Sunday, February 7, 2021

ಸುರಗಿತೋಪು ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

     ಭದ್ರಾವತಿ, ಫೆ. ೮: ಸುರಗಿತೋಪಿನ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಹಾಗು ಮುನೇಶ್ವರ ಸ್ವಾಮಿಯ ೫೧ನೇ ವರ್ಷದ ೨ ದಿನಗಳ ಜಾತ್ರಾ ಮಹೋತ್ಸವ ಸೋಮವಾರ ಆರಂಭಗೊಂಡಿತು.
     ಬೆಳಿಗ್ಗೆ ನಾಗರಕಟ್ಟೆಯಿಂದ ದೇವಸ್ಥಾನಕ್ಕೆ ಗಂಗೆ ತರುವ ಕಾರ್ಯಕ್ರಮ ಜರುಗಿತು. ಅಮ್ಮನವರಿಗೆ ಅಭಿಷೇಕ, ವಿಶೇಷ ಪೂಜೆ ಹಾಗು ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದ ಪ್ರಧಾನ ಅರ್ಚಕ ಮುರಳಿಧರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.
    ಫೆ.೯ರಂದು ಬೆಳಿಗ್ಗೆ ಪೊಲೀಸ್ ಉಮೇಶ್‌ರವರಿಂದ ಆ ದಿನದ ಪೂಜೆಗೆ ಚಾಲನೆ ನಡೆಯಲಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಎಂ. ಪ್ರಭಾಕರ್, ಜಿ. ಧರ್ಮಪ್ರಸಾದ್, ಎನ್. ಗೋಕುಲ್ ಕೃಷ್ಣನ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಮಧ್ಯಾಹ್ನ ೧ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಉತ್ಸವ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ನಗರಸಭೆ ಪೌರಾಯುಕ್ತ ಮನೋಹರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
 

ಭದ್ರಾವತಿ ಸುರಗಿತೋಪಿನ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಹಾಗು ಮುನೇಶ್ವರ ಸ್ವಾಮಿಯ ೫೧ನೇ ವರ್ಷದ ೨ ದಿನಗಳ ಜಾತ್ರಾ ಮಹೋತ್ಸವ ಸೋಮವಾರ ಆರಂಭಗೊಂಡಿತು.

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ : ನಗರ ಸಂಕೀರ್ತನಾ ಯಾತ್ರೆ

೭ ವರ್ಷದ ಬಾಲಕಿ ಜನ್ಮದಿನ ಅಂಗವಾಗಿ ನಿಧಿ ಸಮರ್ಪಣೆ

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಭಾನುವಾರ ಭದ್ರಾವತಿಯಲ್ಲಿ ನಗರ ಸಂಕೀರ್ತನಾ ಯಾತ್ರೆ ನಡೆಯಿತು.
     ಭದ್ರಾವತಿ, ಫೆ. ೭: ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಭಾನುವಾರ ನಗರ ಸಂಕೀರ್ತನಾ ಯಾತ್ರೆ ನಡೆಯಿತು.
     ಹೊಸಮನೆ ವೃತ್ತದಿಂದ ಸಂಜೆ ೪ ಗಂಟೆಗೆ ಆರಂಭಗೊಂಡ ಯಾತ್ರೆ ರಂಗಪ್ಪ ವೃತ್ತ, ಸಿ.ಎನ್ ರಸ್ತೆ, ಮಾಧವಚಾರ್ ವೃತ್ತ, ಬಿ.ಎಚ್ ರಸ್ತೆ, ಹಾಲಪ್ಪ ವೃತ್ತ, ಅಂಬೇಡ್ಕರ್ ವೃತ್ತ ಮೂಲಕ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದವರೆಗೆ ಸಾಗಿತು.  
   ಹಿರೇಮಠ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪ್ರಮುಖರಾದ ಹಾ. ರಾಮಪ್ಪ, ಬಿ.ಕೆ ಶ್ರೀನಾಥ್, ಮಂಗೋಟೆ ರುದ್ರೇಶ್, ಸುಬ್ರಮಣಿ, ನರಸಿಂಹಚಾರ್, ಚಂದ್ರಪ್ಪ, ಚನ್ನೇಶ್, ಗಣೇಶ್‌ರಾವ್, ಜಿ. ಆನಂದಕುಮಾರ್, ಎಂ. ಮಂಜುನಾಥ್, ಬಾರಂದೂರು ಪ್ರಸನ್ನ, ಅನ್ನಪೂರ್ಣ ಸಾವಂತ್, ಶೋಭಾ ಸೇರಿದಂತೆ ನೂರಾರು ಮಂದಿ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಕಾರ್ಯಕರ್ತರು ಪಾಲ್ಗೊಂಡಿದ್ದರು.


೭ ವರ್ಷದ ಬಾಲಕಿ ಸೃಷ್ಠಿ ಕಳೆದ ೨ ವರ್ಷಗಳಿಂದ ಸಂಗ್ರಹಿಸಿದ್ದ ಕಾಣಿಕೆ ಹುಂಡಿ ಹಣ ೮೨೮ ರು. ಗಳನ್ನು ತನ್ನ ಜನ್ಮದಿನದ ಅಂಗವಾಗಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಮರ್ಪಿಸುವ ಮೂಲಕ ಗಮನ ಸೆಳೆದಿದ್ದಾಳೆ.
      ೭ ವರ್ಷದ ಬಾಲಕಿ ಜನ್ಮದಿನ ಅಂಗವಾಗಿ ನಿಧಿ ಸಮರ್ಪಣೆ :
    ಹುತ್ತಾಕಾಲೋನಿ ನಿವಾಸಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಧುಸೂದನ್ ಹಾಗು ಶೃತಿ ದಂಪತಿ ಪುತ್ರಿ, ೭ ವರ್ಷದ ಬಾಲಕಿ ಸೃಷ್ಠಿ ಕಳೆದ ೨ ವರ್ಷಗಳಿಂದ ಸಂಗ್ರಹಿಸಿದ್ದ ಕಾಣಿಕೆ ಹುಂಡಿ ಹಣ ೮೨೮ ರು. ಗಳನ್ನು ತನ್ನ ಜನ್ಮದಿನದ ಅಂಗವಾಗಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಮರ್ಪಿಸುವ ಮೂಲಕ ಗಮನ ಸೆಳೆದಿದ್ದಾಳೆ.
ಅಭಿಯಾನದ ಕಾರ್ಯಕರ್ತರಾದ ಸುಬ್ರಮಣ್ಯ, ರಾಮನಾಥ್ ಬರ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಟೆನ್ನಿಸ್ ಬಾಲ್ ಸೆಮಿ ಸರ್ಕಲ್ ಕ್ರಿಕೆಟ್ ಟೂರ್ನಿಮೆಂಟ್ : ಡಿಆರ್‌ಸಿಸಿ ತಂಡಕ್ಕೆ ಮೊದಲ ಬಹುಮಾನ

ಕರ್ನಾಟಕ ಜನ ಸೈನ್ಯ ವತಿಯಿಂದ ಭದ್ರಾವತಿ ಹೊಸಸಿದ್ದಾಪುರ ಶ್ರೀ ಚೌಡೇಶ್ವರಿ ದೇವಸ್ಥಾನ ಸಮೀಪದ ಅಶ್ವಥ್ ಕಟ್ಟೆ ಖಾಲಿ ಜಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಮೊದಲ ವರ್ಷದ ಟೆನ್ನಿಸ್ ಬಾಲ್ ಸೆಮಿ ಸರ್ಕಲ್ ಕ್ರಿಕೆಟ್ ಟೂರ್ನಿಮೆಂಟ್‌ನಲ್ಲಿ ಮೊದಲ ಬಹುಮಾನ ಪಡೆದ ಡಿಆರ್‌ಸಿಸಿ ತಂಡಕ್ಕೆ ಟ್ರೋಫಿ ವಿತರಿಸಲಾಯಿತು.
    ಭದ್ರಾವತಿ, ಫೆ. ೭: ಕರ್ನಾಟಕ ಜನ ಸೈನ್ಯ ವತಿಯಿಂದ ಹೊಸಸಿದ್ದಾಪುರ ಶ್ರೀ ಚೌಡೇಶ್ವರಿ ದೇವಸ್ಥಾನ ಸಮೀಪದ ಅಶ್ವಥ್ ಕಟ್ಟೆ ಖಾಲಿ ಜಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಮೊದಲ ವರ್ಷದ ಟೆನ್ನಿಸ್ ಬಾಲ್ ಸೆಮಿ ಸರ್ಕಲ್ ಕ್ರಿಕೆಟ್ ಟೂರ್ನಿಮೆಂಟ್ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
    ಪಂದ್ಯಾವಳಿಯಲ್ಲಿ ಡಿಆರ್‌ಸಿಸಿ ತಂಡ ಮೊದಲ ಬಹುಮಾನ ಹಾಗು ಅಭಿಮನ್ಯ ಬಾಯ್ಸ್ ತಂಡ ೨ನೇ ಬಹುಮಾನ ಪಡೆದುಕೊಂಡವು. ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಕರ್ನಾಟಕ ಜನ ಸೈನ್ಯ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ, ವಿಶಿಷ್ಟವಾದ ಅಪರೂಪದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಪಂದ್ಯಾವಳಿಗಳು ಇನ್ನೂ ಹೆಚ್ಚಾಗಿ ನಡೆಯುವಂತಾಗಲಿ ಎಂದರು.
    ಪಂದ್ಯಾವಳಿಯಲ್ಲಿ ಸುಮಾರು ೧೪ ತಂಡಗಳು ಭಾಗವಹಿಸಿದ್ದವು. ಶನಿವಾರ ಪಂದ್ಯಾವಳಿಗೆ ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
   ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಜನ ಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಗೌರವಾಧ್ಯಕ್ಷ ಅನಿಲ್(ಬಾಬು), ಸಮಾಜ ಸೇವಕ ಅಶೋಕ್ ಕುಮಾರ್, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತದ್ದರು.

ಲೋಕ ಕಲ್ಯಾಣಕ್ಕಾಗಿ ಅರ್ಚಕರು ತಮ್ಮ ಸೇವೆಯನ್ನು ಮುಂದುವರೆಸಿ : ಎನ್.ಎಸ್ ಕೃಷ್ಣಮೂರ್ತಿ ಸೋಮಯಾಜಿ


ಭದ್ರಾವತಿ ಜನ್ನಾಪುರ ಮಹಾಗಣಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಧರ್ಮ ಜಾಗರಣ ಅರ್ಚಕರ ಮಹಾಸಭಾ ೧೮ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿಧ ದೇವಸ್ಥಾನಗಳ ಅರ್ಚಕರನ್ನು ಸನ್ಮಾನಿಸಿ ಗೌರವಿಸಲಾಯಿತು.
   ಭದ್ರಾವತಿ, ಫೆ. ೭: ಅರ್ಚಕರು ತಾವು ನಡೆಸಿಕೊಂಡು ಬರುತ್ತಿರುವ ಧಾರ್ಮಿಕ ಕಾರ್ಯಗಳನ್ನು ಮುಂದಿನ ದಿನಗಳಲ್ಲೂ ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಸುವ ಮೂಲಕ ಸಮಾಜದ ಕಲ್ಯಾಣಕ್ಕಾಗಿ ತಮ್ಮದೇ ಆದ ಸೇವೆಯನ್ನು ಸಲ್ಲಿಸಬೇಕೆಂದು ಧರ್ಮ ಜಾಗರಣ ಅರ್ಚಕರ ಮಹಾಸಭಾ ಗೌರವಾಧ್ಯಕ್ಷ ವೇದಬ್ರಹ್ಮ ಎನ್.ಎಸ್ ಕೃಷ್ಣಮೂರ್ತಿ ಸೋಮಯಾಜಿ ಕರೆ ನೀಡಿದರು.
   ಅವರು ಭಾನುವಾರ ಜನ್ನಾಪುರ ಮಹಾಗಣಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ೧೮ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
   ಕರ್ನಾಟಕ ರಾಜ್ಯದಲ್ಲಿಯೇ ವಿಶೇಷವಾಗಿ ಅರ್ಚಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮಹಾಸಭಾ ವತಿಯಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ಅರ್ಚಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.
    ಗಾಂಧಿನಗರ ಶ್ರೀ ಬಲಮುರಿ ಗಣಪತಿ ದೇವಸ್ಥಾನದ ಅರ್ಚಕ ಮುರುಳಿಧರ ಶರ್ಮ, ಹಿರಿಯೂರು ಶ್ರೀ ರಂಗನಾಥ & ಶ್ರೀ ಆಂಜನೇಯ ದೇವಸ್ಥಾನದ ಅರ್ಚಕ ಎಚ್.ಎಸ್ ಸಂಪತ್ ಅಯ್ಯಂಗಾರ್, ಸುಣ್ಣದಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ನಾರಾಯಣ ಭಟ್ಟ, ಮಾಳೇನಹಳ್ಳಿ ಶ್ರೀ ಭೈರವೇಶ್ವರ ದೇವಸ್ಥಾನದ ಅರ್ಚಕ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.  ಅರ್ಚಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
    ಮಹಾಸಭಾ ಅಧ್ಯಕ್ಷ ಎಸ್.ವಿ ರಾಮಾನುಜ ಅಯ್ಯಂಗಾರ್ ಅಧ್ಯಕ್ಷತೆ ವಹಿಸಿದ್ದರು. ಭದ್ರಾ ನರ್ಸಿಂಗ್ ಹೋಂ ವೈದ್ಯ ಡಾ. ನರೇಂದ್ರಭಟ್, ಉಪಾಧ್ಯಕ್ಷ ಕೆ.ಎನ್ ಲಕ್ಷ್ಮೀಕಾಂತಯ್ಯ, ಪ್ರಧಾನ ಕಾರ್ಯದರ್ಶಿ ಜೆ.ಪಿ ಗಣೇಶ್ ಪ್ರಸಾದ್, ಸಹಕಾರ್ಯದರ್ಶಿ ಡಿ. ಸಂಜೀವ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ಕಾರ್ಖಾನೆಯ ೯೨ ಉದ್ಯೋಗಿಗಳಿಗೆ ನಿಗಮ ಮಂಡಳಿಗಳಲ್ಲಿ ಕರ್ತವ್ಯಕ್ಕೆ ಅವಕಾಶ

ನಿಗಮ ಮಂಡಳಿಗಳು ಸೂಚಿಸುವ ಸ್ಥಳದಲ್ಲಿಯೇ ಕರ್ತವ್ಯ ನಿರ್ವಹಿಸುವ ಷರತ್ತು  

ಭದ್ರಾವತಿ ಮೈಸೂರು ಕಾರ್ಖಾನೆ

    ಭದ್ರಾವತಿ, ಫೆ. ೬: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಹೊಂದದೆ ಉಳಿದುಕೊಂಡಿರುವ(ಮಸ್ಟರ್ ರೋಲ್‌ನಲ್ಲಿರುವ) ಉದ್ಯೋಗಿಗಳನ್ನು ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಯೋಜನೆಗೊಳಿಸಲು ಸರ್ಕಾರ ಆದೇಶಿಸಿದೆ. 
   ಮಾರ್ಚ್ ೨೦೧೬ರಿಂದ ಎಂಪಿಎಂ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಂಡಿದ್ದು, ಆ ನಂತರ ಕಾರ್ಖಾನೆಯಲ್ಲಿ ಮಾನವ ಸಂಪನ್ಮೂಲ ಶೂನ್ಯಗೊಳಿಸುವ ಹಿನ್ನಲೆಯಲ್ಲಿ ಸರ್ಕಾರ ಡಿಸೆಂಬರ್ ೨೦೧೭ರಲ್ಲಿ ಕಾಯಂ ಹಾಗು ಗುತ್ತಿಗೆ ಉದ್ಯೋಗಿಗಳಿಗೆ ಪ್ರತ್ಯೇಕವಾಗಿ ವಿಶೇಷ ಸ್ವಯಂ ನಿವೃತ್ತಿ ಯೋಜನೆಗೆ ಆದೇಶಿಸಿತು. ಈ ಯೋಜನೆಯಡಿ ಒಟ್ಟು ೭೭೩ ಕಾಯಂ ಉದ್ಯೋಗಿಗಳು ಸ್ವಯಂ ನಿವೃತ್ತಿ ಪಡೆದಿದ್ದರು. ಉಳಿದಂತೆ ೯೨ ಉದ್ಯೋಗಿಗಳು ಸ್ವಯಂ ನಿವೃತ್ತಿ ಪಡೆಯದೆ ಉಳಿದುಕೊಂಡಿದ್ದರು. ಈ ಉದ್ಯೋಗಿಗಳನ್ನು ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ನಿಯೋಜನೆ ಮೇರೆಗೆ ಉದ್ಯೋಗ ಕಲ್ಪಿಸಿಕೊಡುವಂತೆ ಒತ್ತಾಯಿಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಜ.೨೭ರಂದು ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಈ ಉದ್ಯೋಗಿಗಳಿಗೆ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇರೆಗೆ ಉದ್ಯೋಗ ಕಲ್ಪಿಸಿಕೊಡಲು ತೀರ್ಮಾನ ಕೈಗೊಳ್ಳಲಾಗಿದೆ.
    ಈ ಕುರಿತು ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿಗಳು ಉದ್ಯೋಗಿಗಳಿಗೆ ಸುತ್ತೋಲೆ ಹೊರಡಿಸಿದ್ದು, ನಿಗಮ ಮಂಡಳಿಗಳಲ್ಲಿ ನಿಯೋಜನೆಗೆ ಮೇರೆಗೆ ಕರ್ತವ್ಯ ನಿರ್ವಹಿಸಲು ಇಚ್ಛಿಸುವ ಉದ್ಯೋಗಿಗಳು ಕಡ್ಡಾಯವಾಗಿ ಆಯಾ ನಿಗಮ ಮಂಡಳಿಗಳು ಸೂಚಿಸುವ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಸಂಬಂಧ ಲಿಖಿತವಾಗಿ ಒಪ್ಪಿಗೆ ಸೂಚಿಸುವಂತೆ ಸೂಚಿಸಿದ್ದಾರೆ.


ಭದ್ರಾವತಿ ಎಂಪಿಎಂ ಕಾರ್ಖಾನೆಯಲ್ಲಿ ಉಳಿದುಕೊಂಡಿರುವ ಕಾರ್ಮಿಕರನ್ನು ನಿಗಮ ಮಂಡಳಿಗಳಲ್ಲಿ ನಿಯೋಜನೆಗೊಳಿಸುವ ಸಂಬಂಧ ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿಗಳು ಹೊರಡಿಸಿರುವ ಸುತ್ತೋಲೆ.
     ಎಂಪಿಎಂ ಕಾರ್ಖಾನೆ ನಷ್ಟ ೧೧೯೪.೧೭ ಕೋ. ರು. :
  ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಂಡು ಸುಮಾರು ೫ ವರ್ಷಗಳು ಕಳೆದಿವೆ. ಇದೀಗ ಕಾರ್ಖಾನೆಯ ನಷ್ಟ ೧೧೯೪.೧೭ ಕೋ. ರು. ತಲುಪಿದೆ. ಕಾರ್ಖಾನೆಯ ಸಂಪೂರ್ಣ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಮಾರ್ಚ್ ೨೦೧೯ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಡುವೆ ಈ ವಿಚಾರಕ್ಕೆ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಉಳಿದುಕೊಂಡಿವೆ. ಈ ನಡುವೆ ಸರ್ಕಾರ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸಲು ಮುಂದಾಗಿದೆ. ಈಗಾಗಲೇ ಕಾರ್ಖಾನೆ ಕಾರ್ಯಚಟುವಟಿಕೆಗಳ ನಿರ್ವಹಣೆಗಾಗಿ ೨ ಬಾರಿ ಟೆಂಡರ್ ಸಹ ಕರೆಯಲಾಗಿದೆ. ಈ ಪ್ರಕ್ರಿಯೆ ಸಹ ಪ್ರಗತಿಯಲ್ಲಿದೆ. ಇದೀಗ  ಕಾರ್ಖಾನೆಯಲ್ಲಿನ ಎಲ್ಲಾ ಉದ್ಯೋಗಿಗಳನ್ನು ಬಿಡುಗಡೆಗೊಳಿಸುವ ಮೂಲಕ ನಷ್ಟದಿಂದ ಹೊರಬರುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಹಾಕಿರುವಂತೆ ಕಂಡು ಬರುತ್ತಿದೆ.