Monday, October 26, 2020

ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಸಮಸ್ಯೆ : ಪೂರಕ ಸ್ಪಂದನೆ

ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭರವಸೆ ನೀಡಿದ ಸಂಸದ ಬಿ.ವೈ ರಾಘವೇಂದ್ರ

ಭದ್ರಾವತಿ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಭದ್ರಾವತಿ, ಅ. ೨೬: ನಗರದ ವಿಐಎಸ್‌ಎಲ್ ಕಾರ್ಖಾನೆಯ ವಸತಿ ಗೃಹಗಳಲ್ಲಿ ವಾಸವಾಗಿರುವ ನಿವೃತ್ತ ಕಾರ್ಮಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ಭರವಸೆ ನೀಡಿದರು.
    ಅವರು ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಕಾರ್ಖಾನೆಯ ಅಧಿಕಾರಿಗಳು ಹಾಗು ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿ, ಕಾರ್ಖಾನೆಯ ನಗರಾಡಳಿತ ಇಲಾಖೆ ವಿರುದ್ಧ ಇತ್ತೀಚೆಗೆ ನಿವೃತ್ತ ಕಾರ್ಮಿಕರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿರುವ ಮಾಹಿತಿ ತಿಳಿದು ಬಂದಿದೆ. ಪ್ರಸ್ತುತ ನಿಗದಿಪಡಿಸಲಾಗಿರುವ ಬಾಡಿಗೆ ದರ ಕಡಿಮೆಗೊಳಿಸಲು ಕಾರ್ಖಾನೆ ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಮುಂದಿನ ೬ ವರ್ಷಗಳವರೆಗೆ ಬಾಡಿಗೆ ದರ ಹೆಚ್ಚಳ ಮಾಡದಂತೆ ಸೂಚಿಸಲಾಗಿದೆ ಎಂದರು.
    ಉಳಿದಂತೆ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಸೂಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಾದರೂ ಅಥವಾ ಸಮಸ್ಯೆಗಳು ಎದುರಾದಲ್ಲಿ ಸಹ ನಿವೃತ್ತ ಕಾರ್ಮಿಕರ ಪರವಾಗಿ ಇರುವುದಾಗಿ ಭರವಸೆ ನೀಡಿದರು.
ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಕಾರ್ಯ ಚಟುವಟಿಗಳನ್ನು ಖಾಸಗಿಯವರಿಗೆ ವಹಿಸಿಕೊಡುವ ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಟೆಂಡರ್ ಸಹ ಅಂತಿಮಗೊಂಡಿದೆ. ಈ ಹಿನ್ನಲೆಯಲ್ಲಿ ವಸತಿ ಗೃಹಗಳಲ್ಲಿ ವಾಸವಿರುವ ಕಾರ್ಮಿಕರನ್ನು ಖಾಲಿ ಮಾಡಲು ಅಲ್ಲಿನ ನಗರಡಳಿತ ಇಲಾಖೆ ಸೂಚಿಸಿದ್ದು, ಶೀಘ್ರದಲ್ಲಿಯೇ ಕಾರ್ಖಾನೆಯಲ್ಲಿ ಕಾರ್ಯಚಟುವಟಿಕೆಗಳು ಪುನಃ ಆರಂಭಗೊಳ್ಳಲಿವೆ ಎಂದರು.
    ಪತ್ರಿಕಾಭವನಕ್ಕೆ ೫೦ ಲಕ್ಷ ರು. ನೆರವು:
   ಹಳೇನಗರದ ಕಾರ್ಯನಿರತರ ಪತ್ರಕರ್ತರ ಸಂಘದ ಪತ್ರಿಕಾಭವನದಲ್ಲಿ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ ರು.೫೦ ಲಕ್ಷ ಅನುದಾನ ನೀಡುವುದಾಗಿ ಸಂಸದರು ಭರವಸೆ ನೀಡಿದರು.
    ಪತ್ರಿಕಾ ಭವನ ಕಟ್ಟಡ ಸಮಿತಿ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ಸುಮಾರು ರು. ೧.೬ ಕೋ. ಅನುದಾನಕ್ಕೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಸಂಸದರು ಸದ್ಯಕ್ಕೆ ರು. ೫೦ ಲಕ್ಷ ಅನುದಾನ ನೀಡಲಾಗುವುದು. ಕಾಮಗಾರಿ ಮುಕ್ತಾಯದ ನಂತರ ಮುಂದಿನ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವುದು ಎಂದರು.
    ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್‌ಪ್ರೈಸಸ್ ಸಂಸ್ಥೆ ರಾಜ್ಯಾಧ್ಯಕ್ಷ ಎಚ್.ಸಿ ರಮೇಶ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಬಿಜೆಪಿ ಪಕ್ಷದ ಪ್ರಮುಖರಾದ ಎಂ. ಪ್ರಭಾಕರ್, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಪಿ. ಗಣೇಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಾಡಹಬ್ಬ ೯ ದಿನಗಳ ಜನಜಾಗೃತಿ ದಸರಾ ಆಚರಣೆಗೆ ತೆರೆ

ಉತ್ಸವ ಮೆರವಣಿಗೆಗೆ ಶಾಸಕ ಸಂಗಮೇಶ್ವರ್ ಚಾಲನೆ, 

ಬನ್ನಿ ಮುಡಿದ ಉಪವಿಭಾಗಾಧಿಕಾರಿ ಪ್ರಕಾಶ್

ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೯ ದಿನಗಳ ಜನಜಾಗೃತಿ ದಸರಾ ಸೋಮವಾರ ಉಪವಿಭಾಗಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಬನ್ನಿ ಮುಡಿಯುವ ಮೂಲಕ ಅಂತ್ಯಗೊಂಡಿತು.
ಭದ್ರಾವತಿ, ಅ. ೨೬: ನಾಡಹಬ್ಬ ದಸರಾ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೯ ದಿನಗಳ ಜನಜಾಗೃತಿ ದಸರಾ ಸೋಮವಾರ ಉಪವಿಭಾಗಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಬನ್ನಿ ಮುಡಿಯುವ ಮೂಲಕ ಅಂತ್ಯಗೊಂಡಿತು.
     ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆ ೯ ದಿನಗಳ ಜನಜಾಗೃತಿ ದಸರಾ ಯಶಸ್ವಿಯಾಗಿ ನಡೆಯಿತು. ಹಬ್ಬದ ಆಚರಣೆಯಂತೆ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆಯೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನಂದಿ ಧ್ಜಜಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವ ಮೆರವಣಿಗೆಗೆ ಚಾಲನೆ ನೀಡಿದರು.
    ಮೆರವಣಿಗೆಯಲ್ಲಿ ಕ್ಷೇತ್ರಪಾಲಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಹಳದಮ್ಮ, ನಗರಸಭೆ ಶ್ರೀ ಚಾಮುಂಡೇಶ್ವರಿ ಸೇರಿದಂತೆ ಕೇವಲ ೪ ಉತ್ಸವ ಮೂರ್ತಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಮೆರವಣಿಗೆ ತಾಲೂಕು ಕಛೇರಿ ರಸ್ತೆಯಲ್ಲಿ ಸಾಗಿ ಕನಕಮಂಟಪ ಮೈದಾನ ಬಂದು ತಲುಪಿತು.
    ನಂತರ ಉಪವಿಭಾಗಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ಟಿ.ವಿ ಪ್ರಕಾಶ್ ಬನ್ನಿ ಮುಡಿಯುವ ಮೂಲಕ ಅಂತ್ಯಗೊಳಿಸಿದರು. ರಾವಣ ದಹನ ಮತ್ತು ಸಿಡಿ ಮದ್ದುಗಳ ಪ್ರದರ್ಶನ ಆಕರ್ಷಕವಾಗಿ ಕಂಡು ಬಂದಿತು. ಸರ್ಕಾರದ ಮಾರ್ಗಸೂಚಿಯಂತೆ  ಸಾಮಾಜಿಕ ಅಂತರ, ಮಾಸ್ಕ್ ಬಳಕೆಯೊಂದಿಗೆ ಸುಮಾರು ೨೦೦ ಮಂದಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.


ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೯ ದಿನಗಳ ಜನಜಾಗೃತಿ ದಸರಾ ಆಚರಣೆಯ ಕೊನೆಯ ದಿನವಾದ ಸೋಮವಾರ ಉತ್ಸವ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
       ಶಾಸಕ ಬಿ.ಕೆ ಸಂಗಮೇಶ್ವರ್ ವಿಷಾದ:
  ಬನ್ನಿಮಂಟದಲ್ಲಿ ಕ್ಷೇತ್ರದ ದಸರಾ ಆಚರಣೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್ ಈ ಬಾರಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ನಾಡಹಬ್ಬ ದಸರಾ ವಿಜೃಂಭಣೆ ಕಳೆದುಕೊಂಡಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
    ಪ್ರತಿ ವರ್ಷ ಸುಮಾರು ೩೦ ರಿಂದ ೪೦ ಸಾವಿರ ಜನರು ಒಂದೆಡೆ ಸೇರಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಆದರೆ ಈ ಬಾರಿ ವಿಜೃಂಭಣೆ ಇಲ್ಲದಿದ್ದರೂ ಸಹ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ೯ನೇ ದಿನಗಳ ಆಚರಣೆಯನ್ನು ನಗರಸಭೆ ಆಡಳಿತ ಎಲ್ಲಾ ಇಲಾಖೆಗಳು ಹಾಗು ಸಂಘ-ಸಂಸ್ಥೆಗಳು ಮತ್ತು ನಾಗರೀಕರ ಸಹಕಾರದೊಂದಿಗೆ ಯಶಸ್ವಿಗೊಳಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಯಶಸ್ವಿಯಾಗಿ ಜರುಗಿದವು.
    ಪೌರಾಯುಕ್ತ ಮನೋಹರ್, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ನಿವೃತ್ತ ತಹಸೀಲ್ದಾರ್ ಸೋಮಶೇಖರ್, ಪ್ರಮುಖರಾದ ಶ್ರೀ ಹಳದಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಿ.ಎಂ ಸಂತೋಷ್, ಪ್ರಮುಖರಾದ ಮಂಗೋಟೆ ರುದ್ರೇಶ್, ಬಿ.ಕೆ ಶ್ರೀನಾಥ್, ನರಸಿಂಹಚಾರ್, ರಮಾಕಾಂತ, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.