Thursday, June 8, 2023

ನಾಗೇಶ್ ಶೆಟ್ರು ನಿಧನ

ನಾಗೇಶ್ ಶೆಟ್ರು
ಭದ್ರಾವತಿ, ಜೂ. ೯ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕ ನಾಗೇಶ್ ಶೆಟ್ರು (೫೫) ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 
ನಾಗೇಶ್ ಶೆಟ್ರು ಕಾರ್ಖಾನೆಗೆ ಕೆಲಸಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದ್ದು, ತಕ್ಷಣ ಇವರನ್ನು ಕಾರ್ಖಾನೆಯ ವಿಐಎಸ್‌ಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಿ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಗುತ್ತಿಗೆ ಕಾರ್ಮಿಕರು ನಾಗೇಶ್ ಶೆಟ್ರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 
ಈ ನಡುವೆ ಆಸ್ಪತ್ರೆಯಲ್ಲಿ ವೈದ್ಯರು ಇದ್ದರೂ ಸಹ ೨೪ ಗಂಟೆಗಳ ಸೇವೆಯಲ್ಲಿ ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ರೋಗಿ ದಾಖಲಾದ ನಂತರ ವೈದ್ಯರನ್ನು ಕರೆಸಿ ತಪಾಸಣೆ ನಡೆಸಲಾಗುತ್ತಿದೆ. ಇದರಿಂದ ಹೆಚ್ಚಿನ ಅನಾಹುತ ಸಂಭವಿಸುತ್ತಿದೆ ಎಂದು ಗುತ್ತಿಗೆ ಕಾರ್ಮಿಕರು ಆರೋಪಿಸಿದ್ದಾರೆ. 
ನಾಗೇಶ್ ಶೆಟ್ರು ಕುಟುಂಬಕ್ಕೆ ೫೦ ಸಾವಿರ ರು. ನಗದು ಹಾಗು ಕೆಲಸ ನೀಡುವುದಾಗಿ ಗುತ್ತಿಗೆದಾರ ಭರವಸೆ ನೀಡಿದ್ದಾರೆಂದು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. 
ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ನಗರಸಭಾ ಸದಸ್ಯ ಬಿ.ಕೆ ಮೋಹನ್ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ಎಂ.ಎ ಅಜಿತ್ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. 

ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆಯಲು ಮನವಿ

ಮುಖ್ಯಮಂತ್ರಿ ಭೇಟಿ ಮಾಡಿದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದ ಕಾರ್ಮಿಕರ ನಿಯೋಗ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನಗೊಳಿಸಿ ಬಂಡವಾಳ ತೊಡಗಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದ ಕಾರ್ಮಿಕರ ನಿಯೋಗ ಮನವಿ ಮಾಡಿದೆ.
    ಭದ್ರಾವತಿ, ಜೂ. ೮ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನಗೊಳಿಸಿ ಬಂಡವಾಳ ತೊಡಗಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದ ಕಾರ್ಮಿಕರ ನಿಯೋಗ ಮನವಿ ಮಾಡಿದೆ.
    ಬೆಂಗಳೂರಿನ ಶಕ್ತಿ ಭವನದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಿಯೋಗ ಚರ್ಚೆ ನಡೆಸಿದ್ದು, ಕಾರ್ಖಾನೆ ಅಭಿವೃದ್ಧಿಪಡಿಸಿ ಬಂಡವಾಳ ತೊಡಗಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಮನವಿ ಸಲ್ಲಿಸಲಾಯಿತು.
    ರಾಜ್ಯ ಸರ್ಕಾರ ೨೦೧೭ರಲ್ಲಿ ಮಂಜೂರು ಮಾಡಿರುವ ಕಬ್ಬಿಣದ ಅದಿರು ಗಣಿಯ ಅಭಿವೃದ್ಧಿ ಕಾರ್ಯಗಳು ಜರುಗುತ್ತಿದ್ದು, ೨೦೨೫ಕ್ಕೆ ಅದಿರು ಉತ್ಪಾದಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಈ ನಡುವೆ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ತೀರ್ಮಾನ ತೆಗೆದುಕೊಂಡಿದೆ.  ಈ ಹಿಂದೆ ಕಬ್ಬಿಣದ ಅದಿರು ಗಣಿ ಮಂಜೂರು ಮಾಡಿದ್ದಲ್ಲಿ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿತ್ತು. ಈ ಹಿನ್ನಲೆಯಲ್ಲಿ  ಕಾರ್ಖಾನೆಗೆ ಉಕ್ಕು ಪ್ರಾಧಿಕಾರ ಸೂಕ್ತ ಬಂಡವಾಳ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುವಂತೆ ನಿಯೋಗ ಕೋರಿತು.
    ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಬಂಧ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಲಾಗುವುದು. ಅಲ್ಲದೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ರವರಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚನೆ ನೀಡಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು.
    ನಿಯೋಗದಲ್ಲಿ ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಪ್ರಧಾನ ಕಾರ್ಯದರ್ಶಿ ಬಸಂತ್‌ಕುಮಾರ್, ಕಾರ್ಯದರ್ಶಿ ಕೆ.ಆರ್ ಮನು, ಖಜಾಂಚಿ ಎಸ್. ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಆರ್‌ಎಸ್ ಪಕ್ಷದಿಂದ ಬಸ್ ನಿಲ್ದಾಣ ದುರಸ್ಥಿಗೆ ಮನವಿ

ಭದ್ರಾವತಿ ತಾಲೂಕಿನ ರಾಮನಗರ ಬಸ್ ನಿಲ್ದಾಣ ದುರಸ್ಥಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಘಟಕದ ವತಿಯಿಂದ ವೀರಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಗಿದೆ.
ಭದ್ರಾವತಿ, ಜೂ. ೮ : ತಾಲೂಕಿನ ರಾಮನಗರ ಬಸ್ ನಿಲ್ದಾಣ ದುರಸ್ಥಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಘಟಕದ ವತಿಯಿಂದ ವೀರಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಗಿದೆ.
ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳುವ ಆಸನಗಳ ಸ್ಥಳದಲ್ಲಿ ನೆಲಹಾಸು ಹಾಳಾಗಿದ್ದು, ಮಳೆಗಾಲದಲ್ಲಿ ನೀರು ನಿಂತುಕೊಂಡು ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಲಿದ್ದು, ಈ ಕುರಿತು ಗ್ರಾಮಸ್ಥರು ತಮ್ಮ ಅಳಲು ತೋರ್ಪಡಿಸಿಕೊಳ್ಳುತ್ತಿದ್ದಾರೆ. ತಕ್ಷಣ ಬಸ್ ನಿಲ್ದಾಣ ದುರಸ್ಥಿಗೊಳಿಸುವಂತೆ ಮನವಿ ಮಾಡಲಾಗಿದೆ.
ಪಕ್ಷದ ಯುವ ಘಟಕದ ತಾಲೂಕು ಅಧ್ಯಕ್ಷ ಅರಳಿಹಳ್ಳಿ ತ್ಯಾಗರಾಜ್, ಪ್ರಚಾರ ಸಮಿತಿ ಅಧ್ಯಕ್ಷ ಪ್ರದೀಪ್ ವೈ.ಜೆ ರಾವ್, ಕಾರ್ಯದರ್ಶಿ ಚಿಂಪಯ್ಯ, ಸಂಘಟನಾ ಕಾರ್ಯದರ್ಶಿ ರಾಜೇಂದ್ರ ಉಪಸ್ಥಿತರಿದ್ದರು.


ಭದ್ರಾವತಿ ತಾಲೂಕಿನ ರಾಮನಗರ ಬಸ್ ನಿಲ್ದಾಣ ಹಾಳಾಗಿರುವುದು.


ಸರ್ಕಾರಿ ಪಡಿತರ ವಿತರಕರಿಗೆ ಹೆಚ್ಚುವರಿ ಕಮಿಷನ್, ಇಕೆವೈಸಿ ಹಣ ಬಿಡುಗಡೆ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸಿ

ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಜಿಲ್ಲಾ ಜಂಟಿ ನಿರ್ದೇಶಕರಿಗೆ ಮನವಿ

ಸರ್ಕಾರಿ ಪಡಿತರ ವಿತರಕರಿಗೆ ಹೆಚ್ಚುವರಿ ಕಮಿಷನ್ ಕ್ವಿಂಟಾಲ್‌ಗೆ ರು. ೨೪ ಮತ್ತು ಇಕೆವೈಸಿ ಹಣ ೨೦೧೮ ರಿಂದ ಇಲ್ಲಿಯವರೆಗೂ ಬಿಡುಗಡೆಯಾಗಿರುವುದಿಲ್ಲ. ತಕ್ಷಣ ಹಣ ಬಿಡುಗಡೆ ಮಾಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆಹಾರ ಮತ್ತು ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಶಿವಮೊಗ್ಗ ಜಿಲ್ಲಾ ಜಂಟಿ ನಿರ್ದೇಶಕ ಆರ್. ಅವಿನ್ ಅವರಿಗೆ ಗುರುವಾರ ಮನವಿ ಸಲ್ಲಿಸಿದೆ.
    ಭದ್ರಾವತಿ, ಜೂ. ೮: ಸರ್ಕಾರಿ ಪಡಿತರ ವಿತರಕರಿಗೆ ಹೆಚ್ಚುವರಿ ಕಮಿಷನ್ ಕ್ವಿಂಟಾಲ್‌ಗೆ ರು. ೨೪ ಮತ್ತು ಇಕೆವೈಸಿ ಹಣ ೨೦೧೮ ರಿಂದ ಇಲ್ಲಿಯವರೆಗೂ ಬಿಡುಗಡೆಯಾಗಿರುವುದಿಲ್ಲ. ತಕ್ಷಣ ಹಣ ಬಿಡುಗಡೆ ಮಾಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆಹಾರ ಮತ್ತು ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಆರ್. ಅವಿನ್ ಅವರಿಗೆ ಗುರುವಾರ ಮನವಿ ಸಲ್ಲಿಸಿದೆ.
    ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ಹೆಚ್ಚುವರಿ ಕಮಿಷನ್ ಹಣ ಏಪ್ರಿಲ್ ೨೦೨೨ರವರೆಗೆ ಬಿಡುಗಡೆ ಮಾಡಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳ  ವಿತರಕರ ಖಾತೆಗೆ ಇದುವರೆಗೂ ಹಣ ಜಮಾ ಆಗಿಲ್ಲ. ಕೆಲವು ಜಿಲ್ಲೆಗಳ ವಿತರಕರಿಗೆ ಪೂರ್ತಿ ಹಣ ಖಾತೆಗೆ ಜಮಾ ಆಗಿರುತ್ತದೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
    ೨೦೧೮ ರಿಂದ ಇಕೆವೈಸಿ ಪೂರ್ತಿ ಮಾಡಿದ್ದು, ಶೇ. ೯೫ ರಿಂದ ೯೮ರಷ್ಟು ಇಕೆವೈಸಿ ಮಾಡಿರುತ್ತೇವೆ. ಆದರೂ ಸಹ ಪದೇ ಪದೇ ಇಕೆವೈಸಿ ಬಾಕಿ ಇರುತ್ತದೆ ಎಂದು ನಮ್ಮ ಮೇಲೆ ಆರೋಪಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪಡಿತರ ಚೀಟಿದಾರರಿಗೆ ಇಲಾಖೆ ಪ್ರಕಟಣೆ ಹೊರಡಿಸಿ ಅಂತಿಮ ಗಡುವು ನಿಗದಿಪಡಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಇಕೆವೈಸಿ ಮಾಡಿದ ಹಣ ಇದುವರೆವಿಗೂ ಬಿಡುಗಡೆ ಮಾಡಿರುವುದಿಲ್ಲ, ತಕ್ಷಣ ಹಣ ಬಿಡುಗಡೆ ಮಾಡುವಂತೆ ಕೋರಲಾಗಿದೆ.  
    ಅಂಗಡಿಗಳಿಗೆ ಶೇ.೫ರಷ್ಟು ಓಟಿಪಿ ವ್ಯವಸ್ಥೆಯಲ್ಲಿ ಪಡಿತರ ವಿತರಣೆ ಮಾಡಲು ಅವಕಾಶ ನೀಡಲಾಗಿದೆ. ಸರ್ವರ್ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು,  ಬೇಸಿಗೆ ಹಿನ್ನಲೆಯಲ್ಲಿ ಪಡಿತರ ವಿತರಕರು ಸಾಲುಗಟ್ಟಿ ಅಂಗಡಿ ಮುಂದೆ ನಿಂತಿರುತ್ತಾರೆ. ವಯೋವೃದ್ದರಿಗೆ ಹೆಬ್ಬೆಟ್ಟು ಮತ್ತು ಕಣ್ಣು ಗುರುತು ಸರಿಯಾಗಿ ದೃಢೀಕರಣಗೊಳ್ಳುತ್ತಿಲ್ಲ. ಈ ಹಿನ್ನಲೆಯಲ್ಲಿ ಓಟಿಪಿ ಪ್ರಮಾಣ ಹೆಚ್ಚಿಸುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ. ಪ್ರತಿ ತಿಂಗಳು ಅಕ್ಕಿ ಜೊತೆಯಲ್ಲಿ ರಾಗಿ, ಜೋಳ ಸಹ ನೀಡಬೇಕೆಂದು ಮನವಿ ಮಾಡಲಾಗಿದೆ.
    ಬೇರೆ ಜಿಲ್ಲೆಯ ಪಡಿತರ ಚೀಟಿದಾರರಿಗೆ ಪಡಿತರ ನೀಡಿದಾಗ ಶೂನ್ಯ (ಜಿರೋ) ಮಾಡಿದರೂ ನಷ್ಟ (ಮೈನಸ್) ಆಗಿ ದಂಡ ಪಾವತಿಸಲಾಗಿರುತ್ತದೆ. ಕ್ಲೋಸರ್ ನೀಡದೆ ಪ್ರತಿ ತಿಂಗಳು ಎತ್ತುವಳಿ ಮಾಡುವ ಸಮಯದಲ್ಲಿ ಸ್ಥಳೀಯ ಕಛೇರಿ ಅಧಿಕಾರಿಗಳು ರಾಗಿ ಕ್ಲೋಸರ್ ಆಗಿರುವುದಿಲ್ಲ ಎಂದು ೮-೧೦ ದಿನಗಳ ನಂತರ ಕ್ಲೋಸರ್ ಕೊಡುತ್ತಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ಲೋಸರ್ ನೀಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
    ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಮುರುಗೇಶ್, ಅಂಗಡಿ ಮಾಲೀಕರಾದ ಎನ್.ಎಸ್ ನಾಗರಾಜ್, ಆರ್. ಅನಿಲ್‌ಕುಮಾರ್, ವಿಜೇಶ್ ಮತ್ತು ಇಬ್ರಾಹಿಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.