Thursday, July 27, 2023

ರಸಪ್ರಶ್ನೆ ಸ್ಪರ್ಧೆಯಲ್ಲಿ ಬಿಜಿಎಸ್‌ ಶಾಲೆ ಮಕ್ಕಳಿಗೆ ಬಹುಮಾನ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಸಹ್ಯಾದ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
    ಭದ್ರಾವತಿ, ಜು. ೨೭: ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಸಹ್ಯಾದ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
    ಜಾವಳ್ಳಿ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ಶಿವಮೊಗ್ಗ ಕ್ಲಸ್ಟರ್‌ ಸಿಬಿಎಸ್‌ಇ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಜಿಎಸ್ ಶಾಲೆ ೮ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಹಾಗೂ ೧೦ನೇ ತರಗತಿ ವಿದ್ಯಾರ್ಥಿಗಳಾದ ಶ್ರೇಯಾ ಎನ್ ಗೌಡ ಮತ್ತು ಪಿ. ಮನ್ವಿತ್  ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
    ವಿದ್ಯಾಲಯದ ಆಡಳಿತ ಮಂಡಳಿಯವರು,  ಶೈಕ್ಷಣಿಕ ಸಲಹೆಗಾರರು, ಆಡಳಿತಾಧಿಕಾರಿ ಬಿ. ಜಗದೀಶ್‌, ಪ್ರಾಂಶುಪಾಲರಾದ ಡಾ. ಸಿ. ಅಮುದಾ, ಮುನಿರಾಜ್‌, ಉಪಪ್ರಾಂಶುಪಾಲ ಎ.ಎಂ ವೀರರಾಜೇಂದ್ರ ಸ್ವಾಮಿ ಹಾಗೂ ಮುಖ್ಯೋಪಾಧ್ಯಾಯಿನಿ  ಕೆ.ಎನ್‌ ದಿವ್ಯ ಬಹುಮಾನ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.  

ಆಭರಣ, ನಗದು ಕಳವು

    ಭದ್ರಾವತಿ, ಜು. ೨೭: ಮನೆಯೊಂದರ ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ತಡವಾಗಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
    ಶ್ರೀರಾಮನಗರದ ನಿವಾಸಿ ಮಂಜುಳಾರವರ ಮನೆಯಲ್ಲಿ ಜು.೧೩ರಂದು ಕಳವು ಘಟನೆ ನಡೆದಿದೆ. ಅಂದು ಮಂಜುಳಾ ಹಾಗು ಇವರ ಪತಿ ಇಬ್ಬರೂ ಕೆಲಸಕ್ಕೆ ತೆರಳಿದ್ದು, ಮಗಳು ಕಾಲೇಜಿಗೆ ಹೋಗಿದ್ದು, ಮನೆಯಲ್ಲಿ ಇವರ ಅತ್ತೆ ಮಾತ್ರ ಇರುತ್ತಾರೆ.
    ಸಂಜೆ ಮನೆಗೆ ಬಂದು ಬೀರು ನೋಡಲಾಗಿದ್ದು, ಲಾಕರ್‌ನಲ್ಲಿ ಇಡಲಾಗಿದ್ದ ಸುಮಾರು ೮೯,೦೦೦ ರು. ಮೌಲ್ಯದ ಆಭರಣ ಹಾಗು ೮,೦೦೦ ರು. ನಗದು ಕಳುವಾಗಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮಂಜುಳಾರವರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ರಾಮನಕೊಪ್ಪ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿ ವಿತರಣೆ

ಹಲವಾರು ವರ್ಷಗಳಿಂದ ಭದ್ರಾವತಿ ನಗರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೇಸರಿ ಪಡೆ ವತಿಯಿಂದ  ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜು. ೨೭ : ಹಲವಾರು ವರ್ಷಗಳಿಂದ ನಗರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೇಸರಿ ಪಡೆ ವತಿಯಿಂದ  ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
    ತಾಲೂಕಿನ ರಾಮನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕೇಸರಿಪಡೆವತಿಯಿಂದ ಪ್ರಸಕ್ತ ಸಾಲಿಗೆ ಅಗತ್ಯವಿರುವಷ್ಟು ಪುಸ್ತಕ, ಪೆನ್ನು, ಪೆನ್ಸಿಲ್, ಶಾಲಾ ಬ್ಯಾಗ್ ಸೇರಿದಂತೆ ಲೇಖನ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.
     ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಗ್ರಾಮದ ಮುಖಂಡರು, ಶಾಲೆಯ ಮಕ್ಕಳ ಪೋಷಕರು, ಕೇಸರಿ ಪಡೆ ಪ್ರಮುಖರು ಉಪಸ್ಥಿತರಿದ್ದರು.
    ಈಗಾಗಲೇ ಕಳೆದ ಸುಮಾರು ೨ ತಿಂಗಳಿನಿಂದ ಕೇಸರಿಪಡೆವತಿಯಿಂದ ಹಲವು ಸರ್ಕಾರಿ ಶಾಲೆಗಳಲ್ಲಿ ಬಡಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಗಿದೆ.

ಕುಸ್ತಿ ಪಂದ್ಯಾವಳಿ : ಸರ್‌ಎಂವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಭದ್ರಾವತಿ ನ್ಯೂಟೌನ್‌ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ, ಜು. ೨೭:  ನಗರದ ನ್ಯೂಟೌನ್‌  ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಆಯನೂರಿನಲ್ಲಿ ಜರುಗಿದ ೨ ದಿನಗಳ ಕುವೆಂಪು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ಕಾಲೇಜಿನ ಒಟ್ಟು ೨೨ ವಿದ್ಯಾರ್ಥಿಗಳು ಭಾಗಹಸಿದ್ದು,  ಯಶ್ವಂತ್ (79 ಕೆ.ಜಿ ವಿಭಾಗದಲ್ಲಿ) ಚಿನ್ನದ ಪದಕ, ಪವನ್ (125 ಕೆಜಿ ವಿಭಾಗದಲ್ಲಿ) ಬೆಳ್ಳಿ ಪದಕ, ಮನು ಮಂತೋರೆ (92 ಕೆಜಿ ವಿಭಾಗದಲ್ಲಿ) , ಸೈಯದ್‌ ಕುರ್ ( 65 ಕೆ.ಜಿ ವಿಭಾಗದಲ್ಲಿ), ಸಾಹಿಲ್ ಸಾಬ್ (97 ಕೆಜಿ
ವಿಭಾಗದಲ್ಲಿ) ಮತ್ತು ಅಮೀನ್ ಉಲ್ಲಾ ಹುಸೇನ್ ( 97+  ಅಧಿಕ ಕೆಜಿ ವಿಭಾಗದಲ್ಲಿ) ಕಂಚಿನ ಪದಕ
ಪಡೆದುಕೊಂಡು ಕೀರ್ತಿ ತಂದಿದ್ದಾರೆ.
    ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್.ಹೊಸ ಳ್ಳೇರ್ ಹಾಗೂ ಡಾ. ಬಿ.ಎಂ ನಾಸಿರ್ ಖಾನ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್‌ ಶಿವರುದ್ರಪ್ಪ ಮತ್ತು ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರಾದ ಶಫಿ, ಎಲ್. ಯೋಗೇಶ್, ದೇವರಾಜ, ಜಿ.ಎನ್ ಅರಸ್, ಪಿ. ಎ ದಿಲೀಪ್ ಮತ್ತು ಅಧ್ಯಾಪಕ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.