಷ್ಟೊಂದು ಪ್ರಕರಣ ಪತ್ತೆಯಾಗಿರಲಿಲ್ಲ. ಈ ನಡುವೆ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈಗಾಗಲೇ ಬಹುತೇಕ ಪ್ರದೇಶಗಳು ಸೀಲ್‌ಡೌನ್ ಆಗಿವೆ. ಇದರಿಂದಾಗಿ ನಿವಾಸಿಗಳು ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. 
ಅಲ್ಲದೆ ಗ್ರಾಮೀಣ ಭಾಗದಲ್ಲೂ ಸೋಂಕು ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ಸಹ ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕು ಆಡಳಿತ, ನಗರಸಭೆ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೋಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿವೆ. ಆದರೂ ಸಹ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. 

ಚೈನ್ ಲಿಂಕ್ ಮೂಲಕ ವಂಚನೆ ಪ್ರಕರಣ : ದೂರು ದಾಖಲು

ಭದ್ರಾವತಿ, ಆ. ೧:  ಚೈನ್ ಲಿಂಕ್ ಮೂಲಕ ಅನಧಿಕೃತವಾಗಿ ಔಷಧಿ ಉತ್ಪನ್ನಗಳನ್ನು ಮಾರಾಟ ಮಾಡುವ ಜೊತೆಗೆ ಸದಸ್ಯರಿಗೆ ವಂಚನೆ ಮಾಡುತ್ತಿರುವ ಕಂಪನಿಯೊಂದರ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
ಕೆಂಚೇನಹಳ್ಳಿ ಮಾವಿನಕೆರೆ ನಿವಾಸಿ ಸುರೇಶ ಎಂಬುವರು ದೂರು ನೀಡಿದ್ದು, ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರಸ್ತೆ, ನಂದಿನಿ ಬೇಕರಿ ಮುಂಭಾಗ ಎಸ್‌ಡಬ್ಲ್ಯೂಎಸ್ ಮಾರ್ಕೇಟಿಂಗ್ ಸಲೂಷನ್ಸ್ ಪ್ರೈ.ಲಿ. ಸ್ಕೈ ವೇ ಸ್ವಾರ್ ಎಂಬ ಹೆಸರಿನ ಕಂಪನಿಯ ಔಷಧಿ ಎಂದು ಹೇಳಿಕೊಂಡು ಯಾವುದೇ ಪರವಾನಿಗೆ ಪಡೆಯದೇ ಔಷಧಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಸದಸ್ಯರಿಗೆ ಚೈನ್ ಲಿಂಕ್ ಮೂಲಕ ದಿನಕ್ಕೆ ೫,೦೦೦ ರು. ಸಂಭಾವನೆ ಬರುವುದಾಗಿ ನಂಬಿಸಿದ್ದು, ಪ್ರತಿ ಗ್ರಾಹಕರಿಂದ ೩,೦೦೦ ರು. ಹಣ ಪಡೆಯುವಂತೆ ಸೂಚಿಸುತ್ತಿದೆ. ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಐ.ಡಿ ನೀಡುತ್ತಿದ್ದು, ಆದರೆ ಯಾರಿಗೂ ಸಹ ಚೈನ್‌ಲಿಂಕ್ ಮೂಲಕ ಹಣ ಸಂದಾಯವಾಗಿರುವುದಿಲ್ಲ. ಈ ನಡುವೆ ಕಂಪನಿ ನೀಡುತ್ತಿರುವ ಔಷಧಿ ಉತ್ಪನ್ನಗಳು ಬಳಕೆದಾರರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ಕುರಿತು ದೂರುಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ. 
ಹಳ್ಳಿಕೆರೆ ಬಾರಂದೂರು ನಿವಾಸಿ ಮಂಜುನಾಥ, ಶಿವಮೊಗ್ಗ ಎಸ್‌ಡಬ್ಲ್ಯೂಎಸ್ ಮಾರ್ಕೇಟಿಂಗ್ ಸಲೂಷನ್ಸ್ ಪ್ರೈ.ಲಿ. ಸಿಇಓ ಮತ್ತು ಎಂ.ಡಿ ಶಶಿಧರ ಹಾಗೂ ಶಿವಮೊಗ್ಗ ಮಲವಗೊಪ್ಪ ಯಲವಟ್ಟಿ ಗ್ರಾಮದ ನಿವಾಸಿ ವಿನೂತ ಎಂಬುವರ ವಿರುದ್ಧ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಈ ಬಾರಿ ಸಹ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ

ಮೆರವಣಿಗೆ ಸೇರಿ ಯಾವುದೇ ಆಡಂಬರವಿಲ್ಲ, ೯ನೇ ದಿನ ಪ್ರತಿಷ್ಠಾಪನೆ : ವಿ. ಕದಿರೇಶ್ 

ಭದ್ರಾವತಿ, ಆ. ೧: ಪ್ರತಿಷ್ಠಿತ ಹಿಂದೂಪರ ಸಂಘಟನೆಗಳಲ್ಲಿ ಒಂದಾಗಿರುವ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಈ ಬಾರಿ ಸಹ ವಿನಾಯಕ ಚತುರ್ಥಿ ಅಂಗವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಲಿದೆ ಎಂದು ಸಮಿತಿ ಅಧ್ಯಕ್ಷ, ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್ ತಿಳಿಸಿದರು.
ಅವರು ಸಮಿತಿಯ ಸರ್ವ ಸದಸ್ಯರ ಹಾಗೂ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಸಂಪ್ರದಾಯದಂತೆ ಸಮಿತಿ ವತಿಯಿಂದ ಈ ಬಾರಿ ಸಹ ಸರ್ಕಾರದ ನಿಯಮಗಳನ್ನು ಪಾಲಿಸಿ  ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ ಯಾವುದೇ ಆಡಂಬರವಿಲ್ಲದೆ ಸರಳವಾಗಿ ವಿನಾಯಕ ಚತುರ್ಥಿ ಆಚರಿಸಲಾಗುವುದು ಎಂದರು. 
ಶಿವಮೊಗ್ಗ ಮಾದರಿಯಂತೆ ೯ ದಿನಗಳ ಕಾಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ತಾಲೂಕು ಆಡಳಿತ, ನಗರಸಭೆ ಮತ್ತು ಪೊಲೀಸ್ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ಪಾಲಿಸಲಾಗುವುದು. ಈ ಬಾರಿ ಮೆರವಣಿಗೆಯನ್ನು ರದ್ದುಪಡಿಸಲಾಗಿದ್ದು, ಸರಳವಾಗಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಸರ್ಕಾರದ ಇಲಾಖೆ ಸೇರಿದಂತೆ ಸಮಸ್ತ ನಾಗರಿಕರು ಸಹಕರಿಸಬೇಕೆಂದು ಮನವಿ ಮಾಡಿದರು. 

ಸರ್ಕಾರಿ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸಕ ಡಾ. ಡಿ.ಎಸ್ ಶಿವಪ್ರಕಾಶ್ ನೇಮಕ

ಭದ್ರಾವತಿ, ಆ.೧ : ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಹಳ  ವರ್ಷಗಳಿಂದ ಖಾಲಿ ಉಳಿದಿದ್ದ ಶಸ್ತ್ರ ಚಿಕಿತ್ಸಕರ ಹುದ್ದೆಯನ್ನು ಸರ್ಕಾರ ಭರ್ತಿ ಮಾಡಿದೆ. 
೧೦೦ ಹಾಸಿಗೆಯುಳ್ಳ ತಾಲೂಕಿನ ಏಕೈಕ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ ಸಾವಿರಾರು ಮಂದಿ ರೋಗಿಗಳು ಬಂದು ಹೋಗುತ್ತಾರೆ. ಕಡು ಬಡವರು, ಸಾಮಾನ್ಯ ವರ್ಗದವರು ಹೆಚ್ಚಾಗಿ ಬರುವ ಆಸ್ಪತ್ರೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿಗಳು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ನಡುವೆ ಅತಿ  ಮುಖ್ಯವಾಗಿ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸಕರನ್ನು ನೇಮಕಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. 
ಇದೀಗ ಸರ್ಕಾರ ಜು.೩೦ರಂದು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಡಿ.ಎಸ್ ಶಿವಪ್ರಕಾಶ್‌ರವರನ್ನು ವರ್ಗಾವಣೆಗೊಳಿಸಿ ಖಾಲಿ ಹುದ್ದೆಯನ್ನು ಭರ್ತಿ ಮಾಡಿದೆ.